Home Blog Page 4

BESCOM: ವಿದ್ಯುತ್ ಕೈಕೊಟ್ಟಿದೆಯೇ? ಇನ್ಮುಂದೆ ಕಾಲ್ ಮಾಡೋ ಕಿರಿಕಿರಿ ಬೇಡ, ಸೋಶಿಯಲ್ ಮೀಡಿಯಾದಲ್ಲೇ ದೂರು ನೀಡಿ!

0

ನಮಸ್ಕಾರ ಸ್ನೇಹಿತರೇ, ಮಳೆಗಾಲ ಬಂತೆಂದರೆ ಸಾಕು, ಬೆಂಗಳೂರು ಸೇರಿದಂತೆ ಹಲವೆಡೆ ವಿದ್ಯುತ್ ಸಮಸ್ಯೆ ಸಾಮಾನ್ಯ. ಗಾಳಿ-ಮಳೆಗೆ ಮರ ಬಿದ್ದೋ ಅಥವಾ ತಾಂತ್ರಿಕ ದೋಷದಿಂದಲೋ ಕರೆಂಟ್ ಹೋದಾಗ ನಾವು ಮೊದಲು ಮಾಡುವುದೇ 1912 ಸಹಾಯವಾಣಿಗೆ ಕರೆ ಮಾಡುವುದು. ಆದರೆ, ಸಾಲು ಸಾಲು ಕರೆಗಳ ಒತ್ತಡದಿಂದಾಗಿ ಕೆಲವೊಮ್ಮೆ ಫೋನ್ ಕನೆಕ್ಟ್ ಆಗುವುದೇ ಇಲ್ಲ. ಇಂತಹ ಸಮಯದಲ್ಲಿ ಏನು ಮಾಡುವುದು ಎಂಬ ಚಿಂತೆ ನಿಮಗಿದೆಯೇ? ಹಾಗಾದರೆ ಈ ಮಾಹಿತಿ ನಿಮಗಾಗಿ.

ಬೆಂಗಳೂರು ವಿದ್ಯುತ್ ಸರಬರಾಜು ಕಂಪನಿಯು (BESCOM) ಗ್ರಾಹಕರ ನೆರವಿಗೆ ಹೊಸ ಹಾದಿಗಳನ್ನು ಕಂಡುಕೊಂಡಿದೆ. ಇನ್ಮುಂದೆ ನೀವು ಕೇವಲ ಫೋನ್ ಕರೆಗೆ ಕಾಯಬೇಕಿಲ್ಲ; ನಿಮ್ಮ ಕೈಯಲ್ಲಿರುವ ಸ್ಮಾರ್ಟ್‌ಫೋನ್ ಮೂಲಕ ವಾಟ್ಸ್‌ಆ್ಯಪ್,(Whatsapp) ಫೇಸ್‌ಬುಕ್ (Facebook) ಅಥವಾ ಎಕ್ಸ್ (X) (ಟ್ವಿಟರ್) ಬಳಸಿ ಕ್ಷಣಾರ್ಧದಲ್ಲಿ ದೂರು ದಾಖಲಿಸಬಹುದು!

ಸೋಶಿಯಲ್ ಮೀಡಿಯಾದಲ್ಲಿ ದೂರು ನೀಡುವುದು ಹೇಗೆ?

ಬೆಸ್ಕಾಂ ಈಗ ಸಾಮಾಜಿಕ ಜಾಲತಾಣಗಳಲ್ಲಿ ಬಹಳ ಸಕ್ರಿಯವಾಗಿದೆ. ನೀವು ಈ ಕೆಳಗಿನ ಲಿಂಕ್‌ಗಳ ಮೂಲಕ ನೇರವಾಗಿ ಬೆಸ್ಕಾಂ ಅನ್ನು ಸಂಪರ್ಕಿಸಬಹುದು:

  • ಎಕ್ಸ್ (ಟ್ವಿಟರ್): x.com/NammaBESCOM ಗೆ ಭೇಟಿ ನೀಡಿ ನಿಮ್ಮ ಸಮಸ್ಯೆಯನ್ನು ಟ್ಯಾಗ್ ಮಾಡಿ.

  • ಫೇಸ್‌ಬುಕ್: facebook.com/bescomblr ಪುಟದ ಮೂಲಕ ದೂರು ಸಲ್ಲಿಸಿ.

ಗಮನಿಸಬೇಕಾದ ಅಂಶ: ದೂರು ನೀಡುವಾಗ ನಿಮ್ಮ ಗ್ರಾಹಕ ಐಡಿ (Account ID), ನಿಖರವಾದ ವಿಳಾಸ ಮತ್ತು ಸಮಸ್ಯೆಯ ಬಗ್ಗೆ ಚಿಕ್ಕದಾಗಿ ಮಾಹಿತಿ ನೀಡಲು ಮರೆಯಬೇಡಿ.


ವಾಟ್ಸ್‌ಆ್ಯಪ್ ಮೂಲಕ ದೂರು: ನಿಮ್ಮ ಜಿಲ್ಲೆಯ ನಂಬರ್ ಇಲ್ಲಿದೆ ನೋಡಿ!

ಬೆಸ್ಕಾಂ ವ್ಯಾಪ್ತಿಯ ಪ್ರತಿ ಜಿಲ್ಲೆಗೂ ಪ್ರತ್ಯೇಕ ವಾಟ್ಸ್‌ಆ್ಯಪ್ ಸಹಾಯವಾಣಿ ಸಂಖ್ಯೆಗಳನ್ನು ನೀಡಲಾಗಿದೆ. ವಿಶೇಷವೆಂದರೆ, ಇಲ್ಲಿ ನೀವು ಕೇವಲ ಮೆಸೇಜ್ ಮಾಡುವುದಲ್ಲದೆ, ವೈರ್ ತುಂಡಾಗಿರುವುದು ಅಥವಾ ಕಂಬ ಬಿದ್ದಿರುವ ಫೋಟೋ/ವಿಡಿಯೋಗಳನ್ನು ಕಳುಹಿಸಬಹುದು. ಇದು ಸಿಬ್ಬಂದಿಗೆ ಸಮಸ್ಯೆಯ ತೀವ್ರತೆಯನ್ನು ಅರ್ಥಮಾಡಿಕೊಳ್ಳಲು ಸುಲಭವಾಗುತ್ತದೆ.

ಜಿಲ್ಲಾವಾರು ವಾಟ್ಸ್‌ಆ್ಯಪ್ ಸಂಖ್ಯೆಗಳು:

ಜಿಲ್ಲೆ / ವೃತ್ತ ವಾಟ್ಸ್‌ಆ್ಯಪ್ ಸಂಖ್ಯೆ
ಬೆಂಗಳೂರು ನಗರ (ದಕ್ಷಿಣ) 8277884011
ಬೆಂಗಳೂರು ನಗರ (ಪಶ್ಚಿಮ) 8277884012
ಬೆಂಗಳೂರು ನಗರ (ಪೂರ್ವ) 8277884013
ಬೆಂಗಳೂರು ನಗರ (ಉತ್ತರ) 8277884014
ಕೋಲಾರ 8277884015
ಚಿಕ್ಕಬಳ್ಳಾಪುರ 8277884016
ತುಮಕೂರು 8277884019
ದಾವಣಗೆರೆ 8277884021
ಚಿತ್ರದುರ್ಗ 8277884020
ರಾಮನಗರ 8277884018
ಬೆಂಗಳೂರು ಗ್ರಾಮಾಂತರ (BRC) 8277884017

ತ್ವರಿತ ಪರಿಹಾರಕ್ಕಾಗಿ ಸಲಹೆಗಳು:

  1. ನಿಖರ ಮಾಹಿತಿ ಇರಲಿ: ನಿಮ್ಮ 10 ಅಂಕಿಗಳ ‘ಅಕೌಂಟ್ ಐಡಿ’ ನೀಡಿದರೆ ಅಧಿಕಾರಿಗಳಿಗೆ ನಿಮ್ಮ ಏರಿಯಾ ಗುರುತಿಸುವುದು ಸುಲಭವಾಗುತ್ತದೆ.

  2. ಫೋಟೋ ಕಳುಹಿಸಿ: ಅಪಾಯಕಾರಿ ಸ್ಥಿತಿಯಲ್ಲಿರುವ ವೈರ್‌ಗಳು ಅಥವಾ ಟ್ರಾನ್ಸ್‌ಫಾರ್ಮರ್ ಸಮಸ್ಯೆಗಳಿದ್ದರೆ ಫೋಟೋ ತೆಗೆದು ಕಳುಹಿಸಿ.

  3. ಸೌಜನ್ಯವಿರಲಿ: ದೂರು ನೀಡುವಾಗ ಸ್ಪಷ್ಟವಾಗಿ ಮತ್ತು ಸಂಕ್ಷಿಪ್ತವಾಗಿ ಮಾಹಿತಿ ನೀಡಿ.

ಬೆಸ್ಕಾಂನ ಈ ಡಿಜಿಟಲ್ ಹೆಜ್ಜೆ ಗ್ರಾಹಕರಿಗೆ ದೊಡ್ಡ ಸಮಾಧಾನ ತಂದಿದೆ. ಇನ್ನು ಮುಂದೆ ಕರೆಂಟ್ ಹೋದರೆ ಗಾಬರಿ ಬೇಡ, ತಕ್ಷಣ ನಿಮ್ಮ ಜಿಲ್ಲೆಯ ವಾಟ್ಸ್‌ಆ್ಯಪ್ ಸಂಖ್ಯೆಗೆ ಮೆಸೇಜ್ ಮಾಡಿ ಸುಲಭವಾಗಿ ದೂರು ದಾಖಲಿಸಿ. ಈ ಉಪಯುಕ್ತ ಮಾಹಿತಿಯನ್ನು ನಿಮ್ಮ ಸ್ನೇಹಿತರು ಮತ್ತು ಕುಟುಂಬದವರೊಂದಿಗೆ ಹಂಚಿಕೊಳ್ಳಿ!

Bengal’s new Era: ಬಂಗಾಳದಲ್ಲಿ ‘ಕಮಲ’ ಪರ್ವ: ರಾಜ್ಯಪಾಲರನ್ನು ಭೇಟಿ ಮಾಡಿ ಸರ್ಕಾರ ರಚನೆಗೆ ಹಕ್ಕು ಮಂಡಿಸಿದ ಸುವೇಂದು ಅಧಿಕಾರಿ!

0

(Kolkata): ಕೊಲ್ಕತ್ತಾ: ಪಶ್ಚಿಮ ಬಂಗಾಳದ (West Bengal) ರಾಜಕೀಯ ಇತಿಹಾಸದಲ್ಲಿ ಇಂದು ಹೊಸ ಅಧ್ಯಾಯವೊಂದು ಆರಂಭವಾಗಿದೆ. ದಶಕಗಳ ಕಾಲದ ಮಮತಾ ಬ್ಯಾನರ್ಜಿ (Mamatha Banerjee) ಅವರ ಆಡಳಿತಕ್ಕೆ ತೆರೆ ಬಿದ್ದಿದ್ದು, ಬಿಜೆಪಿಯ ಸುವೇಂದು ಅಧಿಕಾರಿ ಅವರು ರಾಜ್ಯದ ಮುಂದಿನ ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಳ್ಳಲು ಸಜ್ಜಾಗಿದ್ದಾರೆ.

