Home Blog Page 2

Chikkaballapur News:- ಚಿಕ್ಕಬಳ್ಳಾಪುರದಲ್ಲಿ ಹೈಡ್ರಾಮಾ: ಶಾಸಕ ಪ್ರದೀಪ್ ಈಶ್ವರ್‌ ಕಾರಿನತ್ತ ಪಾದರಕ್ಷೆ ಎಸೆತ..!

0

ಚಿಕ್ಕಬಳ್ಳಾಪುರ ರಾಜಕೀಯ (Chikkaballapur Politics) ಅಂಗಳದಲ್ಲಿ ಇದೀಗ ಭಾರೀ ಸಂಚಲನ ಮೂಡಿದೆ. ನಾಡಪ್ರಭು ಕೆಂಪೇಗೌಡ ಜಯಂತಿ ಕಾರ್ಯಕ್ರಮದ ವೇಳೆ ಶಾಸಕ ಪ್ರದೀಪ್ ಈಶ್ವರ್ ಅವರ ವಿರುದ್ಧ ಜೆಡಿಎಸ್ ಕಾರ್ಯಕರ್ತರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದು, ಅವರ ಕಾರಿನತ್ತ ಚಪ್ಪಲಿ ಎಸೆದ ಘಟನೆ ನಡೆದಿದೆ.

ಘಟನೆಗೆ ಕಾರಣವೇನು?

ಕಳೆದ ಕೆಲವು ದಿನಗಳಿಂದ ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರ ಆಸ್ತಿ ಮತ್ತು ವಾಚ್‌ಗಳ ಬಗ್ಗೆ ಶಾಸಕ ಪ್ರದೀಪ್ ಈಶ್ವರ್ ಅವರು ಸಾರ್ವಜನಿಕವಾಗಿ ವ್ಯಂಗ್ಯವಾಡಿದ್ದರು. “ಬದನೆಕಾಯಿ ಬೆಳೆದು ಇಷ್ಟು ಆಸ್ತಿ ಸಂಪಾದನೆ ಮಾಡಿದ್ದಾರಾ?” ಎಂಬ ಅವರ ಹೇಳಿಕೆ ಜೆಡಿಎಸ್ ವಲಯದಲ್ಲಿ ತೀವ್ರ ಆಕ್ರೋಶಕ್ಕೆ ಕಾರಣವಾಗಿತ್ತು. ಇದಕ್ಕೆ ಪ್ರತಿಯಾಗಿ ಶಿಡ್ಲಘಟ್ಟ ಶಾಸಕ ಬಿ.ಎನ್. ರವಿಕುಮಾರ್ ಅವರು, “2028ರ ಚುನಾವಣೆಯಲ್ಲಿ ಸೋತರೆ ಕುಮಾರಸ್ವಾಮಿ ಮನೆ ಮುಂದೆ ವಾಚ್‌ಮ್ಯಾನ್ ಆಗಬೇಕಾಗುತ್ತದೆ” ಎಂದು ಸವಾಲು ಹಾಕಿದ್ದರು. ಈ ವಾಕ್ಸಮರ ತಾರಕಕ್ಕೇರಿ ಜೆಡಿಎಸ್ ಕಾರ್ಯಕರ್ತರು ಪ್ರತಿಭಟನೆಗೆ ಸಜ್ಜಾಗಿದ್ದರು.

ಕನ್ನಡ ಭವನದಲ್ಲಿ ಹೈಡ್ರಾಮಾ

ನಗರದ ಬಿಬಿ ರಸ್ತೆಯಲ್ಲಿರುವ ಕನ್ನಡ ಭವನದಲ್ಲಿ ಆಯೋಜಿಸಿದ್ದ ಕೆಂಪೇಗೌಡ ಜಯಂತಿ ಕಾರ್ಯಕ್ರಮದಲ್ಲಿ ಶಾಸಕರು ಭಾಗವಹಿಸಿದಾಗ ಪರಿಸ್ಥಿತಿ ವಿಕೋಪಕ್ಕೆ ಹೋಯಿತು. ಕಾರ್ಯಕ್ರಮದ ಸ್ಥಳದಲ್ಲಿ ನೂರಾರು ಜೆಡಿಎಸ್ ಕಾರ್ಯಕರ್ತರು ಜಮಾಯಿಸಿ, ಪ್ರದೀಪ್ ಈಶ್ವರ್ ಅವರ ವಿರುದ್ಧ ಘೋಷಣೆಗಳನ್ನು ಕೂಗಿದರು. ಅವರನ್ನು ಲೇವಡಿ ಮಾಡುತ್ತಾ, “ಹುಚ್ಚ” ಎಂದು ಕೂಗುವುದು ಮತ್ತು ಬಕೆಟ್ ತೋರಿಸುವ ಮೂಲಕ ಪ್ರತಿಭಟನೆ ನಡೆಸಲಾಯಿತು.

ಘಟನೆಯ ಮುಖ್ಯಾಂಶಗಳು:

  • ಆಕ್ರೋಶ: ಜೆಡಿಎಸ್ ಕಾರ್ಯಕರ್ತರಿಂದ ತೀವ್ರ ಪ್ರತಿಭಟನೆ ಮತ್ತು ಘೋಷಣೆ.

  • ಚಪ್ಪಲಿ ಎಸೆತ: ಕಾರ್ಯಕ್ರಮ ಮುಗಿಸಿ ಹೊರಬರುವಾಗ ಶಾಸಕರ ಕಾರಿನತ್ತ ಚಪ್ಪಲಿ ತೂರಾಟ.

  • ಪೊಲೀಸ್ ಮಧ್ಯಪ್ರವೇಶ: ಸ್ಥಳದಲ್ಲಿ ನೂಕುನುಗ್ಗಲು ಉಂಟಾಗಿದ್ದರಿಂದ ಪೊಲೀಸರು ಲಘು ಲಾಠಿ ಪ್ರಹಾರ ನಡೆಸಿ, ಕೆಲವರನ್ನು ವಶಕ್ಕೆ ಪಡೆದರು.

  • ಶಾಸಕರ ಪ್ರತಿಕ್ರಿಯೆ: ಕಾರ್ಯಕರ್ತರ ಆಕ್ರೋಶದ ನಡುವೆಯೂ ಪ್ರದೀಪ್ ಈಶ್ವರ್ ತಮ್ಮದೇ ಶೈಲಿಯಲ್ಲಿ ಸವಾಲನ್ನು ಸ್ವೀಕರಿಸಿ ಪ್ರತಿಕ್ರಿಯಿಸಿದರು.

ಕ್ಷೇತ್ರಾದ್ಯಂತ ದ್ವೇಷ ರಾಜಕಾರಣದ ಚರ್ಚೆ

ಈ ಘಟನೆಯು ಚಿಕ್ಕಬಳ್ಳಾಪುರದಲ್ಲಿ ರಾಜಕೀಯ ವೈಮನಸ್ಸು ಯಾವ ಮಟ್ಟಕ್ಕೆ ತಲುಪಿದೆ ಎಂಬುದಕ್ಕೆ ಸಾಕ್ಷಿಯಾಗಿದೆ. ಹಾಲಿ ಮತ್ತು ಮಾಜಿ ಶಾಸಕರ ಬೆಂಬಲಿಗರ ನಡುವಿನ ಈ ಜಿದ್ದಾಜಿದ್ದಿನಿಂದಾಗಿ ಕ್ಷೇತ್ರದ ಅಭಿವೃದ್ಧಿ ಕುಂಠಿತವಾಗುತ್ತಿದೆ ಎಂದು ಸಾರ್ವಜನಿಕರು ಆತಂಕ ವ್ಯಕ್ತಪಡಿಸುತ್ತಿದ್ದಾರೆ. ಕಳೆದ ಕೆಲವು ತಿಂಗಳುಗಳಿಂದ ಎರಡೂ ಬಣಗಳ ನಡುವೆ ಎಫ್‌ಐಆರ್ ದಾಖಲಿಸುವವರೆಗೆ ವಿಷಯಗಳು ಹೋಗಿದ್ದು, ದ್ವೇಷದ ರಾಜಕಾರಣಕ್ಕೆ ಇದು ಮುನ್ನುಡಿಯಾಗಿದೆ ಎಂಬ ಮಾತುಗಳು ಕೇಳಿಬರುತ್ತಿವೆ.

ಪೊಲೀಸರು ಸದ್ಯ ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತಂದಿದ್ದರೂ, ರಾಜಕೀಯ ವಲಯದಲ್ಲಿನ ಬಿಸಿಯೇರಿದ ವಾತಾವರಣ ತಣ್ಣಗಾಗುವ ಲಕ್ಷಣಗಳು ಸದ್ಯಕ್ಕಿಲ್ಲ.

 

Maharashtra murder crime news: ಮಹಾರಾಷ್ಟ್ರ ಮರ್ಡರ್ ಕೇಸ್: ನಿಶ್ಚಿತಾರ್ಥ ಮುರಿದರೆ ಅವಮಾನ ಎಂದು ಭಾವಿ ಪತಿಯನ್ನೇ ಕೊಂದ ಪ್ರೇಮಿಗಳು; ಸಿಸಿಟಿವಿಯಲ್ಲಿ ಬಯಲಾಯ್ತು ರಹಸ್ಯ!

0

ಮುಂಬೈನ (Maharashtra) ಆಘಾತಕಾರಿ ಕೊಲೆ ಪ್ರಕರಣವೊಂದರ ಸಿನಿಮಾ ಶೈಲಿಯ ಕ್ರಿಮಿನಲ್ ಪ್ಲಾನ್ ಈಗ ಇಡೀ ದೇಶವನ್ನೇ ಬೆಚ್ಚಿಬೀಳಿಸಿದೆ. ಮದುವೆಯಾಗಬೇಕಿದ್ದ ಭಾವಿ ಪತಿಯನ್ನೇ ಯುವತಿಯೊಬ್ಬಳು ತನ್ನ ಪ್ರಿಯಕರನೊಂದಿಗೆ ಸೇರಿ ಅತ್ಯಂತ ಕ್ರೂರವಾಗಿ ಕಂದಕಕ್ಕೆ ತಳ್ಳಿ ಕೊಲೆ ಮಾಡಿರುವ ಆಘಾತಕಾರಿ ರಹಸ್ಯಗಳು ತನಿಖೆಯಲ್ಲಿ ಬಯಲಾಗಿವೆ.

ನಿಶ್ಚಿತಾರ್ಥ ಮುರಿದರೆ ಕುಟುಂಬಕ್ಕೆ ಅವಮಾನವಾಗುತ್ತದೆ ಎಂಬ ವಿಚಿತ್ರ ಕಾರಣ ನೀಡಿ, ಇಡೀ ಸಂಸಾರವನ್ನೇ ಕಣ್ಣೀರಡಲಲ್ಲಿ ಮುಳುಗಿಸಿದ ಈ ಘಟನೆಯ ಸಂಪೂರ್ಣ ಇನ್‌ಸೈಡ್ ಸ್ಟೋರಿ ಇಲ್ಲಿದೆ.

2,004 ಕರೆಗಳು, 238 ಗಂಟೆಗಳ ಮಾತುಕತೆ!

ಬೆಚ್ಚಿಬೀಳಿಸುವ ಈ ಕೊಲೆ ಪ್ರಕರಣದ ಮಾಸ್ಟರ್‌ಮೈಂಡ್ ಬೇರೆ ಯಾರೂ ಅಲ್ಲ, ಮೃತರ ಭಾವಿ ಪತ್ನಿ ಸಿಯಾ ಗೋಯಲ್ ಮತ್ತು ಆಕೆಯ ಪ್ರಿಯಕರ ಚೇತನ್ ಚೌಧರಿ. ಪೊಲೀಸರು ಇವರಿಬ್ಬರ ಕಾಲ್ ರೆಕಾರ್ಡ್ಸ್ (CDR) ಪರಿಶೀಲಿಸಿದಾಗ ಅಚ್ಚರಿಯ ಸಂಗತಿಯೊಂದು ಬೆಳಕಿಗೆ ಬಂದಿದೆ. ಕಳೆದ ಕೇವಲ ಆರು ತಿಂಗಳ ಅವಧಿಯಲ್ಲಿ ಇವರಿಬ್ಬರ ನಡುವೆ ಬರೋಬ್ಬರಿ 2,004 ಫೋನ್ ಕರೆಗಳು ನಡೆದಿವೆ!

