Home Blog

Chikkaballapur City Municipal Council faces heavy backlash from Ward 10 residents:- ಹೊರಗೆ ಕೊಳಕು, ಒಳಗೆ ಹುಳುಕು! ಸ್ವಚ್ಛ ನಗರಕ್ಕೆ ಕಳಂಕ ತರುತ್ತಿದೆಯೇ ಚಿಕ್ಕಬಳ್ಳಾಪುರ ನಗರಸಭೆ?

0

ಚಿಕ್ಕಬಳ್ಳಾಪುರ: “ಹೊರಗೆ ಚಂದ, ಒಳಗೆ ಕೊಳಕು” ಎನ್ನುವ ಮಾತು ಸದ್ಯ ಚಿಕ್ಕಬಳ್ಳಾಪುರ ನಗರಸಭೆಯ (Chikkaballapur City Municipal Council) ಕಾರ್ಯವೈಖರಿಗೆ ಅಚ್ಚುಕಟ್ಟಾಗಿ ಅನ್ವಯಿಸುವಂತಿದೆ. ಇಡೀ ನಗರವನ್ನು ಸ್ವಚ್ಛವಾಗಿಡಬೇಕಾದ ಅಧಿಕಾರಿಗಳು, ಕೇವಲ ಜಿಲ್ಲಾಧಿಕಾರಿಗಳ (DC) ಮೆಚ್ಚುಗೆ ಗಳಿಸಲು ಮಾತ್ರ ಕೆಲಸ ಮಾಡುತ್ತಿದ್ದಾರಾ? ನಗರಸಭೆಯ ಸ್ವಚ್ಛತಾ ಕಾರ್ಯ ಕೇವಲ ಬಿ.ಬಿ. ರಸ್ತೆಗೆ ಮಾತ್ರ ಸೀಮಿತವಾಗಿದೆಯೇ? ಇಂತಹ ನೂರಾರು ಆಕ್ರೋಶದ ಪ್ರಶ್ನೆಗಳು ಸದ್ಯ ಚಿಕ್ಕಬಳ್ಳಾಪುರ ನಗರದ ಸಾರ್ವಜನಿಕ ವಲಯದಿಂದ ಕೇಳಿಬರುತ್ತಿವೆ.

ಇದಕ್ಕೆ ಬಲವಾದ ಕಾರಣವೂ ಇದೆ. ನಗರಸಭೆಯ ಅಧಿಕಾರಿಗಳು ಮತ್ತು ಪೌರಾಯುಕ್ತರ ನಿರ್ಲಕ್ಷ್ಯಕ್ಕೆ ಸಾಕ್ಷಿಯಾಗಿ ನಗರದ 10ನೇ ವಾರ್ಡ್‌ನ ಚರಂಡಿಗಳು ಮತ್ತು ಕಸದ ರಾಶಿಗಳು ಕಣ್ಣೆದುರಿಗೇ ನಿಂತಿವೆ.

ಸೊಳ್ಳೆಗಳ ಉತ್ಪಾದನಾ ಕೇಂದ್ರವಾದ 10ನೇ ವಾರ್ಡ್!

ಚಿಕ್ಕಬಳ್ಳಾಪುರ ನಗರದ 10ನೇ ವಾರ್ಡ್ ವ್ಯಾಪ್ತಿಯ ಉಷೋದಯ ಶಾಲೆ ಸುತ್ತಮುತ್ತಲಿನ ಪರಿಸ್ಥಿತಿಯನ್ನು ನೋಡಿದರೆ ಯಾರಿಗಾದರೂ ಮರುಕ ಹುಟ್ಟದೇ ಇರದು. ಇಲ್ಲಿನ ತೆರೆದ ಚರಂಡಿಗಳು ಸಂಪೂರ್ಣವಾಗಿ ಕಸದಿಂದ ಮುಚ್ಚಿಹೋಗಿವೆ. ಮಳೆ ನೀರು ಸರಾಗವಾಗಿ ಹರಿದು ಹೋಗಲು ಜಾಗವಿಲ್ಲದೆ ಚರಂಡಿಯಲ್ಲೇ ನಿಂತು ಕೊಳೆಯುತ್ತಿದ್ದು, ಇಡೀ ಪ್ರದೇಶ ಸಾಂಕ್ರಾಮಿಕ ರೋಗಗಳನ್ನು ಹರಡುವ ಸೊಳ್ಳೆಗಳ ಉತ್ಪಾದನಾ ಕೇಂದ್ರವಾಗಿ ಮಾರ್ಪಟ್ಟಿದೆ.

ತಿಂಗಳುಗಳಿಂದ ತುಂಬಿಕೊಂಡಿರುವ ಚರಂಡಿ, ಬೆಟ್ಟದಂತೆ ಅಚ್ಚುಮಚ್ಚಾಗಿ ಬೆಳೆದು ನಿಂತಿರುವ ಕಸದ ಗುಡ್ಡೆಗಳು ಇಲ್ಲಿನ ಅಧಿಕಾರಿಗಳ ಬೇಜವಾಬ್ದಾರಿತನಕ್ಕೆ ಜೀವಂತ ಸಾಕ್ಷಿಯಾಗಿವೆ. ಮಳೆಗಾಲ ಆರಂಭವಾಗಿದ್ದರೂ ನಗರಸಭೆ ಅಧಿಕಾರಿಗಳು ಮಾತ್ರ ಈ ಕಡೆ ತಲೆಹಾಕಿಯೂ ಮಲಗಿಲ್ಲ.

ಸ್ಥಳೀಯರ ಅಳಲು: “ದಿನದಿಂದ ದಿನಕ್ಕೆ ಕಸ ಹೆಚ್ಚುತ್ತಿದೆ, ಚರಂಡಿ ದುರ್ವಾಸನೆ ಬೀರುತ್ತಿದೆ. ಸೊಳ್ಳೆಗಳ ಕಾಟ, ಹಾವು-ಚೇಳುಗಳ ಭೀತಿಯಲ್ಲೇ ನಾವು ದಿನ ಕಳೆಯಬೇಕಾಗಿದೆ. ಕಸದ ಗಾಡಿಯವರು ನಾವು ಕಸ ತಂದುಕೊಟ್ಟರೆ ಮಾತ್ರ ತಗೋತಾರೆ, ಇಲ್ಲದಿದ್ದರೆ ಇಲ್ಲ. ಪ್ರತಿದಿನ ನಗರಸಭೆಗೆ ಹೋಗಿ ದೂರು ನೀಡಿದರೂ ಯಾರೂ ಕ್ಯಾರೆ ಎನ್ನುತ್ತಿಲ್ಲ.”

ಪೌರಾಯುಕ್ತರಿಗೆ 10ನೇ ವಾರ್ಡ್ ಎಲ್ಲಿದೆ ಅಂತ ಗೊತ್ತಿಲ್ವಾ?

ಚಿಕ್ಕಬಳ್ಳಾಪುರ ನಗರಸಭೆಯ ಪೌರಾಯುಕ್ತರಾದ ಮನ್ಸೂರ್ ಅಲಿ ಅವರು ಬಂದು ಸುಮಾರು ಒಂದೂವರೆ ವರ್ಷ ಕಳೆದಿದೆ. ಆದರೆ, ದುರದೃಷ್ಟವಶಾತ್ ಅವರು ಈವರೆಗೆ ನಗರದ ವಾರ್ಡುಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿಲ್ಲ ಎನ್ನುತ್ತಾರೆ ಸ್ಥಳೀಯರು. ನಗರದ ಪ್ರಮುಖ ರಸ್ತೆಯಾದ ಬಿ.ಬಿ. ರಸ್ತೆಗೆ ಟ್ಯಾಂಕರ್ ನೀರು ಸುರಿದು, ಅಚ್ಚುಕಟ್ಟಾಗಿ ಸ್ವಚ್ಛಗೊಳಿಸುವ ಪೌರಾಯುಕ್ತರಿಗೆ ಬಹುಶಃ 10ನೇ ವಾರ್ಡ್ ಎಲ್ಲಿದೆ ಅನ್ನೋದೇ ಮರೆತುಹೋಗಿರುವಂತಿದೆ!

ಜಿಲ್ಲಾಧಿಕಾರಿಗಳು ಸಂಚರಿಸುವ ರಸ್ತೆ ಕ್ಲೀನ್ ಆಗಿದ್ದರೆ ಇಡೀ ನಗರವೇ ಸ್ವಚ್ಛವಾಗಿದೆ ಎಂದು ತೋರಿಸಿಕೊಳ್ಳುವ ನಾಟಕೀಯ ಪ್ರಯತ್ನ ಇದಾಗಿರಬಹುದು ಎಂಬುದು ನಾಗರಿಕರ ನೇರ ಆರೋಪವಾಗಿದೆ. ಇದು ಕೇವಲ 10ನೇ ವಾರ್ಡ್ ಕಥೆಯಲ್ಲ, ನಗರದ ಒಟ್ಟು 31 ವಾರ್ಡುಗಳ ಪರಿಸ್ಥಿತಿಯೂ ಹೆಚ್ಚು ಕಡಿಮೆ ಹೀಗೆಯೇ ಇದೆ.

ನಗರಸಭೆ ಕಚೇರಿಗೆ ಕಸ ಸುರಿಯಲು ಸಾರ್ವಜನಿಕರ ಸಿದ್ಧತೆ!

ಅಧಿಕಾರಿಗಳ ಈ ನಿರಂತರ ನಿರ್ಲಕ್ಷ್ಯದಿಂದ ಬೇಸತ್ತಿರುವ ಜಾಗೃತ ನಾಗರಿಕರು ಮತ್ತು ವಾರ್ಡಿನ ನಿವಾಸಿಗಳು ಈಗ ರೊಚ್ಚಿಗೆದ್ದಿದ್ದಾರೆ. ಸಾರ್ವಜನಿಕರ ತಾಳ್ಮೆಯ ಕಟ್ಟೆ ಒಡೆದಿದ್ದು, ವಾರ್ಡ್‌ನಲ್ಲಿ ಶೇಖರಣೆಯಾಗಿರುವ ಕಸವನ್ನು ಟ್ರ್ಯಾಕ್ಟರ್‌ಗೆ ತುಂಬಿಕೊಂಡು ನೇರವಾಗಿ ನಗರಸಭೆ ಕಚೇರಿಯ ಆವರಣದಲ್ಲೇ ಸುರಿಯಲು ತೀವ್ರ ಸಿದ್ಧತೆ ನಡೆಸುತ್ತಿದ್ದಾರೆ ಎಂಬ ಮಾತುಗಳು ಕೇಳಿಬರುತ್ತಿವೆ.

ಹಾವು, ಚೇಳುಗಳ ಭಯ ಹಾಗೂ ಸಾಂಕ್ರಾಮಿಕ ರೋಗಗಳ ಭೀತಿಯಲ್ಲಿ ಬದುಕುಳಿಯಲು ಹೆಣಗಾಡುತ್ತಿರುವ ಜನರಿಗೆ ಈಗ ತಕ್ಷಣದ ಪರಿಹಾರ ಬೇಕಾಗಿದೆ.

ಮುಂದಿನ ನಡೆ ಏನು?

ಇನ್ನಾದರೂ ಚಿಕ್ಕಬಳ್ಳಾಪುರ ನಗರಸಭೆ ಅಧಿಕಾರಿಗಳು ಮತ್ತು ಪೌರಾಯುಕ್ತರು ಕೊಠಡಿಗಳಿಂದ ಹೊರಬಂದು, ಕೇವಲ ಪ್ರಮುಖ ರಸ್ತೆಗಳ ಮೇಲಿನ ನಾಟಕೀಯ ಸ್ವಚ್ಛತೆಯನ್ನು ಬಿಟ್ಟು, ವಾರ್ಡುಗಳ ವಾಸ್ತವ ಪರಿಸ್ಥಿತಿಯನ್ನು ಸುಧಾರಿಸುತ್ತಾರಾ? ಅಥವಾ ಸಾರ್ವಜನಿಕರ ಉಗ್ರ ಪ್ರತಿಭಟನೆಯ ಬಿಸಿಯನ್ನು ಎದುರಿಸಲು ಸಿದ್ಧರಾಗುತ್ತಾರಾ? ಎಂಬುದನ್ನು ಕಾದು ನೋಡಬೇಕಿದೆ.

India’s economy bounces back with an 8.3% GST growth; FM Sitharaman:- ಭಾರತದ ಆರ್ಥಿಕತೆಗೆ ಜಾಗತಿಕ ಸಂಕಷ್ಟದ ಬಿಸಿ: ‘ಬಾಹ್ಯ ಸವಾಲುಗಳಿಗೂ ಬೆದರಲ್ಲ’ ಎಂದ ನಿರ್ಮಲಾ ಸೀತಾರಾಮನ್!

0

ಇತ್ತೀಚಿನ ದಿನಗಳಲ್ಲಿ ಭಾರತದ ಆರ್ಥಿಕತೆಯ ಏರಿಳಿತಗಳ ಬಗ್ಗೆ ಸಾಕಷ್ಟು ಚರ್ಚೆಗಳು ನಡೆಯುತ್ತಿವೆ. ಆದರೆ, “ನಮ್ಮ ದೇಶದ ಆರ್ಥಿಕ ಸವಾಲುಗಳಿಗೆ (India’s economy) ಆಂತರಿಕ ಕಾರಣಗಳಿಗಿಂತ ಜಾಗತಿಕ ವಿದ್ಯಮಾನಗಳೇ ಮುಖ್ಯ ಕಾರಣ” ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಸ್ಪಷ್ಟಪಡಿಸಿದ್ದಾರೆ. ಮುಂಬೈನಲ್ಲಿ ನಡೆದ ಸಿಡ್ಬಿ (SIDBI) ಸಂಸ್ಥೆಯ 37ನೇ ಸಂಸ್ಥಾಪನಾ ದಿನಾಚರಣೆಯಲ್ಲಿ ಮಾತನಾಡಿದ ಅವರು, ದೇಶದ ಆರ್ಥಿಕತೆ ಸದೃಢವಾಗಿದ್ದು, ಎಂತಹದೇ ಬಾಹ್ಯ ಬಿಕ್ಕಟ್ಟು ಎದುರಾದರೂ ಪುಟಿದೇಳುವ ಶಕ್ತಿ ಹೊಂದಿದೆ ಎಂಬ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಪಶ್ಚಿಮ ಏಷ್ಯಾ (Middle East) ಬಿಕ್ಕಟ್ಟು ಹಾಗೂ ಹಾರ್ಮುಜ್ ಜಲಸಂಧಿಯ ಸಂಘರ್ಷದಿಂದಾಗಿ ಇಡೀ ಜಗತ್ತೇ ತಲ್ಲಣಿಸಿದೆ. ಇದರ ನೇರ ಪರಿಣಾಮವಾಗಿ ಭಾರತ ಪ್ರಸ್ತುತ ಇಂಧನ, ಗೊಬ್ಬರ ಮತ್ತು ವಿದೇಶೀ ವಿನಿಮಯ ಎಂಬ ಮೂರು ಪ್ರಮುಖ ಜಾಗತಿಕ ಸವಾಲುಗಳನ್ನು ಎದುರಿಸುತ್ತಿದ್ದು, ಸರ್ಕಾರ ಇವುಗಳ ಮೇಲೆ ತೀವ್ರ ನಿಗಾ ಇಟ್ಟಿದೆ ಎಂದು ಸಚಿವರು ತಿಳಿಸಿದರು.

ಸುಳ್ಳು ಭಯ ಸೃಷ್ಟಿಸುವವರ ವಿರುದ್ಧ ವಿತ್ತ ಸಚಿವೆ ಕಿಡಿ!

