Ayodhya Ram Mandir:- ಅಯೋಧ್ಯೆ ರಾಮ ಮಂದಿರದಲ್ಲಿ ಕೋಟಿ ಕೋಟಿ ಲೂಟಿ: 500 ರೂಪಾಯಿಯಿಂದ ಶುರುವಾಗಿ 3 ಕೋಟಿಗೆ ನಿಂತ ಕಳ್ಳತನದ ರೋಚಕ ಕಥೆ.!

ದೇಶದ ಅತ್ಯಂತ ಭದ್ರತೆಯ ಧಾರ್ಮಿಕ ಕ್ಷೇತ್ರಗಳಲ್ಲಿ ಒಂದಾದ ಅಯೋಧ್ಯೆಯ ಶ್ರೀರಾಮ ಮಂದಿರದ ಹುಂಡಿ ಹಣ ಕಳ್ಳತನ (Ayodhya Ram Mandir Donation Theft Case) ಪ್ರಕರಣ ದಿನಕ್ಕೊಂದು ತಿರುವು ಪಡಿತಾ ಇದೆ. ಭಕ್ತರು ಶ್ರದ್ಧೆ, ಭಕ್ತಿಯಿಂದ ರಾಮನಿಗೆ ಅರ್ಪಿಸಿದ ಕೋಟಿ ಕೋಟಿ ಹಣವನ್ನು ಲೂಟಿ ಮಾಡಿದ ಖದೀಮರ ಜಾಲ ಈಗ ಸಂಪೂರ್ಣವಾಗಿ ಬಯಲಾಗಿದೆ. ಈ ಮಹಾ ಹಗರಣದಲ್ಲಿ ಈಗಾಗಲೇ ಬಂಧಿತರಾಗಿರುವ ಎಂಟು ಆರೋಪಿಗಳ ಪೈಕಿ ನಾಲ್ವರು ಪೊಲೀಸರ ಮುಂದೆ ತಮ್ಮ ಪಾಪದ ಕೃತ್ಯವನ್ನು ಒಪ್ಪಿಕೊಂಡಿದ್ದಾರೆ. ಅಷ್ಟೇ ಅಲ್ಲ, ಅವರು ಕದ್ದ ಹಣವನ್ನು ಹೇಗೆ ಅಡಗಿಸುತ್ತಿದ್ದರು ಎನ್ನುವ ಪ್ಲ್ಯಾನ್ ಕೇಳಿ ಪೊಲೀಸರೇ ಶಾಕ್ ಆಗಿದ್ದಾರೆ!

ಶುರುವಾಗಿದ್ದು 500 ರೂಪಾಯಿಯಿಂದ… ಮುಗಿದಿದ್ದು 3 ಕೋಟಿಗೆ!

ಕೋರ್ಟ್ ಅನುಮತಿ ಮೇರೆಗೆ ಜೈಲಿನಲ್ಲೇ ಆರೋಪಿಗಳಾದ ಅನುಕಲ್ಪ್ ಮಿಶ್ರಾ, ಲವಕುಶ ಮಿಶ್ರಾ ಮತ್ತು ಕರುಣೇಶ್ ಪಾಂಡೆಯನ್ನು ಪೊಲೀಸರು ತೀವ್ರ ವಿಚಾರಣೆಗೆ ಒಳಪಡಿಸಿದ್ದರು. ಇದಕ್ಕೂ ಮುನ್ನ ಮತ್ತೊಬ್ಬ ಆರೋಪಿ ಅವಿನಾಶ್ ಶುಕ್ಲಾ ಕೂಡ ತಪ್ಪು ಒಪ್ಪಿಕೊಂಡಿದ್ದ. ವಿಚಾರಣೆ ವೇಳೆ ಇವರು ಬಾಯಿಬಿಟ್ಟ ಸತ್ಯಗಳು ನಿಜಕ್ಕೂ ಬೆಚ್ಚಿಬೀಳಿಸುವಂತಿವೆ.

ಇವರು ಆರಂಭದಲ್ಲಿ ಹುಂಡಿಯಿಂದ ಕೇವಲ 500 ರೂಪಾಯಿ ಕದಿಯುವ ಮೂಲಕ ತಮ್ಮ ಕೈಚಳಕ ಶುರು ಮಾಡಿದ್ದರು. ಯಾರೂ ಗಮನಿಸುತ್ತಿಲ್ಲ ಎಂಬುದು ಖಾತರಿಯಾಗುತ್ತಿದ್ದಂತೆ ಇವರ ಧೈರ್ಯ ಹೆಚ್ಚಾಯಿತು. ದಿನ ಕಳೆದಂತೆ ನೂರಾರು, ಸಾವಿರಾರು ರೂಪಾಯಿ ಕದಿಯುತ್ತಿದ್ದವರು, ಕೊನೆಗೆ ಕೋಟಿ ಕೋಟಿ ರೂಪಾಯಿ ಹಣವನ್ನೇ ಎಗರಿಸಲು ಶುರು ಮಾಡಿದರು. ಹೀಗೆ ಇವರು ಲೂಟಿ ಮಾಡಿದ ಒಟ್ಟು ಮೊತ್ತ ಬರೋಬ್ಬರಿ 3 ಕೋಟಿ ರೂಪಾಯಿ!