ಇಬ್ಬರೂ ಸೇರಿ ಸುಮಾರು 238 ಗಂಟೆಗಳ ಕಾಲ ಫೋನ್‌ನಲ್ಲಿ ಮಾತನಾಡಿದ್ದಾರೆ. ಕೆಲವು ಕರೆಗಳಂತೂ ಸತತ 2 ರಿಂದ 3 ಗಂಟೆಗಳ ಕಾಲ ಮುಂದುವರಿದಿದ್ದು, ಈ ಸುದೀರ್ಘ ಮಾತುಕತೆಯಲ್ಲೇ ಕೊಲೆಯ ಸಂಚು ಅಡಗಿತ್ತು ಎಂಬುದು ಪೊಲೀಸರ ತನಿಖೆಯಿಂದ ದೃಢಪಟ್ಟಿದೆ.

ಕೆಫೆಯಲ್ಲಿ ಕೊಲೆ ಸಂಚು: ಸಿಸಿಟಿವಿ ವಿಡಿಯೋ ವೈರಲ್

ಪುಣೆಯ ಪ್ರಸಿದ್ಧ ಉದ್ಯಮಿಯ ಪುತ್ರ ಕೇತನ್ ಅಗರ್ವಾಲ್ ಹಾಗೂ ಸಿಯಾ ಗೋಯಲ್ ನಡುವೆ ಕಳೆದ ಫೆಬ್ರವರಿಯಲ್ಲಿ ಅದ್ಧೂರಿಯಾಗಿ ನಿಶ್ಚಿತಾರ್ಥ ನಡೆದಿತ್ತು. ಬರುವ ನವೆಂಬರ್‌ನಲ್ಲಿ ಉದಯಪುರದಲ್ಲಿ ಮದುವೆ ಫಿಕ್ಸ್ ಆಗಿತ್ತು. ಆದರೆ ಸಿಯಾಗೆ ಈ ಮದುವೆ ಇಷ್ಟವಿರಲಿಲ್ಲ. ತನ್ನ ಪ್ರಿಯಕರ ಚೇತನ್ ಜೊತೆಗಿನ ಸಂಬಂಧಕ್ಕೆ ಕೇತನ್ ಅಡ್ಡಿಯಾಗಿದ್ದಾನೆ ಎಂದು ಭಾವಿಸಿದ ಆಕೆ, ಆತನನ್ನು ಮುಗಿಸಲು ಪ್ಲಾನ್ ಮಾಡಿದ್ದಳು.

ಜೂನ್ 18 ರಂದು ಕೊಲೆ ನಡೆಯುವ ಕೆಲವೇ ಗಂಟೆಗಳ ಮೊದಲು ಪುಣೆಯ ಕೆಫೆಯೊಂದರಲ್ಲಿ ಸಿಯಾ ಮತ್ತು ಚೇತನ್ ಭೇಟಿಯಾಗಿದ್ದರು. ಕೇತನ್‌ನನ್ನು ಹೇಗೆ ಕೊಲೆ ಮಾಡಬೇಕು, ಕೋಟೆಯ ಯಾವ ಸ್ಥಳದಿಂದ ತಳ್ಳಿದರೆ ಆತ ಬದುಕಲು ಸಾಧ್ಯವಿಲ್ಲ ಎಂಬುದನ್ನು ಕಾಫಿ ಕುಡಿಯುತ್ತಲೇ ಇಬ್ಬರೂ ಸ್ಕೆಚ್ ಹಾಕಿದ್ದರು. ಸದ್ಯ ಈ ಕೆಫೆಯ ಸಿಸಿಟಿವಿ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಟ್ರೆಕ್ಕಿಂಗ್ ನೆಪದಲ್ಲಿ 400 ಅಡಿ ಆಳದ ಕಂದಕಕ್ಕೆ ತಳ್ಳಿದರು!

ಅದೇ ದಿನ (ಜೂನ್ 18) ಮಧ್ಯಾಹ್ನ ಸಿಯಾ, ಕೇತನ್‌ನನ್ನು ಲೋಹಗಡ್ ಕೋಟೆಗೆ (Lohagad Fort) ಟ್ರೆಕ್ಕಿಂಗ್ ನೆಪದಲ್ಲಿ ಕರೆದೊಯ್ದಿದ್ದಾಳು. ಇತ್ತ ಪ್ರಿಯಕರ ಚೇತನ್ ಕೂಡ ವೇಷ ಮರೆಸಿಕೊಂಡು ಇವರನ್ನು ಹಿಂಬಾಲಿಸಿದ್ದಾನೆ. ಕೋಟೆಯ ನಿರ್ಜನ ಪ್ರದೇಶ ತಲುಪುತ್ತಿದ್ದಂತೆ ಸಿಯಾ ಮತ್ತು ಚೇತನ್ ಇಬ್ಬರೂ ಸೇರಿ ಕೇತನ್‌ನನ್ನು 400 ಅಡಿ ಆಳದ ಕಂದಕಕ್ಕೆ ತಳ್ಳಿದ್ದಾರೆ.

ಘಟನೆ ನಡೆದ ಬಳಿಕ ಸಿಯಾ ಅತ್ಯಂತ ನಾಟಕೀಯವಾಗಿ ಕೇತನ್ ಕಾಲು ಜಾರಿ ಕಣಿವೆಗೆ ಬಿದ್ದು ಮೃತಪಟ್ಟಿದ್ದಾನೆ ಎಂದು ಕುಟುಂಬದವರಿಗೆ ನಂಬಿಸಿದ್ದಳು. ಆರಂಭದಲ್ಲಿ ಎಲ್ಲರೂ ಇದನ್ನು ಅಪಘಾತ ಎಂದೇ ಭಾವಿಸಿದ್ದರು.

ತನಿಖೆಗೆ ತಿರುವು ಕೊಟ್ಟ 33 ಡಿಗ್ರಿ ಸೆಲ್ಸಿಯಸ್ ಬಿಸಿಲು ಮತ್ತು ಆ ಹಳದಿ ಹೂಡಿ!

ಪೊಲೀಸರು ಕೋಟೆಯ ಸುತ್ತಮುತ್ತಲಿನ ಸಿಸಿಟಿವಿ ದೃಶ್ಯಗಳನ್ನು ಪರಿಶೀಲಿಸಿದಾಗ ಪ್ರಕರಣಕ್ಕೆ ದೊಡ್ಡ ಟ್ವಿಸ್ಟ್ ಸಿಕ್ಕಿತು. ಅಂದು ಅಲ್ಲಿ 33 ಡಿಗ್ರಿ ಸೆಲ್ಸಿಯಸ್‌ನಷ್ಟು ವಿಪರೀತ ಬಿಸಿಲಿತ್ತು. ಅಂತಹ ಸೆಖೆಯಲ್ಲೂ ಒಬ್ಬ ವ್ಯಕ್ತಿ ದಪ್ಪನೆಯ ಹಳದಿ ಬಣ್ಣದ ಹೂಡಿ (Hoodie) ಧರಿಸಿ, ಮುಖ ಮುಚ್ಚಿಕೊಂಡು ಸಿಯಾ ಮತ್ತು ಕೇತನ್‌ನನ್ನು ಹಿಂಬಾಲಿಸುತ್ತಿರುವುದು ಸಿಸಿಟಿವಿಯಲ್ಲಿ ಕಂಡುಬಂದಿತ್ತು.

ಪೊಲೀಸರ ಅನುಮಾನ: ಈ ತರಹದ ಸುಡುವ ಬಿಸಿಲಿನಲ್ಲಿ ಯಾರಾದರೂ ದಪ್ಪ ಹೂಡಿ ಧರಿಸುತ್ತಾರಾ? ಈ ಒಂದು ಸಣ್ಣ ಸುಳಿವು ಪೊಲೀಸರ ಅನುಮಾನವನ್ನು ತೀವ್ರಗೊಳಿಸಿತು. ಕೊನೆಗೆ ಸೋಷಿಯಲ್ ಮೀಡಿಯಾ ಖಾತೆಗಳು ಹಾಗೂ ಕಾಲ್ ಹಿಸ್ಟರಿ ಆಧರಿಸಿ ತನಿಖೆ ನಡೆಸಿದಾಗ, ಆ ಹೂಡಿ ಧರಿಸಿದ್ದ ವ್ಯಕ್ತಿ ಸಿಯಾಳ ಪ್ರಿಯಕರ ಚೇತನ್ ಚೌಧರಿ ಎಂಬುದು ಬಯಲಾಯಿತು.

ಇದು ಮೊದಲ ಯತ್ನವಾಗಿರಲಿಲ್ಲ!

ತನಿಖೆಯ ವೇಳೆ ಪೊಲೀಸರಿಗೇ ಶಾಕ್ ಕೊಡುವ ಮತ್ತೊಂದು ವಿಷಯ ಹೊರಬಿದ್ದಿದೆ. ಕೇತನ್‌ನನ್ನು ಕೊಲ್ಲಲು ಸಿಯಾ ಈ ಹಿಂದೆಯೂ ಹಲವು ಬಾರಿ ಯತ್ನಿಸಿದ್ದಳು:

  • ಮೇ 31: ಮೊದಲ ಬಾರಿಗೆ ಇದೇ ಕೋಟೆಗೆ ಕೇತನ್‌ನನ್ನು ಸಿಯಾ ಕರೆದೊಯ್ದಿದ್ದಳು, ಆದರೆ ಪ್ಲಾನ್ ವರ್ಕೌಟ್ ಆಗಿರಲಿಲ್ಲ.

  • ಜೂನ್ 4: ಮತ್ತೊಮ್ಮೆ ಹೋಗಲು ಒತ್ತಾಯಿಸಿದ್ದರೂ ಕೇತನ್ ತಾಯಿ ಅನುಮತಿ ನೀಡಿರಲಿಲ್ಲ.

  • ಜೂನ್ 14: ಕೋಟೆಗೆ ತೆರಳಿದ್ದಾಗ ಕೇತನ್‌ನನ್ನು ತಳ್ಳಲು ಸಿಯಾ ಯತ್ನಿಸಿದ್ದಾಳು. ಆದರೆ ಅದೃಷ್ಟವಶಾತ್ ಕೇತನ್ ಪೊದೆಗಳನ್ನು ಹಿಡಿದು ಪ್ರಾಣಾಪಾಯದಿಂದ ಪಾರಾಗಿದ್ದ. ಆಗ ಕೇತನ್ “ಯಾಕೆ ತಳ್ಳಿದೆ?” ಎಂದು ಕೇಳಿದ್ದಕ್ಕೆ, “ಅಲ್ಲಿ ಹಾವು ಇತ್ತು, ನಿನ್ನನ್ನು ರಕ್ಷಿಸಲು ಹೋದೆ” ಎಂದು ಸಿಯಾ ಸುಳ್ಳು ಹೇಳಿ ನಂಬಿಸಿದ್ದಳು!

ಪಾಸ್ ಪೋರ್ಟ್ ಕಳ್ಳತನ!

ಇವರಿಬ್ಬರ ಪ್ರಿ-ವೆಡ್ಡಿಂಗ್ ಶೂಟ್‌ಗಾಗಿ ಬಾಲಿ ಪ್ರವಾಸದ ಪ್ಲಾನ್ ಕೂಡ ಇತ್ತು. ಆದರೆ ಪ್ರವಾಸ ರದ್ದಾಗಲಿ ಎಂಬ ಕಾರಣಕ್ಕೆ ಜೂನ್ 6 ರಂದು ಕೇತನ್ ಅವರ ಪಾಸ್‌ಪೋರ್ಟ್‌ನ್ನು ಸಿಯಾ ಕದ್ದು, ಮಹಿಳಾ ಶೌಚಾಲಯದಲ್ಲಿ ಬಿಸಾಡಿ ಬಂದಿದ್ದಳು.

ವಿಚಾರಣೆ ವೇಳೆ ಪೊಲೀಸರು, “ಮದುವೆ ಇಷ್ಟವಿಲ್ಲದಿದ್ದರೆ ನೇರವಾಗಿ ಹೇಳಿ ಮದುವೆ ಮುರಿದು ಓಡಿ ಹೋಗಬಹುದಿತ್ತಲ್ಲವೇ? ಕೊಲೆ ಏಕೆ ಮಾಡಿದ್ರಿ?” ಎಂದು ಪ್ರಶ್ನಿಸಿದಾಗ, “ನಿಶ್ಚಿತಾರ್ಥ ಮುರಿದರೆ ನನ್ನ ಕುಟುಂಬಕ್ಕೆ ಸಮಾಜದಲ್ಲಿ ಅವಮಾನವಾಗುತ್ತದೆ, ಅದಕ್ಕೆ ಈ ದಾರಿ ಹುಡುಕಿದೆವು” ಎಂದು ಆರೋಪಿಗಳು ಉತ್ತರಿಸಿರುವುದು ಪೊಲೀಸರನ್ನೇ ಬೆಚ್ಚಿಬೀಳಿಸಿದೆ.