ದೇಶದಲ್ಲಿ ಎಲ್ಲವೂ ಕುಸಿದುಬೀಳುತ್ತಿದೆ ಎಂಬಂತೆ ಬಿಂಬಿಸುತ್ತಿರುವ ವಿಮರ್ಶಕರನ್ನು ಸಚಿವರು ತೀವ್ರವಾಗಿ ತರಾಟೆಗೆ ತೆಗೆದುಕೊಂಡರು. ಸಾಮಾನ್ಯ ಜನರು ಮತ್ತು ಉದ್ಯಮಿಗಳು ಕಷ್ಟಪಟ್ಟು ಸಾಧಿಸುತ್ತಿರುವ ಪ್ರಗತಿಯನ್ನು ಮರೆತು, ಕೇವಲ ನಕಾರಾತ್ಮಕ ವಾತಾವರಣ ಸೃಷ್ಟಿಸುತ್ತಿರುವವರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ ಅವರು, “ಭಾರತವು ಸುಳ್ಳು ಭಯ ಮತ್ತು ಆತಂಕದ ವಾತಾವರಣ ಸೃಷ್ಟಿಸುವುದನ್ನು ಸಹಿಸುವುದಿಲ್ಲ. ನಮ್ಮ ಮಾತು ಮತ್ತು ಕೃತಿಗಳ ಮೂಲಕ ಜನರಲ್ಲಿ ವಿಶ್ವಾಸ ತುಂಬುವ ಕೆಲಸ ಮಾಡಬೇಕೇ ಹೊರತು ನಿರಾಶಾವಾದವನ್ನಲ್ಲ” ಎಂದರು.

ಭಾರತದ ಆರ್ಥಿಕತೆ ಸದೃಢವಾಗಿದೆ ಅನ್ನೋದಕ್ಕೆ ಇಲ್ಲಿದೆ ಸಾಕ್ಷಿ:

ಬಾಹ್ಯ ಸವಾಲುಗಳ ನಡುವೆಯೂ ಭಾರತದ ಆಂತರಿಕ ಆರ್ಥಿಕತೆ ಎಷ್ಟು ಗಟ್ಟಿಯಾಗಿದೆ ಎಂಬುದಕ್ಕೆ ಸಚಿವೆ ನಿರ್ಮಲಾ ಸೀತಾರಾಮನ್ ಕೆಲವು ಪ್ರಮುಖ ಉದಾಹರಣೆಗಳನ್ನು ನೀಡಿದ್ದಾರೆ:

  • ಜಿಎಸ್‌ಟಿ ಸಂಗ್ರಹದಲ್ಲಿ ದಾಖಲೆ: ದೇಶದ ಜಿಎಸ್‌ಟಿ (GST) ಸಂಗ್ರಹವು ಶೇಕಡಾ 8.3 ರಷ್ಟು ಬೆಳವಣಿಗೆಯೊಂದಿಗೆ ಬರೋಬ್ಬರಿ 22 ಲಕ್ಷ ಕೋಟಿ ರೂ. ದಾಟಿದೆ.

  • ವಾಹನ ಮಾರಾಟದಲ್ಲಿ ಭರ್ಜರಿ ಏರಿಕೆ: ದೇಶೀಯವಾಗಿ ಟ್ರ್ಯಾಕ್ಟರ್ ಮಾರಾಟದಲ್ಲಿ ಶೇ. 26 ರಷ್ಟು ಮತ್ತು ಪ್ರಯಾಣಿಕ ವಾಹನಗಳ (Passenger Vehicles) ಮಾರಾಟದಲ್ಲಿ ಶೇ. 25 ರಷ್ಟು ಗಮನಾರ್ಹ ಹೆಚ್ಚಳವಾಗಿದೆ.

  • ಸಾಲದ ಸೌಲಭ್ಯ: ರೀಟೇಲ್, ಕೃಷಿ ಮತ್ತು ಎಂಎಸ್‌ಎಂಇ (MSME) ವಲಯಗಳಲ್ಲಿ ಸಾಲದ ಬೆಳವಣಿಗೆ ಉತ್ತಮವಾಗಿದ್ದು, ಮಾರುಕಟ್ಟೆಯಲ್ಲಿ ಚಟುವಟಿಕೆಗಳು ಚುರುಕಾಗಿವೆ.

ಜನಸಾಮಾನ್ಯರ ರಕ್ಷಣೆಗೆ ಸರ್ಕಾರದ ಮಾಸ್ಟರ್ ಪ್ಲಾನ್

ಜಾಗತಿಕವಾಗಿ ತೈಲ ಬೆಲೆ ಏರಿಕೆಯಾಗುತ್ತಿದ್ದರೂ, ಅದರ ಬಿಸಿ ಭಾರತದ ಜನಸಾಮಾನ್ಯರಿಗೆ ತಟ್ಟದಂತೆ ಸರ್ಕಾರ ಮುನ್ನೆಚ್ಚರಿಕೆ ಕ್ರಮ ಕೈಗೊಂಡಿದೆ. ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ಅಬಕಾರಿ ಸುಂಕವನ್ನು ಕಡಿತಗೊಳಿಸಲಾಗಿದೆ. ಇದರಿಂದಾಗಿ ಸರ್ಕಾರಕ್ಕೆ ಸುಮಾರು 1 ಲಕ್ಷ ಕೋಟಿ ರೂ.ಗೂ ಅಧಿಕ ಆದಾಯ ನಷ್ಟವಾಗುತ್ತಿದ್ದರೂ, ಜನರ ಹಿತದೃಷ್ಟಿಯಿಂದ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ. ಅಷ್ಟೇ ಅಲ್ಲದೆ, ಜಾಗತಿಕ ಬಿಕ್ಕಟ್ಟಿನಿಂದಾಗಿ ಸರಕು ಸಾಗಣೆ ತಡವಾಗುತ್ತಿರುವುದರಿಂದ ರಫ್ತುದಾರರಿಗೆ ನೆರವಾಗಲು ಕಸ್ಟಮ್ಸ್ ಪ್ರಕ್ರಿಯೆಗಳನ್ನು ಇನ್ನಷ್ಟು ಸರಳಗೊಳಿಸಲಾಗಿದೆ.

ಎಂಎಸ್‌ಎಂಇ (MSME) ಉದ್ಯಮಗಳಿಗೆ ಸಿಕ್ಕಿತು ಬಿಗ್ ಬೂಸ್ಟ್!

ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳ ದೇಶದ ಆರ್ಥಿಕತೆಯ ಬೆನ್ನೆಲುಬು. ಇವುಗಳ ಅಭಿವೃದ್ಧಿಗಾಗಿ ತುರ್ತು ಸಾಲ ಸೌಲಭ್ಯ ಗ್ಯಾರಂಟಿ ಯೋಜನೆ (ECLGS 5.0) ಅಡಿಯಲ್ಲಿ 2.55 ಲಕ್ಷ ಕೋಟಿ ರೂ. ಹೆಚ್ಚುವರಿ ಸಾಲ ಒದಗಿಸಲಾಗುತ್ತಿದ್ದು, ಇದಕ್ಕೆ ಕೇಂದ್ರ ಸರ್ಕಾರವೇ 100% ಗ್ಯಾರಂಟಿ ನೀಡಲಿದೆ. ಇದರೊಂದಿಗೆ, ಸಾರ್ವಜನಿಕ ವಲಯದ ಸಂಸ್ಥೆಗಳು (PSUs) ಸಣ್ಣ ಉದ್ಯಮಿಗಳಿಗೆ ಬಾಕಿ ಇರುವ ಹಣವನ್ನು ಯಾವುದೇ ವಿಳಂಬವಿಲ್ಲದೆ 45 ದಿನಗಳ ಒಳಗಾಗಿ ಪಾವತಿಸಬೇಕು ಎಂದು ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ.

 ಜಾಗತಿಕ ಯುದ್ಧ ಮತ್ತು ಹಾರ್ಮುಜ್ ಜಲಸಂಧಿಯ ಬಿಕ್ಕಟ್ಟಿನಿಂದಾಗಿ ಇಂಧನ ಹಾಗೂ ರಫ್ತು ವೆಚ್ಚ ಹೆಚ್ಚಾಗುತ್ತಿರುವುದು ನಿಜ. ಆದರೆ, ಭಾರತ ಸರ್ಕಾರವು ಮುನ್ನೆಚ್ಚರಿಕೆ ಕ್ರಮಗಳು, ತೆರಿಗೆ ಕಡಿತ ಮತ್ತು ಉದ್ಯಮಗಳಿಗೆ ಸೂಕ್ತ ರಕ್ಷಣೆ ನೀಡುವ ಮೂಲಕ ಈ ಜಾಗತಿಕ ಹೊರೆಯನ್ನು ದೇಶದ ಜನರ ಮೇಲೆ ಬೀಳದಂತೆ ಯಶಸ್ವಿಯಾಗಿ ನಿರ್ವಹಿಸುತ್ತಿದೆ.

Crude Oil demand will not gets down.? ಇವಿ, ಸೋಲಾರ್ ಯುಗದಲ್ಲೂ ಕಚ್ಚಾ ತೈಲಕ್ಕೆ ಯಾಕಿಷ್ಟು ಡಿಮ್ಯಾಂಡ್? ‘ಕಪ್ಪು ಚಿನ್ನ’ದ ಅಸಲಿ ಕಥೆಯೇ ಬೇರೆ!

0

ಇತ್ತೀಚಿನ ದಿನಗಳಲ್ಲಿ ಜಗತ್ತು ಹಸಿರು ಇಂಧನ (Green Energy), ಸೌರಶಕ್ತಿ ಮತ್ತು ಎಲೆಕ್ಟ್ರಿಕ್ ವಾಹನಗಳ (EV) ಕಡೆಗೆ ವೇಗವಾಗಿ ಹೆಜ್ಜೆ ಇಡುತ್ತಿರುವುದನ್ನು ನಾವು ಕಾಣುತ್ತಿದ್ದೇವೆ. ಹವಾಮಾನ ಬದಲಾವಣೆಯ ಆತಂಕದಿಂದಾಗಿ ಪೆಟ್ರೋಲ್-ಡೀಸೆಲ್ ಬಳಕೆ ಕಡಿಮೆ ಮಾಡಲು ಹಲವು ದೇಶಗಳು ಪಣತೊಟ್ಟಿವೆ. ಹೀಗಿರುವಾಗ, “ಎಲ್ಲಾ ವಾಹನಗಳು ಬ್ಯಾಟರಿ ಚಾಲಿತವಾದರೆ, ಕಚ್ಚಾ ತೈಲದ (Crude Oil) ಬೇಡಿಕೆ ಸಂಪೂರ್ಣವಾಗಿ ಶೂನ್ಯವಾಗುತ್ತದೆಯೇ?” ಎಂಬ ದೊಡ್ಡ ಪ್ರಶ್ನೆ ಎಲ್ಲರನ್ನೂ ಕಾಡುವುದು ಸಹಜ.

ಆದರೆ, ಜಾಗತಿಕ ಇಂಧನ ತಜ್ಞರ ವರದಿಯ ಪ್ರಕಾರ ಇದರ ಉತ್ತರ: ಖಂಡಿತ ಇಲ್ಲ! ತೈಲದ ಬೇಡಿಕೆ ಮುಂಬರುವ ದಶಕಗಳಲ್ಲಿ ಶೂನ್ಯವಾಗುವುದಿರಲಿ, ಅಷ್ಟಾಗಿ ಕಡಿಮೆಯೂ ಆಗುವುದಿಲ್ಲ. ಏಕೆಂದರೆ, ಕಚ್ಚಾ ತೈಲ ಎನ್ನುವುದು ಕೇವಲ ವಾಹನ ಓಡಿಸುವ ಇಂಧನವಲ್ಲ; ಅದು ಆಧುನಿಕ ಜಗತ್ತಿನ ಭೌತಿಕ ಅಗತ್ಯಗಳನ್ನು ಪೂರೈಸುವ, ಕಣ್ಣಿಗೆ ಕಾಣದ ಬಹುದೊಡ್ಡ ಶಕ್ತಿ.

ಸಂಪನ್ಮೂಲಗಳ ರಾಜ ‘ಕಪ್ಪು ಚಿನ್ನ’ ಮತ್ತು ಯುದ್ಧಗಳು

ಜಗತ್ತಿನಲ್ಲಿ ಯುದ್ಧಗಳು ಆಗುವುದು ಮುಖ್ಯವಾಗಿ ಎರಡು ಕಾರಣಕ್ಕೆ—ಒಂದು ಹೆಣ್ಣಿಗಾಗಿ, ಮತ್ತೊಂದು ಮಣ್ಣಿಗಾಗಿ. ಇಲ್ಲಿ ‘ಮಣ್ಣು’ ಎಂದರೆ ಭೂಮಿ ಮತ್ತು ಅದರೊಳಗಿನ ಸಂಪನ್ಮೂಲಗಳು. ಎಂಜಿನ್​ಗಳ ಕಾಲ ಬಂದ ಬಳಿಕ ಕಚ್ಚಾ ತೈಲ ಜಗತ್ತಿನ ಅತ್ಯಂತ ಪ್ರಮುಖ ಸಂಪನ್ಮೂಲವಾಗಿ ಹೊರಹೊಮ್ಮಿತು. ಈ ತೈಲದ ಮೇಲಿನ ಹಿಡಿತ ಮತ್ತು ನಿಯಂತ್ರಣ ಸಾಧಿಸಲು ಕಳೆದ ಕೆಲವು ಶತಮಾನಗಳಲ್ಲಿ ಸಾಲು ಸಾಲು ಯುದ್ಧಗಳೇ ನಡೆದಿವೆ.

  • ಎರಡನೇ ವಿಶ್ವ ಮಹಾಯುದ್ಧದಲ್ಲಿ ಜಪಾನ್ ತೋರಿದ ಆಕ್ರಮಣಕಾರಿ ವರ್ತನೆ

  • 1940ರ ದಶಕದಲ್ಲಿ ಬೊಲಿವಿಯಾ ಮತ್ತು ಪರಗ್ವೆ ನಡುವಿನ ಸಂಘರ್ಷ

  • 1990ರ ದಶಕದ ಇರಾಕ್-ಕುವೇತ್ ಯುದ್ಧ ಮತ್ತು ಅದರ ಬೆನ್ನಲ್ಲೇ ನಡೆದ ಇರಾಕ್ ಮೇಲೆ ಅಮೆರಿಕದ ಆಕ್ರಮಣ

  • ಇರಾನ್-ಇರಾಕ್ ಯುದ್ಧ, ಇರಾನ್-ಅಮೆರಿಕ ನಡುವಿನ ಸಂಘರ್ಷಗಳು ಹಾಗೂ ಇತ್ತೀಚಿನ ರಷ್ಯಾ-ಉಕ್ರೇನ್ ಯುದ್ಧ

ಇವೆಲ್ಲವುಗಳ ಹಿಂದೆ ಜಾಗತಿಕ ರಾಜಕೀಯ ತಂತ್ರಗಳು ಮತ್ತು ತೈಲದ ಮೇಲಿನ ಹಿಡಿತ ಸಾಧಿಸುವ ಹಪಾಹಪಿ ಅಡಗಿದೆ ಎನ್ನುವುದು ಜಗತ್ತಿಗೆ ತಿಳಿದಿರುವ ಕಹಿ ಸತ್ಯ.

