Muddenahalli Madhusudan sai Hospital:
ಛತ್ತೀಸ್ಗಢ ಮೂಲದ ಗೌರವ್ ಶರ್ಮಾ ಅವರ ಮೂರೂವರೆ ವರ್ಷದ ಮಗಳು ಶಿವಾಂಗಿ ಶರ್ಮಾ, 2025ರಲ್ಲಿ ಜನ್ಮಜಾತ ಹೃದಯ ಕಾಯಿಲೆಗೆ (Congenital Heart Disease) ಶಸ್ತ್ರಚಿಕಿತ್ಸೆಗೊಳಗಾಗಿದ್ದಳು. ಆದರೆ ಆ ಸರ್ಜರಿಯ ನಂತರ ಉಂಟಾದ ಕೆಲವು ಆರೋಗ್ಯ ಏರುಪೇರುಗಳಿಂದಾಗಿ ಆಕೆಗೆ ದೀರ್ಘಕಾಲದವರೆಗೆ ಉಸಿರಾಟದ ಟ್ಯೂಬ್ ಅಳವಡಿಸಬೇಕಾಗಿ ಬಂದಿತ್ತು.
ಇದರ ಪರಿಣಾಮವಾಗಿ ಮಗುವಿಗೆ ‘ಸಬ್ಗ್ಲೋಟಿಕ್ ಸ್ಟೆನೋಸಿಸ್’ (Subglottic Stenosis) ಎಂಬ ಗಂಭೀರ ಸಮಸ್ಯೆ ಕಾಣಿಸಿಕೊಂಡಿತು. ಅಂದರೆ, ಶ್ವಾಸನಾಳವು ಕಿರಿದಾಗಿ ಸಂಪೂರ್ಣವಾಗಿ ಮುಚ್ಚಿಹೋಗುವ ಸ್ಥಿತಿ ಅದು. ಇದರಿಂದಾಗಿ ಮಗುವಿಗೆ ಸಹಜವಾಗಿ ಉಸಿರಾಡಲು ಸಾಧ್ಯವಾಗದೇ ದಿನವೂ ಜೀವನ್ಮರಣ ಹೋರಾಟ ನಡೆಸುವಂತಾಗಿತ್ತು.

ಸಬ್ಗ್ಲೋಟಿಕ್ ಸ್ಟೆನೋಸಿಸ್ ಎಂದರೇನು? ಧ್ವನಿಪೆಟ್ಟಿಗೆಯ ಕೆಳಭಾಗ ಹಾಗೂ ಶ್ವಾಸನಾಳದ ಮೇಲ್ಭಾಗದ ಭಾಗವು ಕಿರಿದಾಗುವ ಸ್ಥಿತಿಗೆ ಸಬ್ಗ್ಲೋಟಿಕ್ ಸ್ಟೆನೋಸಿಸ್ ಎನ್ನಲಾಗುತ್ತದೆ. ಇದು ಉಸಿರಾಟಕ್ಕೆ ತೀವ್ರ ಅಡ್ಡಿ ಉಂಟುಮಾಡುತ್ತದೆ.
ಕೈಚೆಲ್ಲಿದ್ದ ಆಸ್ಪತ್ರೆಗಳು; ಕೈಹಿಡಿದ ಮುದ್ದೇನಹಳ್ಳಿ
ಮಗಳ ಪರಿಸ್ಥಿತಿ ಕಂಡು ಕಂಗಾಲಾಗಿದ್ದ ಪೋಷಕರು ಚಿಕಿತ್ಸೆಗಾಗಿ ಛತ್ತೀಸ್ಗಢದ ಪ್ರಖ್ಯಾತ ಏಮ್ಸ್ (AIIMS) ಸೇರಿದಂತೆ ದೇಶದ ಹಲವು ದೊಡ್ಡ ದೊಡ್ಡ ಆಸ್ಪತ್ರೆಗಳ ಬಾಗಿಲು ತಟ್ಟಿದ್ದರು. ಆದರೆ, ಕೇಸ್ ಅತ್ಯಂತ ಜಟಿಲವಾಗಿದ್ದರಿಂದ ಶಸ್ತ್ರಚಿಕಿತ್ಸೆ ಮಾಡಲು ವೈದ್ಯರು ಹಿಂದೇಟು ಹಾಕಿದ್ದರು. ಇನ್ನೊಂದೆಡೆ, ಆರ್ಥಿಕವಾಗಿ ತೀರಾ ಹಿಂದುಳಿದಿದ್ದ ಆ ಕುಟುಂಬಕ್ಕೆ ಖಾಸಗಿ ಆಸ್ಪತ್ರೆಗಳ ದುಬಾರಿ ಚಿಕಿತ್ಸಾ ವೆಚ್ಚವನ್ನು ಭರಿಸುವುದು ಅಸಾಧ್ಯದ ಮಾತಾಗಿತ್ತು.