ಸದ್ಯ ಪೊಲೀಸರು ಸಿಯಾ ಗೋಯಲ್ ಮತ್ತು ಚೇತನ್ ಚೌಧರಿ ಇಬ್ಬರನ್ನೂ ಬಂಧಿಸಿದ್ದು, ಕೊಲೆ ಹಾಗೂ ಕ್ರಿಮಿನಲ್ ಸಂಚು ಪ್ರಕರಣ ದಾಖಲಿಸಿಕೊಂಡು ಕಠಿಣ ತನಿಖೆ ಮುಂದುವರಿಸಿದ್ದಾರೆ.

Big relief for NEET Exam:- ನೀಟ್ ವಿವಾದಕ್ಕೆ ಬಿಗ್ ರಿಲೀಫ್: ಲೋಪದೋಷ ಸರಿಪಡಿಸಿ ಯಶಸ್ವಿಯಾಗಿ ಮುಗಿಯಿತು ಮರುಪರೀಕ್ಷೆ!

0

ದೇಶಾದ್ಯಂತ ತೀವ್ರ ಬಿರುಗಾಳಿ ಎಬ್ಬಿಸಿದ್ದ ನೀಟ್-ಯುಜಿ (NEET-UG) ಪರೀಕ್ಷೆ ವಿವಾದಕ್ಕೆ ಕೊನೆಗೂ ಒಂದು ಸಮಾಧಾನಕರ ತಿರುವು ಸಿಕ್ಕಿದೆ. ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (NTA) ನಡೆಸಿದ ನೀಟ್ ಮರುಪರೀಕ್ಷೆಯು ಯಾವುದೇ ಗೊಂದಲಗಳಿಲ್ಲದೆ, ಅತ್ಯಂತ ಪಾರದರ್ಶಕವಾಗಿ ಮತ್ತು ಯಶಸ್ವಿಯಾಗಿ ಮುಗಿದಿದೆ ಎಂದು ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ತಿಳಿಸಿದ್ದಾರೆ.

ಮೊದಲ ಬಾರಿ ಪರೀಕ್ಷೆ ನಡೆದಾಗ ಕೇಳಿಬಂದಿದ್ದ ಅಂಕಗಳ ಅಸಮರ್ಪಕ ಹಂಚಿಕೆ, ಗ್ರೇಸ್ ಮಾರ್ಕ್ಸ್ ಗೊಂದಲ ಮತ್ತು ಪ್ರಶ್ನೆಪತ್ರಿಕೆ ಸೋರಿಕೆ ಆರೋಪಗಳು ದೇಶದ ಲಕ್ಷಾಂತರ ವಿದ್ಯಾರ್ಥಿಗಳು ಹಾಗೂ ಪೋಷಕರನ್ನು ಆತಂಕಕ್ಕೆ ತಳ್ಳಿದ್ದವು. ಆದರೆ, ಸುಪ್ರೀಂ ಕೋರ್ಟ್‌ನ ಕಟ್ಟುನಿಟ್ಟಿನ ನಿರ್ದೇಶನ ಹಾಗೂ ಸರ್ಕಾರದ ಚುರುಕಿನ ಕ್ರಮದಿಂದಾಗಿ ಈಗ ಪರಿಸ್ಥಿತಿ ತಿಳಿಯಾಗಿದೆ. ಮರುಪರೀಕ್ಷೆ ಸುಸೂತ್ರವಾಗಿ ನಡೆದಿರುವುದು ವಿದ್ಯಾರ್ಥಿಗಳಲ್ಲಿ ನಿರಾಳತೆ ತಂದಿದೆ.

ತಪ್ಪುಗಳಿಂದ ಪಾಠ ಕಲಿತ ಸರ್ಕಾರ: ಸಚಿವರ ಭರವಸೆ

ನವದೆಹಲಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್, “ಹಿಂದಿನ ಪರೀಕ್ಷಾ ಪ್ರಕ್ರಿಯೆಯಲ್ಲಿ ಕೆಲವು ತಾಂತ್ರಿಕ ಹಾಗೂ ಆಡಳಿತಾತ್ಮಕ ಲೋಪದೋಷಗಳು ಕಂಡುಬಂದಿದ್ದು ನಿಜ. ಆದರೆ, ನಾವು ಅವುಗಳನ್ನು ಕೂಲಂಕೂಷವಾಗಿ ಪರಿಶೀಲಿಸಿ, ಸಂಪೂರ್ಣವಾಗಿ ಸರಿಪಡಿಸಿದ್ದೇವೆ. ವಿದ್ಯಾರ್ಥಿಗಳ ಹಿತರಕ್ಷಣೆ ಮತ್ತು ದೇಶದ ಅತಿ ದೊಡ್ಡ ವೈದ್ಯಕೀಯ ಪ್ರವೇಶ ಪರೀಕ್ಷೆಯ ವಿಶ್ವಾಸಾರ್ಹತೆಯನ್ನು ಕಾಯ್ದುಕೊಳ್ಳಲು ನಮ್ಮ ಸರ್ಕಾರ ಬದ್ಧವಾಗಿದೆ” ಎಂದು ಭರವಸೆ ನೀಡಿದ್ದಾರೆ.

ಹದ್ದಿನ ಕಣ್ಣಿನ ಕಾವಲಿನಲ್ಲಿ ಮರುಪರೀಕ್ಷೆ

ಹಿಂದಿನ ಪರೀಕ್ಷೆಯಲ್ಲಿ ಗ್ರೇಸ್ ಮಾರ್ಕ್ಸ್ (ಕೃಪಾಂಕ) ಪಡೆದಿದ್ದ ಆಯ್ದ ವಿದ್ಯಾರ್ಥಿಗಳಿಗಾಗಿ ಈ ವಿಶೇಷ ಮರುಪರೀಕ್ಷೆಯನ್ನು ಆಯೋಜಿಸಲಾಗಿತ್ತು. ಈ ಬಾರಿ ಯಾವುದೇ ಸಣ್ಣ ತಪ್ಪಿಗೂ ಅವಕಾಶ ನೀಡಬಾರದು ಎಂದು ಕಟ್ಟುನಿಟ್ಟಿನ ಭದ್ರತೆ ಹಾಗೂ ಅತ್ಯಾಧುನಿಕ ಡಿಜಿಟಲ್ ನಿಗಾ ವ್ಯವಸ್ಥೆಯನ್ನು ಮಾಡಲಾಗಿತ್ತು. ದೇಶದ ವಿವಿಧ ಕೇಂದ್ರಗಳಲ್ಲಿ ಎನ್‌ಟಿಎ ಯಾವುದೇ ಅಹಿತಕರ ಘಟನೆ ನಡೆಯದಂತೆ ಅತ್ಯಂತ ವ್ಯವಸ್ಥಿತವಾಗಿ ಪರೀಕ್ಷೆ ಮುಗಿಸಿದೆ ಎಂದು ಸಚಿವರು ಶ್ಲಾಘಿಸಿದ್ದಾರೆ.

ವಿದ್ಯಾರ್ಥಿಗಳ ಭವಿಷ್ಯವೇ ಮೊದಲ ಆದ್ಯತೆ

“ಲಕ್ಷಾಂತರ ವಿದ್ಯಾರ್ಥಿಗಳ ಹಗಲಿರುಳಿನ ಶ್ರಮ ಮತ್ತು ಅವರ ಭವಿಷ್ಯದೊಂದಿಗೆ ಆಟವಾಡಲು ಸರ್ಕಾರ ಯಾರಿಗೂ ಬಿಡುವುದಿಲ್ಲ.”

— ಧರ್ಮೇಂದ್ರ ಪ್ರಧಾನ್, ಕೇಂದ್ರ ಶಿಕ್ಷಣ ಸಚಿವ

ಪರೀಕ್ಷಾ ವ್ಯವಸ್ಥೆಯನ್ನು ಭವಿಷ್ಯದಲ್ಲಿ ಮತ್ತಷ್ಟು ಬಲಪಡಿಸಲು ಮತ್ತು ಇಂತಹ ಲೋಪಗಳು ಮರುಕಳಿಸದಂತೆ ತಡೆಯಲು ಈಗಾಗಲೇ ಒಂದು ಉನ್ನತ ಮಟ್ಟದ ಸುಧಾರಣಾ ಸಮಿತಿಯನ್ನು ರಚಿಸಲಾಗಿದೆ. ಇದರೊಂದಿಗೆ, ಮೊದಲ ಪರೀಕ್ಷೆಯಲ್ಲಿ ನಡೆದಿದೆ ಎನ್ನಲಾದ ಅಕ್ರಮಗಳ ಬಗ್ಗೆಯೂ ಸಮಗ್ರ ತನಿಖೆ ಪ್ರಗತಿಯಲ್ಲಿದೆ ಎಂದು ಸಚಿವರು ಪುನರುಚ್ಚರಿಸಿದ್ದಾರೆ.

ಒಟ್ಟಿನಲ್ಲಿ, ಕಳೆದ ಕೆಲವು ವಾರಗಳಿಂದ ಆತಂಕದಲ್ಲೇ ದಿನ ದೂಡುತ್ತಿದ್ದ ವೈದ್ಯಕೀಯ ಸೀಟು ಆಕಾಂಕ್ಷಿಗಳಿಗೆ ಈ ಮರುಪರೀಕ್ಷೆಯ ಯಶಸ್ಸು ದೊಡ್ಡ ಸಮಾಧಾನ ತಂದಿದೆ. ಭವಿಷ್ಯದಲ್ಲಾದರೂ ಇಂತಹ ಪರೀಕ್ಷೆಗಳು ಯಾವುದೇ ಕಪ್ಪು ಚುಕ್ಕೆಯಿಲ್ಲದೆ ನಡೆಯಲಿ ಎಂಬುದೇ ಎಲ್ಲರ ಆಶಯ.

12th International Yoga Day celebration at Nandi:- ಶ್ರೀ ಭೋಗ ನಂದೀಶ್ವರ ದೇವಾಲಯದ ಅಂಗಳದಲ್ಲಿ ಅಂತರರಾಷ್ಟ್ರೀಯ ಯೋಗ ದಿನದ ಸಂಭ್ರಮ: ನೂರಾರು ಜನರಿಂದ ಯೋಗಾಭ್ಯಾಸ

0

ಚಿಕ್ಕಬಳ್ಳಾಪುರ: ಜಿಲ್ಲೆಯ ಪ್ರಸಿದ್ಧ ಹಾಗೂ ಐತಿಹಾಸಿಕ ಪ್ರವಾಸಿ ತಾಣವಾದ ನಂದಿ ಗ್ರಾಮದ ಶ್ರೀ ಭೋಗ ನಂದೀಶ್ವರ ದೇವಾಲಯದ ಆವರಣದಲ್ಲಿ 12ನೇ ಅಂತರರಾಷ್ಟ್ರೀಯ ಯೋಗ ದಿನಾಚರಣೆಯನ್ನು (12th International Yoga Day celebration) ಅತ್ಯಂತ ಸಡಗರ ಮತ್ತು ಅರ್ಥಪೂರ್ಣವಾಗಿ ಆಚರಿಸಲಾಯಿತು. ಪ್ರಾಚೀನ ಶೈಲಿಯ ಭವ್ಯ ದೇಗುಲದ ಹಿನ್ನೆಲೆಯಲ್ಲಿ ನಡೆದ ಈ ಯೋಗೋತ್ಸವವು ನೆರೆದಿದ್ದವರ ಕಣ್ಣುಮನ ಸೆಳೆಯಿತು.

ವಾಯುಪುತ್ರ ಯೋಗ ಅಕಾಡೆಮಿ, ಸಹಜ ಅಷ್ಟಾಂಗ ಯೋಗ ಕುಟುಂಬ ಹಾಗೂ ಸ್ಥಳೀಯ ಸರ್ಕಾರಿ ಶಾಲೆಗಳ ಜಂಟಿ ಆಶ್ರಯದಲ್ಲಿ ಈ ವಿಶೇಷ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಮುಂಜಾನೆಯ ತಂಪಾದ ವಾತಾವರಣದಲ್ಲಿ ನೂರಾರು ಶಾಲಾ ವಿದ್ಯಾರ್ಥಿಗಳು, ಯೋಗಾಸಕ್ತರು ಹಾಗೂ ಸಾರ್ವಜನಿಕರು ಒಟ್ಟಾಗಿ ಸೇರಿ ವಿವಿಧ ಯೋಗಾಸನಗಳನ್ನು ಪ್ರದರ್ಶಿಸಿದರು.