ಶುಕ್ರವಾರ ಸಂಜೆ ಕೋಲ್ಕತ್ತಾದ (Kolkata) ಲೋಕ ಭವನದಲ್ಲಿ ರಾಜ್ಯಪಾಲ ಆರ್.ಎನ್. ರವಿ ಅವರನ್ನು ಭೇಟಿ ಮಾಡಿದ ಸುವೇಂದು ಅಧಿಕಾರಿ, ಅಧಿಕೃತವಾಗಿ ಸರ್ಕಾರ ರಚನೆಗೆ ಹಕ್ಕು ಮಂಡಿಸಿದರು. ಇದಕ್ಕೂ ಮುನ್ನ ನಡೆದ ಬಿಜೆಪಿ ಶಾಸಕಾಂಗ ಪಕ್ಷದ ಸಭೆಯಲ್ಲಿ ಅಧಿಕಾರಿ ಅವರನ್ನು ಸರ್ವಾನುಮತದಿಂದ ನಾಯಕನನ್ನಾಗಿ ಆಯ್ಕೆ ಮಾಡಲಾಗಿತ್ತು.

ಬದಲಾದ ಬಂಗಾಳದ ರಾಜಕೀಯ ಚಿತ್ರಣ

ಕಳೆದ 15 ವರ್ಷಗಳಿಂದ ರಾಜ್ಯವಾಳುತ್ತಿದ್ದ ಮಮತಾ ಬ್ಯಾನರ್ಜಿ ಅವರ ತೃಣಮೂಲ ಕಾಂಗ್ರೆಸ್ (TMC) ಭದ್ರಕೋಟೆಯನ್ನು ಬಿಜೆಪಿ ಈ ಬಾರಿ ಧೂಳೀಪಟ ಮಾಡಿದೆ. ಒಟ್ಟು 294 ವಿಧಾನಸಭಾ ಕ್ಷೇತ್ರಗಳ ಪೈಕಿ ಬಿಜೆಪಿ 207 ಸ್ಥಾನಗಳನ್ನು ಗೆಲ್ಲುವ ಮೂಲಕ ಸ್ಪಷ್ಟ ಬಹುಮತ ಪಡೆದಿದೆ. ಈ ಐತಿಹಾಸಿಕ ಜಯದ ಬೆನ್ನಲ್ಲೇ ರಾಜ್ಯಪಾಲರು ಗುರುವಾರ ವಿಧಾನಸಭೆಯನ್ನು ವಿಸರ್ಜಿಸಿದ್ದರು, ಇದು ಹೊಸ ಸರ್ಕಾರ ರಚನೆಗೆ ಹಾದಿ ಸುಗಮಗೊಳಿಸಿತು.

ನಾಳೆ ಭವ್ಯ ಪ್ರಮಾಣವಚನ ಸಮಾರಂಭ

ಬಂಗಾಳದ ಹೊಸ ಸರ್ಕಾರದ ಪಟ್ಟಾಭಿಷೇಕಕ್ಕೆ ಕೋಲ್ಕತ್ತಾದ ಐತಿಹಾಸಿಕ ಬ್ರಿಗೇಡ್ ಪೆರೇಡ್ ಮೈದಾನ ಸಾಕ್ಷಿಯಾಗಲಿದೆ. ಶನಿವಾರ (ಮೇ 9) ನಡೆಯಲಿರುವ ಈ ಅದ್ಧೂರಿ ಸಮಾರಂಭದಲ್ಲಿ ಸುವೇಂದು ಅಧಿಕಾರಿ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಲಿದ್ದಾರೆ.

ಸಮಾರಂಭದ ಪ್ರಮುಖ ಆಕರ್ಷಣೆಗಳು:

  • ಗಣ್ಯರ ಆಗಮನ: ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಶಾ ಮತ್ತು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ನಿತಿನ್ ನಬಿನ್ ಅವರು ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ.

  • ಸಿಎಂಗಳ ದಂಡು: ಎನ್‌ಡಿಎ ಆಡಳಿತವಿರುವ ವಿವಿಧ ರಾಜ್ಯಗಳ ಮುಖ್ಯಮಂತ್ರಿಗಳು ಹಾಗೂ ಕೇಂದ್ರ ಸಚಿವರು ಈ ಐತಿಹಾಸಿಕ ಕ್ಷಣಕ್ಕೆ ಸಾಕ್ಷಿಯಾಗಲಿದ್ದಾರೆ.

  • ಜನಸಾಗರ: ಸುಮಾರು 10 ಲಕ್ಷಕ್ಕೂ ಹೆಚ್ಚು ಬೆಂಬಲಿಗರು ಈ ಸಮಾರಂಭದಲ್ಲಿ ಭಾಗವಹಿಸುವ ನಿರೀಕ್ಷೆಯಿದ್ದು, ಮೈದಾನದ ಸುತ್ತಮುತ್ತ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ.

ಸುವೇಂದು ಅಧಿಕಾರಿ ಅವರು ಕೇವಲ ನಂದಿಗ್ರಾಮದಲ್ಲಿ ಮಾತ್ರವಲ್ಲದೆ, ಮಮತಾ ಬ್ಯಾನರ್ಜಿ ಅವರ ಭದ್ರಕೋಟೆಯಾಗಿದ್ದ ಭವಾನಿಪುರದಲ್ಲೂ ಜಯಭೇರಿ ಬಾರಿಸಿರುವುದು ಈ ಬಾರಿಯ ಚುನಾವಣೆಯ ವಿಶೇಷ. ಬಂಗಾಳದ ಜನತೆ ಬದಲಾವಣೆ ಬಯಸಿದ್ದು, ಈಗ ಸುವೇಂದು ಅಧಿಕಾರಿ ನೇತೃತ್ವದ ‘ಸೋನಾರ್ ಬಾಂಗ್ಲಾ’ ಕನಸು ನನಸಾಗುತ್ತದೆಯೇ ಎಂದು ಕಾದು ನೋಡಬೇಕಿದೆ.

Daily Horoscope:- ದಿನ ಭವಿಷ್ಯ: ಇಂದು ಯಾರಿಗೆ ಅದೃಷ್ಟ? ಯಾರಿಗೆ ಎಚ್ಚರಿಕೆ ಅಗತ್ಯ? ನಿಮ್ಮ ರಾಶಿ ಫಲ ಇಲ್ಲಿದೆ ನೋಡಿ!

0

Daily Horoscope..!

ಶುಭೋದಯ ಕರ್ನಾಟಕ! ಇಂದು ಶ್ರೀ ಪರಾಭವನಾಮ ಸಂವತ್ಸರದ, ವೈಶಾಖ ಮಾಸದ ಕೃಷ್ಣ ಪಕ್ಷದ ಶುಕ್ರವಾರ. ವಸಂತ ಋತುವಿನ ಈ ಸೊಬಗಿನ ದಿನದಂದು, ಗ್ರಹಗತಿಗಳು ನಿಮ್ಮ ಜೀವನದ ಮೇಲೆ ಯಾವ ರೀತಿ ಪ್ರಭಾವ ಬೀರಲಿವೆ? ಇಂದಿನ ನಿಮ್ಮ ರಾಶಿ ಭವಿಷ್ಯ ಮತ್ತು ಶುಭ-ಅಶುಭ ಸಮಯಗಳ ಕಂಪ್ಲೀಟ್ ಡಿಟೇಲ್ಸ್ ಇಲ್ಲಿದೆ.

🕒 ಇಂದಿನ ಅಶುಭ ಸಮಯಗಳು (ಜಾಗರೂಕರಾಗಿರಿ):

ಯಾವುದೇ ಶುಭ ಕಾರ್ಯ ಅಥವಾ ಹೊಸ ಆರಂಭಕ್ಕೆ ಈ ಸಮಯಗಳನ್ನು ಹೊರತುಪಡಿಸುವುದು ಉತ್ತಮ:

ರಾಹುಕಾಲ: ಬೆಳಗ್ಗೆ 10:45 ರಿಂದ ಮಧ್ಯಾಹ್ನ 12:20 ರವರೆಗೆ.

ಗುಳಿಕಕಾಲ: ಬೆಳಗ್ಗೆ 07:35 ರಿಂದ 09:10 ರವರೆಗೆ.

ಯಮಗಂಡಕಾಲ: ಮಧ್ಯಾಹ್ನ 03:30 ರಿಂದ ಸಂಜೆ 05:05 ರವರೆಗೆ.

♈ ಮೇಷ (Aries)

ಮಕ್ಕಳ ಕಡೆಯಿಂದ ಇಂದು ನಿಮಗೆ ಸಂತಸದ ಸುದ್ದಿ ಸಿಗಲಿದೆ. ಸಮಾಜದಲ್ಲಿ ಒಳ್ಳೆಯ ಹೆಸರು ಮಾಡುವ ಆಲೋಚನೆಗಳು ಮೂಡಲಿವೆ. ಆದರೆ, ಉದ್ಯೋಗದ ವಿಷಯದಲ್ಲಿ ಸ್ವಲ್ಪ ನಿರಾಸಕ್ತಿ ಮತ್ತು ಸೋಮಾರಿತನ ನಿಮ್ಮನ್ನು ಆವರಿಸಬಹುದು, ಎಚ್ಚರ!

♉ ವೃಷಭ (Taurus)

ತಾಯಿಯ ಕಡೆಯಿಂದ ಸಂಪೂರ್ಣ ಸಹಕಾರ ಸಿಗಲಿದೆ. ಮನಸ್ಸಿನಲ್ಲಿ ಸಾತ್ವಿಕ ಅಥವಾ ವೈರಾಗ್ಯದ ಭಾವನೆಗಳು ಮೂಡಬಹುದು. ರಹಸ್ಯ ಮಾರ್ಗಗಳಿಂದ ಕಾರ್ಯಗಳಲ್ಲಿ ಯಶಸ್ಸು ಸಿಗಲಿದ್ದು, ಆಸ್ತಿ ಅಥವಾ ಹೊಸ ವಾಹನ ಖರೀದಿಯ ಯೋಗವಿದೆ.

♊ ಮಿಥುನ (Gemini)

ಇಂದು ಅನಗತ್ಯ ಪ್ರಯಾಣಗಳು ಎದುರಾಗಬಹುದು. ಆದರೆ ನಿಮ್ಮ ಧೈರ್ಯವೇ ನಿಮಗೆ ಜಯ ತಂದುಕೊಡಲಿದೆ. ನೆರೆಹೊರೆಯವರೊಂದಿಗೆ ಮಾತನಾಡುವಾಗ ಸಂಯಮವಿರಲಿ, ಮನಸ್ತಾಪವಾಗುವ ಸಾಧ್ಯತೆ ಇದೆ. ಕೆಲಸ ಬದಲಿಸುವ ಆಲೋಚನೆ ಗಂಭೀರವಾಗಲಿದೆ.

♋ ಕಟಕ (Cancer)

ಹಣಕಾಸಿನ ಹರಿವು ಉತ್ತಮವಾಗಿರುತ್ತದೆ. ಆದರೆ, ನಿಮ್ಮ ಆತುರ ಮತ್ತು ದುಡುಕಿನ ಮಾತುಗಳು ಸಮಸ್ಯೆಗೆ ದಾರಿಯಾಗಬಹುದು. ಸಂಗಾತಿಯೊಂದಿಗೆ ಸ್ವಲ್ಪ ನಿರಾಸಕ್ತಿ ಮೂಡಬಹುದು, ಆದಷ್ಟು ಶಾಂತವಾಗಿರಿ.

♌ ಸಿಂಹ (Leo)

ಸಿಂಹ ರಾಶಿಯವರಿಗೆ ಇಂದು ಸ್ವಾಭಿಮಾನದ ದಿನ. ಆದರೆ ಕೈಗೆ ಬಂದ ಅವಕಾಶಗಳು ಕೈತಪ್ಪುವ ಸಾಧ್ಯತೆ ಇದೆ. ಆರೋಗ್ಯದ ಬಗ್ಗೆ ಕಾಳಜಿ ವಹಿಸಿ. ವೃತ್ತಿ ಜೀವನದಲ್ಲಿ ಏರಿಳಿತಗಳು ಕಂಡುಬಂದರೂ ನಿಮ್ಮ ಆತ್ಮವಿಶ್ವಾಸ ಕುಂದದಿರಲಿ.