ಪೆಟ್ರೋಕೆಮಿಕಲ್ಸ್: ತೈಲ ಉದ್ಯಮದ ಹೊಸ ಅಸ್ತ್ರ

ಅಂತರರಾಷ್ಟ್ರೀಯ ಇಂಧನ ಸಂಸ್ಥೆ (IEA) ನೀಡಿರುವ ಇತ್ತೀಚಿನ ಅಂಕಿ-ಅಂಶಗಳ ಪ್ರಕಾರ, ಜಾಗತಿಕವಾಗಿ ಕಚ್ಚಾ ತೈಲದ ಒಟ್ಟು ಬೇಡಿಕೆಯಲ್ಲಿ ಶೇಕಡಾ 12 ಕ್ಕಿಂತ ಹೆಚ್ಚು ಭಾಗ ಪೆಟ್ರೋಕೆಮಿಕಲ್ಸ್ (Petrochemicals) ಉದ್ಯಮಕ್ಕೆ ಬಳಕೆಯಾಗುತ್ತಿದೆ. ವಾಹನಗಳಿಗೆ ಇಂಧನದ ಬೇಡಿಕೆ ಕಡಿಮೆಯಾದರೂ, ಪ್ಲಾಸ್ಟಿಕ್, ರಬ್ಬರ್ ಮತ್ತು ರಾಸಾಯನಿಕಗಳ ತಯಾರಿಕೆಯಲ್ಲಿ ತೈಲದ ಬೇಡಿಕೆ ಮುಂದಿನ ದಶಕಗಳಲ್ಲಿ ಇನ್ನಷ್ಟು ಹೆಚ್ಚಾಗಲಿದೆ ಎಂದು ಅಂದಾಜಿಸಲಾಗಿದೆ.

ನಾವು ಬೆಳಗ್ಗೆ ಬಳಸುವ ಟೂತ್‌ಬ್ರಷ್‌ನಿಂದ ಹಿಡಿದು ರಾತ್ರಿ ಮಲಗುವಾಗ ಹೊದೆಯುವ ಹೊದಿಕೆಯವರೆಗೆ ಎಲ್ಲದರಲ್ಲೂ ಈ ಕಪ್ಪು ಚಿನ್ನದ ಅಂಶ ಅಡಗಿದೆ!

ಕಚ್ಚಾ ತೈಲ ಇಂಧನವಲ್ಲದೆ ಇನ್ಯಾವುದಕ್ಕೆ ಬಳಕೆಯಾಗುತ್ತದೆ?

ಕಚ್ಚಾ ತೈಲವನ್ನು ಶುದ್ಧೀಕರಿಸಿದಾಗ (Refining) ಪೆಟ್ರೋಲ್, ಡೀಸಲ್, ಸೀಮೆ ಎಣ್ಣೆ, ಎಲ್​ಪಿಜಿ ಸಿಗುವುದು ನಮಗೆ ಗೊತ್ತು. ಆದರೆ ಅದರ ಜೊತೆಗೆ ಸಿಗುವ ಉಪ ಉತ್ಪನ್ನಗಳು (Petrochemicals) ನಮ್ಮ ನಿತ್ಯ ಜೀವನದ ಸಾವಿರಾರು ವಸ್ತುಗಳ ತಯಾರಿಕೆಗೆ ಮೂಲಾಧಾರವಾಗಿವೆ. ಅವುಗಳ ಪಟ್ಟಿ ಇಲ್ಲಿದೆ:

ವರ್ಗ (Category) ದೈನಂದಿನ ಬಳಕೆ ಮತ್ತು ಅನ್ವಯಗಳು (Daily Applications)
ಪ್ಲಾಸ್ಟಿಕ್ ಮತ್ತು ಪಾಲಿಮರ್‌ಗಳು ಇಂದು ಜಗತ್ತಿನಲ್ಲಿ ಬಳಕೆಯಾಗುವ ಶೇ. 99 ರಷ್ಟು ಪ್ಲಾಸ್ಟಿಕ್ ಕಚ್ಚಾ ತೈಲದಿಂದಲೇ ಬರುತ್ತದೆ. ಮೊಬೈಲ್ ಫೋನ್, ಕಂಪ್ಯೂಟರ್ ಕೇಸಿಂಗ್, ಬಾಟಲಿಗಳು, ಪೈಪ್‌ಗಳು ಎಲ್ಲವೂ ಇದರ ಕೊಡುಗೆ.
ಕೃತಕ ಬಟ್ಟೆಗಳು (Synthetic Fibers) ನಾವು ಧರಿಸುವ ಪಾಲಿಯೆಸ್ಟರ್ (Polyester), ನೈಲಾನ್ (Nylon), ಮತ್ತು ಆಕ್ರಿಲಿಕ್ ಬಟ್ಟೆಗಳು ಪೆಟ್ರೋಲಿಯಂನಿಂದಲೇ ತಯಾರಾಗುತ್ತವೆ.
ಔಷಧಗಳು (Pharmaceuticals) ಆಸ್ಪಿರಿನ್‌ನಂತಹ ನೋವು ನಿವಾರಕಗಳು, ಜೀವಸತ್ವಗಳು (Vitamins), ಮತ್ತು ಅನೇಕ ವೈದ್ಯಕೀಯ ಕ್ಯಾಪ್ಸುಲ್‌ಗಳ ಕವಚಗಳನ್ನು ತಯಾರಿಸಲು ಪೆಟ್ರೋಕೆಮಿಕಲ್ಸ್ ಬಳಸಲಾಗುತ್ತದೆ.
ಕೃಷಿ ಗೊಬ್ಬರ ಮತ್ತು ಕೀಟನಾಶಕಗಳು ಜಗತ್ತಿನಾದ್ಯಂತ ಆಹಾರ ಉತ್ಪಾದನೆಗೆ ಬಳಸುವ ರಾಸಾಯನಿಕ ಗೊಬ್ಬರಗಳು (ಮುಖ್ಯವಾಗಿ ಅಮೋನಿಯಾ ಮೂಲದ ಸಾರಜನಕ ಗೊಬ್ಬರಗಳು) ಮತ್ತು ಕೀಟನಾಶಕಗಳಿಗೆ ತೈಲವೇ ಮೂಲ.
ಸೌಂದರ್ಯವರ್ಧಕಗಳು (Cosmetics) ವ್ಯಾಸಲಿನ್ (Petroleum Jelly), ಲಿಪ್‌ಸ್ಟಿಕ್, ಪರ್ಫ್ಯೂಮ್, ಶಾಂಪೂ, ಮತ್ತು ಮುಖಕ್ಕೆ ಹಚ್ಚುವ ಕ್ರೀಮ್‌ಗಳಲ್ಲಿ ತೈಲದ ಅಂಶ ಇರುತ್ತದೆ.
ಕೃತಕ ರಬ್ಬರ್ (Synthetic Rubber) ವಾಹನಗಳ ಟೈರ್‌ಗಳು, ಶೂಗಳ ಸೋಲ್ (Sole), ಮತ್ತು ಸೀಲಿಂಗ್ ಗ್ಯಾಸ್ಕೆಟ್‌ಗಳನ್ನು ಮಾಡಲು ಕಚ್ಚಾ ತೈಲ ಅತ್ಯಗತ್ಯ.
ರಸ್ತೆ ಡಾಂಬರು (Asphalt/Bitumen) ರಸ್ತೆಗಳನ್ನು ನಿರ್ಮಿಸಲು ಬಳಸುವ ಕಪ್ಪು ಡಾಂಬರು ತೈಲ ಶುದ್ಧೀಕರಣದ ಕೊನೆಯ ಹಂತದಲ್ಲಿ ಸಿಗುವ ಒಂದು ಗಟ್ಟಿ ಉಪ ಉತ್ಪನ್ನವಾಗಿದೆ.
ಗೃಹಬಳಕೆ ವಸ್ತುಗಳು ಪೇಂಟ್‌ಗಳು (Paints), ಡಿಟರ್ಜೆಂಟ್ ಸೋಪುಗಳು, ಮೇಣದಬತ್ತಿಗಳು (Paraffin Wax), ಮತ್ತು ನಯಗೊಳಿಸುವ ಎಣ್ಣೆಗಳು (Lubricants).

ನೆನಪಿಡಿ: ನೀವು ಪರಿಸರಸ್ನೇಹಿ ಎಂದು ಕೊಳ್ಳುವ ಇವಿ ಕಾರಿನ ಮುಂಭಾಗದ ಡ್ಯಾಶ್‌ಬೋರ್ಡ್, ಒಳಗಿನ ಸೀಟ್‌ಗಳ ಮೇಲಿರುವ ಕೃತಕ ಚರ್ಮ (Synthetic Leather), ಕಾರಿನ ಸ್ಟೀರಿಂಗ್, ಹಾಗೂ ಸೋಲಾರ್ ಪ್ಯಾನಲ್‌ಗಳನ್ನು ಜೋಡಿಸಲು ಬಳಸುವ ಪ್ಲಾಸ್ಟಿಕ್ ಕೋಟಿಂಗ್‌ಗಳನ್ನು ತಯಾರಿಸಲು ಕೂಡ ಇದೇ ಪೆಟ್ರೋಕೆಮಿಕಲ್ಸ್ ಬೇಕು!

ಸಾರಿಗೆ ವಲಯದಲ್ಲಿ ಇವಿ ಮತ್ತು ಸೌರಶಕ್ತಿಯ ದಾಂಗುಡಿ ಜೋರಾಗಿಯೇ ಇರಬಹುದು. ಆದರೆ ವಿಮಾನಯಾನ, ಬೃಹತ್ ಕೈಗಾರಿಕೆಗಳು ಮತ್ತು ನಮ್ಮ ನಿತ್ಯ ಜೀವನದ ಅಸಂಖ್ಯಾತ ವಸ್ತುಗಳ ಉತ್ಪಾದನೆಗೆ ಕಚ್ಚಾ ತೈಲವು ಇನ್ನೂ ದಶಕಗಳ ಕಾಲ ಅನಿವಾರ್ಯವಾಗಿ ಉಳಿಯಲಿದೆ. ಹೀಗಾಗಿಯೇ, ತೈಲದ ಮೇಲಿನ ಜಾಗತಿಕ ಬೇಡಿಕೆ ಮತ್ತು ಅದರ ಸುತ್ತಲಿನ ರಾಜಕೀಯ ಸದ್ಯಕ್ಕಂತೂ ಮುಗಿಯುವ ಲಕ್ಷಣಗಳಿಲ್ಲ.

Nitin Nabin slams Karnataka BJP leaders:- ರಾಜ್ಯ ಬಿಜೆಪಿ ನಾಯಕರಿಗೆ ನಿತಿನ್ ನಬಿನ್ ಖಡಕ್ ಕ್ಲಾಸ್: ಮನೆಯಲ್ಲಿ ಕೂತರೆ ಸರ್ಕಾರ ತರಲು ಸಾಧ್ಯವಿಲ್ಲ ಎಂದು ವಾರ್ನಿಂಗ್!

0

ರಾಜ್ಯ ಬಿಜೆಪಿ ನಾಯಕರಿಗೆ ರಾಷ್ಟ್ರೀಯ ಅಧ್ಯಕ್ಷ ನಿತಿನ್ ನಬಿನ್ (Nitin Nabin) ಖಡಕ್ ಕ್ಲಾಸ್ ತಗೊಂಡಿದ್ದಾರೆ. ಮೊದಲ ಬಾರಿಗೆ ಕರ್ನಾಟಕ ಪ್ರವಾಸ ಕೈಗೊಂಡಿರುವ ಅವರು, ಬೆಂಗಳೂರಿನ ಮಲ್ಲೇಶ್ವರಂನಲ್ಲಿರುವ ಪಕ್ಷದ ಕಚೇರಿ ‘ಜಗನ್ನಾಥ ಭವನ’ದಲ್ಲಿ ಭಾನುವಾರ ಇಡೀ ದಿನ ಸರಣಿ ಸಾಂಘಟನಿಕ ಸಭೆಗಳನ್ನು ನಡೆಸಿದರು. ಈ ವೇಳೆ ರಾಜ್ಯ ನಾಯಕರ ಕಾರ್ಯವೈಖರಿ ಮತ್ತು ಹೋರಾಟದ ಬಗ್ಗೆ ಪರೋಕ್ಷವಾಗಿ ತೀವ್ರ ಅಸಮಾಧಾನ ಹೊರಹಾಕಿದ್ದಾರೆ.

“ಬರೀ ಚುನಾವಣೆ ಬಂತು ಎಂದು ಭಾಷಣ ಬಿಗಿದರೆ ಸಾಲದು, ಅದಕ್ಕೆ ತಕ್ಕಂತೆ ನೆಲಮಟ್ಟದಲ್ಲಿ ಕೆಲಸವಾಗಬೇಕು. ಈಗಿರುವ ಸಡಿಲವಾದ ಸಂಘಟನೆ ಇಟ್ಟುಕೊಂಡು ಮುಂದಿನ ಚುನಾವಣೆ ಗೆಲ್ಲಲು ಸಾಧ್ಯವೇ ಇಲ್ಲ” ಎಂದು ನಬಿನ್ ನೇರವಾಗಿಯೇ ಎಚ್ಚರಿಸಿದ್ದಾರೆ.

ಸಭೆಯಲ್ಲಿ ರಾಷ್ಟ್ರೀಯ ಅಧ್ಯಕ್ಷರು ನೀಡಿದ ಪ್ರಮುಖ ಸೂಚನೆಗಳು

ಒಂದೂವರೆ ಗಂಟೆಗೂ ಹೆಚ್ಚು ಕಾಲ ನಡೆದ ಈ ಸಂವಾದಾತ್ಮಕ ಸಭೆಯಲ್ಲಿ ಶಾಸಕರು, ಸಂಸದರು, ರಾಜ್ಯ ಪದಾಧಿಕಾರಿಗಳು ಹಾಗೂ ಜಿಲ್ಲಾಧ್ಯಕ್ಷರಿಂದ ವೈಯಕ್ತಿಕವಾಗಿ ಕಾರ್ಯಚಟುವಟಿಕೆಗಳ ವರದಿಯನ್ನು ಪಡೆದರು. ಈ ವೇಳೆ ಅವರು ನೀಡಿದ ಪ್ರಮುಖ ಮಾರ್ಗಸೂಚಿಗಳು ಇಲ್ಲಿವೆ:

  • ಪಶ್ಚಿಮ ಬಂಗಾಳ ಮಾದರಿ ಹೋರಾಟ: ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ತಳಮಟ್ಟದಿಂದ ಎದುರಿಸಿದ ಸವಾಲುಗಳು ಮತ್ತು ನಡೆಸಿದ ನಿರಂತರ ಹೋರಾಟವನ್ನು ಉದಾಹರಿಸಿದ ಅವರು, ಅದೇ ಮಾದರಿಯಲ್ಲಿ ಕರ್ನಾಟಕದಲ್ಲೂ ಸರ್ಕಾರದ ವೈಫಲ್ಯಗಳ ವಿರುದ್ಧ ಆಂದೋಲನ ರೂಪಿಸಲು ಸೂಚಿಸಿದರು.

  • ಪದಾಧಿಕಾರಿಗಳಿಗೆ ಜಿಲ್ಲಾ ಜವಾಬ್ದಾರಿ: ರಾಜ್ಯದ ಪದಾಧಿಕಾರಿಗಳಿಗೆ ಇನ್ನೂ ಜಿಲ್ಲಾ ಉಸ್ತುವಾರಿ ಹಂಚಿಕೆ ಮಾಡದಿರುವುದನ್ನು ಕಂಡು ಆಶ್ಚರ್ಯ ವ್ಯಕ್ತಪಡಿಸಿದ ಅವರು, ತಕ್ಷಣವೇ ಪ್ರತಿಯೊಬ್ಬ ಪದಾಧಿಕಾರಿಯೂ ಕನಿಷ್ಠ ಒಂದು ಜಿಲ್ಲೆಯ ಉಸ್ತುವಾರಿ ವಹಿಸಿಕೊಂಡು ಕೆಲಸ ಮಾಡಬೇಕೆಂದು ರಾಜ್ಯ ಘಟಕದ ಅಧ್ಯಕ್ಷ ಬಿ.ವೈ. ವಿಜಯೇಂದ್ರ ಅವರಿಗೆ ಸೂಚಿಸಿದರು.