ದೇಹ ಮತ್ತು ಮನಸ್ಸಿನ ಬೆಸುಗೆಯೇ ಯೋಗ: ರವಿಚಂದ್ರ ಗುರೂಜಿ

ಕಾರ್ಯಕ್ರಮದಲ್ಲಿ ಪಾಲ್ಗೊಂಡು ಯೋಗದ ವಿವಿಧ ಆಸನಗಳ ಮಾರ್ಗದರ್ಶನ ನೀಡಿದ ರವಿಚಂದ್ರ ಗುರೂಜಿ ಅವರು ಯೋಗದ ನೈಜ ಅರ್ಥವನ್ನು ಸರಳವಾಗಿ ವಿವರಿಸಿದರು.

“ಸಂಸ್ಕೃತದ ‘ಯುಜ್’ ಎಂಬ ಧಾತುವಿನಿಂದ ಬಂದಿರುವ ‘ಯೋಗ’ ಎಂದರೆ ಜೋಡಿಸುವುದು ಎಂದರ್ಥ. ಇದು ಕೇವಲ ದೈಹಿಕ ಕಸರತ್ತಲ್ಲ; ಬದಲಿಗೆ ನಮ್ಮ ಆತ್ಮವನ್ನು ಪರಮಾತ್ಮನೊಂದಿಗೆ ಬೆಸೆಯುವ ಅತ್ಯಂತ ಸುಲಭವಾದ ಹಾದಿ. ಪ್ರಧಾನಿ ನರೇಂದ್ರ ಮೋದಿ ಅವರ ಪ್ರಯತ್ನದಿಂದಾಗಿ ಇಂದು ಯೋಗವು ಇಡೀ ವಿಶ್ವಕ್ಕೆ ಭಾರತ ನೀಡಿದ ಅತ್ಯಮೂಲ್ಯ ಕೊಡುಗೆಯಾಗಿ ಹೊರಹೊಮ್ಮಿದೆ. ಇದು ದೇಹ, ಮನಸ್ಸು ಮತ್ತು ಬುದ್ಧಿಮತ್ತೆಯನ್ನು ವಿಕಸನಗೊಳಿಸುತ್ತದೆ,” ಎಂದು ಅವರು ತಿಳಿಸಿದರು.

ಇದೇ ವೇಳೆ ಅವರು ಭಗವದ್ಗೀತೆಯ 17ನೇ ಅಧ್ಯಾಯ ಹಾಗೂ ಮಹರ್ಷಿ ಪತಂಜಲಿ ಅವರ ಅಷ್ಟಾಂಗ ಯೋಗ ಸೂತ್ರಗಳ ಮಹತ್ವವನ್ನು ಜನರಿಗೆ ಮನವರಿಕೆ ಮಾಡಿಕೊಟ್ಟರು.

ಮಕ್ಕಳಲ್ಲಿ ಶಿಸ್ತು ಮೂಡಿಸುವ ಯೋಗ ಪದ್ಧತಿ

ನಂದಿ ಸರ್ಕಾರಿ ಪ್ರೌಢಶಾಲೆಯ ಮುಖ್ಯ ಶಿಕ್ಷಕಿ ಮೀರಾ ಎಸ್. ಮಾತನಾಡಿ, ಇಂದಿನ ಆಧುನಿಕ ಯುಗದಲ್ಲಿ ಮಕ್ಕಳಿಗೆ ಯೋಗದ ಅಗತ್ಯ ಎಷ್ಟಿದೆ ಎಂಬುದನ್ನು ಒತ್ತಿಹೇಳಿದರು.

“ನಮ್ಮ ಪ್ರಕೃತಿಯೊಂದಿಗೆ ದೇಹ ಮತ್ತು ಮನಸ್ಸನ್ನು ಸಮತೋಲನದಲ್ಲಿಟ್ಟುಕೊಂಡು ಉತ್ತಮ ಆರೋಗ್ಯ ಕಾಪಾಡಿಕೊಳ್ಳಲು ಯೋಗ ಸಹಕಾರಿಯಾಗಿದೆ. ಇಂದಿನ ವೇಗದ ಜೀವನದಲ್ಲಿ ಮಕ್ಕಳಿಗೆ ಯೋಗ, ಧ್ಯಾನ ಮತ್ತು ಪ್ರಾಣಾಯಾಮವನ್ನು ಕಲಿಸುವುದರಿಂದ ಹಳೆಯ ಗುರುಕುಲ ಪದ್ಧತಿಯಲ್ಲಿದ್ದಂತಹ ಉತ್ತಮ ಸಂಸ್ಕಾರ, ಏಕಾಗ್ರತೆ ಹಾಗೂ ಶಿಸ್ತನ್ನು ಅವರಲ್ಲಿ ಮತ್ತೆ ಮೂಡಿಸಲು ಸಾಧ್ಯವಾಗುತ್ತದೆ,” ಎಂದು ಅವರು ಅಭಿಪ್ರಾಯಪಟ್ಟರು.

ಆಸನಗಳ ಪ್ರಾತ್ಯಕ್ಷಿಕೆ ಮತ್ತು ತರಬೇತಿ

ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ನಂದಿ ಗ್ರಾಮದ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆ, ಸರ್ಕಾರಿ ಪ್ರೌಢಶಾಲೆ ಹಾಗೂ ಸರ್ಕಾರಿ ಉರ್ದು ಪ್ರಾಥಮಿಕ ಶಾಲೆಯ ಮಕ್ಕಳಿಗೆ ವಾಯುಪುತ್ರ ಯೋಗ ಸಂಸ್ಥೆಯ ತರಬೇತುದಾರರು ವಿಶೇಷ ತರಬೇತಿ ನೀಡಿದರು.

ಮಕ್ಕಳಿಗೆ ದೈನಂದಿನ ಜೀವನಕ್ಕೆ ಉಪಯುಕ್ತವಾದ ಪ್ರಾಣಾಯಾಮ, ಜೀರ್ಣಶಕ್ತಿಯನ್ನು ಹೆಚ್ಚಿಸುವ ‘ವಜ್ರಾಸನ’ ಸೇರಿದಂತೆ ಹಲವು ಪ್ರಮುಖ ಆಸನಗಳ ಭಂಗಿಗಳನ್ನು ಪ್ರಾಯೋಗಿಕವಾಗಿ ಕಲಿಸಿಕೊಡಲಾಯಿತು. ಕಾರ್ಯಕ್ರಮದಲ್ಲಿ ಶಾಲೆಯ ಶಿಕ್ಷಕ ವೃಂದ, ವಾಯುಪುತ್ರ ಸಂಸ್ಥೆಯ ಪದಾಧಿಕಾರಿಗಳು ಹಾಗೂ ನಂದಿ ಗ್ರಾಮದ ಪ್ರಮುಖರು ಉಪಸ್ಥಿತರಿದ್ದು, ಯೋಗ ದಿನಾಚರಣೆಯನ್ನು ಯಶಸ್ವಿಗೊಳಿಸಿದರು.

Bihar Crime news:- ಬಿಹಾರದಲ್ಲಿ ರಾಕ್ಷಸರ ವಿಕೃತಿ: ಪತಿಯನ್ನು ಕೂಡಿಹಾಕಿ ಮಹಿಳೆಯ ಮೇಲೆ ಸಾಮೂಹಿಕ ಅತ್ಯಾಚಾರ; ಗುಪ್ತಾಂಗಕ್ಕೆ ಗುಂಡು, ಕಲ್ಲು ತುರುಕಿದ ಕಾಮುಕರು!

0

Bihar Crime news:- ಬಿಹಾರದಲ್ಲಿ ಮನುಷ್ಯಕುಲವೇ ತಲೆತಗ್ಗಿಸುವಂತಹ ಅತ್ಯಂತ ಕ್ರೂರ ಮತ್ತು ಅಮಾನವೀಯ ಘಟನೆಯೊಂದು ನಡೆದಿದೆ. ಮನೆಯೊಳಗೆ ನುಗ್ಗಿದ ಕಾಮುಕರ ಗುಂಪೊಂದು ಪತಿಯನ್ನು ಕೋಣೆಯಲ್ಲಿ ಕೂಡಿ ಹಾಕಿ, ವಿವಾಹಿತ ಮಹಿಳೆಯ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿದ್ದಾರೆ. ಅಷ್ಟೇ ಅಲ್ಲದೆ, ಆಕೆಯ ಗುಪ್ತಾಂಗಕ್ಕೆ ಗುಂಡು (ಲೈವ್ ಬುಲೆಟ್), ಕಲ್ಲು ಹಾಗೂ ಮರದ ತುಂಡನ್ನು ತುರುಕಿ ವಿಕೃತ ಕ್ರೌರ್ಯ ಮೆರೆದಿದ್ದಾರೆ.

ನಡುರಾತ್ರಿ ನಡೆದ ಘೋರ ಕೃತ್ಯ

ಈ ಬೆಚ್ಚಿಬೀಳಿಸುವ ಘಟನೆ ಜೂನ್ 11 ರಂದು ಬಿಹಾರದ ಬೇಗುಸರಾಯ್‌ನ ಚಾಕಿಯಾ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ನಡುರಾತ್ರಿ ಸುಮಾರು 11:30 ರ ಸುಮಾರಿಗೆ ಮಹಿಳೆ ಶೌಚಾಲಯಕ್ಕೆ ತೆರಳಿದ್ದಾಗ ಐದು ಜನ ದುಷ್ಕರ್ಮಿಗಳು ಏಕಾಏಕಿ ಮನೆಗೆ ನುಗ್ಗಿದ್ದಾರೆ. ಮೊದಲು ಮಹಿಳೆಯ ಪತಿಯನ್ನು ಕೋಣೆಯೊಂದರಲ್ಲಿ ಹಾಕಿ ಬೀಗ ಹಾಕಿದ್ದಾರೆ.

ಮಹಿಳೆ ಶೌಚಾಲಯದಿಂದ ಹೊರಬರುತ್ತಿದ್ದಂತೆ ಆಕೆಯ ಬಾಯಿಗೆ ಬಟ್ಟೆ ತುರುಕಿ, ಕಿರುಚದಂತೆ ತಡೆದಿದ್ದಾರೆ. ನಂತರ ಮನೆಯ ಹೊರಗಿನ ನಿರ್ಜನ ಪ್ರದೇಶಕ್ಕೆ ಎಳೆದೊಯ್ದು ಐವರೂ ಸೇರಿ ರಾಕ್ಷಸರಂತೆ ಅತ್ಯಾಚಾರ ಎಸಗಿದ್ದಾರೆ. ಮಹಿಳೆ ಪ್ರತಿರೋಧ ಒಡ್ಡಲು ಯತ್ನಿಸಿದಾಗ ಬ್ಲೇಡ್‌ನಿಂದ ಆಕೆಯ ಎದೆ ಮತ್ತು ತೊಡೆಯ ಭಾಗವನ್ನು ಕೊಯ್ದು ವಿಕೃತಿ ಮೆರೆದಿದ್ದಾರೆ.

ವೈದ್ಯಕೀಯ ತಪಾಸಣೆಯಲ್ಲಿ ಬಯಲಾದ ವಿಕೃತಿ

ದುಷ್ಕರ್ಮಿಗಳ ಮೃಗೀಯ ದಾಳಿಯಿಂದಾಗಿ ಮಹಿಳೆ ಪ್ರಜ್ಞೆ ಕಳೆದುಕೊಂಡಿದ್ದರು. ಆಕೆಯ ಅತ್ತಿಗೆ ಬಂದು ಕೋಣೆಯ ಬಾಗಿಲು ತೆರೆದು ಪತಿಯನ್ನು ರಕ್ಷಿಸಿದ ಬಳಿಕ ಪೊಲೀಸರಿಗೆ ಮಾಹಿತಿ ನೀಡಲಾಗಿದೆ. ತಕ್ಷಣವೇ ಸಂತ್ರಸ್ತೆಯನ್ನು ಬರೌನಿ ಆಸ್ಪತ್ರೆಗೆ, ಅಲ್ಲಿಂದ ಹೆಚ್ಚಿನ ಚಿಕಿತ್ಸೆಗಾಗಿ ಸದರ್ ಆಸ್ಪತ್ರೆಗೆ ದಾಖಲಿಸಲಾಯಿತು.