♍ ಕನ್ಯಾ (Virgo)

ಧಾರ್ಮಿಕ ಕಾರ್ಯಗಳಿಗಾಗಿ ಇಂದು ಖರ್ಚು ಮಾಡುವಿರಿ. ಅಂದುಕೊಂಡ ಕೆಲಸಗಳನ್ನು ಗುಪ್ತವಾಗಿ ಪೂರ್ಣಗೊಳಿಸಿ ಯಶಸ್ಸು ಕಾಣುವಿರಿ. ದೂರದ ಪ್ರಯಾಣ ಅಥವಾ ಪರಸ್ಥಳ ವಾಸದ ಬಗ್ಗೆ ಗಂಭೀರ ಚಿಂತನೆ ನಡೆಸುವಿರಿ.

♎ ತುಲಾ (Libra)

ರಾಜಕೀಯ ವ್ಯಕ್ತಿಗಳ ಸಂಪರ್ಕದಿಂದ ನಿಮಗೆ ಲಾಭವಾಗಲಿದೆ. ಆರ್ಥಿಕವಾಗಿ ಇಂದು ಸಬಲರಾಗುವಿರಿ, ಲಾಭದ ಪ್ರಮಾಣ ಹೆಚ್ಚಿರಲಿದೆ. ಮಕ್ಕಳಿಂದ ಹಣಕಾಸಿನ ನೆರವು ಸಿಗಬಹುದು, ಆದರೆ ವಿದ್ಯಾರ್ಥಿಗಳಿಗೆ ಅಭ್ಯಾಸದಲ್ಲಿ ಏಕಾಗ್ರತೆ ಕಷ್ಟವಾಗಬಹುದು.

♏ ವೃಶ್ಚಿಕ (Scorpio)

ಸ್ವಂತ ಉದ್ಯಮ ನಡೆಸುವವರಿಗೆ ಇಂದು ಪ್ರಗತಿಪರ ದಿನ. ಉನ್ನತ ಅಧಿಕಾರಿಗಳ ಭೇಟಿ ನಿಮ್ಮ ಕಾರ್ಯಗಳಿಗೆ ವೇಗ ನೀಡಲಿದೆ. ಗೌರವ ಮತ್ತು ಅಂತಸ್ತಿನ ಬಗ್ಗೆ ಸ್ವಲ್ಪ ಆತಂಕವಿರಬಹುದು. ಕೆಲಸದಲ್ಲಿ ಅತಿಯಾದ ನಿರಾಸಕ್ತಿ ಬೇಡ.

🏹 ಧನಸ್ಸು (Sagittarius)

ಆಧ್ಯಾತ್ಮಿಕ ಚಿಂತನೆಗಳು ನಿಮ್ಮ ಮನಸ್ಸಿಗೆ ಶಾಂತಿ ನೀಡಲಿವೆ. ತಂದೆಯ ಆರೋಗ್ಯದಲ್ಲಿ ಏರುಪೇರಾಗುವ ಸಂಭವವಿದ್ದು ಗಮನ ಹರಿಸಿ. ದೂರದ ಪ್ರಯಾಣದ ಸಾಧ್ಯತೆ ಇದೆ. ಮೋಕ್ಷ ಮತ್ತು ಜೀವನದ ಅರ್ಥದ ಬಗ್ಗೆ ಒಲವು ಹೆಚ್ಚಲಿದೆ.

♑ ಮಕರ (Capricorn)

ಇಂದು ಸ್ವಲ್ಪ ಜಾಗರೂಕರಾಗಿರಬೇಕಾದ ದಿನ. ಗುಪ್ತ ಮಾರ್ಗಗಳಿಂದ ಸಂಕಷ್ಟಗಳು ಎದುರಾಗಬಹುದು. ಹಳೆಯ ಕಹಿ ಘಟನೆಗಳ ನೆನಪು ಕಾಡಬಹುದು. ಸೋಮಾರಿತನದಿಂದ ಕೆಲಸಗಳು ಬಾಕಿ ಉಳಿಯದಂತೆ ನೋಡಿಕೊಳ್ಳಿ.

♒ ಕುಂಭ (Aquarius)

ವೈವಾಹಿಕ ಜೀವನ ಮತ್ತು ಪಾಲುದಾರಿಕೆಯಲ್ಲಿ ಅಸಮಾಧಾನ ಮೂಡಬಹುದು. ಪ್ರೀತಿ-ಪ್ರೇಮದ ವಿಷಯಗಳಲ್ಲಿ ಹಿನ್ನಡೆಯಾಗುವ ಸಾಧ್ಯತೆ ಇದೆ. ಸಂಗಾತಿಯೊಂದಿಗೆ ಮನಬಿಚ್ಚಿ ಮಾತನಾಡಿ ಗೊಂದಲ ಬಗೆಹರಿಸಿಕೊಳ್ಳಿ.

♓ ಮೀನ (Pisces)

ಶತ್ರುಗಳ ಕಾಟ ಸ್ವಲ್ಪ ಹೆಚ್ಚಿರಬಹುದು, ಜಾಗ್ರತೆಯಿರಲಿ. ಸಾಲದ ಚಿಂತೆ ನಿಮ್ಮನ್ನು ಕಾಡಬಹುದು. ತಾಯಿಯ ಕಡೆಯ ಸಂಬಂಧಿಕರಿಂದ ಕೆಲವು ಸಮಸ್ಯೆಗಳು ಎದುರಾಗಬಹುದು. ದಾಂಪತ್ಯದಲ್ಲಿ ಅಂತರ ಕಾಯ್ದುಕೊಳ್ಳುವ ಅನಿವಾರ್ಯತೆ ಬರಬಹುದು.

ಗಮನಿಸಿ: ಈ ಫಲಗಳು ಸಾಮಾನ್ಯ ಜ್ಯೋತಿಷ್ಯ ಶಾಸ್ತ್ರವನ್ನು ಆಧರಿಸಿವೆ. ನಿಮ್ಮ ವೈಯಕ್ತಿಕ ಜಾತಕಕ್ಕನುಗುಣವಾಗಿ ಫಲಗಳಲ್ಲಿ ಬದಲಾವಣೆ ಇರಬಹುದು.

Ugrappa on reservation in Chikkaballapur: ಮೀಸಲಾತಿ ಸಂವಿಧಾನದ ಹಕ್ಕು, ಭಿಕ್ಷೆಯಲ್ಲ: ಮಾಜಿ ಸಂಸದ ವಿ.ಎಸ್. ಉಗ್ರಪ್ಪ.

0

(Chikkaballapur) ಚಿಕ್ಕಬಳ್ಳಾಪುರ: ಮೀಸಲಾತಿ ಎಂಬುದು ಯಾರಿಗೂ ನೀಡುವ ಭಿಕ್ಷೆಯಲ್ಲ, ಅದು ಸಂವಿಧಾನ ನೀಡಿದ ಹಕ್ಕು ಎಂದು ಮಾಜಿ ಲೋಕಸಭಾ ಸದಸ್ಯ ವಿ.ಎಸ್. ಉಗ್ರಪ್ಪ (V.S.Ugrappa)ಅವರು ಪ್ರತಿಪಾದಿಸಿದ್ದಾರೆ. ಚಿಕ್ಕಬಳ್ಳಾಪುರದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ಮೀಸಲಾತಿ ವಿಷಯದಲ್ಲಿ ನಿರ್ಲಕ್ಷ್ಯ ತೋರಿದರೆ ತೀವ್ರ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

ಸುದ್ದಿಯ ಮುಖ್ಯಾಂಶಗಳು:

  • ಒಂಬತ್ತನೇ ವೇಳಾಪಟ್ಟಿಗೆ ಸೇರ್ಪಡೆಗೆ ಆಗ್ರಹ: ತಮಿಳುನಾಡು ಮಾದರಿಯಲ್ಲಿ ಕರ್ನಾಟಕದ ಎಸ್ಸಿ/ಎಸ್ಟಿ ಮತ್ತು ಓಬಿಸಿ ಮೀಸಲಾತಿ ಕಾನೂನನ್ನು ಸಂವಿಧಾನದ 9ನೇ ವೇಳಾಪಟ್ಟಿಗೆ (9th Schedule) ಸೇರಿಸಬೇಕು. ಇದರಿಂದ ನ್ಯಾಯಾಲಯಗಳಲ್ಲಿ ಮೀಸಲಾತಿಗೆ ತಡೆ ಬೀಳದಂತೆ ರಕ್ಷಣೆ ಸಿಗುತ್ತದೆ ಎಂದು ಅವರು ಒತ್ತಾಯಿಸಿದರು.
  • ಹೈಕೋರ್ಟ್ ತಡೆ ಮತ್ತು ಸರ್ಕಾರದ ಜವಾಬ್ದಾರಿ: ಪ್ರಸ್ತುತ ಮೀಸಲಾತಿ ಹೆಚ್ಚಳಕ್ಕೆ ಹೈಕೋರ್ಟ್‌ನಿಂದ ತಡೆ ಸಿಕ್ಕಿರುವುದು ಆತಂಕಕಾರಿ. ರಾಜ್ಯ ಸರ್ಕಾರವು ಕೂಡಲೇ ಸರ್ವಪಕ್ಷ ಸಭೆ ಕರೆದು, ದೆಹಲಿಗೆ ನಿಯೋಗ ಒಯ್ಯಬೇಕು. ಸುಪ್ರೀಂ ಕೋರ್ಟ್‌ನಲ್ಲಿ ಸಮರ್ಥವಾಗಿ ವಾದ ಮಂಡಿಸಲು ಕ್ರಮ ಕೈಗೊಳ್ಳಬೇಕು ಎಂದು ಅವರು ಸಿಎಂ ಸಿದ್ದರಾಮಯ್ಯ ಅವರಿಗೆ ಮನವಿ ಮಾಡಿದರು.
  • ಜನಾಪ್ರತಿನಿಧಿಗಳಿಗೆ ತರಾಟೆ: ಚಿಕ್ಕಬಳ್ಳಾಪುರದ ಸಂಸದರಾದ ಡಾ. ಕೆ. ಸುಧಾಕರ್ (Dr. K. Sudhakar) ಮತ್ತು ಶಾಸಕ ಪ್ರದೀಪ್ ಈಶ್ವರ್ (Pradeep eswar) ಅವರ ಹೆಸರನ್ನು ಪ್ರಸ್ತಾಪಿಸಿದ ಉಗ್ರಪ್ಪ ಅವರು, “ನೀವು ಜನರ ಮತ ಪಡೆದು ಜನಪ್ರತಿನಿಧಿಗಳಾಗಿದ್ದೀರಿ. ಸಾಮಾಜಿಕ ನ್ಯಾಯದ ವಿಚಾರ ಬಂದಾಗ ಯಾಕೆ ಮೌನವಾಗಿದ್ದೀರಿ?” ಎಂದು ಪ್ರಶ್ನಿಸಿದರು.
  • ನಕಲಿ ಪ್ರಮಾಣಪತ್ರಗಳ ಹಾವಳಿ: ರಾಜ್ಯದಲ್ಲಿ ಸುಳ್ಳು ಜಾತಿ ಪ್ರಮಾಣಪತ್ರಗಳನ್ನು ಪಡೆದು ಮೀಸಲಾತಿಯನ್ನು ದುರುಪಯೋಗಪಡಿಸಿಕೊಳ್ಳಲಾಗುತ್ತಿದೆ. ವಿಶೇಷವಾಗಿ ಉಡುಪಿ ಮತ್ತು ಕುಂದಾಪುರ ಭಾಗಗಳಲ್ಲಿ ಇಂತಹ ಪ್ರಕರಣಗಳು ಹೆಚ್ಚುತ್ತಿವೆ ಎಂದು ಅವರು ದೂರಿದರು.
  • ಹೋರಾಟದ ಎಚ್ಚರಿಕೆ: ಈ ಸಂಬಂಧ ಚರ್ಚಿಸಲು ಮತ್ತು ಮುಂದಿನ ಹಾದಿ ರೂಪಿಸಲು ಮೇ 11 ರಂದು ಬೆಂಗಳೂರಿನ ವಿಧಾನಸೌಧದ ವಾಲ್ಮೀಕಿ ಪ್ರತಿಮೆ ಬಳಿ ಪ್ರಮುಖರ ಸಭೆ ಕರೆಯಲಾಗಿದೆ. ಅಹಿಂಸಾತ್ಮಕವಾಗಿ ಮತ್ತು ಸಂವಿಧಾನಬದ್ಧವಾಗಿ ನಮ್ಮ ಪ್ರತಿರೋಧವನ್ನು ತೋರುತ್ತೇವೆ ಎಂದು ಅವರು ತಿಳಿಸಿದರು.