  • ಕೇವಲ ಗೆಲುವು ಮುಖ್ಯವಲ್ಲ: ಶಾಸಕರು ಕೇವಲ ತಮ್ಮ ವೈಯಕ್ತಿಕ ಗೆಲುವಿಗಾಗಿ ಜನರನ್ನು ಸಂಪರ್ಕಿಸಿದರೆ ಸಾಲದು, ಪಕ್ಷದ ಸಂಘಟನೆಗೆ ಮತ್ತು ಬೂತ್ ಮಟ್ಟದಲ್ಲಿ ಪಕ್ಷ ಬಲಪಡಿಸಲು ತಾವು ನೀಡಿದ ಕೊಡುಗೆ ಏನು ಎಂಬುದನ್ನು ಸಾಬೀತುಪಡಿಸಬೇಕು ಎಂದರು.

  • ಮನ್ ಕಿ ಬಾತ್ ಬಳಕೆ: ಪ್ರಧಾನಮಂತ್ರಿಯವರ ‘ಮನ್ ಕಿ ಬಾತ್’ ಕಾರ್ಯಕ್ರಮವನ್ನು ಕೇವಲ ಪ್ರಸಾರ ಮಾಡುವುದಷ್ಟೇ ಅಲ್ಲದೆ, ಅದನ್ನು ಸಾರ್ವಜನಿಕರನ್ನು ತಲುಪುವ ಅತ್ಯಂತ ಪರಿಣಾಮಕಾರಿ ಸಾಂಘಟನಿಕ ಆಯುಧವಾಗಿ ಬಳಸಿಕೊಳ್ಳಲು ಕರೆ ನೀಡಿದರು.

‘ಎಸ್​​ಐಆರ್’ ಪ್ರಕ್ರಿಯೆಯನ್ನು ಚುನಾವಣೆ ತರಹವೇ ಪರಿಗಣಿಸಿ

ಯಲಹಂಕದ ಸಿಂಗನಾಯಕನಹಳ್ಳಿಯ ಖಾಸಗಿ ರೆಸಾರ್ಟ್‌ನಲ್ಲಿ ನಡೆದ ಬೆಂಗಳೂರು ಉತ್ತರ ಜಿಲ್ಲಾ ಪ್ರಶಿಕ್ಷಣ ಕಾರ್ಯಾಗಾರದ ಸಮಾರೋಪದಲ್ಲಿ ಪಾಲ್ಗೊಂಡಿದ್ದ ನಬಿನ್, ‘ಎಸ್​​ಐಆರ್’ (SIR – ಸಾಂಘಟನಿಕ ಮತದಾರರ ಪಟ್ಟಿ ಪರಿಶೀಲನೆ) ತಂಡದೊಂದಿಗೆ ಪ್ರತ್ಯೇಕ ಸಭೆ ನಡೆಸಿದರು.

“ಎಸ್​​ಐಆರ್ ಪ್ರಕ್ರಿಯೆಯನ್ನು ಒಂದು ಸಣ್ಣ ಸಾಂಘಟನಿಕ ಕೆಲಸ ಎಂದು ನಿರ್ಲಕ್ಷಿಸಬೇಡಿ, ಇದನ್ನು ಒಂದು ಮುಖ್ಯ ಚುನಾವಣೆ ಎಂದೇ ಪರಿಗಣಿಸಿ ಕೆಲಸ ಮಾಡಿ. ಅರ್ಹ ಮತದಾರರ ಹೆಸರು ಪಟ್ಟಿಯಿಂದ ಡಿಲೀಟ್ ಆಗದಂತೆ ಹಾಗೂ ಅನರ್ಹರು ಸೇರ್ಪಡೆಯಾಗದಂತೆ ತಳಮಟ್ಟದಲ್ಲಿ ಜಾಗೃತಿ ವಹಿಸಬೇಕು.”

ಮುಂಬರುವ ಬಿಬಿಎಂಪಿ/ಸ್ಥಳೀಯ ಸಂಸ್ಥೆಗಳ ಚುನಾವಣೆಗಳಲ್ಲಿ ಜಯಭೇರಿ ಬಾರಿಸಲು ಇದು ಅಡಿಪಾಯವಾಗಲಿದ್ದು, ಇಲ್ಲಿ ಗೆದ್ದರೆ 2028ರ ವಿಧಾನಸಭಾ ಚುನಾವಣೆಯ ಹಾದಿ ಸುಲಭವಾಗುತ್ತದೆ ಎಂದು ಅವರು ಸ್ಪಷ್ಟಪಡಿಸಿದರು. ಒಟ್ಟಿನಲ್ಲಿ, ಕರ್ನಾಟಕ ಬಿಜೆಪಿಯಲ್ಲಿ ತಳಮಟ್ಟದ ಸಿದ್ಧತೆ ಚುರುಕುಗೊಳಿಸಲು ರಾಷ್ಟ್ರೀಯ ಅಧ್ಯಕ್ಷರು ರಾಜ್ಯ ನಾಯಕರಿಗೆ ಪಕ್ಕಾ ಟಾಸ್ಕ್ ನೀಡಿದ್ದಾರೆ.

SIP Investment:- ಪ್ರತಿ ತಿಂಗಳು ಕೇವಲ ರೂ. 10,000 ಎಸ್‌ಐಪಿ ಮಾಡಿದರೆ, ರೂ. 2 ಕೋಟಿ ಗಳಿಸಲು ಎಷ್ಟು ವರ್ಷಗಳು ಬೇಕಾಗಬಹುದು? ವಿವರವಾಗಿ ಇಲ್ಲಿ ಓದಿ

ಯುವ ಪೀಳಿಗೆಯಲ್ಲಿ ಮ್ಯೂಚುವಲ್ ಫಂಡ್ಸ್‌ನ ಸಿಸ್ಟಮ್ಯಾಟಿಕ್ ಇನ್ವೆಸ್ಟ್‌ಮೆಂಟ್ ಪ್ಲಾನ್ (SIP) ಕ್ರೇಜ್ ವೇಗವಾಗಿ ಹೆಚ್ಚುತ್ತಿದೆ. ಪ್ರತಿ ತಿಂಗಳು ಒಂದು ಸಣ್ಣ ಮೊತ್ತವನ್ನು ಉಳಿಸುವ ಮೂಲಕ ಭವಿಷ್ಯದಲ್ಲಿ ಕೋಟ್ಯಂತರ ರೂಪಾಯಿಗಳ ಬೃಹತ್ ನಿಧಿಯನ್ನು (Wealth Creation) ಹೇಗೆ ನಿರ್ಮಿಸಬಹುದು ಎಂಬುದಕ್ಕೆ ಎಸ್‌ಐಪಿ ಅತ್ಯುತ್ತಮ ಉದಾಹರಣೆಯಾಗಿದೆ.

ನೀವು ಪ್ರತಿ ತಿಂಗಳು ಕೇವಲ ರೂ. 10,000 ಎಸ್‌ಐಪಿ ಮಾಡಿದರೆ, ರೂ. 2 ಕೋಟಿ ಗಳಿಸಲು ಎಷ್ಟು ವರ್ಷಗಳು ಬೇಕಾಗಬಹುದು? ಇದರ ಗಣಿತ ಮತ್ತು ಚಕ್ರಬಡ್ಡಿಯ ಮ್ಯಾಜಿಕ್ ಇಲ್ಲಿದೆ ನೋಡಿ.

30 ವರ್ಷಗಳ ತಾಳ್ಮೆ.. ರೂ. 2 ಕೋಟಿ ನಿಧಿ!

ಹಣಕಾಸು ತಜ್ಞರ ಪ್ರಕಾರ, ಮ್ಯೂಚುವಲ್ ಫಂಡ್‌ಗಳಲ್ಲಿ ಹೂಡಿಕೆ ಮಾಡುವಾಗ ‘ಸಮಯ’ ಮತ್ತು ‘ಶಿಸ್ತು’ ಅತ್ಯಂತ ಪ್ರಮುಖ ಪಾತ್ರ ವಹಿಸುತ್ತವೆ. ನೀವು ಪ್ರತಿ ತಿಂಗಳು ರೂ. 10,000 ಅನ್ನು ಎಸ್‌ಐಪಿ ಮೂಲಕ ಹೂಡಿಕೆ ಮಾಡಿ, ಅದಕ್ಕೆ ಸರಾಸರಿ ಶೇಕಡಾ 12 ರಷ್ಟು ವಾರ್ಷಿಕ ಆದಾಯ (Annual Return) ಸಿಕ್ಕರೆ, ನೀವು ರೂ. 2 ಕೋಟಿಗೂ ಅಧಿಕ ಮೊತ್ತವನ್ನು ಗಳಿಸಲು ಸುಮಾರು 30 ವರ್ಷಗಳು ಬೇಕಾಗುತ್ತವೆ.

ಲೆಕ್ಕಾಚಾರ ಹೀಗಿದೆ:

  • ತಿಂಗಳ ಹೂಡಿಕೆ: ರೂ. 10,000

  • ಹೂಡಿಕೆಯ ಅವಧಿ: 30 ವರ್ಷಗಳು

  • ನಿಮ್ಮ ಒಟ್ಟು ಹೂಡಿಕೆ: ರೂ. 36 ಲಕ್ಷ

  • ಸಿಗುವ ಅಂದಾಜು ಆದಾಯ: ಸುಮಾರು ರೂ. 2.72 ಕೋಟಿ

  • 30 ವರ್ಷಗಳ ನಂತರ ಒಟ್ಟು ಮೌಲ್ಯ: ರೂ. 3.08 ಕೋಟಿಗೂ ಹೆಚ್ಚು!

ಗಮನಿಸಿ: ಇಲ್ಲಿ ನೀವು 30 ವರ್ಷಗಳಲ್ಲಿ ನಿಮ್ಮ ಜೇಬಿನಿಂದ ಹೂಡಿಕೆ ಮಾಡಿದ್ದು ಕೇವಲ ರೂ. 36 ಲಕ್ಷ ಮಾತ್ರ. ಆದರೆ ಚಕ್ರಬಡ್ಡಿಯ ಶಕ್ತಿಯಿಂದಾಗಿ (Power of Compounding) ನಿಮ್ಮ ಹಣ ಮರಳಿ ಕೊಡುವಾಗ ಬರೋಬ್ಬರಿ 3 ಕೋಟಿ ದಾಟಿರುತ್ತದೆ! ಇದನ್ನು ಹಣಕಾಸು ಜಗತ್ತಿನಲ್ಲಿ “ಚಕ್ರಬಡ್ಡಿಯ ಮ್ಯಾಜಿಕ್” ಎಂದು ಕರೆಯಲಾಗುತ್ತದೆ.

ಎಸ್‌ಐಪಿ (SIP) ಹೂಡಿಕೆಯ ಲಾಭಗಳೇನು?

  1. ಮಾರುಕಟ್ಟೆಯ ಏರಿಳಿತದ ಚಿಂತೆ ಇಲ್ಲ: ಶೇರ್ ಮಾರ್ಕೆಟ್ ಏರಲಿ, ಇಳಿಯಲಿ ಎಸ್‌ಐಪಿ ಮೂಲಕ ಪ್ರತಿ ತಿಂಗಳು ನಿಮ್ಮ ಹೂಡಿಕೆ ನಿರಂತರವಾಗಿ ಸಾಗುತ್ತದೆ. ಮಾರುಕಟ್ಟೆ ಕುಸಿದಾಗ ನಿಮಗೆ ಹೆಚ್ಚು ಯೂನಿಟ್‌ಗಳು ಸಿಗುತ್ತವೆ, ಮಾರುಕಟ್ಟೆ ಏರಿದಾಗ ಲಾಭ ಹೆಚ್ಚಾಗುತ್ತದೆ (Rupee Cost Averaging).

  2. ಸಣ್ಣ ಮೊತ್ತದಿಂದ ಆರಂಭ: ಬೃಹತ್ ಮೊತ್ತವನ್ನು ಒಂದೇ ಬಾರಿಗೆ ಹೂಡಿಕೆ ಮಾಡಲು ಸಾಧ್ಯವಾಗದವರಿಗೆ, ತಿಂಗಳಿಗೆ ರೂ. 500 ಅಥವಾ ರೂ. 1000 ದಿಂದಲೂ ಎಸ್‌ಐಪಿ ಆರಂಭಿಸುವ ಅವಕಾಶವಿದೆ.

  3. ಆರ್ಥಿಕ ಸ್ವಾತಂತ್ರ್ಯ: ಸಣ್ಣ ವಯಸ್ಸಿನಲ್ಲೇ ಎಸ್‌ಐಪಿ ಪ್ರಾರಂಭಿಸುವುದರಿಂದ ನಿವೃತ್ತಿಯ ವೇಳೆಗೆ (Retirement Planning) ಆರ್ಥಿಕ ಭದ್ರತೆ ಮತ್ತು ಆರ್ಥಿಕ ಸ್ವಾತಂತ್ರ್ಯವನ್ನು ಸುಲಭವಾಗಿ ಸಾಧಿಸಬಹುದು.

ಹೂಡಿಕೆ ಮಾಡುವ ಮುನ್ನ ನೆನಪಿಡಿ

ಮ್ಯೂಚುವಲ್ ಫಂಡ್ ಹೂಡಿಕೆಗಳು ಮಾರುಕಟ್ಟೆಯ ಅಪಾಯಗಳಿಗೆ ಒಳಪಟ್ಟಿರುತ್ತವೆ. ಆದ್ದರಿಂದ ಹೂಡಿಕೆ ಮಾಡುವ ಮುನ್ನ ನಿಮ್ಮ ಆದಾಯ, ರಿಸ್ಕ್ ತಗೊಳ್ಳುವ ಸಾಮರ್ಥ್ಯ ಮತ್ತು ನಿಮ್ಮ ಭವಿಷ್ಯದ ಗುರಿಗಳನ್ನು ಗಮನದಲ್ಲಿಟ್ಟುಕೊಳ್ಳಬೇಕು. ಯಾವುದೇ ದೊಡ್ಡ ಮೊತ್ತದ ಹೂಡಿಕೆ ಮಾಡುವ ಮುನ್ನ ಪ್ರಮಾಣೀಕೃತ ಹಣಕಾಸು ಸಲಹೆಗಾರರ (Financial Advisor) ನೆರವು ಪಡೆಯುವುದು ಸೂಕ್ತ.

(ಗಮನಿಸಿ: ಈ ಲೇಖನವು ಕೇವಲ ಮಾಹಿತಿ ಮತ್ತು ಜಾಗೃತಿಗಾಗಿ ಮಾತ್ರ. ಹೂಡಿಕೆ ಮಾಡುವ ಮುನ್ನ ಮಾರುಕಟ್ಟೆಯ ಸಾಧಕ-ಬಾಧಕಗಳನ್ನು ಸ್ವತಃ ಪರಿಶೀಲಿಸಿ.)

Bengaluru traffic:- ಬೆಂಗಳೂರು ಟ್ರಾಫಿಕ್‌ಗೆ ಬಲಿಯಾಯಿತಾ UPSC ಕನಸು? ಒಂದು ನಿಮಿಷ ತಡವಾಗಿದ್ದಕ್ಕೆ ಪರೀಕ್ಷೆಯಿಂದ ವಂಚಿತನಾದ ವೈಟ್‌ಫೀಲ್ಡ್ ವಿದ್ಯಾರ್ಥಿ!