ವೈದ್ಯರ ಆಘಾತಕಾರಿ ಹೇಳಿಕೆ: ಚಿಕಿತ್ಸೆ ಮುಗಿದು ಮನೆಗೆ ಮರಳಿದ ಮೇಲೆಯೂ ಮಹಿಳೆಗೆ ಖಾಸಗಿ ಭಾಗಗಳಲ್ಲಿ ಅಸಹನೀಯ ನೋವು ಮುಂದುವರಿದಿತ್ತು. ಹೀಗಾಗಿ ಮತ್ತೆ ಆಸ್ಪತ್ರೆಗೆ ಕರೆತಂದು ತೀವ್ರ ವೈದ್ಯಕೀಯ ತಪಾಸಣೆಗೆ ಒಳಪಡಿಸಿದಾಗ ವೈದ್ಯರೇ ಕಂಗಾಲಾಗಿದ್ದಾರೆ. ಅತ್ಯಾಚಾರದ ವೇಳೆ ಪ್ರಜ್ಞೆ ತಪ್ಪಿದ್ದ ಮಹಿಳೆಯ ಗುಪ್ತಾಂಗದೊಳಗೆ ಕಾಮುಕರು ಒಂದು ಜೀವಂತ ಗುಂಡು (Live Bullet), ಕಲ್ಲು ಮತ್ತು ಮರದ ತುಂಡನ್ನು ತುರುಕಿದ್ದರು! ಶಸ್ತ್ರಚಿಕಿತ್ಸೆಯ ಮೂಲಕ ವೈದ್ಯರು ಇವುಗಳನ್ನು ಹೊರಗೆ ತೆಗೆದಿದ್ದಾರೆ.

ಪೊಲೀಸರ ನಿರ್ಲಕ್ಷ್ಯವೇ ಕಾರಣ?

ಸಂತ್ರಸ್ತೆ ನೀಡಿರುವ ಹೇಳಿಕೆ ಪೊಲೀಸ್ ವ್ಯವಸ್ಥೆಯ ಅಸಲಿ ಮುಖವನ್ನು ಬಯಲು ಮಾಡಿದೆ. ಮೂರು ತಿಂಗಳ ಹಿಂದೆಯೂ ಮೂವರು ದುಷ್ಕರ್ಮಿಗಳು ಇದೇ ಮಹಿಳೆಯ ಮನೆಗೆ ನುಗ್ಗಿ ಹಲ್ಲೆ ನಡೆಸಿ, ಹಣ-ಒಡವೆ ದೋಚಿದ್ದರು. ಆ ಸಂದರ್ಭದಲ್ಲೂ ಲೈಂಗಿಕ ದೌರ್ಜನ್ಯಕ್ಕೆ ಯತ್ನಿಸಲಾಗಿತ್ತು. ಈ ಬಗ್ಗೆ ಪೊಲೀಸರಿಗೆ ದೂರು ನೀಡಿದ್ದರೂ ಯಾವುದೇ ಸೂಕ್ತ ಕ್ರಮ ಕೈಗೊಂಡಿರಲಿಲ್ಲ. ಅಂದೇ ಪೊಲೀಸರು ಎಚ್ಚೆತ್ತುಕೊಂಡಿದ್ದರೆ ಇಂದು ಇಂತಹ ಘೋರ ದುರಂತ ನಡೆಯುತ್ತಿರಲಿಲ್ಲ ಎಂದು ಸಂತ್ರಸ್ತೆ ಅಳಲು ತೋಡಿಕೊಂಡಿದ್ದಾರೆ.

ತನಿಖೆಗೆ ಆದೇಶಿಸಿದ ಡಿಎಸ್‌ಪಿ

ಪ್ರಕರಣ ಇಡೀ ರಾಜ್ಯಾದ್ಯಂತ ತೀವ್ರ ಆಕ್ರೋಶಕ್ಕೆ ಕಾರಣವಾಗುತ್ತಿದ್ದಂತೆ ಎಚ್ಚೆತ್ತುಕೊಂಡಿರುವ ಡಿಎಸ್‌ಪಿ ಆನಂದ್ ಕುಮಾರ್ ಪಾಂಡೆ, ಘಟನೆಯ ತನಿಖೆಗೆ ಆದೇಶಿಸಿದ್ದಾರೆ. ತಲೆಮರೆಸಿಕೊಂಡಿರುವ ಐದೂ ಜನ ಆರೋಪಿಗಳ ಪತ್ತೆಗೆ ಜಾಲ ಬೀಸಲಾಗಿದ್ದು, ಶೀಘ್ರದಲ್ಲೇ ಬಂಧಿಸುವುದಾಗಿ ತಿಳಿಸಿದ್ದಾರೆ. ಜೊತೆಗೆ, ಈ ಹಿಂದೆ ದೂರು ನೀಡಿದ್ದಾಗ ನಿರ್ಲಕ್ಷ್ಯ ವಹಿಸಿದ ಪೊಲೀಸ್ ಅಧಿಕಾರಿಗಳ ಮೇಲೂ ಸೂಕ್ತ ಇಲಾಖಾ ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದ್ದಾರೆ.

ಇಂತಹ ಘಟನೆಗಳು ಸಮಾಜದಲ್ಲಿ ಮಹಿಳೆಯರ ಸುರಕ್ಷತೆಯನ್ನು ಮತ್ತೊಮ್ಮೆ ಪ್ರಶ್ನಿಸುವಂತೆ ಮಾಡಿದ್ದು, ಕಾಮುಕರಿಗೆ ಕಠಿಣಾತಿಕಠಿಣ ಶಿಕ್ಷೆಯಾಗಬೇಕು ಎಂಬ ಆಗ್ರಹ ಕೇಳಿಬರುತ್ತಿದೆ.

EPFO 3.0 new rules for PF withdrawl:- ಪಿಎಫ್ ಗ್ರಾಹಕರಿಗೆ ಬಂಪರ್ ಗಿಫ್ಟ್: ಇನ್ಮುಂದೆ UPI, ATM ಮೂಲಕವೇ ಶೇ.75 ರಷ್ಟು PF ಹಣ ವಿತ್‌ಡ್ರಾ!

0

ಕೇಂದ್ರ ಸರ್ಕಾರವು ಪಿಎಫ್ (PF) ಗ್ರಾಹಕರಿಗೆ ಭರ್ಜರಿ ಸಿಹಿಸುದ್ದಿ ನೀಡಿದೆ. ಇನ್ಮುಂದೆ ತುರ್ತು ಸಂದರ್ಭಗಳಲ್ಲಿ ಪಿಎಫ್ ಹಣವನ್ನು ಡ್ರಾ ಮಾಡಲು ವಾರಗಟ್ಟಲೆ ಕಾಯಬೇಕಾಗಿಲ್ಲ. ನಿಮ್ಮ ಅಗತ್ಯಕ್ಕೆ ತಕ್ಕಂತೆ ಯುಪಿಐ (UPI) ಅಥವಾ ಎಟಿಎಂ (ATM) ಮೂಲಕವೇ ಶೇಕಡಾ 75 ರಷ್ಟು ಪಿಎಫ್ ಹಣವನ್ನು ತಕ್ಷಣವೇ ವಿತ್‌ಡ್ರಾ ಮಾಡಿಕೊಳ್ಳುವ ಹೊಸ ವ್ಯವಸ್ಥೆಯನ್ನು ತರಲಾಗುತ್ತಿದೆ.

ಕೇಂದ್ರ ಕಾರ್ಮಿಕ ಸಚಿವ ಮನ್ಸುಖ್ ಮಾಂಡವೀಯ ಅವರು ಇತ್ತೀಚೆಗೆ ಈ ಬಗ್ಗೆ ಸುಳಿವು ನೀಡಿದ್ದು, ಇಪಿಎಫ್‌ಓ (EPFO) ಸಂಸ್ಥೆಯು ಈ ಡಿಜಿಟಲ್ ಕ್ರಾಂತಿಗೆ ಸಕಲ ಸಿದ್ಧತೆ ಮಾಡಿಕೊಳ್ಳುತ್ತಿದೆ.

ಏನಿದು ಹೊಸ ನಿಯಮ? ಇಲ್ಲಿದೆ ಕಂಪ್ಲೀಟ್ ಡಿಟೇಲ್ಸ್

ಉದ್ಯೋಗಿಗಳ ಭವಿಷ್ಯ ನಿಧಿ ಸಂಸ್ಥೆಯು ತನ್ನ ಸಂಪೂರ್ಣ ವ್ಯವಸ್ಥೆಯನ್ನು ಡಿಜಿಟಲೀಕರಣಗೊಳಿಸುತ್ತಿದ್ದು, ಇದನ್ನು ‘ಇಪಿಎಫ್‌ಓ 3.0’ (EPFO 3.0) ಎಂದು ಕರೆಯಲಾಗಿದೆ. ಇದರ ಅಡಿಯಲ್ಲಿ ಗ್ರಾಹಕರಿಗೆ ಸುಲಭವಾಗಿ ಹಣ ಸಿಗುವಂತೆ ಮಾಡಲು ಈ ಕೆಳಗಿನ ಪ್ರಮುಖ ಬದಲಾವಣೆಗಳನ್ನು ತರಲಾಗುತ್ತಿದೆ:

  • UPI ಮತ್ತು ATM ಮೂಲಕ ಹಣ ವಿತ್‌ಡ್ರಾ: ನಿಮ್ಮ ಬ್ಯಾಂಕ್ ಖಾತೆಗೆ ಲಿಂಕ್ ಆಗಿರುವ ಯುಪಿಐ ಆ್ಯಪ್‌ಗಳು (PhonePe, Google Pay ಇತ್ಯಾದಿ) ಅಥವಾ ಇಪಿಎಫ್ ಲಿಂಕ್ ಹೊಂದಿರುವ ಎಟಿಎಂಗಳ ಮೂಲಕ ನಿಮ್ಮ ಒಟ್ಟು ಪಿಎಫ್ ಬ್ಯಾಲೆನ್ಸ್‌ನ ಶೇ. 75 ರಷ್ಟು ಹಣವನ್ನು ನೇರವಾಗಿ ಡ್ರಾ ಮಾಡಿಕೊಳ್ಳಬಹುದು.

  • ಆಟೋ ಸೆಟಲ್‌ಮೆಂಟ್ ಮಿತಿ ಏರಿಕೆ: ಈ ಹಿಂದೆ ತುರ್ತು ವೈದ್ಯಕೀಯ ಅಥವಾ ಶಿಕ್ಷಣದ ಅಗತ್ಯಗಳಿಗಾಗಿ ಇದ್ದ ಆಟೋ ಸೆಟಲ್‌ಮೆಂಟ್ (ಸ್ವಯಂಚಾಲಿತ ಹಣ ಮಂಜೂರಾತಿ) ಮಿತಿಯನ್ನು 1 ಲಕ್ಷ ರೂಪಾಯಿಯಿಂದ 5 ಲಕ್ಷ ರೂಪಾಯಿಗೆ ಏರಿಸಲಾಗಿದೆ. ಅಂದರೆ 5 ಲಕ್ಷದವರೆಗಿನ ಕ್ಲೈಮ್‌ಗಳು ಯಾವುದೇ ಮಾನವ ಹಸ್ತಕ್ಷೇಪವಿಲ್ಲದೆ ಕಂಪ್ಯೂಟರ್ ಮೂಲಕ ಕೆಲವೇ ಗಂಟೆಗಳಲ್ಲಿ ಇತ್ಯರ್ಥವಾಗಲಿವೆ.

  • ಮಾಲೀಕರ ಅನುಮತಿ ಬೇಕಿಲ್ಲ: ಹೊಸ ವ್ಯವಸ್ಥೆಯಲ್ಲಿ ಶೇ. 95 ರಷ್ಟು ಕ್ಲೈಮ್‌ಗಳು ಆಟೋಮ್ಯಾಟಿಕ್ ಆಗಿ ಸೆಟಲ್ ಆಗುವುದರಿಂದ, ಉದ್ಯೋಗಿಗಳು ತಮ್ಮ ಕಂಪನಿ ಅಥವಾ ಮಾಲೀಕರ ಡಿಜಿಟಲ್ ಸಹಿ ಅಥವಾ ಅನುಮತಿಗಾಗಿ ಕಾಯುವ ಅಗತ್ಯವಿರುವುದಿಲ್ಲ.