​”ನಾಲ್ಕು ಕೋಟಿಗೂ ಅಧಿಕ ಜನರ ಬದುಕಿನ ಜೊತೆ ಚಲ್ಲಾಟ ಆಡಬೇಡಿ. ಸಂವಿಧಾನದ ಆರ್ಟಿಕಲ್ 15 ಮತ್ತು 16 ರ ಅಡಿಯಲ್ಲಿ ನಮಗೆ ಸಿಗಬೇಕಾದ ಪ್ರಾತಿನಿಧ್ಯವನ್ನು ಒದಗಿಸುವುದು ಸರ್ಕಾರದ ಕರ್ತವ್ಯ” ಎಂದು ಉಗ್ರಪ್ಪ ಅವರು ಈ ಸಂದರ್ಭದಲ್ಲಿ ಸ್ಪಷ್ಟಪಡಿಸಿದರು.

Bengaluru rain effects: ಬೆಂಗಳೂರು ಮಳೆಯಲ್ಲಿ 15 ಕಿ.ಮೀಗೆ 1,200 ರೂ. ಆಟೋ ದರ! ಸೋಷಿಯಲ್ ಮೀಡಿಯಾದಲ್ಲಿ ಆಕ್ರೋಶ

0

ಬೆಂಗಳೂರಿನಲ್ಲಿ ಮಳೆ (Bengaluru rain effects) ಬಂತೆಂದರೆ ಸಾಕು, ರಸ್ತೆಗಳು ಕೆರೆಯಂತಾಗುತ್ತವೆ, ಟ್ರಾಫಿಕ್ ಜಾಮ್ ಉಸಿರುಗಟ್ಟಿಸುತ್ತದೆ. ಇದರ ಜೊತೆಗೆ ಜನಸಾಮಾನ್ಯರಿಗೆ ಮತ್ತೊಂದು ದೊಡ್ಡ ತಲೆನೋವೆಂದರೆ ಆಟೋ ಮತ್ತು ಕ್ಯಾಬ್‌ಗಳ ದರ (Auto & Cabs price hike) ಏರಿಕೆ. ಇತ್ತೀಚೆಗೆ ಯುವತಿಯೊಬ್ಬಳು ಹಂಚಿಕೊಂಡ ವಿಡಿಯೋವೊಂದು ಈಗ ಇಂಟರ್ನೆಟ್‌ನಲ್ಲಿ ಸಂಚಲನ ಮೂಡಿಸಿದೆ.

ಏನಿದು ಘಟನೆ?

ಸಾನ್ಯಾ ಸಿಂಗ್ (Sanya singh) ಎಂಬುವವರು ತಮ್ಮ ಸೋಶಿಯಲ್ ಮೀಡಿಯಾ (Social media) ಖಾತೆಯಲ್ಲಿ ವಿಡಿಯೋವೊಂದನ್ನು ಹಂಚಿಕೊಂಡಿದ್ದಾರೆ. ಅದರಲ್ಲಿ, “ಬೆಂಗಳೂರಿನ ಮಳೆಯ ಸಮಯದಲ್ಲಿ ತನ್ನ ಸ್ನೇಹಿತೆ ಕೇವಲ 15 ಕಿಲೋಮೀಟರ್ (15Kms) ದೂರ ಪ್ರಯಾಣಿಸಲು ಬರೋಬ್ಬರಿ 1,200 ರೂಪಾಯಿ (1200 Rupees) ಆಟೋ ಬಾಡಿಗೆ (Auto rent) ಪಾವತಿಸಿದ್ದಾಳೆ” ಎಂದು ಆರೋಪಿಸಿದ್ದಾರೆ.

ಈ ವಿಡಿಯೋ ವೈರಲ್ ಆಗುತ್ತಿದ್ದಂತೆ ನೆಟ್ಟಿಗರು ಬೆಂಗಳೂರು ಆಟೋ ಚಾಲಕರ ಮತ್ತು ಆಪ್ ಆಧಾರಿತ ಟ್ಯಾಕ್ಸಿ ಸಂಸ್ಥೆಗಳ ವಿರುದ್ಧ ಗರಂ ಆಗಿದ್ದಾರೆ.


ನೆಟ್ಟಿಗರ ಕಾಮೆಂಟ್‌ಗಳು ಹೇಗಿವೆ?

ಈ ದುಬಾರಿ ದರದ ಬಗ್ಗೆ ಸಾರ್ವಜನಿಕರು ವಿಭಿನ್ನವಾಗಿ ಪ್ರತಿಕ್ರಿಯಿಸಿದ್ದಾರೆ:

  • ಏರ್‌ಪೋರ್ಟ್ ದರಕ್ಕೆ ಸಮ: “1,200 ರೂಪಾಯಿ ಕೊಟ್ಟರೆ ನಗರದ ಯಾವುದೇ ಮೂಲೆಯಿಂದ ಏರ್‌ಪೋರ್ಟ್‌ಗೇ ಕ್ಯಾಬ್‌ನಲ್ಲಿ ಹೋಗಬಹುದು. ಅಂತಹದ್ದರಲ್ಲಿ 15 ಕಿ.ಮೀಗೆ ಇಷ್ಟು ಹಣವೇ?” ಎಂದು ಹಲವರು ಪ್ರಶ್ನಿಸಿದ್ದಾರೆ.

  • ಒಂದು ದಿನದ ಸಂಬಳ: “ಇದು ಸಾಮಾನ್ಯ ಉದ್ಯೋಗಿಯ ಇಡೀ ದಿನದ ಸಂಬಳಕ್ಕೆ ಸಮಾನವಾಗಿದೆ. ಹೀಗಾದರೆ ಸಾಮಾನ್ಯರು ಜೀವನ ಮಾಡುವುದು ಹೇಗೆ?” ಎಂಬ ಆಕ್ರೋಶ ವ್ಯಕ್ತವಾಗಿದೆ.

  • ಸುಲಿಗೆಯ ವಿರುದ್ಧ ಟೀಕೆ: ಮಳೆ ಮತ್ತು ತುರ್ತು ಪರಿಸ್ಥಿತಿಯನ್ನು ಬಂಡವಾಳ ಮಾಡಿಕೊಂಡು ಆಟೋ ಚಾಲಕರು ಸುಲಿಗೆ ಮಾಡುತ್ತಿದ್ದಾರೆ ಎಂದು ಅನೇಕರು ದೂರಿದ್ದಾರೆ.


ಬೆಂಗಳೂರಿಗರ ಗೋಳು ಕೇಳುವವರಾರು?

ಬೆಂಗಳೂರಿನಲ್ಲಿ ಮೆಟ್ರೋ ಮತ್ತು ಬಸ್‌ಗಳಿದ್ದರೂ ಸಹ, ಲಾಸ್ಟ್ ಮೈಲ್ ಕನೆಕ್ಟಿವಿಟಿಗೆ ಜನ ಆಟೋಗಳನ್ನೇ ನೆಚ್ಚಿಕೊಳ್ಳಬೇಕಿದೆ. ಆದರೆ:

  1. ಮಳೆ ಬಂದಾಗ ಆಪ್‌ಗಳಲ್ಲಿ ‘Peak Pricing’ ಹೆಸರಿನಲ್ಲಿ ದರ ದುಪ್ಪಟ್ಟಾಗುತ್ತದೆ.

  2. ನೇರವಾಗಿ ಆಟೋ ಕೇಳಿದರೆ ಚಾಲಕರು ಮೀಟರ್ ಹಾಕಲು ಒಪ್ಪದೆ ಕೇಳಿದ್ದೇ ದರ ಎನ್ನುತ್ತಾರೆ.

ಗಮನಿಸಿ: ಸರ್ಕಾರ ನಿಗದಿಪಡಿಸಿದ ದರಕ್ಕಿಂತ ಹೆಚ್ಚು ಹಣ ವಸೂಲಿ ಮಾಡುವುದು ಕಾನೂನುಬಾಹಿರ. ಇಂತಹ ಸಂದರ್ಭಗಳಲ್ಲಿ ಸಾರ್ವಜನಿಕರು ಸಂಚಾರಿ ಪೊಲೀಸರಿಗೆ ದೂರು ನೀಡಲು ಅವಕಾಶವಿದೆ.


ಬೆಂಗಳೂರಿನಂತಹ ಐಟಿ ಹಬ್‌ನಲ್ಲಿ ಸಾರಿಗೆ ವ್ಯವಸ್ಥೆ ಇಷ್ಟು ದುಬಾರಿಯಾದರೆ ಮಧ್ಯಮ ವರ್ಗದ ಜನರ ಕಥೆಯೇನು ಎಂಬುದು ಈಗ ದೊಡ್ಡ ಪ್ರಶ್ನೆಯಾಗಿದೆ. ನೀವೇನಾದರೂ ಇತ್ತೀಚೆಗೆ ಇಂತಹ “ದುಬಾರಿ” ಪ್ರಯಾಣದ ಅನುಭವ ಪಡೆದಿದ್ದೀರಾ? ಕಮೆಂಟ್ ಮಾಡಿ ತಿಳಿಸಿ!

Tamilnadu Election Results: ವಿಜಯ್‌ಗೆ (Vijay) ಅಧಿಕಾರದ ಸಂಕಷ್ಟ: ‘ದಳಪತಿ’ಯನ್ನು ಕಟ್ಟಿಹಾಕಲು ಒಂದಾಗುತ್ತಾರಾ ಬದ್ಧ ವೈರಿಗಳಾದ ಡಿಎಂಕೆ – ಎಐಎಡಿಎಂಕೆ?

0

ತಮಿಳುನಾಡು (Tamilnadu election result) ವಿಧಾನಸಭಾ ಚುನಾವಣಾ ಫಲಿತಾಂಶ ಪ್ರಕಟವಾಗಿ ಮೂರು ದಿನ ಕಳೆದರೂ ಅಧಿಕಾರದ ಗದ್ದುಗೆ ಯಾರು ಏರಲಿದ್ದಾರೆ ಎಂಬ ಗೊಂದಲ ಮುಂದುವರಿದಿದೆ. ಮೇ 4ರಂದು ಹೊರಬಿದ್ದ ಫಲಿತಾಂಶದಲ್ಲಿ ದಳಪತಿ ವಿಜಯ್ (Actor Vijay) ನೇತೃತ್ವದ ತಮಿಳಗ ವೆಟ್ರಿ ಕಳಗಂ (TVK) ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿದರೂ, ಮ್ಯಾಜಿಕ್ ನಂಬರ್ (Magic number) ತಲುಪುವಲ್ಲಿ ವಿಫಲವಾಗಿದೆ.