ಇಂತಹ ಕಠಿಣ ಪರಿಸ್ಥಿತಿಯಲ್ಲಿ ಅವರು ಕೊನೆಯ ಭರವಸೆಯಾಗಿ ಬಂದಿದ್ದು ಚಿಕ್ಕಬಳ್ಳಾಪುರ ಜಿಲ್ಲೆಯ ಮುದ್ದೇನಹಳ್ಳಿಯಲ್ಲಿರುವ ಶ್ರೀ ಮಧುಸೂದನ ಸಾಯಿ ವೈದ್ಯಕೀಯ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆಗೆ (SMSIMSSR). ಇಲ್ಲಿನ ತಜ್ಞ ವೈದ್ಯರ ತಂಡ ಈ ಸವಾಲನ್ನು ಅತ್ಯಂತ ಜವಾಬ್ದಾರಿಯಿಂದ ಸ್ವೀಕರಿಸಿತು.
ಅತ್ಯಾಧುನಿಕ ತಂತ್ರಜ್ಞಾನದ ಮೂಲಕ ಮರುನಿರ್ಮಾಣ
ಸಂಪೂರ್ಣ ಮುಚ್ಚಿಹೋಗಿದ್ದ ಮಗುವಿನ ಉಸಿರಾಟದ ನಾಳವನ್ನು ಸರಿಪಡಿಸಲು ವೈದ್ಯರು ಹಂತ ಹಂತವಾಗಿ ಆಧುನಿಕ ವೈದ್ಯಕೀಯ ತಂತ್ರಜ್ಞಾನಗಳನ್ನು ಬಳಸಿಕೊಂಡರು.
-
ಲೇಸರ್ (Laser)
-
ಕೋಬ್ಲೇಷನ್ (Coblation)
-
ಬಲೂನ್ ಡೈಲೇಷನ್ (Balloon Dilation)
-
ಸ್ಟೆಂಟ್ (Stent) ಅಳವಡಿಕೆ
ಈ ಎಲ್ಲಾ ಸುಧಾರಿತ ಎಂಡೋಸ್ಕೋಪಿಕ್ ವಿಧಾನಗಳನ್ನು ಬಳಸಿ ಶ್ವಾಸನಾಳವನ್ನು ಯಶಸ್ವಿಯಾಗಿ ಪುನರ್ ನಿರ್ಮಿಸಲಾಯಿತು. ಮೇ 11ರಂದು ಶ್ವಾಸನಾಳದಲ್ಲಿದ್ದ ಸ್ಟೆಂಟ್ ತೆಗೆಯಲಾಗಿದ್ದು, ನಂತರ ಹಂತ ಹಂತವಾಗಿ ಚಿಕಿತ್ಸೆ ಮುಂದುವರಿಸಿ ಮೇ 18ರಂದು ಟ್ರೇಕಿಯೊಸ್ಟಮಿ ಟ್ಯೂಬ್ ಅನ್ನು ಸಂಪೂರ್ಣವಾಗಿ ಹೊರತೆಗೆಯಲಾಯಿತು. ಈಗ ಪುಟಾಣಿ ಶಿವಾಂಗಿ ಯಾವುದೇ ತೊಂದರೆಯಿಲ್ಲದೆ ಸಹಜವಾಗಿ ಉಸಿರಾಡುತ್ತಿದ್ದಾಳೆ ಹಾಗೂ ಮುದ್ದಾಗಿ ಮಾತನಾಡುತ್ತಿದ್ದಾಳೆ!