  • 8.25% ಬಡ್ಡಿದರ ಜಾರಿ: ಪ್ರಸ್ತುತ ಹಣಕಾಸು ವರ್ಷಕ್ಕೆ ನಿಗದಿಪಡಿಸಲಾದ ಶೇಕಡಾ 8.25 ರಷ್ಟು ಪಿಎಫ್ ಬಡ್ಡಿದರವು ಜಾರಿಗೆ ಬರಲಿದ್ದು, ಗ್ರಾಹಕರ ಖಾತೆಗಳಿಗೆ ಶೀಘ್ರದಲ್ಲೇ ಜಮಾ ಆಗಲಿದೆ.

ನೆನಪಿರಲಿ: ಪಿಎಫ್ ಖಾತೆಯ ಶೇ. 75 ರಷ್ಟು ಹಣವನ್ನು ತುರ್ತು ಅಗತ್ಯಕ್ಕೆ ಬಳಸಿಕೊಂಡರೂ, ಇನ್ನುಳಿದ ಶೇ. 25 ರಷ್ಟು ಹಣವನ್ನು ನಿಮ್ಮ ನಿವೃತ್ತಿಯ ಭವಿಷ್ಯದ ನಿಧಿಗಾಗಿ ಕಡ್ಡಾಯವಾಗಿ ಖಾತೆಯಲ್ಲೇ ಲಾಕ್ ಮಾಡಲಾಗಿರುತ್ತದೆ.

ಈ ಸೌಲಭ್ಯ ಪಡೆಯಲು ಏನು ಮಾಡಬೇಕು?

ಈ ಅತ್ಯಾಧುನಿಕ ಡಿಜಿಟಲ್ ಸೌಲಭ್ಯದ ಲಾಭ ಪಡೆಯಲು ಪಿಎಫ್ ಚಂದಾದಾರರು ಕೆಲವು ಮುಖ್ಯ ಕೆಲಸಗಳನ್ನು ಪೂರ್ಣಗೊಳಿಸಬೇಕಾಗುತ್ತದೆ:

  1. ನಿಮ್ಮ UAN (Universal Account Number) ಸಕ್ರಿಯವಾಗಿರಬೇಕು.

  2. ಯುಎನ್ ಸಂಖ್ಯೆಗೆ ನಿಮ್ಮ ಆಧಾರ್ ಕಾರ್ಡ್, ಪ್ಯಾನ್ ಕಾರ್ಡ್ ಮತ್ತು ಬ್ಯಾಂಕ್ ಖಾತೆಯನ್ನು (IFSC ಕೋಡ್ ಸಹಿತ) ಕಡ್ಡಾಯವಾಗಿ ಲಿಂಕ್ ಮಾಡಿರಬೇಕು (KYC ಪೂರ್ಣಗೊಂಡಿರಬೇಕು).

  3. ಆಧಾರ್‌ಗೆ ಲಿಂಕ್ ಆಗಿರುವ ಮೊಬೈಲ್ ಸಂಖ್ಯೆ ಚಾಲ್ತಿಯಲ್ಲಿರಬೇಕು, ಏಕೆಂದರೆ ಒಟಿಪಿ (OTP) ಪರಿಶೀಲನೆ ಕಡ್ಡಾಯವಾಗಿದೆ.

  4. ಮುಖ ಗುರುತಿಸುವಿಕೆಯ ತಂತ್ರಜ್ಞಾನಕ್ಕಾಗಿ ಉಮಂಗ್ (UMANG) ಆ್ಯಪ್‌ನಲ್ಲಿ ಫೇಸ್ ಅಥೆಂಟಿಕೇಷನ್ ಪ್ರಕ್ರಿಯೆಯನ್ನು ಬಳಸಬೇಕಾಗುತ್ತದೆ.

ನ್ಯಾಷನಲ್ ಪೇಮೆಂಟ್ಸ್ ಕಾರ್ಪೊರೇಷನ್ ಆಫ್ ಇಂಡಿಯಾ (NPCI) ಜೊತೆಗೆ ಈ ತಂತ್ರಜ್ಞಾನದ ಪ್ರಾಯೋಗಿಕ ಪರೀಕ್ಷೆಗಳು ಯಶಸ್ವಿಯಾಗಿ ಪೂರ್ಣಗೊಂಡಿದ್ದು, ಸಾರ್ವಜನಿಕರ ಬಳಕೆಗೆ ಶೀಘ್ರದಲ್ಲೇ ಮುಕ್ತವಾಗಲಿದೆ. ಕಾಗದ ರಹಿತ ಹಾಗೂ ಮಧ್ಯವರ್ತಿಗಳ ಕಾಟವಿಲ್ಲದ ಈ ಹೊಸ ಇಪಿಎಫ್‌ಓ 3.0 ವ್ಯವಸ್ಥೆಯು ಕೋಟ್ಯಂತರ ಉದ್ಯೋಗಿಗಳಿಗೆ ಆಪದ್ಬಾಂಧವನಾಗುವುದರಲ್ಲಿ ಸಂಶಯವಿಲ್ಲ.

K. Annamalai NEET Concerns:- ನೀಟ್ ಪರೀಕ್ಷೆಗೆ ಮಿಲಿಟರಿ ಮಾದರಿ ಭದ್ರತೆ ಬೇಕೇ? ವಿದ್ಯಾರ್ಥಿಗಳ ಮೇಲಿನ ಒತ್ತಡಕ್ಕೆ ಅಣ್ಣಾಮಲೈ ಕಳವಳ!

0

ಚೆನ್ನೈ: ದೇಶಾದ್ಯಂತ ಭಾರಿ ಸಂಚಲನ ಮೂಡಿಸಿರುವ ನೀಟ್ (NEET-UG) ಪರೀಕ್ಷಾ ಅಕ್ರಮಗಳ ಬೆನ್ನಲ್ಲೇ ಜೂನ್ 21 ರಂದು ನಡೆಯಲಿರುವ ಮರುಪರೀಕ್ಷೆಗೆ ಕೇಂದ್ರ ಸರ್ಕಾರ ಕೈಗೊಂಡಿರುವ “ಮಿಲಿಟರಿ ಮಾದರಿಯ” ಕಠಿಣ ಭದ್ರತಾ ವ್ಯವಸ್ಥೆಯ ವಿರುದ್ಧ ತಮಿಳುನಾಡಿನ ಪ್ರಮುಖ ರಾಜಕಾರಣಿ ಹಾಗೂ ಮಾಜಿ ಐಪಿಎಸ್ ಅಧಿಕಾರಿ ಕೆ. ಅಣ್ಣಾಮಲೈ (K. Annamalai)ತೀವ್ರ ಅಸಮಾಧಾನ ಹೊರಹಾಕಿದ್ದಾರೆ. ಈ ಅತಿರೇಕದ ತಪಾಸಣಾ ಕ್ರಮಗಳು ಹದಿಹರೆಯದ ವಿದ್ಯಾರ್ಥಿಗಳಲ್ಲಿ ತೀವ್ರ ಮಾನಸಿಕ ಒತ್ತಡ ಹಾಗೂ ಭಯದ ವಾತಾವರಣವನ್ನು ಸೃಷ್ಟಿಸುತ್ತಿವೆ ಎಂದು ಅವರು ಕಳವಳ ವ್ಯಕ್ತಪಡಿಸಿದ್ದಾರೆ.

ಇತ್ತೀಚೆಗಷ್ಟೇ ಬಿಜೆಪಿಯ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡಿ, ಅಬ್ದುಲ್ ಕಲಾಂ ಅವರ ಆದರ್ಶಗಳಿಂದ ಪ್ರೇರಿತವಾದ ‘ವಿ ದಿ ಲೀಡರ್ಸ್’ (We The Leaders) ಎಂಬ ಹೊಸ ರಾಜಕೀಯ ಚಳವಳಿಯನ್ನು ಆರಂಭಿಸಿರುವ ಅಣ್ಣಾಮಲೈ ಅವರ ಈ ಹೇಳಿಕೆ ಈಗ ಶೈಕ್ಷಣಿಕ ಹಾಗೂ ರಾಜಕೀಯ ವಲಯದಲ್ಲಿ ಭಾರಿ ಚರ್ಚೆಗೆ ಗ್ರಾಸವಾಗಿದೆ.

ಯುದ್ಧಭೂಮಿಯಂತಾದ ಪರೀಕ್ಷಾ ಕೇಂದ್ರಗಳು!

ಪತ್ರಿಕಾಗೋಷ್ಠಿ ಹಾಗೂ ತಮ್ಮ ಸಾಮಾಜಿಕ ಜಾಲತಾಣದ ಖಾತೆಯಲ್ಲಿ ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (NTA) ಮತ್ತು ಶಿಕ್ಷಣ ಸಚಿವಾಲಯದ ನಿರ್ಧಾರಗಳನ್ನು ಪ್ರಶ್ನಿಸಿರುವ ಅಣ್ಣಾಮಲೈ, ಪರೀಕ್ಷೆಯ ಪಾರದರ್ಶಕತೆ ಕಾಪಾಡುವುದು ಮುಖ್ಯವಾದರೂ ಅದು ಮಕ್ಕಳ ನೆಮ್ಮದಿಯನ್ನು ಕೆಡಿಸುವಂತಿರಬಾರದು ಎಂದು ಕಿವಿಮಾತು ಹೇಳಿದ್ದಾರೆ.

“ವಿದ್ಯಾರ್ಥಿಗಳು ಪರೀಕ್ಷೆ ಬರೆಯಲು ಬರುತ್ತಿದ್ದಾರೆಯೇ ಹೊರತು ಯಾವುದೇ ಯುದ್ಧಭೂಮಿಗೆ ಹೋಗುತ್ತಿಲ್ಲ. ಸಿಆರ್‌ಪಿಎಫ್ ಮತ್ತು ಸಿಐಎಸ್ಎಫ್ ಭದ್ರತೆ, ಐಎಎಫ್ ಏರ್‌ಲಿಫ್ಟ್, ಎಐ ತಂತ್ರಜ್ಞಾನದ ಸರ್ವೇಕ್ಷಣೆಯಂತಹ ಕಠಿಣ ನಿಯಮಗಳು ಮಕ್ಕಳನ್ನು ಅಪರಾಧಿಗಳಂತೆ ನೋಡುವ ವಾತಾವರಣ ನಿರ್ಮಿಸುತ್ತಿವೆ. ಶೂ ಬಿಚ್ಚಿಸುವುದು, ಬಟ್ಟೆಗಳ ತೀವ್ರ ತಪಾಸಣೆ ಮತ್ತು ಪೋಷಕರನ್ನು ದೂರವಿಡುವುದರಿಂದ ಮಕ್ಕಳ ಆತ್ಮವಿಶ್ವಾಸ ಕುಗ್ಗುತ್ತಿದೆ.”

– ಕೆ. ಅಣ್ಣಾಮಲೈ

ಭದ್ರತೆಯ ಹೆಸರಿನಲ್ಲಿ ಹೆಚ್ಚಿದ ಮಾನಸಿಕ ಹೊರೆ

ಪರೀಕ್ಷಾ ಅಕ್ರಮಗಳನ್ನು ತಡೆಯಲು ಸರ್ಕಾರ ಕೈಗೊಂಡಿರುವ ಕ್ರಮಗಳನ್ನು ವಿದ್ಯಾರ್ಥಿಗಳು ಸ್ವಾಗತಿಸುತ್ತಾರೆ. ಆದರೆ, ಪರೀಕ್ಷಾ ಕೇಂದ್ರದ ಒಳಗೆ ಪ್ರವೇಶಿಸುವ ಮುನ್ನ ನಡೆಸುವ ಸುದೀರ್ಘ ತಪಾಸಣಾ ಪ್ರಕ್ರಿಯೆಗಳು ಮತ್ತು ಪರೀಕ್ಷೆಯ ಸಮಯವನ್ನು 180 ನಿಮಿಷಗಳಿಂದ 195 ನಿಮಿಷಗಳಿಗೆ ಹೆಚ್ಚಿಸಿರುವುದು ವಿದ್ಯಾರ್ಥಿಗಳ ಮೇಲಿನ ಒತ್ತಡವನ್ನು ಮತ್ತಷ್ಟು ಹೆಚ್ಚಿಸಿದೆ ಎಂದು ಅಣ್ಣಾಮಲೈ ವಾದಿಸಿದ್ದಾರೆ. ಪ್ರಸ್ತುತ ಪರೀಕ್ಷಾ ವ್ಯವಸ್ಥೆಯು ವಿದ್ಯಾರ್ಥಿಗಳ ಜ್ಞಾನವನ್ನು ಪರೀಕ್ಷಿಸುವ ಬದಲು, ಅವರ ಒತ್ತಡ ತಾಳುವ ಶಕ್ತಿಯನ್ನು ಪರೀಕ್ಷಿಸುತ್ತಿದೆ ಎಂದು ಅವರು ಬೇಸರ ವ್ಯಕ್ತಪಡಿಸಿದ್ದಾರೆ.