ಪ್ರಮಾಣವಚನಕ್ಕೆ ರಾಜ್ಯಪಾಲರ ಬ್ರೇಕ್!

ಕಾಂಗ್ರೆಸ್ ಬೆಂಬಲದ ಹೊರತಾಗಿಯೂ ವಿಜಯ್ ಸರ್ಕಾರ ರಚಿಸಲು ಇನ್ನು 5 ಸ್ಥಾನಗಳ ಕೊರತೆ ಎದುರಿಸುತ್ತಿದ್ದಾರೆ. ನಾಳೆ ನಡೆಯಬೇಕಿದ್ದ ವಿಜಯ್ ಅವರ ಪ್ರಮಾಣವಚನ ಸಮಾರಂಭವನ್ನು ರಾಜ್ಯಪಾಲರು ಮುಂದೂಡಿದ್ದಾರೆ. “ಸದನದಲ್ಲಿ ಬಹುಮತ ಸಾಬೀತುಪಡಿಸುವ ಸ್ಪಷ್ಟ ದಾಖಲೆ ನೀಡುವವರೆಗೂ ಸರ್ಕಾರ ರಚನೆಗೆ ಅವಕಾಶವಿಲ್ಲ” ಎಂದು ರಾಜಭವನ ಖಡಕ್ ಸಂದೇಶ ರವಾನಿಸಿದೆ.


ಶತ್ರುವಿನ ಶತ್ರು ಮಿತ್ರ: ಡಿಎಂಕೆ-ಎಐಎಡಿಎಂಕೆ ರಹಸ್ಯ ಮಾತುಕತೆ?

ಈ ಬಿಕ್ಕಟ್ಟನ್ನೇ ಬಂಡವಾಳ ಮಾಡಿಕೊಳ್ಳಲು ಮುಂದಾಗಿರುವ ದ್ರಾವಿಡ ಪಕ್ಷಗಳಾದ ಡಿಎಂಕೆ (DMK) ಮತ್ತು ಎಐಎಡಿಎಂಕೆ (AIADMK) ಈಗ ಒಂದಾಗುವ ಮಾತುಗಳನ್ನಾಡುತ್ತಿವೆ ಎಂಬ ಸುದ್ದಿಗಳು ಹರಿದಾಡುತ್ತಿವೆ.

  • ಸ್ಥಾನಗಳ ಲೆಕ್ಕಾಚಾರ: ಏಪ್ರಿಲ್ 23ರ ಚುನಾವಣೆಯಲ್ಲಿ ಡಿಎಂಕೆ (DMK) 59 ಸ್ಥಾನಗಳನ್ನು ಪಡೆದರೆ, ಎಐಎಡಿಎಂಕೆ (AIADMK) 47 ಸ್ಥಾನಗಳನ್ನು ಗೆದ್ದಿದೆ.

  • ಮೈತ್ರಿ ಸಾಧ್ಯತೆ: ‘ಇಂಡಿಯಾ ಟುಡೇ’ ವರದಿಯ ಪ್ರಕಾರ, ಉಭಯ ಪಕ್ಷಗಳ ನಾಯಕರು ತೆರೆಮರೆಯಲ್ಲಿ ರಹಸ್ಯ ಮಾತುಕತೆ ನಡೆಸುತ್ತಿದ್ದಾರೆ. ವಿಜಯ್ ಅವರನ್ನು ಅಧಿಕಾರದಿಂದ ದೂರ ಇಡಲು ಈ ‘ಬದ್ಧ ವೈರಿಗಳು’ ಕೈಜೋಡಿಸುತ್ತಾರಾ ಎಂಬ ಕುತೂಹಲ ಮೂಡಿದೆ.

  • ಇನ್ನೂ ಬೇಕಿದೆ ಬಲ: ಡಿಎಂಕೆ (59) ಮತ್ತು ಎಐಎಡಿಎಂಕೆ (47) ಒಂದಾದರೂ ಒಟ್ಟು ಸಂಖ್ಯೆ 106 ಆಗುತ್ತದೆ. ತಮಿಳುನಾಡಿನಲ್ಲಿ ಬಹುಮತಕ್ಕೆ 118 ಸ್ಥಾನಗಳ ಅಗತ್ಯವಿದ್ದು, ಈ ಮೈತ್ರಿಕೂಟಕ್ಕೂ ಇನ್ನು 12 ಶಾಸಕರ ಬೆಂಬಲ ಬೇಕಾಗುತ್ತದೆ.


ರಾಜಕೀಯ ಕುದುರೆ ವ್ಯಾಪಾರದ ಭೀತಿ?

ಒಂದೆಡೆ ವಿಜಯ್ ತಮ್ಮ ಪಕ್ಷದ ಶಾಸಕರನ್ನು ಹಿಡಿದಿಟ್ಟುಕೊಳ್ಳಲು ಹರಸಾಹಸ ಪಡುತ್ತಿದ್ದರೆ, ಇನ್ನೊಂದೆಡೆ ದ್ರಾವಿಡ ಪಕ್ಷಗಳು ಸಣ್ಣ ಪಕ್ಷಗಳ ಬೆಂಬಲಕ್ಕಾಗಿ ಗಾಳ ಹಾಕುತ್ತಿವೆ. ದಶಕಗಳಿಂದ ಪರಸ್ಪರ ದ್ವೇಷಿಸುತ್ತಾ ಬಂದಿರುವ ಡಿಎಂಕೆ ಮತ್ತು ಎಐಎಡಿಎಂಕೆ ಕೇವಲ ಅಧಿಕಾರಕ್ಕಾಗಿ ಒಂದಾದರೆ, ಅದು ತಮಿಳುನಾಡು ರಾಜಕಾರಣದ ಅತಿದೊಡ್ಡ ತಿರುವು ಎನಿಸಿಕೊಳ್ಳಲಿದೆ.

ಮುಂದೇನು? ರಾಜ್ಯಪಾಲರ ಮುಂದಿನ ನಡೆ ಮತ್ತು ಸಣ್ಣ ಪಕ್ಷಗಳು ಯಾರಿಗೆ ಬೆಂಬಲ ನೀಡಲಿವೆ ಎಂಬ ಅಂಶವೇ ಈಗ ನಿರ್ಣಾಯಕ. ವಿಜಯ್ ಹೊಸ ಹಾದಿ ಕಂಡುಕೊಳ್ಳುತ್ತಾರಾ ಅಥವಾ ದ್ರಾವಿಡ ಪಕ್ಷಗಳ ಈ ಅನಿರೀಕ್ಷಿತ ‘ದೋಸ್ತಿ’ ಅಧಿಕಾರ ಹಿಡಿಯುತ್ತಾ? ಎಂಬುದನ್ನು ಕಾದು ನೋಡಬೇಕಿದೆ.

BJP celebrates victory in Chikkaballapur:- ಚಿಕ್ಕಬಳ್ಳಾಪುರದಲ್ಲಿ ಕೇಸರಿ ಕಲರವ: ಮೂರು ರಾಜ್ಯಗಳ ಗೆಲುವಿನ ಸಂಭ್ರಮದಲ್ಲಿ ಬಿಜೆಪಿ ಕಾರ್ಯಕರ್ತರು!

0

ಚಿಕ್ಕಬಳ್ಳಾಪುರ: (Chikkaballapur) ಇತ್ತೀಚೆಗೆ ನಡೆದ ಪಂಚ ರಾಜ್ಯಗಳ (5 states) ಚುನಾವಣಾ ಫಲಿತಾಂಶದಲ್ಲಿ (Election Results) ಭಾರತೀಯ ಜನತಾ ಪಕ್ಷವು (Bharatiya Janatha Party) (BJP) ಮೂರು ರಾಜ್ಯಗಳಲ್ಲಿ ಅಭೂತಪೂರ್ವ ಬಹುಮತ ಪಡೆದ ಬೆನ್ನಲ್ಲೇ, ಇತ್ತ ಚಿಕ್ಕಬಳ್ಳಾಪುರ ಜಿಲ್ಲೆಯಾದ್ಯಂತ ಹಬ್ಬದ ವಾತಾವರಣ ಮನೆಮಾಡಿದೆ. ಜಿಲ್ಲಾ ಬಿಜೆಪಿ ಘಟಕದ ವತಿಯಿಂದ ನಗರದಲ್ಲಿ ಅದ್ಧೂರಿ ವಿಜಯೋತ್ಸವವನ್ನು ಆಚರಿಸಲಾಯಿತು.

ಪಟಾಕಿ ಅಬ್ಬರ, ಸಿಹಿ ಹಂಚಿಕೆ

ಜಿಲ್ಲಾ ಬಿಜೆಪಿ ಕಾರ್ಯಾಲಯದ ಮುಂಭಾಗ ಜಮಾಯಿಸಿದ ನೂರಾರು ಕಾರ್ಯಕರ್ತರು ಮತ್ತು ಮುಖಂಡರು, ಕೈಯಲ್ಲಿ ಕೇಸರಿ ಧ್ವಜ ಹಿಡಿದು “ಭಾರತ್ ಮಾತಾ ಕೀ ಜೈ”, “ನರೇಂದ್ರ ಮೋದಿ ಅವರಿಗೆ ಜೈ” ಎಂಬ ಘೋಷಣೆಗಳನ್ನು ಕೂಗಿದರು. ಪಟಾಕಿ ಸಿಡಿಸಿ ಸಂಭ್ರಮಿಸಿದ ಕಾರ್ಯಕರ್ತರು, ಸಾರ್ವಜನಿಕರಿಗೆ ಸಿಹಿ ಹಂಚುವ ಮೂಲಕ ಗೆಲುವಿನ ಖುಷಿಯನ್ನು ಹಂಚಿಕೊಂಡರು.

“ಇದು ಕೇವಲ ಗೆಲುವಲ್ಲ, ದೇಶದ ಸುಭದ್ರತೆಗೆ ಸಂದ ಜಯ”

ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಬಿಜೆಪಿ ಜಿಲ್ಲಾಧ್ಯಕ್ಷ ಸೀಕಲ್ ರಾಮಚಂದ್ರಗೌಡ (Seekal Ramachandragowda) ಅವರು ಹರ್ಷ ವ್ಯಕ್ತಪಡಿಸುತ್ತಾ, “ಈ ಗೆಲುವು ನಿರೀಕ್ಷೆಗೂ ಮೀರಿದ್ದು. ವಿಶೇಷವಾಗಿ ಪಶ್ಚಿಮ ಬಂಗಾಳದಲ್ಲಿ (West Bengal) ಬಿಜೆಪಿ ಸಾಧಿಸಿರುವ ಯಶಸ್ಸು ಅಲ್ಲಿನ ಭ್ರಷ್ಟಾಚಾರ ಮತ್ತು ಹಿಂಸಾತ್ಮಕ ರಾಜಕಾರಣಕ್ಕೆ ಜನರು ನೀಡಿದ ತಕ್ಕ ಉತ್ತರವಾಗಿದೆ” ಎಂದರು.

ಮುಂದುವರಿದು ಮಾತನಾಡಿದ ಅವರು:

  • ದೇಶದ ರಕ್ಷಣೆ: ಆರ್ಟಿಕಲ್ 370 (Article 370) ರದ್ದತಿ ಮತ್ತು ಗಡಿ ಭದ್ರತೆಯಂತಹ ದಿಟ್ಟ ನಿರ್ಧಾರಗಳಿಂದ ದೇಶ ಇಂದು ಸುರಕ್ಷಿತವಾಗಿದೆ.