0

ವರ್ಷಗಟ್ಟಲೆ ಹಗಲಿರುಳು ಕುಳಿತು ಮಾಡಿದ ಕಠಿಣ ಪರಿಶ್ರಮ, ಐಎಎಸ್-ಐಪಿಎಸ್ ಆಗಬೇಕೆಂಬ ಹೆತ್ತವರ ನೂರಾರು ಕನಸುಗಳು… ಎಲ್ಲವೂ ಕೇವಲ ‘ಒಂದು ನಿಮಿಷ’ದಲ್ಲಿ ಧೂಳೀಪಟವಾಗಿ ಹೋದರೆ ಆ ಅಭ್ಯರ್ಥಿಯ ಪರಿಸ್ಥಿತಿ ಏನಾಗಬೇಡ? ಇಂತಹದ್ದೊಂದು ಅತ್ಯಂತ ಬೇಸರದ ಮತ್ತು ದುರದೃಷ್ಟಕರ ಘಟನೆ ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಭಾನುವಾರ (ಮೇ 24) ನಡೆದಿದೆ.

ಬೆಂಗಳೂರಿನ ರಸ್ತೆಗಳ ದುರಾವಸ್ಥೆ ಹಾಗೂ ಟ್ರಾಫಿಕ್ ಜಿಲಾಜಾಹತ್‌ಗೆ (Bengaluru traffic & patholes) ಸಿಲುಕಿ ವಿದ್ಯಾರ್ಥಿಯೊಬ್ಬ ಯುಪಿಎಸ್‌ಸಿ (UPSC) ಪೂರ್ವಭಾವಿ ಪರೀಕ್ಷೆಯಿಂದ ವಂಚಿತನಾಗಿರುವ ಗಂಭೀರ ಆರೋಪ ಕೇಳಿಬಂದಿದೆ.

ಮುಂಜಾನೆ 7 ಗಂಟೆಗೆ ಹೊರಟರೂ ಸಿಗದ ಪ್ರವೇಶ!

ವೈಟ್‌ಫೀಲ್ಡ್ ನಿವಾಸಿಯಾದ ಪ್ರಮೋದ್ ಎಂಬ ವಿದ್ಯಾರ್ಥಿ ಭಾನುವಾರ ನಡೆದ ಯುಪಿಎಸ್‌ಸಿ ಪ್ರಿಲಿಮ್ಸ್ ಪರೀಕ್ಷೆಗಾಗಿ ಚಾಲುಕ್ಯ ಸರ್ಕಲ್ ಬಳಿ ಇರುವ ಆರ್. ಸಿ. ಕಾಲೇಜಿನ ಪರೀಕ್ಷಾ ಕೇಂದ್ರಕ್ಕೆ ಬರಬೇಕಿತ್ತು. ಪರೀಕ್ಷಾ ನಿಯಮಗಳ ಪ್ರಕಾರ ಬೆಳಿಗ್ಗೆ 9:00 ಗಂಟೆಗೆ ಗೇಟ್ ಕ್ಲೋಸ್ ಆಗುತ್ತದೆ ಎಂದು ತಿಳಿದಿದ್ದ ಪ್ರಮೋದ್, ಮುಂಜಾನೆ 7:00 ಗಂಟೆಗೇ ಮನೆಯಿಂದ ಹೊರಟಿದ್ದರು.

ಆದರೆ ವೈಟ್‌ಫೀಲ್ಡ್ ಮತ್ತು ಮಹಾದೇವಪುರ ಭಾಗದ ರಸ್ತೆಗಳು ಸಂಪೂರ್ಣ ಹದಗೆಟ್ಟಿರುವುದರಿಂದ ಆಟೋ ಚಾಲಕರು ಬರಲು ನಿರಾಕರಿಸಿದ್ದಾರೆ. ಮೆಜೆಸ್ಟಿಕ್ ತಲುಪಿ ಅಲ್ಲಿಂದ ಆಟೋ ಹಿಡಿದು ಪರೀಕ್ಷಾ ಕೇಂದ್ರಕ್ಕೆ ಬರುವಷ್ಟರಲ್ಲಿ ಕಾಲ ಮೀರಿಹೋಗಿತ್ತು. ಪ್ರಮೋದ್ ಕೇಂದ್ರದ ಮುಂದೆ ನಿಂತಾಗ ಸರಿಯಾಗಿ 9:01 ಆಗಿತ್ತು ಎನ್ನಲಾಗಿದೆ. ಕೇವಲ ಒಂದು ನಿಮಿಷ ತಡವಾಗಿದ್ದರಿಂದ ನಿಯಮಗಳ ಪ್ರಕಾರ ಅಧಿಕಾರಿಗಳು ಗೇಟ್ ತೆರೆಯಲು ನಿರಾಕರಿಸಿದ್ದಾರೆ.

ಅಧಿಕಾರಿಗಳ ಮುಂದೆ ಕಣ್ಣೀರಿಟ್ಟ ವಿದ್ಯಾರ್ಥಿ

“ನಮ್ಮ ಬೆಂಗಳೂರಿನ ರಸ್ತೆಗಳ ಪರಿಸ್ಥಿತಿ ನಿಮಗೇ ಗೊತ್ತಿದೆ. ನಾನು ಬೆಳಿಗ್ಗೆ 7 ಗಂಟೆಗೆ ಹೊರಟರೂ ಇಲ್ಲಿಗೆ ತಲುಪಲು ಸಾಧ್ಯವಾಗಿಲ್ಲ, ದಯವಿಟ್ಟು ನನ್ನ ವರ್ಷದ ಶ್ರಮವನ್ನು ಅರ್ಥಮಾಡಿಕೊಳ್ಳಿ” ಎಂದು ಪ್ರಮೋದ್ ಪರೀಕ್ಷಾ ಮೇಲ್ವಿಚಾರಕರಲ್ಲಿ ಮನವಿ ಮಾಡಿಕೊಂಡಿದ್ದಾರೆ. ಆದರೆ ಯುಪಿಎಸ್‌ಸಿಯ ಕಟ್ಟುನಿಟ್ಟಾದ ಸ್ಕ್ರೀನಿಂಗ್ ಮತ್ತು ಗೇಟ್ ಕ್ಲೋಸಿಂಗ್ ನಿಯಮಗಳ ಹಿನ್ನೆಲೆಯಲ್ಲಿ ಅಧಿಕಾರಿಗಳು ಅಸಹಾಯಕತೆ ವ್ಯಕ್ತಪಡಿಸಿ, ಪ್ರವೇಶ ನಿರಾಕರಿಸಿದ್ದಾರೆ. ಇದರಿಂದಾಗಿ ವಿದ್ಯಾರ್ಥಿಯ ಇಡೀ ವರ್ಷದ ಕಠಿಣ ಶ್ರಮ “ನೀರಲ್ಲಿ ಹೋಮ ಮಾಡಿದಂತಾಗಿದೆ”.

ಒಬ್ಬರಲ್ಲ, ಆರು ವಿದ್ಯಾರ್ಥಿಗಳ ಕಥೆಯೂ ಇದೇ!

ಕೇವಲ ಪ್ರಮೋದ್ ಮಾತ್ರವಲ್ಲದೆ, ಇದೇ ಪರೀಕ್ಷಾ ಕೇಂದ್ರಕ್ಕೆ ಸರಿಯಾದ ಸಮಯಕ್ಕೆ ಬರಲಾಗದ ಒಟ್ಟು 6 ವಿದ್ಯಾರ್ಥಿಗಳು ಇಂದು ಯುಪಿಎಸ್‌ಸಿ ಪರೀಕ್ಷೆಯಿಂದ ವಂಚಿತರಾಗಿದ್ದಾರೆ. ಬೆಂಗಳೂರಿನ ರಸ್ತೆಗುಂಡಿಗಳು ಮತ್ತು ಟ್ರಾಫಿಕ್ ಸಮಸ್ಯೆ ವಿದ್ಯಾರ್ಥಿಗಳ ಭವಿಷ್ಯದ ಆಟವಾಡುತ್ತಿದೆಯೇ ಎಂಬ ಸಾರ್ವಜನಿಕರ ಆಕ್ರೋಶಕ್ಕೆ ಇದು ಮತ್ತೊಮ್ಮೆ ಕಾರಣವಾಗಿದೆ. ಭದ್ರತೆಯ ದೃಷ್ಟಿಯಿಂದ ಹಾಗೂ ಯಾವುದೇ ಅವ್ಯವಹಾರಕ್ಕೆ ಆಸ್ಪದ ನೀಡದಂತೆ ದೇಶಾದ್ಯಂತ ಕಟ್ಟುನಿಟ್ಟಿನ ನಿಯಮಗಳನ್ನು ಪಾಲಿಸಲಾಗುತ್ತದೆಯಾದರೂ, ನಗರದ ಮೂಲಸೌಕರ್ಯಗಳ ಕೊರತೆಯಿಂದ ವಿದ್ಯಾರ್ಥಿಗಳು ಬೆಲೆ ತೆರಬೇಕಾಗಿ ಬಂದಿರುವುದು ದುರಂತ.

ರಾಜ್ಯದ ಬೆಂಗಳೂರು, ಮೈಸೂರು ಹಾಗೂ ಧಾರವಾಡದ ವಿವಿಧ ಕೇಂದ್ರಗಳಲ್ಲಿ ಬಿಗಿ ಪೊಲೀಸ್ ಭದ್ರತೆಯ ನಡುವೆ ಈ ಬಾರಿ ಯುಪಿಎಸ್‌ಸಿ ಪ್ರಿಲಿಮ್ಸ್ ಪರೀಕ್ಷೆ ನಡೆದಿದೆ. ಆದರೆ, ಬೆಂಗಳೂರಿನ ರಸ್ತೆಗಳ ಹೊಂಡ-ಗುಂಡಿಗಳಿಗೆ ವಿದ್ಯಾರ್ಥಿಯ ಕನಸು ಬಲಿಯಾಗಿರುವ ಈ ಸುದ್ದಿ ಈಗ ಸಾಮಾಜಿಕ ಜಾಲತಾಣಗಳಲ್ಲಿ ತೀವ್ರ ಚರ್ಚೆ ಹುಟ್ಟುಹಾಕಿದೆ.

Ebola virus alert in Karnataka:- ಕರ್ನಾಟಕದಲ್ಲಿ ಎಬೋಲಾ ಹೈ ಅಲರ್ಟ್: ಬೆಂಗಳೂರಿಗೆ ಬರುವ ಪ್ರಯಾಣಿಕರಿಗೆ 21 ದಿನ ಕಡ್ಡಾಯ ಕ್ವಾರಂಟೈನ್!

0

ಆಫ್ರಿಕಾ ದೇಶಗಳಲ್ಲಿ ಎಬೋಲಾ ವೈರಸ್ (Ebola virus) ಸೋಂಕು ತೀವ್ರವಾಗಿ ಹರಡುತ್ತಿರುವ ಹಿನ್ನೆಲೆಯಲ್ಲಿ, ವಿಶ್ವ ಆರೋಗ್ಯ ಸಂಸ್ಥೆಯು (WHO) ಇದನ್ನು ಅಂತರರಾಷ್ಟ್ರೀಯ ಸಾರ್ವಜನಿಕ ಆರೋಗ್ಯ ತುರ್ತು ಪರಿಸ್ಥಿತಿ ಎಂದು ಘೋಷಿಸಿದೆ. ಇದರ ಬೆನ್ನಲ್ಲೇ ಎಚ್ಚೆತ್ತಿರುವ ಕರ್ನಾಟಕ ಆರೋಗ್ಯ ಇಲಾಖೆಯು ರಾಜ್ಯಾದ್ಯಂತ ಹೈ ಅಲರ್ಟ್ ಘೋಷಿಸಿದ್ದು, ಹೊಸ ಮಾರ್ಗಸೂಚಿಯನ್ನು ಬಿಡುಗಡೆ ಮಾಡಿದೆ.

ಭಾರತದಲ್ಲಿ ಇದುವರೆಗೆ ಯಾವುದೇ ಎಬೋಲಾ ಪ್ರಕರಣಗಳು ವರದಿಯಾಗಿಲ್ಲದಿದ್ದರೂ, ಮುಂಜಾಗ್ರತಾ ಕ್ರಮವಾಗಿ ಬೆಂಗಳೂರಿಗೆ (Bengaluru) ಬರುವ ಪ್ರಯಾಣಿಕರಿಗೆ ಕಠಿಣ ನಿಯಮಗಳನ್ನು ಜಾರಿಗೊಳಿಸಲಾಗಿದೆ.

Selective focus at sign in front of the entrance of Airport terminal. Temperature screening point with thermal detection camera to scan and check body temperature to prevent Coronavirus.

ಪ್ರಮುಖ ಮಾರ್ಗಸೂಚಿಗಳು ಮತ್ತು ನಿರ್ಬಂಧಗಳು

  • 21 ದಿನಗಳ ಕಡ್ಡಾಯ ಕ್ವಾರಂಟೈನ್: ಎಬೋಲಾ ಪೀಡಿತ ದೇಶಗಳಿಂದ (ವಿಶೇಷವಾಗಿ ಡೆಮಾಕ್ರಟಿಕ್ ರಿಪಬ್ಲಿಕ್ ಆಫ್ ಕಾಂಗೋ ಮತ್ತು ಉಗಾಂಡಾ) ಬೆಂಗಳೂರಿಗೆ ಬರುವ ಪ್ರಯಾಣಿಕರು ಕಡ್ಡಾಯವಾಗಿ ಕನಿಷ್ಠ 21 ದಿನಗಳ ಕಾಲ ಆರೋಗ್ಯ ಇಲಾಖೆಯ ತೀವ್ರ ಮೇಲ್ವಿಚಾರಣೆಯಲ್ಲಿ ಕ್ವಾರಂಟೈನ್‌ನಲ್ಲಿ ಇರಬೇಕಾಗುತ್ತದೆ.

  • ವಿಮಾನ ನಿಲ್ದಾಣಗಳಲ್ಲಿ ತಪಾಸಣೆ: ವಿದೇಶದಿಂದ ಬರುವ ಎಲ್ಲಾ ಪ್ರಯಾಣಿಕರನ್ನು ವಿಮಾನ ನಿಲ್ದಾಣಗಳಲ್ಲೇ ತೀವ್ರ ಥರ್ಮಲ್ ಸ್ಕ್ರೀನಿಂಗ್ ಮತ್ತು ಆರೋಗ್ಯ ತಪಾಸಣೆಗೆ ಒಳಪಡಿಸಲಾಗುತ್ತಿದೆ.

  • ರೋಗಲಕ್ಷಣಗಳ ವರದಿ: ಪ್ರಯಾಣಿಕರಲ್ಲಿ ಯಾವುದೇ ರೀತಿಯ ರೋಗಲಕ್ಷಣಗಳು ಕಂಡುಬಂದಲ್ಲಿ, ಅವರು ತಕ್ಷಣವೇ ಹತ್ತಿರದ ಆರೋಗ್ಯ ಕೇಂದ್ರ ಅಥವಾ ನಿಗದಿಪಡಿಸಿದ ಆಸ್ಪತ್ರೆಗಳಿಗೆ ವರದಿ ಮಾಡಬೇಕಾಗುತ್ತದೆ.