ಮರುಪರೀಕ್ಷೆಯ ಕಠಿಣ ನಿಯಮಗಳು ವಿದ್ಯಾರ್ಥಿಗಳ ಮೇಲಾಗುತ್ತಿರುವ ಪರಿಣಾಮ
ಸಿಆರ್‌ಪಿಎಫ್ + ಸಿಐಎಸ್ಎಫ್ ಭದ್ರತೆ ಮತ್ತು ತಪಾಸಣೆ ಪರೀಕ್ಷಾ ಕೇಂದ್ರದಲ್ಲಿ ಭಯದ ವಾತಾವರಣ
4 ಹಂತದ ಸಿಸಿಟಿವಿ ಹಾಗೂ ಎಐ ಕಣ್ಗಾವಲು ನಿರಂತರ ನಿಗಾದಿಂದ ಹೆಚ್ಚುತ್ತಿರುವ ಆತಂಕ
ಪರೀಕ್ಷಾ ಸಮಯ 180 ರಿಂದ 195 ನಿಮಿಷಕ್ಕೆ ಏರಿಕೆ ದೀರ್ಘಾವಧಿಯ ಪರೀಕ್ಷೆಯಿಂದ ಮಾನಸಿಕ ಆಯಾಸ
ಅಡ್ಮಿಟ್ ಕಾರ್ಡ್ ಡೌನ್‌ಲೋಡ್‌ನಲ್ಲಿ ತಾಂತ್ರಿಕ ಗೊಂದಲ ಕೊನೆ ಕ್ಷಣದ ಗೊಂದಲ ಮತ್ತು ನಿರಾಶೆ

ಪರಿಹಾರವೇನು? ಅಣ್ಣಾಮಲೈ ಸಲಹೆಗಳು

ಇತ್ತೀಚಿನ ದಿನಗಳಲ್ಲಿ ನೀಟ್ ಪರೀಕ್ಷೆಯ ಭೀತಿ ಹಾಗೂ ಫಲಿತಾಂಶದ ಗೊಂದಲಗಳಿಂದಾಗಿ ವಿದ್ಯಾರ್ಥಿಗಳು ಖಿನ್ನತೆಗೆ ಒಳಗಾಗುತ್ತಿರುವುದು ಮತ್ತು ಆತ್ಮಹತ್ಯೆಯಂತಹ ಘೋರ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಿರುವುದನ್ನು ಪ್ರಸ್ತಾಪಿಸಿದ ಅವರು ಕೆಲವು ಪ್ರಮುಖ ಬದಲಾವಣೆಗಳಿಗೆ ಒತ್ತಾಯಿಸಿದ್ದಾರೆ:

  • ಮಾನಸಿಕ ಸಮಾಲೋಚನೆ: ಪರೀಕ್ಷೆಗೆ ಕಟ್ಟುನಿಟ್ಟಿನ ನಿಯಮಗಳನ್ನು ಹೇರುವುದಕ್ಕಿಂತ ಮುಂಚಿತವಾಗಿ, ವಿದ್ಯಾರ್ಥಿಗಳಿಗೆ ಸೂಕ್ತ ಮಾನಸಿಕ ಸಮಾಲೋಚನೆ (Counselling) ನೀಡಿ ಧೈರ್ಯ ತುಂಬುವ ಕೆಲಸವನ್ನು ಶಿಕ್ಷಣ ಸಂಸ್ಥೆಗಳು ಮಾಡಬೇಕು.

  • ಡಿಜಿಟಲ್ ಸುರಕ್ಷತೆ: ತಪಾಸಣೆಯ ಹೆಸರಿನಲ್ಲಿ ದೈಹಿಕವಾಗಿ ಪೀಡಿಸುವ ಬದಲು, ತಂತ್ರಜ್ಞಾನವನ್ನು ಬಳಸಿ ಡಿಜಿಟಲ್ ಮಾದರಿಯಲ್ಲಿ ಸುರಕ್ಷಿತವಾಗಿ ಪರೀಕ್ಷೆ ನಡೆಸುವ ಮೂಲಕ ಗೊಂದಲಮುಕ್ತ ವಾತಾವರಣ ಕಲ್ಪಿಸಬೇಕು.

  • ರಾಷ್ಟ್ರೀಯ ಶಿಕ್ಷಣ ನೀತಿಯ ಆಶಯ: ರಾಷ್ಟ್ರೀಯ ಶಿಕ್ಷಣ ನೀತಿ (NEP 2020) ರ ಪ್ರಮುಖ ಉದ್ದೇಶವೇ ‘ಪರೀಕ್ಷೆಯ ಒತ್ತಡವನ್ನು ಕಡಿಮೆ ಮಾಡುವುದು’. ಆದರೆ ಪ್ರಸ್ತುತ ನಡೆಯುತ್ತಿರುವುದು ಅದಕ್ಕೆ ತದ್ವಿರುದ್ಧವಾಗಿದೆ ಎಂದು ಅವರು ಎಚ್ಚರಿಸಿದ್ದಾರೆ.

ಒಟ್ಟಾರೆಯಾಗಿ, ಪರೀಕ್ಷಾ ಅಕ್ರಮಗಳಿಗೆ ತಡೆ ಹಾಕುವ ಭರದಲ್ಲಿ ಮುಗ್ಧ ವಿದ್ಯಾರ್ಥಿಗಳನ್ನು ಒತ್ತಡದ ಕತ್ತಲಿಗೆ ತಳ್ಳಬಾರದು ಎಂಬ ಅಣ್ಣಾಮಲೈ ಅವರ ಹೇಳಿಕೆ ಸದ್ಯ ಪೋಷಕರು ಹಾಗೂ ಶಿಕ್ಷಣ ತಜ್ಞರ ವಲಯದಲ್ಲಿ ತೀವ್ರ ಸಂಚಲನ ಮೂಡಿಸಿದೆ.

Go Green Campaign:- “ಪ್ರಕೃತಿಯೂ ನಮ್ಮ ಕುಟುಂಬದ ಭಾಗ”: ಚಿಕ್ಕಬಳ್ಳಾಪುರದಲ್ಲಿ ಸದ್ಗುರು ಶ್ರೀ ಮಧುಸೂದನ ಸಾಯಿ(Sadguru Sri Madhusudan Sai) ಹಸಿರು ಕರೆ.

0

ಇತ್ತೀಚೆಗೆ ಪರಿಸರ ಮಾಲಿನ್ಯ ಮತ್ತು ನೀರಿನ ಅಭಾವದ ಸುದ್ದಿಗಳೇ ಹೆಚ್ಚಾಗಿ ಕೇಳಿಬರುತ್ತಿರುವಾಗ, ನಮ್ಮ ಚಿಕ್ಕಬಳ್ಳಾಪುರದಿಂದ ಒಂದು ಅತ್ಯಂತ ಆಶಾದಾಯಕ ಹಾಗೂ ಹೆಮ್ಮೆ ಪಡುವಂತಹ ಸುದ್ದಿ ಹೊರಬಿದ್ದಿದೆ! ಜೂನ್ 13ರ ಶನಿವಾರದಂದು ಮುದ್ದೇನಹಳ್ಳಿಯ ಸತ್ಯ ಸಾಯಿ ಗ್ರಾಮದಲ್ಲಿ ಕರ್ನಾಟಕದ ಹಸಿರು ಕ್ರಾಂತಿಗೆ ಒಂದು ಭವ್ಯ ಮುನ್ನುಡಿ ಬರೆಯಲಾಗಿದೆ.

ಇಡೀ ಕರ್ನಾಟಕದಲ್ಲಿ ಬರೋಬ್ಬರಿ 5 ಕೋಟಿ ಸಸಿಗಳನ್ನು ಹಾಗೂ ಚಿಕ್ಕಬಳ್ಳಾಪುರ ಜಿಲ್ಲೆಯಲ್ಲೇ 5 ಲಕ್ಷ ಸಸಿಗಳನ್ನು ನೆಡುವ ಈ ಮಹತ್ವಾಕಾಂಕ್ಷಿ ಅಭಿಯಾನಕ್ಕೆ ಕರ್ನಾಟಕ ಉಚ್ಚ ನ್ಯಾಯಾಲಯದ ಮುಖ್ಯ ನ್ಯಾಯಾಧೀಶರಾದ ನ್ಯಾಯಮೂರ್ತಿ ವಿಭು ಬಖ್ರು ಅವರು ಸಸಿ ನೆಡುವ ಮೂಲಕ ಅಧಿಕೃತವಾಗಿ ಚಾಲನೆ ನೀಡಿದ್ದಾರೆ.

ಈ ಸುಂದರ ಮತ್ತು ಮಹತ್ವದ ಹಸಿರು ಅಭಿಯಾನದ ಸಂಪೂರ್ಣ ಮಾಹಿತಿ ಇಲ್ಲಿದೆ.

ಹಸಿರಿಗಾಗಿ ಒಂದಾದ ಪ್ರಮುಖ ಸಂಸ್ಥೆಗಳು

ಈ ಬೃಹತ್ ಕಾರ್ಯಕ್ರಮ ಕೇವಲ ಗಿಡ ನೆಡುವುದಕ್ಕೆ ಮಾತ್ರ ಸೀಮಿತವಾಗಿಲ್ಲ. ಇದರ ಜೊತೆಗೆ ಜಲಮೂಲಗಳ ಮರುಸ್ಥಾಪನೆ, ಪುನರುಜ್ಜೀವನ ಮತ್ತು ಸ್ವಚ್ಛತೆಯಂತಹ ಅದ್ಭುತ ಉಪಕ್ರಮಗಳೂ ಸೇರಿವೆ. ಈ ಬೃಹತ್ ಜವಾಬ್ದಾರಿಯನ್ನು ಈ ಕೆಳಗಿನ ಸಂಸ್ಥೆಗಳು ಜಂಟಿಯಾಗಿ ಹೆಗಲಿಗೇರಿಸಿಕೊಂಡಿವೆ:

  • ಪ್ರಶಾಂತಿ ಬಾಲ ಮಂದಿರ ಟ್ರಸ್ಟ್

  • ಕರ್ನಾಟಕ ಕಾನೂನು ಸೇವೆಗಳ ಪ್ರಾಧಿಕಾರ ಹಾಗೂ ಜಿಲ್ಲಾ ಕಾನೂನು ಪ್ರಾಧಿಕಾರ

  • ಚಿಕ್ಕಬಳ್ಳಾಪುರ ಜಿಲ್ಲಾ ವಕೀಲರ ಸಂಘ

  • ಧಾರೆ ಪ್ರತಿಷ್ಠಾನ

  • ವಂದೇ ಭಾರತಂ ಪ್ರತಿಷ್ಠಾನ

“ಪ್ರೀತಿಯೇ ಅತ್ಯಂತ ಪ್ರಬಲ ಕಾನೂನು” – ಸದ್ಗುರು ಶ್ರೀ ಮಧುಸೂದನ ಸಾಯಿ (Sadguru Sri Madhusudan Sai)

ಪ್ರಸ್ತುತ ಯುರೋಪ್ ಪ್ರವಾಸದಲ್ಲಿರುವ ‘ಒನ್ ವರ್ಲ್ಡ್ ಒನ್ ಫ್ಯಾಮಿಲಿ’ ಮಿಷನ್ ಸಂಸ್ಥಾಪಕರಾದ ಸದ್ಗುರು ಶ್ರೀ ಮಧುಸೂದನ ಸಾಯಿ ಅವರು ವಿಡಿಯೋ ಸಂದೇಶದ ಮೂಲಕ ಎಲ್ಲರಿಗೂ ಆಶೀರ್ವದಿಸಿದರು.