  • ಪಶ್ಚಿಮ ಬಂಗಾಳದ ಬದಲಾವಣೆ: ಎಸ್ಐಆರ್ (SIR) ಜಾರಿಗೊಳಿಸಿ ಅಕ್ರಮ ಮತದಾರರನ್ನು ಕೈಬಿಡುವ ಮೂಲಕ ದೇಶವಿರೋಧಿ ಶಕ್ತಿಗಳಿಗೆ ಮೋದಿ (Modi Govt.) ಸರ್ಕಾರ ಬಿಸಿ ಮುಟ್ಟಿಸಿದೆ. ಅಲ್ಲಿನ 10 ವರ್ಷಗಳ ಏಕಚಕ್ರಾಧಿಪತ್ಯಕ್ಕೆ ಜನರು ಈಗ ಪೂರ್ಣವಿರಾಮ ಇಟ್ಟಿದ್ದಾರೆ.

  • ಮಹಿಳಾ ಸಬಲೀಕರಣ: ಮುಂಬರುವ ದಿನಗಳಲ್ಲಿ ಮಹಿಳಾ ಮೀಸಲಾತಿ ಬಿಲ್ ಜಾರಿಗೆ ತರುವ ಮೂಲಕ ಅಂಬೇಡ್ಕರ್ ಅವರ ಕನಸನ್ನು ಮೋದಿ ನನಸು ಮಾಡಲಿದ್ದಾರೆ.


ಮೇ 9 ಕ್ಕೆ ಚಿತ್ರದುರ್ಗದಲ್ಲಿ ಬಿಎಸ್ ವೈ “ಅಭಿಮಾನೋತ್ಸವ”

ಇದೇ ಸಂದರ್ಭದಲ್ಲಿ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ 50 ವರ್ಷಗಳ ರಾಜಕೀಯ ಪಯಣದ ನೆನಪಿಗಾಗಿ ಆಯೋಜಿಸಲಾಗಿರುವ “ಅಭಿಮಾನೋತ್ಸವ” ಕಾರ್ಯಕ್ರಮದ ಬಗ್ಗೆಯೂ ಮಾಹಿತಿ ನೀಡಲಾಯಿತು.

  • ಸ್ಥಳ: ಚಿತ್ರದುರ್ಗ

  • ದಿನಾಂಕ: ಮೇ 9

  • ಚಿಕ್ಕಬಳ್ಳಾಪುರದ ಸಿದ್ಧತೆ: ಜಿಲ್ಲೆಯ ಐದು ವಿಧಾನಸಭಾ ಕ್ಷೇತ್ರಗಳಾದ (ಗೌರಿಬಿದನೂರು, ಬಾಗೇಪಲ್ಲಿ, ಚಿಕ್ಕಬಳ್ಳಾಪುರ, ಚಿಂತಾಮಣಿ ಮತ್ತು ಶಿಡ್ಲಘಟ್ಟ) ಅಭಿಮಾನಿಗಳು ಕನಿಷ್ಠ 100 ಬಸ್‌ಗಳಲ್ಲಿ ಈ ಕಾರ್ಯಕ್ರಮಕ್ಕೆ ತೆರಳಲಿದ್ದಾರೆ.

  • ಸಂಸದ ಡಾ. ಕೆ. ಸುಧಾಕರ್ ಅವರ ಮಾರ್ಗದರ್ಶನದಲ್ಲಿ ಈ ಬೃಹತ್ ಪ್ರವಾಸದ ಜವಾಬ್ದಾರಿಯನ್ನು ಮುಖಂಡರಿಗೆ ಹಂಚಲಾಗಿದೆ. ಇದು ಕೇವಲ ಪಕ್ಷದ ಕಾರ್ಯಕ್ರಮವಲ್ಲ, ಬಿಎಸ್ ವೈ ಅವರ ಎಲ್ಲಾ ಅಭಿಮಾನಿಗಳಿಗೆ ಮುಕ್ತ ಆಹ್ವಾನವಿದೆ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಬಿಜೆಪಿ ರಾಜ್ಯ ಕಾರ್ಯದರ್ಶಿಯಾದ ಮುನಿರಾಜುರವರು, ಚಿಂತಾಮಣಿ ಬಿಜೆಪಿ ಮುಖಂಡರಾದ ವೇಣುಗೋಪಾಲ್, ಪ್ರಧಾನ ಕಾರ್ಯದರ್ಶಿಗಳಾದ ಹೆಚ್.ಎಸ್.ಮುರಳಿದಾರ್  ಮತ್ತು ಮಧು ಸೂರ್ಯನಾರಾಯಣ ರೆಡ್ಡಿ, ಜಿಲ್ಲಾ ಕಾರ್ಯದರ್ಶಿ ಆರ್ .ಎನ್.ಅಶೋಕ್, ರಾಷ್ಟ್ರೀಯ ಪರಿಷತ್  ಸದಸ್ಯರಾದ ಲಕ್ಷ್ಮೀನಾರಾಯಣ ಗುಪ್ತ, ರಾಜ್ಯ ಪರಿಷತ್ ಸದಸ್ಯರ ಬೈರೇಗೌಡ, ಜಿಲ್ಲಾ ಮಾಧ್ಯಮ ಸಂಚಾಲಕ ವಿ.ಮಧುಚಂದ್ರ ಮಂಡಲದ ಅಧ್ಯಕ್ಷರಾದ ಪ್ರಭಾಕರ್ ರೆಡ್ಡಿ, ತೇಜೇಂದ್ರ ಪಾಪು, ಆನಂದ್ ಗೌಡ, ಕೋಡಿರ್ಲಪ್ಪ, ವೇಣು ಮಾಧವ್, ನರಸಿಂಹರಾಜು, ಗೋವಿಂದರಾಜು, ದೇವರಾಜ್, ಚಿಕ್ಕಬಳ್ಳಾಪುರ ನಗರ ಉಪಾಧ್ಯಕ್ಷರಾದ ಶಶಿಧರ್, ಮಹಿಳಾ ಮೋರ್ಚ ಉಪಾಧ್ಯಕ್ಷರಾದ ಸುಮಿತ್ರ, ನರಸಪ್ಪ, ಕೊಂಡಪ್ಪ, ಅಜಯ್ ಪಾಲ್ ಸಿಂಗ್ ಸೇರಿದಂತೆ ಇತರರು ಉಪಸ್ಥಿತರಿದ್ದರು.

Chanakya niti:- ಚಾಣಕ್ಯ ನೀತಿ: ಸದಾ ಇತರರ ಮಾತು ಕೇಳುವ ಅಭ್ಯಾಸ ನಿಮ್ಮನ್ನು ಸಂಕಷ್ಟಕ್ಕೆ ದೂಡಬಹುದು, ಎಚ್ಚರ!

0

Chanakya niti:- ನಮ್ಮ ಜೀವನದಲ್ಲಿ ನಾವು ತೆಗೆದುಕೊಳ್ಳುವ ನಿರ್ಧಾರಗಳೇ ನಮ್ಮ ಭವಿಷ್ಯವನ್ನು ರೂಪಿಸುತ್ತವೆ. ಆದರೆ ಇಂದಿನ ದಿನಗಳಲ್ಲಿ ಅನೇಕರು ಸ್ವಂತ ಬುದ್ಧಿ ಉಪಯೋಗಿಸುವುದಕ್ಕಿಂತ ಹೆಚ್ಚಾಗಿ ಪಕ್ಕದ ಮನೆಯವರೋ ಅಥವಾ ಸ್ನೇಹಿತರೋ ಹೇಳಿದ್ದನ್ನೇ ‘ವೇದವಾಕ್ಯ’ ಎಂದು ನಂಬಿಬಿಡುತ್ತಾರೆ. ಆಚಾರ್ಯ ಚಾಣಕ್ಯರು ತಮ್ಮ ನೀತಿಶಾಸ್ತ್ರದಲ್ಲಿ ಇಂತಹ “ಕುರುಡು ನಂಬಿಕೆ”ಯ ಬಗ್ಗೆ ಗಂಭೀರವಾಗಿ ಎಚ್ಚರಿಸಿದ್ದಾರೆ.

ಬೇರೆಯವರ ಮಾತಿಗೆ ಅತಿಯಾದ ಪ್ರಾಮುಖ್ಯತೆ ನೀಡುವುದರಿಂದ ನಿಮ್ಮ ಜೀವನದ ಮೇಲೆ ಯಾವೆಲ್ಲಾ ಕೆಟ್ಟ ಪರಿಣಾಮಗಳು ಬೀರಬಹುದು? ತಿಳಿಯಲು ಮುಂದೆ ಓದಿ.

1. ಸ್ವಂತವಾಗಿ ಯೋಚಿಸುವ ಶಕ್ತಿ ಕುಂಠಿತ (Loss of Critical Thinking)

ಚಾಣಕ್ಯರ ಪ್ರಕಾರ, ಒಬ್ಬ ವ್ಯಕ್ತಿಯು ಸದಾ ಇತರರ ಆಲೋಚನೆಗಳಿಗೆ ಮಾರುಹೋದಾಗ, ಆತನ ಮೆದುಳು ಸ್ವತಂತ್ರವಾಗಿ ಯೋಚಿಸುವುದನ್ನು ನಿಲ್ಲಿಸಿಬಿಡುತ್ತದೆ. ಪ್ರತಿಯೊಬ್ಬ ವ್ಯಕ್ತಿಯ ಜೀವನದ ಸಂದರ್ಭಗಳು ಬೇರೆಯೇ ಆಗಿರುತ್ತವೆ. ಒಬ್ಬರಿಗೆ ಲಾಭ ತಂದ ವಿಷಯ ನಿಮಗೆ ನಷ್ಟ ತರಬಹುದು. ಇತರರ ಮಾತಿನ ಹಿಂದೆ ಅವರದ್ದೇ ಆದ ಸ್ವಾರ್ಥ ಅಥವಾ ಕುತಂತ್ರ ಅಡಗಿರಬಹುದು. ಇದನ್ನು ಅರಿಯದೆ ನೀವು ಹೆಜ್ಜೆ ಇಟ್ಟರೆ, ನಿಮ್ಮ ಜೀವನದ ಹಾದಿ ತಪ್ಪುವುದು ಖಂಡಿತ.

2. ನಿರ್ಧಾರ ತೆಗೆದುಕೊಳ್ಳುವಲ್ಲಿ ವಿಫಲ (Inability to Take Decisions)

ಯಶಸ್ವಿ ವ್ಯಕ್ತಿಯ ಲಕ್ಷಣವೆಂದರೆ ಸಮಯಕ್ಕೆ ಸರಿಯಾಗಿ ದಿಟ್ಟ ನಿರ್ಧಾರ ತೆಗೆದುಕೊಳ್ಳುವುದು. ಆದರೆ ಯಾರು ಸದಾ ಇತರರ ಸಲಹೆಯನ್ನೇ ಅವಲಂಬಿಸುತ್ತಾರೋ, ಅವರು ಸಣ್ಣ ಪುಟ್ಟ ವಿಚಾರಗಳಿಗೂ ಬೇರೆಯವರ ಮುಖ ನೋಡುವಂತಾಗುತ್ತದೆ.

“ನಿರ್ಧಾರ ನಿಮ್ಮದಾಗಿರಲಿ, ಸಲಹೆ ಮಾತ್ರ ಇತರರದಾಗಿರಲಿ” ಎಂಬುದು ಚಾಣಕ್ಯರ ಕಿವಿಮಾತು.

ಯಾವಾಗ ನೀವು ಸ್ವಂತ ನಿರ್ಧಾರ ತೆಗೆದುಕೊಳ್ಳುವ ಸಾಮರ್ಥ್ಯ ಕಳೆದುಕೊಳ್ಳುತ್ತೀರೋ, ಆಗ ನಿಮ್ಮ ಜೀವನದ ರಿಮೋಟ್ ಕಂಟ್ರೋಲ್ ಇತರರ ಕೈಗೆ ಹೋದಂತೆ!