“ಜಗತ್ತಿನ ಕೆಲವೇ ಆಸ್ಪತ್ರೆಗಳಲ್ಲಿ ಇಂತಹ ಸೌಲಭ್ಯವಿದೆ”
ಈ ಅಪರೂಪದ ಸಾಧನೆಯ ಬಗ್ಗೆ ಆಸ್ಪತ್ರೆಯ ಇಎನ್ಟಿ (ENT) ವಿಭಾಗದ ಮುಖ್ಯಸ್ಥರಾದ ಡಾ. ಕೆ. ಬಿ. ಬಾಲಿ ಅವರು ಮಾತನಾಡಿದ್ದಾರೆ:
“ಬಾಲರೋಗಿಗಳಲ್ಲಿ ಸಂಪೂರ್ಣವಾಗಿ ಮುಚ್ಚಿಹೋಗಿರುವ ಉಸಿರಾಟದ ನಾಳವನ್ನು ಎಂಡೋಸ್ಕೋಪಿಕ್ ತಂತ್ರಜ್ಞಾನ ಬಳಸಿ ಮರುನಿರ್ಮಿಸುವುದು ವೈದ್ಯಕೀಯ ಕ್ಷೇತ್ರದಲ್ಲಿ ಅತ್ಯಂತ ವಿರಳ. ಈ ಮಗುವಿಗೆ ನಾವು ಅತ್ಯಂತ ಸಂಕೀರ್ಣವಾದ 5 ಶಸ್ತ್ರಚಿಕಿತ್ಸೆಗಳನ್ನು ಮಾಡಿದ್ದೇವೆ. ಜಗತ್ತಿನ ಕೆಲವೇ ಕೆಲವು ಆಸ್ಪತ್ರೆಗಳಲ್ಲಿ ಮಾತ್ರ ಇಂತಹ ಜಟಿಲ ಸರ್ಜರಿ ಮಾಡುವ ಪರಿಣತಿ ಇರುತ್ತದೆ. ಅದರಲ್ಲೂ ಯಶಸ್ಸಿನ ಪ್ರಮಾಣ ತುಂಬಾ ಕಡಿಮೆ. ಆದರೆ ನಾವು ಮಗುವಿಗೆ ಮರುಜನ್ಮ ನೀಡುವಲ್ಲಿ ಯಶಸ್ವಿಯಾಗಿದ್ದೇವೆ.”

ಬಡವರ ಬದುಕಿಗೆ ಆಶಾಕಿರಣ
ಖಾಸಗಿ ಆಸ್ಪತ್ರೆಗಳಲ್ಲಿ ಈ ಚಿಕಿತ್ಸೆಗೆ ಸುಮಾರು 30 ಲಕ್ಷ ರೂಪಾಯಿ ವೆಚ್ಚವಾಗುತ್ತಿತ್ತು. ಆದರೆ, ʼಒನ್ ವರ್ಲ್ಡ್ ಒನ್ ಫ್ಯಾಮಿಲಿʼ (One World One Family) ಮಿಷನ್ ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಶ್ರೀ ಮಧುಸೂದನ ಸಾಯಿ ಆಸ್ಪತ್ರೆಯು ನಯಾಪೈಸೆ ಹಣ ಪಡೆಯದೇ ಉಚಿತವಾಗಿ ಈ ಚಿಕಿತ್ಸೆ ನೀಡಿದೆ.
ಮಗುವಿನ ತಂದೆ ಗೌರವ್ ಶರ್ಮಾ भावुकರಾಗಿ, “ಮುದ್ದೇನಹಳ್ಳಿ ಆಸ್ಪತ್ರೆ ನಮಗೆ ದೇವಸ್ಥಾನ ಇದ್ದ ಹಾಗೆ. ಜಗತ್ತಿನ ಯಾವ ದೊಡ್ಡ ಆಸ್ಪತ್ರೆಯಲ್ಲೂ ಸಿಗದ ಪ್ರೀತಿ ಮತ್ತು ಉನ್ನತ ಚಿಕಿತ್ಸೆ ನಮಗೆ ಇಲ್ಲಿ ಸಿಕ್ಕಿದೆ. ನನ್ನ ಮಗಳಿಗೆ ಜೀವ ಕೊಟ್ಟ ವೈದ್ಯರಿಗೆ ನಾನು ಸದಾ ಋಣಿ. ನಮ್ಮಂಥ ಬಡವರ ಬದುಕಿಗೆ ಈ ಆಸ್ಪತ್ರೆ ನಿಜಕ್ಕೂ ಆಶಾಕಿರಣ” ಎಂದು ಕೃತಜ್ಞತೆ ಸಲ್ಲಿಸಿದ್ದಾರೆ.
ಯಾವುದೇ ಲಾಭದ ಆಕಾಂಕ್ಷೆಯಿಲ್ಲದೆ, ಕೇವಲ ಸೇವಾ ಮನೋಭಾವದಿಂದ ಇಂತಹ ಮಹತ್ತರ ಸಾಧನೆ ಮಾಡಿರುವ ಮುದ್ದೇನಹಳ್ಳಿ ಆಸ್ಪತ್ರೆಯ ವೈದ್ಯರ ತಂಡಕ್ಕೆ ಈಗ ದೇಶಾದ್ಯಂತ ಪ್ರಶಂಸೆಗಳ ಮಹಾಪೂರವೇ ಹರಿದುಬರುತ್ತಿದೆ.