ಕಳ್ಳತನಕ್ಕೆ ಇತ್ತು ನಕಲಿ ಕೀ ಹಾಗೂ ‘ಒಳಗಿನವರ’ ಸಾಥ್

ರಾಮ ಮಂದಿರದ ಭದ್ರತೆಯನ್ನು ದಾಟಿ ಇಷ್ಟೊಂದು ದೊಡ್ಡ ಮಟ್ಟದ ಕಳ್ಳತನ ಮಾಡಲು ಇವರಿಗೆ ಒಳಗಿನವರೇ ಸಾಥ್ ನೀಡಿದ್ದರು. ಟಿನ್ನು ಯಾದವ್ ಮತ್ತು ಮೇಲ್ವಿಚಾರಣೆಯಲ್ಲಿದ್ದ ಸುಭಾಷ್ ಶ್ರೀವಾಸ್ತವ್ ಎಂಬುವವರ ಸಹಕಾರದಿಂದಲೇ ಈ ಕಳ್ಳತನ ಸಲೀಸಾಗಿ ನಡೆಯುತ್ತಿತ್ತು. ಟಿನ್ನು ಯಾದವ್ ಬಳಿ ಹುಂಡಿ ಎಣಿಕೆ ಕೇಂದ್ರದ ಅಸಲಿ ಕೀ ಇರುತ್ತಿತ್ತು. ಇದನ್ನು ಬಳಸಿಕೊಂಡು ಆರೋಪಿಗಳು ಯಾರಿಗೂ ಸಂಶಯ ಬಾರದಂತೆ ಹಣವನ್ನು ನುಂಗುತ್ತಿದ್ದರು.

ಕದ್ದ ಹಣ ಅಡಗಿಸಲು ಫ್ರೆಂಡ್ಸ್, ರಿಲೇಟಿವ್ಸ್ ಅಕೌಂಟ್ ಬಳಕೆ!

ಕೋಟಿ ಕೋಟಿ ಕದ್ದ ಹಣವನ್ನು ಒಂದೇ ಕಡೆ ಇಟ್ಟರೆ ಸಿಕ್ಕಿಬೀಳುತ್ತೇವೆ ಎಂಬ ಭಯ ಆರೋಪಿಗಳಿಗಿತ್ತು. ಇದಕ್ಕಾಗಿಯೇ ಇವರು ಒಂದು ಮಾಸ್ಟರ್ ಪ್ಲ್ಯಾನ್ ಮಾಡಿದ್ದರು:

ಕದ್ದ ಹಣದ ಮೂಲ ಯಾರಿಗೂ ತಿಳಿಯದಂತೆ ಮಾಡಲು, ಆ ಹಣವನ್ನು ಮೊದಲು ತಮ್ಮ ಸ್ನೇಹಿತರು ಮತ್ತು ಸಂಬಂಧಿಕರಿಗೆ ನಗದಾಗಿ ನೀಡುತ್ತಿದ್ದರು.

ಬಳಿಕ ಅವರಿಂದ ಬೇರೆ ಬೇರೆ ಬ್ಯಾಂಕ್ ಖಾತೆಗಳ ಮೂಲಕ ಆನ್‌ಲೈನ್‌ನಲ್ಲಿ ವರ್ಗಾವಣೆ ಮಾಡಿಸಿಕೊಳ್ಳುತ್ತಿದ್ದರು.

ಈ ವ್ಯವಸ್ಥಿತ ಜಾಲದ ಮೂಲಕ ಕಪ್ಪು ಹಣವನ್ನು ಬಿಳಿ ಮಾಡಲು ಸಂಚು ರೂಪಿಸಿದ್ದರು.

ಟ್ವಿಸ್ಟ್ ಮೇಲೆ ಟ್ವಿಸ್ಟ್: ಭಕ್ತರಿಗೆ ನಕಲಿ ರಶೀದಿ!