3. ಆತ್ಮವಿಶ್ವಾಸದ ಕೊರತೆ (Low Self-Confidence)

ಇತರರ ಮಾತನ್ನು ಕೇಳುತ್ತಾ ಹೋದಂತೆ “ನನಗೆ ಏನೂ ತಿಳಿಯದು, ಅವರು ಹೇಳಿದ್ದೇ ಸರಿ” ಎಂಬ ಕೀಳರಿಮೆ ನಿಮ್ಮಲ್ಲಿ ಬೆಳೆಯತೊಡಗುತ್ತದೆ. ಇದು ನಿಮ್ಮ ಆತ್ಮವಿಶ್ವಾಸವನ್ನು ಬುಡಮೇಲು ಮಾಡುತ್ತದೆ. ಆತ್ಮವಿಶ್ವಾಸವಿಲ್ಲದ ವ್ಯಕ್ತಿ ಎಷ್ಟೇ ಜ್ಞಾನಿಯಾಗಿದ್ದರೂ ಸಮಾಜದಲ್ಲಿ ಗೌರವ ಪಡೆಯಲು ಸಾಧ್ಯವಿಲ್ಲ. ಬೇರೆಯವರ ಅಭಿಪ್ರಾಯಗಳಿಗೆ ಅತಿಯಾಗಿ ತಲೆಬಾಗುವುದು ನಿಮ್ಮ ವ್ಯಕ್ತಿತ್ವವನ್ನೇ ಕುಂದಿಸುತ್ತದೆ.

4. ವಿನಾಶದ ಹಾದಿ ಸುಲಭವಾಗುತ್ತದೆ

ಚಾಣಕ್ಯರು ಎಚ್ಚರಿಸುವಂತೆ, ಲೋಕದಲ್ಲಿ ಎಲ್ಲರೂ ನಿಮ್ಮ ಹಿತೈಷಿಗಳಾಗಿರುವುದಿಲ್ಲ. ಕೆಲವರು ನಿಮ್ಮನ್ನು ದಾರಿ ತಪ್ಪಿಸಲು ಅಥವಾ ನಿಮ್ಮ ಯಶಸ್ಸನ್ನು ಕಂಡು ಸಹಿಸದೆ ತಪ್ಪು ಸಲಹೆಗಳನ್ನು ನೀಡಬಹುದು. ಅಂತಹವರ ಮಾತನ್ನು ಕುರುಡಾಗಿ ನಂಬುವುದು ಎಂದರೆ, ನಿಮ್ಮ ಕೈಯಾರೆ ನಿಮ್ಮ ಜೀವನವನ್ನು ವಿನಾಶದತ್ತ ತಳ್ಳುವುದು ಎಂದರ್ಥ.

ಕೊನೆಯ ಮಾತು

ಸಲಹೆಗಳನ್ನು ಕೇಳುವುದರಲ್ಲಿ ತಪ್ಪಿಲ್ಲ, ಆದರೆ ಅದನ್ನು ನಿಮ್ಮ ವಿವೇಚನೆಯಿಂದ ವಿಮರ್ಶಿಸಿ (Filter) ನಂತರವಷ್ಟೇ ಅಳವಡಿಸಿಕೊಳ್ಳಬೇಕು. ಆಚಾರ್ಯ ಚಾಣಕ್ಯರ ಈ ಮಾತುಗಳನ್ನು ನೆನಪಿಟ್ಟುಕೊಂಡು, ನಿಮ್ಮ ಜೀವನದ ನಾಯಕ ನೀವೇ ಆಗಿ. ಇತರರ ಮಾತಿನ ಕೈಗೊಂಬೆಯಾಗಬೇಡಿ!

Exam attention for CA Students (ICAI) :- CA ವಿದ್ಯಾರ್ಥಿಗಳ ಗಮನಕ್ಕೆ: 2026ರ ಸೆಪ್ಟೆಂಬರ್-ನವೆಂಬರ್ ಪರೀಕ್ಷಾ ವೇಳಾಪಟ್ಟಿ ಪ್ರಕಟ! ಇಲ್ಲಿದೆ ಕಂಪ್ಲೀಟ್ ಡಿಟೇಲ್ಸ್

0

ನೀವು ಚಾರ್ಟರ್ಡ್ ಅಕೌಂಟೆನ್ಸಿ (CA) ವಿದ್ಯಾರ್ಥಿಯೇ? ಹಾಗಿದ್ದರೆ ನಿಮಗೊಂದು ಪ್ರಮುಖ ಅಪ್‌ಡೇಟ್ ಇದೆ. ಇನ್‌ಸ್ಟಿಟ್ಯೂಟ್ ಆಫ್ ಚಾರ್ಟರ್ಡ್ ಅಕೌಂಟೆಂಟ್ಸ್ ಆಫ್ ಇಂಡಿಯಾ (ICAI), 2026ರ ಸೆಪ್ಟೆಂಬರ್ ಮತ್ತು ನವೆಂಬರ್ ಅವಧಿಯಲ್ಲಿ ನಡೆಯಲಿರುವ ಫೌಂಡೇಶನ್, ಇಂಟರ್ಮೀಡಿಯೇಟ್ ಮತ್ತು ಫೈನಲ್ ಪರೀಕ್ಷೆಗಳ (Exams) ಅಧಿಕೃತ ವೇಳಾಪಟ್ಟಿಯನ್ನು ಬಿಡುಗಡೆ ಮಾಡಿದೆ.

ಪರೀಕ್ಷಾ ತಯಾರಿ ನಡೆಸುತ್ತಿರುವ ವಿದ್ಯಾರ್ಥಿಗಳು ಈಗಿನಿಂದಲೇ ತಮ್ಮ ರಿವಿಷನ್ ಪ್ಲಾನ್ ಮಾಡಿಕೊಳ್ಳಲು ಇದು ಸರಿಯಾದ ಸಮಯ. ಪರೀಕ್ಷಾ ದಿನಾಂಕಗಳು, ಅರ್ಜಿ ಸಲ್ಲಿಕೆ ಮತ್ತು ಶುಲ್ಕದ ವಿವರಗಳು ಹೀಗಿವೆ:


🗓️ ಪರೀಕ್ಷಾ ದಿನಾಂಕಗಳ ಪಟ್ಟಿ (Time Table)

ICAI ಬಿಡುಗಡೆ ಮಾಡಿರುವ ಮಾಹಿತಿಯಂತೆ, ವಿವಿಧ ಹಂತದ ಪರೀಕ್ಷೆಗಳು ಈ ಕೆಳಗಿನ ದಿನಾಂಕಗಳಲ್ಲಿ ನಡೆಯಲಿವೆ:

ಪರೀಕ್ಷೆಯ ಹಂತ ಪರೀಕ್ಷಾ ದಿನಾಂಕಗಳು
CA ಫೌಂಡೇಶನ್ ಸೆಪ್ಟೆಂಬರ್ 2, 5, 7, 9
CA ಇಂಟರ್ಮೀಡಿಯೇಟ್ (ಗ್ರೂಪ್ I) ಸೆಪ್ಟೆಂಬರ್ 1, 3, 6
CA ಇಂಟರ್ಮೀಡಿಯೇಟ್ (ಗ್ರೂಪ್ II) ಸೆಪ್ಟೆಂಬರ್ 8, 10, 12
CA ಫೈನಲ್ (ಗ್ರೂಪ್ I) ನವೆಂಬರ್ 2, 4, 6
CA ಫೈನಲ್ (ಗ್ರೂಪ್ II) ನವೆಂಬರ್ 9, 11, 13
INTT-AT ಪರೀಕ್ಷೆ ನವೆಂಬರ್ 11, 13
IRM ತಾಂತ್ರಿಕ ಪರೀಕ್ಷೆ ನವೆಂಬರ್ 6, 9, 11, 13

📝 ಅರ್ಜಿ ಸಲ್ಲಿಕೆ ಹೇಗೆ?

ಅರ್ಹ ವಿದ್ಯಾರ್ಥಿಗಳು ಜುಲೈ 6 ರಿಂದ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು.

  • ಅಧಿಕೃತ ವೆಬ್‌ಸೈಟ್: eservices.icai.org ಮೂಲಕ ನಿಮ್ಮ ಪರೀಕ್ಷಾ ನಮೂನೆಗಳನ್ನು ಸಲ್ಲಿಸಬೇಕು.

  • ಮಾಧ್ಯಮ: ಅಭ್ಯರ್ಥಿಗಳು ಇಂಗ್ಲಿಷ್ ಅಥವಾ ಹಿಂದಿ ಭಾಷೆಯಲ್ಲಿ ಪರೀಕ್ಷೆ ಬರೆಯಲು ಮುಕ್ತ ಅವಕಾಶವಿದೆ.


⏰ ಪರೀಕ್ಷಾ ಸಮಯ ಮತ್ತು ಅವಧಿ

ಹೆಚ್ಚಿನ ಪರೀಕ್ಷೆಗಳು ಮಧ್ಯಾಹ್ನದ ಶಿಫ್ಟ್‌ನಲ್ಲಿ ನಡೆಯಲಿವೆ. ನಿಮ್ಮ ವೇಳಾಪಟ್ಟಿಯನ್ನು ಹೀಗೆ ಯೋಜಿಸಿ:

  • ಸಾಮಾನ್ಯ ಸಮಯ: ಮಧ್ಯಾಹ್ನ 2:00 ರಿಂದ ಸಂಜೆ 5:00 ರವರೆಗೆ.

  • ಹೆಚ್ಚುವರಿ ಸಮಯ: ಪ್ರಶ್ನೆ ಪತ್ರಿಕೆ ಓದಲು 15 ನಿಮಿಷಗಳ ಕಾಲಾವಕಾಶ (ಮಧ್ಯಾಹ್ನ 1:45 ರಿಂದ) ಇರುತ್ತದೆ.

  • ವಿಶೇಷ ಪತ್ರಿಕೆಗಳು: ಫೌಂಡೇಶನ್ ಪೇಪರ್ 3 ಮತ್ತು 4 ಕ್ಕೆ 2 ಗಂಟೆಗಳು ಹಾಗೂ ಫೈನಲ್ ಪೇಪರ್ 6 ಕ್ಕೆ 4 ಗಂಟೆಗಳ ಕಾಲಾವಕಾಶವಿರುತ್ತದೆ.


💰 ಅರ್ಜಿ ಶುಲ್ಕದ ವಿವರ

  • CA ಫೌಂಡೇಶನ್: 1,500 ರೂ.

  • CA ಇಂಟರ್ಮೀಡಿಯೇಟ್: ಒಂದು ಗ್ರೂಪ್‌ಗೆ 1,500 ರೂ., ಎರಡೂ ಗ್ರೂಪ್‌ಗಳಿಗೆ 2,700 ರೂ.

  • CA ಫೈನಲ್: ಒಂದು ಗ್ರೂಪ್‌ಗೆ 1,800 ರೂ., ಎರಡೂ ಗ್ರೂಪ್‌ಗಳಿಗೆ 3,300 ರೂ.


⚠️ ಗಮನಿಸಬೇಕಾದ ಪ್ರಮುಖ ಅಂಶ

ಒಂದು ವೇಳೆ ಪರೀಕ್ಷಾ ದಿನದಂದು ಸರ್ಕಾರವು ಸಾರ್ವಜನಿಕ ರಜಾ ದಿನ ಎಂದು ಘೋಷಿಸಿದರೂ ಸಹ, ICAI ನಿಗದಿಪಡಿಸಿದ ವೇಳಾಪಟ್ಟಿಯಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲ. ಪರೀಕ್ಷೆಗಳು ಮೊದಲೇ ನಿರ್ಧರಿಸಿದಂತೆ ನಡೆಯಲಿವೆ ಎಂದು ಸಂಸ್ಥೆ ಸ್ಪಷ್ಟಪಡಿಸಿದೆ.