ಎಬೋಲಾ ವೈರಸ್‌ನ ಪ್ರಮುಖ ಲಕ್ಷಣಗಳು

ಎಬೋಲಾ ಸೋಂಕು ತಗುಲಿದಾಗ ಕಾಣಿಸಿಕೊಳ್ಳುವ ಸಾಮಾನ್ಯ ಲಕ್ಷಣಗಳು ಇಲ್ಲಿವೆ:

ಲಕ್ಷಣಗಳ ಹಂತ ಪ್ರಮುಖ ರೋಗಲಕ್ಷಣಗಳು
ಆರಂಭಿಕ ಲಕ್ಷಣಗಳು ತೀವ್ರ ಜ್ವರ, ಅಸಹನೀಯ ತಲೆನೋವು, ತೀವ್ರ ಸ್ನಾಯು ನೋವು ಮತ್ತು ಗಂಟಲು ನೋವು.
ಮುಂದುವರಿದ ಲಕ್ಷಣಗಳು ವಾಂತಿ, ನಿರಂತರ ಅತಿಸಾರ (ಭೇದಿ), ತೀವ್ರ ಹೊಟ್ಟೆ ನೋವು.
ದೈಹಿಕ ಬದಲಾವಣೆಗಳು ಚರ್ಮದ ಮೇಲೆ ದದ್ದುಗಳು ಏಳುವುದು ಮತ್ತು ಕಣ್ಣುಗಳು ತೀವ್ರವಾಗಿ ಕೆಂಪಾಗುವುದು.

ರೋಗ ಹರಡುವ ವಿಧಾನ: ಈ ಸೋಂಕು ಗಾಳಿಯ ಮೂಲಕ ಹರಡುವುದಿಲ್ಲ. ಆದರೆ, ಸೋಂಕಿತ ವ್ಯಕ್ತಿಯ ರಕ್ತ, ಅಂಗಾಂಗಗಳು ಅಥವಾ ದೇಹದ ದ್ರವಗಳ (ಲಾಲಾರಸ, ಬೆವರು ಇತ್ಯಾದಿ) ನೇರ ಸಂಪರ್ಕಕ್ಕೆ ಬರುವುದರಿಂದ ಅಥವಾ ಅವರು ಬಳಸಿದ ಕಲುಷಿತ ಬಟ್ಟೆ, ಹಾಸಿಗೆ ಹಾಗೂ ಸಿರಿಂಜ್‌ಗಳ ಮೂಲಕ ಹರಡುತ್ತದೆ. ಆದ್ದರಿಂದ ಆರೋಗ್ಯ ಸಿಬ್ಬಂದಿ ಮತ್ತು ರೋಗಿಯ ಕುಟುಂಬಸ್ಥರು ಹೆಚ್ಚಿನ ಜಾಗ್ರತೆ ವಹಿಸಬೇಕಿರುತ್ತದೆ.

ಚಿಕಿತ್ಸೆ ಮತ್ತು ಐಸೋಲೇಷನ್‌ಗಾಗಿ ಆಸ್ಪತ್ರೆಗಳ ಸಜ್ಜು

ಸೋಂಕು ಹರಡುವುದನ್ನು ತಡೆಯಲು ಮತ್ತು ಶಂಕಾಸ್ಪದ ಪ್ರಕರಣಗಳಿಗೆ ತಕ್ಷಣ ಚಿಕಿತ್ಸೆ ನೀಡಲು ರಾಜ್ಯ ಸರ್ಕಾರವು ಬೆಂಗಳೂರು ಹಾಗೂ ಮಂಗಳೂರಿನಲ್ಲಿ ವಿಶೇಷ ಐಸೋಲೇಷನ್ ಮತ್ತು ಕ್ವಾರಂಟೈನ್ ಕೇಂದ್ರಗಳನ್ನು ಗುರುತಿಸಿದೆ.

  • ಬೆಂಗಳೂರಿನಲ್ಲಿ:

    • ರಾಜೀವ್ ಗಾಂಧಿ ಎದೆರೋಗಗಳ ಸಂಸ್ಥೆ (RGICD): ಇದನ್ನು ವಿಶೇಷ ಐಸೋಲೇಷನ್ (ಪ್ರತ್ಯೇಕ ಚಿಕಿತ್ಸಾ) ಕೇಂದ್ರವಾಗಿ ನಿಗದಿಪಡಿಸಲಾಗಿದೆ.

    • ಎಪಿಡೆಮಿಕ್ ಡಿಸೀಸ್ ಆಸ್ಪತ್ರೆ: ಇದನ್ನು ಕ್ವಾರಂಟೈನ್ ಕೇಂದ್ರವಾಗಿ ಬಳಸಲಾಗುತ್ತದೆ.

  • ಮಂಗಳೂರಿನಲ್ಲಿ:

    • ವೆನ್ಲಾಕ್ ಜಿಲ್ಲಾ ಆಸ್ಪತ್ರೆ ಮತ್ತು ಶ್ರೀನಿವಾಸ್ ಪೋರ್ಟ್ ಆಸ್ಪತ್ರೆ (NMPA) ಗಳಲ್ಲಿ ಪ್ರತ್ಯೇಕ ಚಿಕಿತ್ಸಾ ವ್ಯವಸ್ಥೆ ಹಾಗೂ ವಾರ್ಡ್‌ಗಳನ್ನು ಸಿದ್ಧಪಡಿಸಲಾಗಿದೆ.

ಶಂಕಾಸ್ಪದ ಪ್ರಕರಣಗಳ ರಕ್ತದ ಮಾದರಿಗಳನ್ನು ತಕ್ಷಣವೇ ಬೆಂಗಳೂರಿನ ಎನ್.ಐ.ವಿ (NIV) ಮೂಲಕ ಪುಣೆಯ ಮುಖ್ಯ ರಾಷ್ಟ್ರೀಯ ವೈರಾಣು ಸಂಸ್ಥೆಗೆ ಹೆಚ್ಚಿನ ಪರೀಕ್ಷೆಗಾಗಿ ರವಾನಿಸಲು ವ್ಯವಸ್ಥೆ ಮಾಡಲಾಗಿದೆ.

ಆರೋಗ್ಯ ಇಲಾಖೆಯ ಮುಂಜಾಗ್ರತಾ ಕ್ರಮಗಳು

ರಾಜ್ಯ ಆರೋಗ್ಯ ಇಲಾಖೆಯು ಪರಿಸ್ಥಿತಿಯನ್ನು ಎದುರಿಸಲು ಸಂಪೂರ್ಣವಾಗಿ ಸಜ್ಜಾಗಿದ್ದು, ಈ ಕೆಳಗಿನ ಕ್ರಮಗಳನ್ನು ಕೈಗೊಂಡಿದೆ:

  • ತ್ವರಿತ ಪ್ರತಿಕ್ರಿಯೆ ತಂಡಗಳು (RRT): ಯಾವುದೇ ತುರ್ತು ಪರಿಸ್ಥಿತಿಯನ್ನು ನಿಭಾಯಿಸಲು ಱಪಿಡ್ ರೆಸ್ಪಾನ್ಸ್ ತಂಡಗಳನ್ನು ಈಗಾಗಲೇ ಸಕ್ರಿಯಗೊಳಿಸಲಾಗಿದೆ.

  • ವೈದ್ಯಕೀಯ ಸೌಲಭ್ಯ: ಪ್ರತ್ಯೇಕ ಅಂಬುಲೆನ್ಸ್ ವ್ಯವಸ್ಥೆ, ಪಿಪಿಇ ಕಿಟ್‌ಗಳು ಮತ್ತು ಅಗತ್ಯ ಔಷಧಿಗಳ ಸಂಗ್ರಹವನ್ನು ಮಾಡಿಕೊಳ್ಳಲಾಗಿದೆ.

  • ಸಿಬ್ಬಂದಿಗೆ ತರಬೇತಿ: ಎಬೋಲಾ ರೋಗಿಗಳಿಗೆ ಸುರಕ್ಷಿತವಾಗಿ ಚಿಕಿತ್ಸೆ ನೀಡುವ ಕುರಿತು ಆರೋಗ್ಯ ಸಿಬ್ಬಂದಿಗೆ ವಿಶೇಷ ತರಬೇತಿ ನೀಡಲಾಗುತ್ತಿದೆ.

ಸಾರ್ವಜನಿಕರಿಗೆ ಮನವಿ: ಸಾರ್ವಜನಿಕರು ಯಾವುದೇ ಕಾರಣಕ್ಕೂ ಸಾಮಾಜಿಕ ಜಾಲತಾಣಗಳಲ್ಲಿ ಹರಡುವ ಸುಳ್ಳು ಸುದ್ದಿಗಳನ್ನು ನಂಬಿ ಆತಂಕಕ್ಕೊಳಗಾಗಬಾರದು. ಕೇವಲ ಆರೋಗ್ಯ ಇಲಾಖೆ ನೀಡುವ ಅಧಿಕೃತ ಮಾಹಿತಿಯನ್ನು ಮಾತ್ರ ಅನುಸರಿಸಬೇಕು ಎಂದು ಸರ್ಕಾರ ವಿನಂತಿಸಿದೆ.

Megastar Chiranjeevi:- ಮಾತು ಉಳಿಸಿದ ಮೆಗಾಸ್ಟಾರ್; ಮಗಳ ಸಾಧನೆ, ತಂದೆಯ ಚಾಲೆಂಜ್!

ಚಿತ್ರರಂಗದಲ್ಲಿ ಎಷ್ಟೇ ಎತ್ತರಕ್ಕೆ ಬೆಳೆದರೂ ಅಭಿಮಾನಿಗಳನ್ನು ತಮ್ಮ ಸ್ವಂತ ಕುಟುಂಬದಂತೆ ಕಾಣುವ ಗುಣ ಕೆಲವರಿಗಷ್ಟೇ ಇರುತ್ತದೆ. ಅಂಥವರಲ್ಲಿ ಟಾಲಿವುಡ್‌ನ ಮೆಗಾಸ್ಟಾರ್ ಚಿರಂಜೀವಿ (Megastar Chiranjeevi) ಮುಂಚೂಣಿಯಲ್ಲಿ ನಿಲ್ಲುತ್ತಾರೆ. ಇತ್ತೀಚೆಗೆ ತೆಲಂಗಾಣದಲ್ಲಿ ನಡೆದ ಹೃದಯಸ್ಪರ್ಶಿ ಘಟನೆಯೊಂದು ಇದಕ್ಕೆ ಸಾಕ್ಷಿಯಾಗಿದೆ. ತಂದೆಯೊಬ್ಬರು ಮಗಳಿಗೆ ಕೊಟ್ಟಿದ್ದ ದೊಡ್ಡ ಮಾತನ್ನು ಈಡೇರಿಸಲು ಮೆಗಾಸ್ಟಾರ್ ನೆರವಾಗಿದ್ದು, ಈಗ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಮೆಚ್ಚುಗೆ ಗಳಿಸುತ್ತಿದೆ.

ಏನಿದು ಇಂಟರೆಸ್ಟಿಂಗ್ ಸ್ಟೋರಿ? ಇಲ್ಲಿದೆ ಪೂರ್ತಿ ಮಾಹಿತಿ:

ಮಗಳ ಸಾಧನೆ, ತಂದೆಯ ಚಾಲೆಂಜ್!

ತೆಲಂಗಾಣದ ಎಮ್. ರುಶಿ ಎಂಬ ಯುವತಿ ಇತ್ತೀಚೆಗೆ ಪ್ರಕಟವಾದ TG EAPCET (ಎಂಜಿನಿಯರಿಂಗ್, ಕೃಷಿ ಮತ್ತು ವೈದ್ಯಕೀಯ ಸಾಮಾನ್ಯ ಪ್ರವೇಶ ಪರೀಕ್ಷೆ) ಫಲಿತಾಂಶದಲ್ಲಿ ರಾಜ್ಯಕ್ಕೆ ಪ್ರಥಮ ರ್ಯಾಂಕ್ (Rank 1) ಪಡೆದು ಇತಿಹಾಸ ಸೃಷ್ಟಿಸಿದ್ದಾರೆ. 1986ರ ನಂತರ ಈ ಪರೀಕ್ಷೆಯಲ್ಲಿ ಮೊದಲ ಸ್ಥಾನ ಪಡೆದ ಮೊದಲ ಯುವತಿ ಎಂಬ ಹೆಗ್ಗಳಿಕೆಗೂ ಇವರು ಪಾತ್ರರಾಗಿದ್ದಾರೆ.

ರುಶಿ ಮೆಗಾಸ್ಟಾರ್ ಚಿರಂಜೀವಿ ಅವರ ಅಪ್ಪಟ ಅಭಿಮಾನಿ. ಮಗಳ ಓದಿಗೆ ಹುರುಪು ತುಂಬಲು ಪರೀಕ್ಷೆಗೂ ಮುನ್ನ ತಂದೆ ಒಂದು ಮಾತು ಕೊಟ್ಟಿದ್ದರಂತೆ — “ನೀನು ರಾಜ್ಯಕ್ಕೆ ಫಸ್ಟ್ ರ್ಯಾಂಕ್ ತಂದರೆ, ನಾನು ನಿನ್ನನ್ನು ಚಿರಂಜೀವಿ ಅವರ ಬಳಿ ಕರೆದುಕೊಂಡು ಹೋಗಿ ಭೇಟಿ ಮಾಡಿಸುತ್ತೇನೆ” ಎಂದು. ತಂದೆಯ ಮಾತನ್ನೇ ಸವಾಲಾಗಿ ಸ್ವೀಕರಿಸಿದ ರುಶಿ, ಹಗಲಿರುಳು ಕಷ್ಟಪಟ್ಟು ಓದಿ ರಾಜ್ಯಕ್ಕೇ ಪ್ರಥಮ ಸ್ಥಾನ ಗಿಟ್ಟಿಸಿಕೊಂಡರು!

ಮಾತು ಉಳಿಸಿದ ಮೆಗಾಸ್ಟಾರ್

ರ್ಯಾಂಕ್ (Rank) ಬಂದ ಮೇಲೆ ಮಗಳಿಗೆ ಕೊಟ್ಟ ಮಾತು ಉಳಿಸಿಕೊಳ್ಳಲು ತಂದೆ ಪರಿಚಿತರ ಮೂಲಕ ಚಿರಂಜೀವಿ ಅವರ ಕಚೇರಿಯನ್ನು ಸಂಪರ್ಕಿಸಿದರು. ವಿಷಯ ತಿಳಿಯುತ್ತಿದ್ದಂತೆ ಮೆಗಾಸ್ಟಾರ್ ತಡ ಮಾಡಲಿಲ್ಲ. ಕೂಡಲೇ ಆ ಯುವತಿ ಮತ್ತು ಅವರ ಹೆತ್ತವರನ್ನು ಹೈದರಾಬಾದ್‌ನ ತಮ್ಮ ನಿವಾಸಕ್ಕೆ ಆಹ್ವಾನಿಸಿದರು.

ಮನೆಗೆ ಬಂದ ರುಶಿ ಮತ್ತು ಅವರ ಪೋಷಕರನ್ನು ಚಿರಂಜೀವಿ ಆತ್ಮೀಯವಾಗಿ ಬರಮಾಡಿಕೊಂಡರು. ಯುವತಿಯ ಅದ್ಭುತ ಸಾಧನೆಯನ್ನು ಕೊಂಡಾಡಿದ ಅವರು, ಶಾಲು ಹೊದಿಸಿ ಸನ್ಮಾನಿಸಿದರು. ಅಷ್ಟೇ ಅಲ್ಲದೆ, ಮುಂದಿನ ಉನ್ನತ ವಿದ್ಯಾಭ್ಯಾಸಕ್ಕೆ (ಎಂಜಿನಿಯರಿಂಗ್ ಹಾಗೂ ಐಎಎಸ್ ಕನಸಿಗೆ) ನೆರವಾಗಲೆಂದು ಒಂದು ದುಬಾರಿ ಲ್ಯಾಪ್‌ಟಾಪ್ ಅನ್ನು ಉಡುಗೊರೆಯಾಗಿ ನೀಡಿದರು.