ಹುಂಡಿ ಹಣ ಕದಿಯುವುದಷ್ಟೇ ಅಲ್ಲದೆ, ರಾಮನ ದರ್ಶನಕ್ಕೆ ಬಂದು ದೇಣಿಗೆ ನೀಡುತ್ತಿದ್ದ ನಿರಪರಾಧಿ ಭಕ್ತರಿಗೂ ಇವರು ಟೋಪಿ ಹಾಕಿದ್ದಾರೆ. ಭಕ್ತರಿಂದ ಹಣ ಪಡೆದು ಅವರಿಗೆ ನಕಲಿ ರಶೀದಿಗಳನ್ನು ನೀಡುತ್ತಿದ್ದರು. ಆ ಹಣ ನೇರವಾಗಿ ಮಂದಿರದ ಟ್ರಸ್ಟ್‌ಗೆ ಹೋಗುವ ಬದಲು ಇವರ ಜೇಬು ಸೇರುತ್ತಿತ್ತು. ಸದ್ಯ ಪೊಲೀಸರು ಈ ನಕಲಿ ರಶೀದಿಗಳನ್ನು ವಶಪಡಿಸಿಕೊಂಡಿದ್ದಾರೆ.

30 ಬ್ಯಾಂಕ್ ಖಾತೆಗಳು ಫ್ರೀಜ್, ಮಾವನ ಮನೆಯಿಂದ ಮದುವೆ ಕ್ಯಾನ್ಸಲ್!

ಪ್ರಕರಣದ ತನಿಖೆಯನ್ನು ಮತ್ತಷ್ಟು ತೀವ್ರಗೊಳಿಸಿರುವ ಪೊಲೀಸರು, ಆರೋಪಿಗಳ ಕುಟುಂಬಸ್ಥರು ಹಾಗೂ ಸ್ನೇಹಿತರ ಸುಮಾರು 30 ಬ್ಯಾಂಕ್ ಖಾತೆಗಳನ್ನು ಫ್ರೀಜ್ ಮಾಡಿದ್ದಾರೆ. ಈ ಖಾತೆಗಳಲ್ಲಿ ಆದಾಯಕ್ಕಿಂತ ಹತ್ತಾರು ಪಟ್ಟು ಹೆಚ್ಚು ಮೊತ್ತದ ವ್ಯವಹಾರಗಳು ನಡೆದಿರುವುದು ಪ್ರಾಥಮಿಕ ತನಿಖೆಯಲ್ಲಿ ಬೆಳಕಿಗೆ ಬಂದಿದೆ.

ಇನ್ನು ಈ ಪ್ರಕರಣದ ಪ್ರಮುಖ ಆರೋಪಿ ಅವಿನಾಶ್ ಮಿಶ್ರಾ ಕಥೆಯಂತೂ ಸಂಪೂರ್ಣ ಹದಗೆಟ್ಟಿದೆ. ತಾನು ಕದ್ದ ಹಣದಲ್ಲಿ ತನ್ನ ನಿಶ್ಚಿತಾರ್ಥವಾಗಿದ್ದ ಹುಡುಗಿಗೆ ದುಬಾರಿ ಐಫೋನ್ (iPhone) ಉಡುಗೊರೆಯಾಗಿ ನೀಡಿದ್ದನಂತೆ. ಅಷ್ಟೇ ಅಲ್ಲ, ಆಕೆಯ ಬ್ಯಾಂಕ್ ಖಾತೆಗೆ 2 ಲಕ್ಷಕ್ಕೂ ಹೆಚ್ಚು ಹಣವನ್ನು ಟ್ರಾನ್ಸ್‌ಫರ್ ಮಾಡಿದ್ದ. ವಿಷಯ ಯಾವಾಗ ಪೊಲೀಸ್ ಸ್ಟೇಷನ್ ಮೆಟ್ಟಿಲೇರಿತೋ, ಮಗಳ ಭವಿಷ್ಯ ಮುಖ್ಯ ಎಂದು ಯುವತಿಯ ಕುಟುಂಬಸ್ಥರು ಈತನೊಂದಿಗಿನ ಮದುವೆಯನ್ನೇ ರದ್ದುಗೊಳಿಸಿದ್ದಾರೆ!

ಸದ್ಯ ಪೊಲೀಸರು ಇಡೀ ನೆಟ್‌ವರ್ಕ್ ಅನ್ನು ಜಾಲಾಡುತ್ತಿದ್ದು, ಈ ಹಗರಣದಲ್ಲಿ ಇನ್ನೂ ಯಾರ್ಯಾರು ಭಾಗಿಯಾಗಿದ್ದಾರೆ ಎನ್ನುವುದನ್ನು ಪತ್ತೆ ಹಚ್ಚುತ್ತಿದ್ದಾರೆ. ಭಕ್ತರ ನಂಬಿಕೆಗೆ ದ್ರೋಹ ಬಗೆದ ಈ ಕಳ್ಳರಿಗೆ ಕಾನೂನು ತಕ್ಕ ಶಾಸ್ತಿ ಮಾಡುವುದಂತೂ ಗ್ಯಾರಂಟಿ.

Related Articles

LEAVE A REPLY

Please enter your comment!
Please enter your name here

Stay Connected

0FansLike
0FollowersFollow
0SubscribersSubscribe
- Advertisement -spot_img

Latest Articles