ಹೆಚ್ಚಿನ ಮಾಹಿತಿಗಾಗಿ ವಿದ್ಯಾರ್ಥಿಗಳು ನಿಯಮಿತವಾಗಿ icai.org ವೆಬ್‌ಸೈಟ್‌ಗೆ ಭೇಟಿ ನೀಡುತ್ತಿರಿ. ಎಲ್ಲಾ ವಿದ್ಯಾರ್ಥಿಗಳಿಗೂ ಆಲ್ ದಿ ಬೆಸ್ಟ್!

Bengaluru crime news:- ಜ್ಯೋತಿಷಿಯ ಕಾಮಕಾಂಡ: ಪೂಜೆ, ದೀಕ್ಷೆಯ ನೆಪದಲ್ಲಿ ಬ್ಯೂಟಿಷಿಯನ್ ಮೇಲೆ ಸರಣಿ ಅತ್ಯಾಚಾರ!

0

(Bengaluru Crime news): ಬೆಂಗಳೂರು: ನಂಬಿಕೆಯೇ ಬಂಡವಾಳವಾಗಿಸಿಕೊಂಡು, ಮಾಟ-ಮಂತ್ರದ ಭಯ ಹುಟ್ಟಿಸಿ ಮಹಿಳೆಯೊಬ್ಬರ ಮೇಲೆ ಜ್ಯೋತಿಷಿಯೊಬ್ಬ ನಿರಂತರವಾಗಿ ಲೈಂಗಿಕ ದೌರ್ಜನ್ಯ ಎಸಗಿರುವ ಅಮಾನವೀಯ ಘಟನೆ ರಾಜಧಾನಿಯಲ್ಲಿ ಬೆಳಕಿಗೆ ಬಂದಿದೆ. ಪೂಜೆ ಮತ್ತು ದೀಕ್ಷೆಯ ಹೆಸರಲ್ಲಿ ಬ್ಯೂಟಿಷಿಯನ್ ಮೇಲೆ ಅತ್ಯಾಚಾರ ಎಸಗಿದ ಆರೋಪಿ ಮೋಹನ್ ಕುಮಾರ್ (Mohan Kumar) ವಿರುದ್ಧ ಈಗ ಬೆಂಗಳೂರಿನ ಸಿ.ಕೆ. ಅಚ್ಚುಕಟ್ಟು ಪೊಲೀಸ್ ಠಾಣೆ (CK Achukattu Police station) ಯಲ್ಲಿ ಎಫ್‌ಐಆರ್ (FIR) ದಾಖಲಾಗಿದೆ.

ಪರಿಚಯವಾಗಿದ್ದು ಹೇಗೆ?

ಬೆಂಗಳೂರಿನ ರಾಜಾಜಿನಗರದಲ್ಲಿ (Rajajinagar) ಬ್ಯೂಟಿಷಿಯನ್ ಟ್ರೈನಿಂಗ್ ಸೆಂಟರ್ (Beautician training center)ನಡೆಸುತ್ತಿದ್ದ ಸಂತ್ರಸ್ತೆಗೂ, ಆರೋಪಿ ಮೋಹನ್ ಕುಮಾರ್‌ಗೂ ಮೊದಲ ಪರಿಚಯವಾಗಿದ್ದು ತನ್ನ ಸಹೋದರಿಯ ಅಡ್ಮಿಷನ್ ವಿಷಯದಲ್ಲಿ. ಈ ವೇಳೆ ಮಹಿಳೆಯ ಆರ್ಥಿಕ ಪರಿಸ್ಥಿತಿಯ ಲಾಭ ಪಡೆದ ಆರೋಪಿ, “ನಿಮ್ಮ ಅಭಿವೃದ್ಧಿಗೆ ವಿಶೇಷ ಪೂಜೆ ಮಾಡಬೇಕು” ಎಂದು ನಂಬಿಸಿದ್ದಾನೆ.

ವಾಮಾಚಾರದ ಬೆದರಿಕೆ ಹಾಗೂ ದೌರ್ಜನ್ಯ

ಆರೋಪಿಯ ಕೃತ್ಯಗಳು ಕೇವಲ ನಗರಕ್ಕೆ ಸೀಮಿತವಾಗಿರಲಿಲ್ಲ. ಪೊಲೀಸರಿಗೆ ನೀಡಿರುವ ದೂರಿನ ಅನ್ವಯ:

  • ರಾಮನಗರ: 2025ರ ಜನವರಿ 30ರಂದು ಪಿರಮಿಡ್ ವ್ಯಾಲಿಗೆ ಕರೆದೊಯ್ದು ನಿರ್ಜನ ಪ್ರದೇಶದಲ್ಲಿ ದೌರ್ಜನ್ಯಕ್ಕೆ ಯತ್ನಿಸಿದ್ದಾನೆ.

  • ಮೈಸೂರು: ಚಾಮುಂಡಿ ಬೆಟ್ಟಕ್ಕೆ ಪೂಜೆ ಮುಗಿಸಿ ಬರುವ ಹಾದಿಯಲ್ಲಿ ಕಾರಿನಲ್ಲಿ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ.

  • ಬೆಂಗಳೂರು: ಫೆಬ್ರವರಿ 10ರಂದು ಮಹಿಳೆಯ ಮನೆಗೆ ಬಂದಿದ್ದ ಆರೋಪಿ, ಗಂಡ ಮತ್ತು ಮಗನನ್ನು ಹೊರಕ್ಕೆ ಕಳುಹಿಸಿ ‘ದೀಕ್ಷೆ’ ನೀಡುವ ನಾಟಕವಾಡಿ ಅತ್ಯಾಚಾರ ಎಸಗಿದ್ದಾನೆ.

ಪ್ರಮುಖ ಅಂಶ: “ನಾನು ಹೇಳಿದಂತೆ ಕೇಳದಿದ್ದರೆ ನಿನ್ನ ಗಂಡ ಮತ್ತು ಮಗ ರಕ್ತ ಕಾರಿ ಸಾಯುವಂತೆ ಮಾಟ-ಮಂತ್ರ ಮಾಡಿಸುತ್ತೇನೆ” ಎಂದು ಸಂತ್ರಸ್ತೆಯನ್ನು ಆರೋಪಿ ಮಾನಸಿಕವಾಗಿ ಜರ್ಜರಿತಗೊಳಿಸಿದ್ದ ಎನ್ನಲಾಗಿದೆ.

ಆರೋಪಿ ಪರಾರಿ, ಪೊಲೀಸರಿಂದ ತೀವ್ರ ಶೋಧ

ಆರೋಪಿ ಮೋಹನ್ ಕುಮಾರ್ ಕಾಟ ತಾಳಲಾರದೆ ಸಂತ್ರಸ್ತೆ ಅಂತಿಮವಾಗಿ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ. ಪೊಲೀಸರು ಪ್ರಕರಣ ದಾಖಲಿಸಿಕೊಳ್ಳುತ್ತಿದ್ದಂತೆ ಸುಳಿವು ಅರಿತ ಆರೋಪಿ ಸದ್ಯ ತಲೆಮರೆಸಿಕೊಂಡಿದ್ದಾನೆ. ಪೊಲೀಸರು ಆರೋಪಿಯ ಪತ್ತೆಗಾಗಿ ಬಲೆ ಬೀಸಿದ್ದು, ತನಿಖೆ ಚುರುಕುಗೊಳಿಸಿದ್ದಾರೆ.


ಓದುಗರಲ್ಲಿ ಕಳಕಳಿಯ ವಿನಂತಿ:

ಜ್ಯೋತಿಷ್ಯ ಅಥವಾ ಪೂಜೆಯ ಹೆಸರಿನಲ್ಲಿ ಯಾರಾದರೂ ನಿಮ್ಮನ್ನು ದೈಹಿಕವಾಗಿ ಅಥವಾ ಆರ್ಥಿಕವಾಗಿ ಶೋಷಿಸಲು ಯತ್ನಿಸಿದರೆ ತಕ್ಷಣ ಎಚ್ಚೆತ್ತುಕೊಳ್ಳಿ. ಭಯಪಡದೆ ಕಾನೂನಿನ ನೆರವು ಪಡೆಯಿರಿ.

Stay connected

0FansLike
0FollowersFollow
0SubscribersSubscribe
- Advertisement -
Google search engine

Latest article

Chikkaballapur City Municipal Council faces heavy backlash from Ward 10 residents:- ಹೊರಗೆ ಕೊಳಕು, ಒಳಗೆ...

0
ಚಿಕ್ಕಬಳ್ಳಾಪುರ: "ಹೊರಗೆ ಚಂದ, ಒಳಗೆ ಕೊಳಕು" ಎನ್ನುವ ಮಾತು ಸದ್ಯ ಚಿಕ್ಕಬಳ್ಳಾಪುರ ನಗರಸಭೆಯ (Chikkaballapur City Municipal Council) ಕಾರ್ಯವೈಖರಿಗೆ ಅಚ್ಚುಕಟ್ಟಾಗಿ ಅನ್ವಯಿಸುವಂತಿದೆ. ಇಡೀ ನಗರವನ್ನು ಸ್ವಚ್ಛವಾಗಿಡಬೇಕಾದ ಅಧಿಕಾರಿಗಳು, ಕೇವಲ ಜಿಲ್ಲಾಧಿಕಾರಿಗಳ (DC)...

India’s economy bounces back with an 8.3% GST growth; FM Sitharaman:- ಭಾರತದ ಆರ್ಥಿಕತೆಗೆ ಜಾಗತಿಕ...

0
ಇತ್ತೀಚಿನ ದಿನಗಳಲ್ಲಿ ಭಾರತದ ಆರ್ಥಿಕತೆಯ ಏರಿಳಿತಗಳ ಬಗ್ಗೆ ಸಾಕಷ್ಟು ಚರ್ಚೆಗಳು ನಡೆಯುತ್ತಿವೆ. ಆದರೆ, "ನಮ್ಮ ದೇಶದ ಆರ್ಥಿಕ ಸವಾಲುಗಳಿಗೆ (India's economy) ಆಂತರಿಕ ಕಾರಣಗಳಿಗಿಂತ ಜಾಗತಿಕ ವಿದ್ಯಮಾನಗಳೇ ಮುಖ್ಯ ಕಾರಣ" ಎಂದು ಕೇಂದ್ರ...

Crude Oil demand will not gets down.? ಇವಿ, ಸೋಲಾರ್ ಯುಗದಲ್ಲೂ ಕಚ್ಚಾ ತೈಲಕ್ಕೆ ಯಾಕಿಷ್ಟು ಡಿಮ್ಯಾಂಡ್?...

0
ಇತ್ತೀಚಿನ ದಿನಗಳಲ್ಲಿ ಜಗತ್ತು ಹಸಿರು ಇಂಧನ (Green Energy), ಸೌರಶಕ್ತಿ ಮತ್ತು ಎಲೆಕ್ಟ್ರಿಕ್ ವಾಹನಗಳ (EV) ಕಡೆಗೆ ವೇಗವಾಗಿ ಹೆಜ್ಜೆ ಇಡುತ್ತಿರುವುದನ್ನು ನಾವು ಕಾಣುತ್ತಿದ್ದೇವೆ. ಹವಾಮಾನ ಬದಲಾವಣೆಯ ಆತಂಕದಿಂದಾಗಿ ಪೆಟ್ರೋಲ್-ಡೀಸೆಲ್ ಬಳಕೆ ಕಡಿಮೆ...