“ನನ್ನನ್ನು ನಿಮ್ಮ ಮನೆಯ ಹಿರಿಯಣ್ಣ ಅಥವಾ ಕುಟುಂಬದ ಸದಸ್ಯನಂತೆ ಭಾವಿಸಿ. ಮುಂದಿನ ದಿನಗಳಲ್ಲಿ ಯಾವುದೇ ಸಹಾಯ ಬೇಕಿದ್ದರೂ ಮುಜುಗರವಿಲ್ಲದೆ ಕೇಳಿ” ಎಂದು ಚಿರಂಜೀವಿ ಆ ಕುಟುಂಬಕ್ಕೆ ಧೈರ್ಯ ತುಂಬಿದ್ದಾರೆ.

ಬ್ಯಾಕ್ ಟು ಬ್ಯಾಕ್ ಸಿನಿಮಾಗಳಲ್ಲಿ ಚಿರು ಬ್ಯುಸಿ

ಒಂದೆಡೆ ಸಾಮಾಜಿಕ ಕಾರ್ಯ ಹಾಗೂ ಅಭಿಮಾನಿಗಳ ಭೇಟಿಯಲ್ಲಿ ತೊಡಗಿಸಿಕೊಂಡಿರುವ ಚಿರಂಜೀವಿ, ಮತ್ತೊಂದೆಡೆ ಸಿನಿಮಾಗಳಲ್ಲೂ ಸಖತ್ ಬ್ಯುಸಿಯಾಗಿದ್ದಾರೆ.

  • ವಿಶ್ವಂಭರ: ಇವರ ಬಹುನಿರೀಕ್ಷಿತ ಸೋಸಿಯೋ-ಫ್ಯಾಂಟಸಿ ಸಿನಿಮಾ ‘ವಿಶ್ವಂಭರ’ ಶೀಘ್ರದಲ್ಲೇ ತೆರೆಗೆ ಬರಲು ಸಜ್ಜಾಗಿದೆ.

  • ಹೊಸ ಪ್ರಾಜೆಕ್ಟ್‌ಗಳು: ಇತ್ತೀಚೆಗಷ್ಟೇ ಕೆವಿಎನ್ ಪ್ರೊಡಕ್ಷನ್ಸ್ (KVN Productions) ಅಡಿಯಲ್ಲಿ ಇವರ ಹೊಸ ಚಿತ್ರ ಮುಹೂರ್ತ ಕಂಡಿದೆ. ಇದರೊಂದಿಗೆ ನ್ಯಾಚುರಲ್ ಸ್ಟಾರ್ ನಾನಿ ನಿರ್ಮಾಣದ ಮತ್ತೊಂದು ಚಿತ್ರದಲ್ಲೂ ಮೆಗಾಸ್ಟಾರ್ ನಟಿಸುತ್ತಿದ್ದಾರೆ.

ಎಷ್ಟೇ ದೊಡ್ಡ ಸ್ಟಾರ್ ಆದರೂ ತಳಮಟ್ಟದ ಅಭಿಮಾನಿಗಳ ಆಸೆಗೆ ಸ್ಪಂದಿಸುವ ಚಿರಂಜೀವಿ ಅವರ ಈ ನಡೆ ಈಗ ಎಲ್ಲರ ಹೃದಯ ಗೆಲ್ಲುತ್ತಿದೆ. ಈ ಭೇಟಿಯ ವಿಡಿಯೋಗಳು ಸದ್ಯ ಇಂಟರ್ನೆಟ್‌ನಲ್ಲಿ ಸಖತ್ ವೈರಲ್ ಆಗುತ್ತಿವೆ.

Bengaluru Airport: ಬೆಂಗಳೂರು ಏರ್‌ಪೋರ್ಟ್‌ನಲ್ಲಿ ತಪ್ಪಿದ ಭಾರೀ ವಿಮಾನ ಅವಘಡ: ರನ್‌ವೇಗೆ ತಾಗಿದ ಏರ್ ಇಂಡಿಯಾ ವಿಮಾನದ ಹಿಂಭಾಗ!

0

ಬೆಂಗಳೂರು: ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ (Bengaluru Airport) ಇಂದು (ಮೇ 21, ಗುರುವಾರ) ಬೆಳಗ್ಗೆ ದೆಹಲಿಯಿಂದ ಆಗಮಿಸುತ್ತಿದ್ದ ಏರ್ ಇಂಡಿಯಾ ವಿಮಾನವೊಂದು ಲ್ಯಾಂಡಿಂಗ್ ಆಗುವಾಗ ದೊಡ್ಡದೊಂದು ಅವಘಡದಿಂದ ಕೂದಲೆಳೆ ಅಂತರದಲ್ಲಿ ಪಾರಾಗಿದೆ. ವಿಮಾನದ ಹಿಂಭಾಗದ ತಳಭಾಗ (Tail-strike) ರನ್‌ವೇಗೆ ಅಪ್ಪಳಿಸಿದ್ದು, ಪೈಲಟ್‌ಗಳ ಸಮಯಪ್ರಜ್ಞೆಯಿಂದಾಗಿ ನೂರಾರು ಜೀವಗಳು ಸುರಕ್ಷಿತವಾಗಿವೆ.

ಅಸಲಿಗೆ ನಡೆದಿದ್ದೇನು?

ದೆಹಲಿಯಿಂದ 181 ಪ್ರಯಾಣಿಕರು ಮತ್ತು ಸಿಬ್ಬಂದಿಯನ್ನು ಹೊತ್ತು ಬೆಂಗಳೂರಿಗೆ ಬರುತ್ತಿದ್ದ ಏರ್ ಇಂಡಿಯಾ AI2651 (Airbus A321) ವಿಮಾನವು ಸರಿಯಾಗಿ ಬೆಳಗ್ಗೆ ಕೆಂಪೇಗೌಡ ನಿಲ್ದಾಣದಲ್ಲಿ ಇಳಿಯಲು ಸಿದ್ಧವಾಗುತ್ತಿತ್ತು. ಆದರೆ ಅದೇ ಸಮಯದಲ್ಲಿ ಮತ್ತೊಂದು ದೊಡ್ಡ ವಿಮಾನ (Wide-body aircraft) ಅದೇ ರನ್‌ವೇಯಿಂದ ಟೇಕ್-ಆಫ್ ಆಗಿತ್ತು.

ವಿಮಾನಯಾನ ಭಾಷೆಯಲ್ಲಿ ‘ವೇಕ್ ಟರ್ಬುಲೆನ್ಸ್’ (Wake Turbulence) ಎಂದು ಕರೆಯಲಾಗುವ, ಅಂದರೆ ದೊಡ್ಡ ವಿಮಾನಗಳು ಹಾರಾಟ ನಡೆಸಿದಾಗ ಗಾಳಿಯಲ್ಲಿ ಉಂಟಾಗುವ ತೀವ್ರತರದ ಅಸಮತೋಲನ ಹಾಗೂ ಸುಳಿ ಗಾಳಿಯ ಪರಿಣಾಮವಾಗಿ ಏರ್ ಇಂಡಿಯಾ ವಿಮಾನ ನಿಯಂತ್ರಣ ಕಳೆದುಕೊಳ್ಳುವ ಮುನ್ಸೂಚನೆ ಸಿಕ್ಕಿದೆ.

ವೇಕ್ ಟರ್ಬುಲೆನ್ಸ್ ಎಂದರೇನು? ದೊಡ್ಡ ವಿಮಾನಗಳು ಟೇಕ್-ಆಫ್ ಆಗುವಾಗ ಅಥವಾ ಹಾರಾಡುವಾಗ ರೆಕ್ಕೆಗಳ ಒತ್ತಡದಿಂದಾಗಿ ಗಾಳಿಯಲ್ಲಿ ಜೋರಾದ ಸುಳಿಗಳು ಸೃಷ್ಟಿಯಾಗುತ್ತವೆ. ಇದರ ಹಿಂದೆ ಬರುವ ಸಣ್ಣ ವಿಮಾನಗಳಿಗೆ ಇದು ತೀವ್ರ ಅಡಚಣೆ ಉಂಟುಮಾಡುತ್ತದೆ.

ಪೈಲಟ್ ಸಮಯಪ್ರಜ್ಞೆ:

ಗಾಳಿಯ ಏರುಪೇರನ್ನು ತಕ್ಷಣವೇ ಗಮನಿಸಿದ ಪೈಲಟ್, ಮುನ್ನೆಚ್ಚರಿಕೆ ಕ್ರಮವಾಗಿ ಲ್ಯಾಂಡಿಂಗ್ ಪ್ರಕ್ರಿಯೆಯನ್ನು ಅರ್ಧಕ್ಕೆ ಕೈಬಿಟ್ಟು, ವಿಮಾನವನ್ನು ತಕ್ಷಣವೇ ಮತ್ತೆ ಗಾಳಿಯಲ್ಲಿ ಮೇಲಕ್ಕೆ ಎತ್ತಲು (Go-around manoeuvre) ಯತ್ನಿಸಿದ್ದಾರೆ. ಈ ತರಾತುರಿಯ ಪ್ರಕ್ರಿಯೆಯಲ್ಲಿ ವಿಮಾನದ ಹಿಂಭಾಗದ ತಳಭಾಗವು (Tail) ರನ್‌ವೇಗೆ ಜೋರಾಗಿ ತಾಗಿದೆ. ಆದರೂ ಎದೆಗುಂದದ ಪೈಲಟ್, ವಿಮಾನವನ್ನು ನಿಯಂತ್ರಣಕ್ಕೆ ತಂದು ಕೆಲವೇ ಕ್ಷಣಗಳಲ್ಲಿ ರನ್‌ವೇಯಲ್ಲಿ ಅತ್ಯಂತ ಸುರಕ್ಷಿತವಾಗಿ ಇಳಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಪ್ರಯಾಣಿಕರೆಲ್ಲರೂ ಸೇಫ್:

ವಿಮಾನದಲ್ಲಿದ್ದ ಎಲ್ಲಾ 181 ಪ್ರಯಾಣಿಕರು ಮತ್ತು ಸಿಬ್ಬಂದಿ ಯಾವುದೇ ಗಾಯಗಳಿಲ್ಲದೆ ಸುರಕ್ಷಿತವಾಗಿ ಕೆಳಗೆ ಇಳಿದಿದ್ದಾರೆ. ಘಟನೆಯ ಬೆನ್ನಲ್ಲೇ ಏರ್ ಇಂಡಿಯಾ ಸಂಸ್ಥೆಯು ವಿಮಾನವನ್ನು ಸಂಪೂರ್ಣ ತಾಂತ್ರಿಕ ಪರಿಶೀಲನೆಗೆ ಒಳಪಡಿಸಿದ್ದು, ಸದ್ಯ ಅದನ್ನು ಗ್ರೌಂಡ್ ಮಾಡಲಾಗಿದೆ (ಬಳಕೆಯಿಂದ ದೂರ ಇಡಲಾಗಿದೆ).

ಮುಂದಿನ ವಿಮಾನ ರದ್ದು:

ಈ ಆಕಸ್ಮಿಕ ಅಪಘಾತದ ಪರಿಣಾಮವಾಗಿ, ಅದೇ ವಿಮಾನದ ಮೂಲಕ ಬೆಂಗಳೂರಿನಿಂದ ದೆಹಲಿಗೆ ಮರಳಬೇಕಾಗಿದ್ದ AI2652 ವಿಮಾನದ ಹಾರಾಟವನ್ನು ರದ್ದುಗೊಳಿಸಲಾಗಿದೆ. ಇದರಿಂದಾಗಿ ಪ್ರಯಾಣಿಕರಿಗೆ ಉಂಟಾದ ಅನಾನುಕೂಲಕ್ಕೆ ಏರ್ ಇಂಡಿಯಾ ಸಂಸ್ಥೆ ಕ್ಷಮೆಯಾಚಿಸಿದ್ದು, ಪರ್ಯಾಯ ವಿಮಾನಗಳ ಮೂಲಕ ಅವರ ಪ್ರಯಾಣಕ್ಕೆ ಅನುಕೂಲ ಮಾಡಿಕೊಡಲಾಗುತ್ತಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದೆ.

ಪ್ರಸ್ತುತ ನಾಗರಿಕ ವಿಮಾನಯಾನ ಮಹಾನಿರ್ದೇಶನಾಲಯ (DGCA) ಈ ಘಟನೆಯನ್ನು ಗಂಭೀರವಾಗಿ ಪರಿಗಣಿಸಿದ್ದು, ಅಪಘಾತಕ್ಕೆ ನಿಖರವಾದ ಕಾರಣ ಮತ್ತು ತಾಂತ್ರಿಕ ಅಂಶಗಳ ಕುರಿತು ಅಧಿಕೃತ ತನಿಖೆಯನ್ನು ಆರಂಭಿಸಿದೆ.

Chanakya niti:- ಚಾಣಕ್ಯ ನೀತಿ: ನಿಮ್ಮಲ್ಲಿ ಈ 5 ದೌರ್ಬಲ್ಯಗಳಿದ್ದರೆ ಜನ ನಿಮ್ಮನ್ನು ಬೆರಳ ತುದಿಯಲ್ಲಿ ಕುಣಿಸ್ತಾರೆ, ಎಚ್ಚರ..!

0

Chanakya niti:

ಪ್ರತಿಯೊಬ್ಬ ಮನುಷ್ಯನಿಗೂ ಭಗವಂತ ಸ್ವಂತ ಬುದ್ಧಿ, ಆಲೋಚನಾ ಶಕ್ತಿಯನ್ನು ಕೊಟ್ಟಿರುತ್ತಾನೆ. ಆದರೆ ನಮ್ಮ ಸುತ್ತಮುತ್ತಲಿನಲ್ಲಿ ಕೆಲವರನ್ನು ನೀವು ಗಮನಿಸಿರಬಹುದು; ಅವರಿಗೆ ಎಷ್ಟೇ ಜ್ಞಾನವಿದ್ದರೂ, ಯಾವುದೇ ಸಣ್ಣ ನಿರ್ಧಾರ ತೆಗೆದುಕೊಳ್ಳಬೇಕಾದರೂ ಇತರರ ಮುಖ ನೋಡುತ್ತಾರೆ. “ನಾನು ಮಾಡಿದ್ದು ಸರಿಯೋ ತಪ್ಪೋ” ಎಂಬ ಗೊಂದಲದಲ್ಲೇ ಬದುಕುವ ಇವರು, ಮೆಲ್ಲನೆ ಇತರರ ನಿಯಂತ್ರಣಕ್ಕೆ ಸಿಲುಕಿಬಿಡುತ್ತಾರೆ. ಕೊನೆಗೊಮ್ಮೆ ತಮಗೆ ಅರಿವಿಲ್ಲದಂತೆಯೇ ಇತರರ ಕೈಗೊಂಬೆಯಾಗಿ ಬದುಕಬೇಕಾಗುತ್ತದೆ.

ಇದೇ ವಿಷಯದ ಬಗ್ಗೆ ಮಹಾನ್ ರಾಜತಾಂತ್ರಿಕ ಆಚಾರ್ಯ ಚಾಣಕ್ಯರು (Acharya Chanakya) ತಮ್ಮ ಚಾಣಕ್ಯ ನೀತಿಯಲ್ಲಿ ದೀರ್ಘವಾಗಿ ಎಚ್ಚರಿಸಿದ್ದಾರೆ. ನಮ್ಮಲ್ಲಿರುವ ಕೆಲವೊಂದು ಕೆಟ್ಟ ಅಭ್ಯಾಸಗಳು ಮತ್ತು ದೌರ್ಬಲ್ಯಗಳೇ (Weaknesses) ಇತರರು ನಮ್ಮ ಮೇಲೆ ಸವಾರಿ ಮಾಡಲು ರಹದಾರಿ ಮಾಡಿಕೊಡುತ್ತವೆ ಎಂದು ಅವರು ಹೇಳುತ್ತಾರೆ. ಹಾಗಾದರೆ, ಜನ ನಮ್ಮನ್ನು ಅವರ ತಾಳಕ್ಕೆ ತಕ್ಕಂತೆ ಕುಣಿಸಲು ನಮ್ಮಲ್ಲಿರುವ ಯಾವ ಗುಣಗಳು ಕಾರಣ? ತಕ್ಷಣ ನಾವು ಬದಲಾಯಿಸಿಕೊಳ್ಳಬೇಕಾದ ಆ 5 ಅಭ್ಯಾಸಗಳು ಯಾವುವು? ಇಲ್ಲಿದೆ ನೋಡಿ ಕಂಪ್ಲೀಟ್ ಡಿಟೇಲ್ಸ್.

1. ಆತ್ಮವಿಶ್ವಾಸದ ಕೊರತೆ (Lack of Confidence)

ಚಾಣಕ್ಯರ ಪ್ರಕಾರ, ಯಾರಲ್ಲಿ ಆತ್ಮವಿಶ್ವಾಸದ ಕೊರತೆ ಇರುತ್ತದೆಯೋ ಅವರು ಜೀವನದ ಪ್ರಮುಖ ನಿರ್ಧಾರಗಳನ್ನು ಸ್ವತಂತ್ರವಾಗಿ ತೆಗೆದುಕೊಳ್ಳಲು ತಡಕಾಡುತ್ತಾರೆ. ಪ್ರತಿಯೊಂದು ಸಣ್ಣ-ದೊಡ್ಡ ವಿಷಯಕ್ಕೂ ಬೇರೆಯವರ ಸಲಹೆ, ಒಪ್ಪಿಗೆಗಾಗಿ ಕಾಯುತ್ತಿರುತ್ತಾರೆ. ಹೀಗೆ ಪದೇ ಪದೇ ಮಾಡುತ್ತಿದ್ದರೆ, ಎದುರಿಗಿರುವವರು ನಿಮ್ಮ ಈ ದೌರ್ಬಲ್ಯವನ್ನು ಮೌನವಾಗಿ ಗಮನಿಸುತ್ತಿರುತ್ತಾರೆ ಮತ್ತು ಸಮಯ ಬಂದಾಗ ಅದನ್ನು ತಮ್ಮ ಸ್ವಾರ್ಥಕ್ಕೆ ಬಳಸಿಕೊಳ್ಳಲು ಶುರುಮಾಡುತ್ತಾರೆ. ಆತ್ಮವಿಶ್ವಾಸ ಕಳೆದುಕೊಂಡಾಗ ಮನುಷ್ಯ ಮಾನಸಿಕವಾಗಿಯೂ ದುರ್ಬಲನಾಗುತ್ತಾನೆ. ಇದು ಬೇರೆಯವರು ನಿಮ್ಮ ಜೀವನವನ್ನು ಕಂಟ್ರೋಲ್ ಮಾಡಲು ಮೊದಲ ಹೆಜ್ಜೆಯಾಗುತ್ತದೆ.

2. ಎಲ್ಲರನ್ನೂ ಮೆಚ್ಚಿಸುವ ಹುಚ್ಚು (People Pleasing Habit)

ಕೆಲವರಿಗೆ ಜಗತ್ತಿನಲ್ಲಿರುವ ಎಲ್ಲರನ್ನೂ ಮೆಚ್ಚಿಸಬೇಕು, ಎಲ್ಲರ ದೃಷ್ಟಿಯಲ್ಲೂ ತಾವು ಒಳ್ಳೆಯವರಾಗಿರಬೇಕು ಎಂಬ ಹಠವಿರುತ್ತದೆ. ಇದಕ್ಕಾಗಿ ಅವರು ಯಾರಿಗೂ, ಯಾವುದೇ ಪರಿಸ್ಥಿತಿಯಲ್ಲೂ ‘ಇಲ್ಲ’ (No) ಎಂದು ಹೇಳುವುದೇ ಇಲ್ಲ. ಆಚಾರ್ಯ ಚಾಣಕ್ಯರ ಪ್ರಕಾರ, ಈ ಪ್ರವೃತ್ತಿ ಮನುಷ್ಯನನ್ನು ಒಳಗಿನಿಂದ ಸಂಪೂರ್ಣವಾಗಿ ಕುಗ್ಗಿಸಿಬಿಡುತ್ತದೆ. ಇತರರ ಸಂತೋಷಕ್ಕಾಗಿ ನಿರಂತರವಾಗಿ ಯೋಚಿಸುವ ವ್ಯಕ್ತಿ, ತನ್ನ ಸ್ವಂತ ಆಸೆ, ಅಗತ್ಯತೆ ಮತ್ತು ನೆಮ್ಮದಿಯನ್ನು ಮರೆತುಬಿಡುತ್ತಾನೆ. ನೀವು ಎಲ್ಲದಕ್ಕೂ ‘ಹೂಂ’ ಅಂದರೆ, ಜನ ನಿಮ್ಮನ್ನು ತುಂಬಾ ಸುಲಭವಾಗಿ ಬಳಸಿಕೊಳ್ಳಲು ಆರಂಭಿಸುತ್ತಾರೆ. ನೆನಪಿಡಿ, ನೀವು ಬದುಕುತ್ತಿರುವುದು ನಿಮಗಾಗಿ, ಜಗತ್ತನ್ನು ಮೆಚ್ಚಿಸುವುದಕ್ಕಲ್ಲ!

3. ನಿರಂತರ ಭಯ ಮತ್ತು ಅಭದ್ರತೆಯ ಭಾವನೆ

ನಾವು ಎಲ್ಲಿ ಸೋತುಹೋಗುತ್ತೇವೋ, ಒಂಟಿಯಾಗಿಬಿಡುತ್ತೇವೋ ಅಥವಾ ನಮ್ಮ ಪ್ರೀತಿಪಾತ್ರರು ನಮ್ಮಿಂದ ದೂರಾಗುತ್ತಾರೋ ಎಂಬ ನಿರಂತರ ಭಯ ಕೆಲವರನ್ನು ಕಾಡುತ್ತಿರುತ್ತದೆ. ಈ ಭಯದಿಂದಾಗಿಯೇ ಅವರು ಎದುರಿನವರು ಹೇಳುವ ಪ್ರತಿಯೊಂದು ಮಾತಿಗೂ ತಲೆಯಾಡಿಸುತ್ತಾರೆ. ಚಾಣಕ್ಯರ ಪ್ರಕಾರ, ಸದಾ ಭಯದಲ್ಲೇ ಬದುಕುವ ವ್ಯಕ್ತಿ ಎಂದಿಗೂ ಸ್ವತಂತ್ರವಾಗಿ ಯೋಚಿಸಲು ಸಾಧ್ಯವಿಲ್ಲ. ಅವರು ತಮ್ಮ ಹಕ್ಕುಗಳಿಗಾಗಿ ಧ್ವನಿ ಎತ್ತಲು ಕೂಡ ಹಿಂಜರಿಯುತ್ತಾರೆ. ಇದೇ ಭಯ ಕ್ರಮೇಣ ಅವರನ್ನು ಇತರರ ಕೈಗೊಂಬೆಯನ್ನಾಗಿ ಮಾಡುತ್ತದೆ.

4. ತಪ್ಪು ಸಹವಾಸ ಮತ್ತು ಸ್ವಾರ್ಥಿಗಳ ಸ್ನೇಹ

“ಒಬ್ಬ ಮನುಷ್ಯ ಎಂಥವನು ಎಂದು ತಿಳಿಯಬೇಕಾದರೆ ಆತನ ಸ್ನೇಹಿತರನ್ನು ನೋಡು” ಎಂಬ ಮಾತಿದೆ. ಚಾಣಕ್ಯರ ಪ್ರಕಾರ, ಕುತಂತ್ರ ಮತ್ತು ಸ್ವಾರ್ಥ ಸ್ವಭಾವದ ಜನರ ಸ್ನೇಹ ಮಾಡಿದರೆ, ಅದು ನಮ್ಮ ಯೋಚನಾ ಶಕ್ತಿಯನ್ನೇ ಮಸುಕಾಗಿಸಿಬಿಡುತ್ತದೆ. ಇಂತಹ ಸ್ವಾರ್ಥಿ ಜನರು ಹೆಚ್ಚಾಗಿ ದುರ್ಬಲ ಮನಸ್ಸಿನವರನ್ನು ಹುಡುಕಿ, ಅವರ ಮುಗ್ಧತೆಯನ್ನು ತಮ್ಮ ಸ್ವಂತ ಲಾಭಕ್ಕಾಗಿ ದಾಳವಾಗಿ ಬಳಸಿಕೊಳ್ಳುತ್ತಾರೆ. ಹಾಗಾಗಿ, ಯಾರ ಜೊತೆ ಸ್ನೇಹ ಮಾಡುತ್ತಿದ್ದೇವೆ ಎಂಬ ಜಾಗರೂಕತೆ ಅತ್ಯಗತ್ಯ.

5. ತಮಗಾಗಿ ಬದುಕಲು ಹಿಂಜರಿಯುವುದು (ಕೀಳರಿಮೆ)

ಯಾವಾಗ ಒಬ್ಬ ವ್ಯಕ್ತಿ ತನ್ನ ಕನಸುಗಳಿಗೆ, ತನ್ನ ಆಲೋಚನೆಗಳಿಗೆ ಬೆಲೆ ಕೊಡುವುದನ್ನು ನಿಲ್ಲಿಸುತ್ತಾನೋ, ಆಗ ಆತನ ಜೀವನದ ರಿಮೋಟ್ ಕಂಟ್ರೋಲ್ ಬೇರೆಯವರ ಕೈಗೆ ಸೇರುತ್ತದೆ. ತನ್ನನ್ನು ತಾನು ಇತರರಿಗಿಂತ ಕೀಳಾಗಿ ಕಾಣುವವರು (Inferiority Complex) ತುಂಬಾ ಬೇಗನೆ ಇತರರ ಪ್ರಭಾವಕ್ಕೆ ಮತ್ತು ನಿಯಂತ್ರಣಕ್ಕೆ ಒಳಗಾಗುತ್ತಾರೆ. ಪ್ರತಿಯೊಬ್ಬ ವ್ಯಕ್ತಿಯೂ ತನ್ನದೇ ಆದ ಗುರುತು (Identity) ಮತ್ತು ಸ್ವಾಭಿಮಾನವನ್ನು ಕಾಪಾಡಿಕೊಳ್ಳುವುದು ಅತಿ ಮುಖ್ಯ ಎನ್ನುತ್ತದೆ ಚಾಣಕ್ಯ ನೀತಿ.

ಬದಲಾವಣೆಯ ಮಂತ್ರ: ಇತರರು ನಮ್ಮನ್ನು ಆಳಬಾರದು ಎಂದರೆ, ಮೊದಲು ನಾವು ನಮ್ಮ ಸಾಮರ್ಥ್ಯದ ಮೇಲೆ ನಂಬಿಕೆ ಇಡಬೇಕು. ಸ್ವಂತ ನಿರ್ಧಾರಗಳನ್ನು ತೆಗೆದುಕೊಳ್ಳುವ ಧೈರ್ಯ ತೋರಬೇಕು. ತಪ್ಪು ನಿರ್ಧಾರಗಳಿಂದ ಪಾಠ ಕಲಿಯಬಹುದೇ ಹೊರತು, ನಿರ್ಧಾರಗಳನ್ನೇ ತೆಗೆದುಕೊಳ್ಳದೆ ಬದುಕಿದರೆ ಗುಲಾಮರಾಗಬೇಕಾಗುತ್ತದೆ ಎಂಬುದು ಚಾಣಕ್ಯರ ಕಟು ಸತ್ಯ ನುಡಿ.

ನಿಮ್ಮಲ್ಲಿಯೂ ಈ ಮೇಲಿನ ಯಾವುದಾದರೂ ಸ್ವಭಾವಗಳಿವೆಯೇ? ಇಂದೇ ಅವುಗಳನ್ನು ಬದಲಾಯಿಸಿಕೊಳ್ಳಿ, ಸ್ವಾವಲಂಬಿ ಜೀವನ ನಡೆಸಿ!

Stay connected

0FansLike
0FollowersFollow
0SubscribersSubscribe
- Advertisement -
Google search engine

Latest article

Chikkaballapur City Municipal Council faces heavy backlash from Ward 10 residents:- ಹೊರಗೆ ಕೊಳಕು, ಒಳಗೆ...

0
ಚಿಕ್ಕಬಳ್ಳಾಪುರ: "ಹೊರಗೆ ಚಂದ, ಒಳಗೆ ಕೊಳಕು" ಎನ್ನುವ ಮಾತು ಸದ್ಯ ಚಿಕ್ಕಬಳ್ಳಾಪುರ ನಗರಸಭೆಯ (Chikkaballapur City Municipal Council) ಕಾರ್ಯವೈಖರಿಗೆ ಅಚ್ಚುಕಟ್ಟಾಗಿ ಅನ್ವಯಿಸುವಂತಿದೆ. ಇಡೀ ನಗರವನ್ನು ಸ್ವಚ್ಛವಾಗಿಡಬೇಕಾದ ಅಧಿಕಾರಿಗಳು, ಕೇವಲ ಜಿಲ್ಲಾಧಿಕಾರಿಗಳ (DC)...

India’s economy bounces back with an 8.3% GST growth; FM Sitharaman:- ಭಾರತದ ಆರ್ಥಿಕತೆಗೆ ಜಾಗತಿಕ...

0
ಇತ್ತೀಚಿನ ದಿನಗಳಲ್ಲಿ ಭಾರತದ ಆರ್ಥಿಕತೆಯ ಏರಿಳಿತಗಳ ಬಗ್ಗೆ ಸಾಕಷ್ಟು ಚರ್ಚೆಗಳು ನಡೆಯುತ್ತಿವೆ. ಆದರೆ, "ನಮ್ಮ ದೇಶದ ಆರ್ಥಿಕ ಸವಾಲುಗಳಿಗೆ (India's economy) ಆಂತರಿಕ ಕಾರಣಗಳಿಗಿಂತ ಜಾಗತಿಕ ವಿದ್ಯಮಾನಗಳೇ ಮುಖ್ಯ ಕಾರಣ" ಎಂದು ಕೇಂದ್ರ...

Crude Oil demand will not gets down.? ಇವಿ, ಸೋಲಾರ್ ಯುಗದಲ್ಲೂ ಕಚ್ಚಾ ತೈಲಕ್ಕೆ ಯಾಕಿಷ್ಟು ಡಿಮ್ಯಾಂಡ್?...

0
ಇತ್ತೀಚಿನ ದಿನಗಳಲ್ಲಿ ಜಗತ್ತು ಹಸಿರು ಇಂಧನ (Green Energy), ಸೌರಶಕ್ತಿ ಮತ್ತು ಎಲೆಕ್ಟ್ರಿಕ್ ವಾಹನಗಳ (EV) ಕಡೆಗೆ ವೇಗವಾಗಿ ಹೆಜ್ಜೆ ಇಡುತ್ತಿರುವುದನ್ನು ನಾವು ಕಾಣುತ್ತಿದ್ದೇವೆ. ಹವಾಮಾನ ಬದಲಾವಣೆಯ ಆತಂಕದಿಂದಾಗಿ ಪೆಟ್ರೋಲ್-ಡೀಸೆಲ್ ಬಳಕೆ ಕಡಿಮೆ...