“ಪ್ರಕೃತಿಯೂ ನಮ್ಮ ಕುಟುಂಬದ ಭಾಗವೇ ಆಗಿದೆ. ಮನುಷ್ಯ ಚೆನ್ನಾಗಿ ಬದುಕಬೇಕಾದರೆ ಬೆಟ್ಟ, ಗಿಡ, ನೀರು ಎಲ್ಲವೂ ಮುಖ್ಯ. ಎಲ್ಲಿ ಪ್ರೀತಿ ತುಂಬಿರುತ್ತದೆಯೋ, ಅಲ್ಲಿ ಬೇರೆ ಕಾನೂನುಗಳ ಅಗತ್ಯವೇ ಬರುವುದಿಲ್ಲ. ಪ್ರೀತಿಯೇ ಅತ್ಯಂತ ದೊಡ್ಡ ಮತ್ತು ಪ್ರಬಲ ಕಾನೂನು” ಎಂದು ಅವರು ಮನಮುಟ್ಟುವಂತೆ ವಿವರಿಸಿದರು.

ಗಿಡ ನೆಟ್ಟರೆ ಸಾಲದು, ಅವುಗಳನ್ನು ಉಳಿಸಬೇಕು!

ಕಾರ್ಯಕ್ರಮದಲ್ಲಿ ಮಾತನಾಡಿದ ಮುಖ್ಯ ನ್ಯಾಯಮೂರ್ತಿ ವಿಭು ಬಖ್ರು ಅವರು ಒಂದು ಪ್ರಮುಖ ಆಲೋಚನೆಯನ್ನು ಹಂಚಿಕೊಂಡರು. “ನಾವು ಎಷ್ಟು ಗಿಡಗಳನ್ನು ನೆಟ್ಟೆವು ಎನ್ನುವುದಕ್ಕಿಂತ, ಅದರಲ್ಲಿ ಎಷ್ಟು ಗಿಡಗಳು ಬದುಕಿ ದೊಡ್ಡ ಮರಗಳಾದವು ಎನ್ನುವುದರ ಮೇಲೆ ಈ ಅಭಿಯಾನದ ಯಶಸ್ಸು ನಿರ್ಧಾರವಾಗುತ್ತದೆ” ಎಂದರು. ಪರಿಸರ ಸಂರಕ್ಷಣೆಯು ಕೇವಲ ಸರ್ಕಾರದ ಕೆಲಸವಲ್ಲ, ಇದರಲ್ಲಿ ಸಾಮಾಜಿಕ ನ್ಯಾಯ ಅಡಗಿದೆ ಮತ್ತು ಮುಖ್ಯವಾಗಿ ಶಾಲಾ ಮಕ್ಕಳು ಇದರಲ್ಲಿ ಆಸಕ್ತಿ ವಹಿಸಬೇಕು ಎಂದು ಅವರು ಕರೆ ನೀಡಿದರು.

ಪಾರಿಸರಿಕ ನೈತಿಕತೆ ಮತ್ತು 50 ಲಕ್ಷ ಕೋಟಿಯ ಲೆಕ್ಕಾಚಾರ!

ಪ್ರಶಾಂತಿ ಬಾಲ ಮಂದಿರ ಟ್ರಸ್ಟ್‌ನ ಅಧ್ಯಕ್ಷರಾದ ಡಾ. ಬಿ.ಎನ್. ನರಸಿಂಹಮೂರ್ತಿ ಅವರು ಗೌತಮ ಬುದ್ಧನ 2600 ವರ್ಷಗಳ ಹಿಂದಿನ ‘ಪಾರಿಸರಿಕ ನೈತಿಕತೆ’ (Ecological Morality) ವಿಚಾರವನ್ನು ನೆನಪಿಸಿದರು.

ಅಲ್ಲದೆ, ಅವರು ನೀಡಿದ ಒಂದು ಅಂಕಿ-ಅಂಶ ನಿಜಕ್ಕೂ ಕಣ್ಣು ತೆರೆಸುವಂತಿತ್ತು: “ಪ್ರತಿಯೊಬ್ಬ ಭಾರತೀಯನೂ ತಲಾ 5 ಗಿಡಗಳನ್ನು ನೆಟ್ಟು ಬೆಳೆಸಿದರೆ, ಅದರಿಂದ ಸೃಷ್ಟಿಯಾಗುವ ಸಂಪತ್ತು ಬರೋಬ್ಬರಿ 50 ಲಕ್ಷ ಕೋಟಿ ರೂಪಾಯಿಗಳು! ಇದು ಭಾರತದ ಇಂದಿನ ಬಜೆಟ್‌ಗಿಂತಲೂ ದೊಡ್ಡದು. ನಿರುದ್ಯೋಗ ಮತ್ತು ಹವಾಮಾನ ವೈಪರಿತ್ಯದಂತಹ ದೊಡ್ಡ ಸಮಸ್ಯೆಗಳಿಗೆ ಮರಗಳನ್ನು ಬೆಳೆಸುವುದೇ ನಿಜವಾದ ಮದ್ದು.”

ಚಿಕ್ಕಬಳ್ಳಾಪುರಕ್ಕೆ ವರದಾನವಾಗಲಿದೆ ‘ಅಮೃತವನ’ (ಮಿಯಾವಾಕಿ ಅರಣ್ಯ)

ಅಂತರ್ಜಲದ ತೀವ್ರ ಕೊರತೆ ಎದುರಿಸುತ್ತಿರುವ ನಮ್ಮ ಚಿಕ್ಕಬಳ್ಳಾಪುರ ಜಿಲ್ಲೆಗೆ ಜಪಾನ್ ಮೂಲದ ‘ಮಿಯಾವಾಕಿ’ ಮಾದರಿಯ ಅರಣ್ಯಗಳು ಸಂಜೀವಿನಿಯಾಗಲಿವೆ ಎಂದು ಹೈಕೋರ್ಟ್ ನ್ಯಾಯಮೂರ್ತಿ ಹಂಚಟೆ ಸಂಜೀವ್ ಕುಮಾರ್ ಅವರು ತಿಳಿಸಿದರು. ಈ ಮಾನವ ನಿರ್ಮಿತ ಕಿರು ಅರಣ್ಯಗಳನ್ನು ‘ಅಮೃತವನ’ ಹೆಸರಿನಲ್ಲಿ ಅಭಿವೃದ್ಧಿಪಡಿಸಲಾಗುತ್ತಿದೆ.

ಇದೇ ವೇಳೆ, ಮತ್ತೊಬ್ಬ ಹೈಕೋರ್ಟ್ ನ್ಯಾಯಮೂರ್ತಿಗಳಾದ ಅನು ಶಿವರಾಮನ್ ಅವರು, “ಪರಿಸರ ಮಾಲಿನ್ಯ ಮತ್ತು ಹವಾಮಾನ ವೈಪರಿತ್ಯದ ಹೊಡೆತ ಮೊದಲು ತಟ್ಟುವುದೇ ಬಡವರು ಮತ್ತು ಹಿಂದುಳಿದ ವರ್ಗದವರಿಗೆ. ಹಾಗಾಗಿ ಗಿಡ ನೆಡುವುದು ಮನುಕುಲದ ಅಸ್ತಿತ್ವಕ್ಕೆ ಬಹಳ ಮುಖ್ಯ” ಎಂದು ಕಳಕಳಿ ವ್ಯಕ್ತಪಡಿಸಿದರು.

ಕೊನೆಯ ಮಾತು: ನಮ್ಮ ಮುಂದಿನ ಪೀಳಿಗೆಗೆ ನಾವು ಆಸ್ತಿ-ಅಂತಸ್ತು ಮಾಡದಿದ್ದರೂ ಪರವಾಗಿಲ್ಲ, ಉಸಿರಾಡಲು ಶುದ್ಧವಾದ ಗಾಳಿ ಮತ್ತು ಕುಡಿಯಲು ಒಳ್ಳೆಯ ನೀರನ್ನು ಉಳಿಸಬೇಕಾಗಿದೆ. ಬನ್ನಿ, ಈ 5 ಕೋಟಿ ಸಸಿ ನೆಡುವ ಮಹಾ ಯಜ್ಞದಲ್ಲಿ ನಾವೂ ಕೈಜೋಡಿಸೋಣ. ನಮ್ಮ ಮನೆಯಂಗಳದಲ್ಲೂ ಒಂದು ಸಸಿ ನೆಟ್ಟು ಪೋಷಿಸೋಣ!

PM Modi 12 Years:- ಮೋದಿ ಸರ್ಕಾರಕ್ಕೆ 12 ವರ್ಷಗಳ ಸಂಭ್ರಮ: ಅತಿ ದೀರ್ಘಾವಧಿ ಸೇವೆ ಸಲ್ಲಿಸಿದ ಚುನಾಯಿತ ಪ್ರಧಾನಿ ಎಂಬ ಜಾಗತಿಕ ದಾಖಲೆ!

0

ಚಿಕ್ಕಬಳ್ಳಾಪುರ: ಕೇಂದ್ರದಲ್ಲಿ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಎನ್‌ಡಿಎ ಸರ್ಕಾರ ಯಶಸ್ವಿಯಾಗಿ 12 ವರ್ಷಗಳನ್ನು (PM Modi 12 Years) ಪೂರೈಸಿದೆ. ಈ ಮೂಲಕ ಭಾರತದ ಪ್ರಜಾಪ್ರಭುತ್ವದ ಇತಿಹಾಸದಲ್ಲೇ ಅತ್ಯಂತ ದೀರ್ಘಾವಧಿ ಸೇವೆ ಸಲ್ಲಿಸಿದ ‘ಚುನಾಯಿತ ಪ್ರಧಾನಿ’ ಎಂಬ ಹೆಗ್ಗಳಿಕೆಗೆ ನರೇಂದ್ರ ಮೋದಿ ಪಾತ್ರರಾಗಿದ್ದಾರೆ. 1952ರ ನಂತರದ ಸುದೀರ್ಘ ದಾಖಲೆಯನ್ನು ಮುರಿದು ಮುನ್ನಡೆದಿರುವ ಪ್ರಧಾನಿ ಮೋದಿಯವರ ಸಾಧನೆಯನ್ನು ಇಡೀ ಜಗತ್ತೇ ಕೊಂಡಾಡುತ್ತಿದೆ ಎಂದು ರಾಜ್ಯ ವಿಧಾನ ಪರಿಷತ್ ಸದಸ್ಯ ಕೇಶವ ಪ್ರಸಾದ್ ಹರ್ಷ ವ್ಯಕ್ತಪಡಿಸಿದರು.

ನಗರದ ಜಿಲ್ಲಾ ಬಿಜೆಪಿ ಕಾರ್ಯಾಲಯದಲ್ಲಿ ಹಮ್ಮಿಕೊಂಡಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕಳೆದ 12 ವರ್ಷಗಳಲ್ಲಿ ಮೋದಿ ಸರ್ಕಾರ ದೇಶದ ಸರ್ವಾಂಗೀಣ ಅಭಿವೃದ್ಧಿಗೆ ಕೈಗೊಂಡಿರುವ ಐತಿಹಾಸಿಕ ನಿರ್ಧಾರಗಳು ಹಾಗೂ ಜನಕಲ್ಯಾಣ ಯೋಜನೆಗಳ ಪಟ್ಟಿಯನ್ನು ಬಿಚ್ಚಿಟ್ಟರು.

ಮೋದಿ ಸರ್ಕಾರದ 12 ವರ್ಷಗಳ ಐತಿಹಾಸಿಕ ಮೈಲಿಗಲ್ಲುಗಳು:

  • ಸ್ವಚ್ಛ ಭಾರತ ಕ್ರಾಂತಿ: ದೇಶಾದ್ಯಂತ 11 ಕೋಟಿಗೂ ಅಧಿಕ ಶೌಚಾಲಯಗಳನ್ನು ನಿರ್ಮಿಸುವ ಮೂಲಕ ಜಾಗತಿಕ ಮಟ್ಟದಲ್ಲಿ ಭಾರತ ಹೊಸ ದಾಖಲೆ ಬರೆದಿದೆ.

  • ಬ್ಯಾಂಕಿಂಗ್ ಕ್ರಾಂತಿ: ಬ್ಯಾಂಕ್ ರಾಷ್ಟ್ರೀಕರಣದ ನಂತರವೂ ಬ್ಯಾಂಕಿಂಗ್ ವ್ಯವಸ್ಥೆಯಿಂದ ವಂಚಿತರಾಗಿದ್ದ ಬಡವರಿಗಾಗಿ 58 ಕೋಟಿಗೂ ಹೆಚ್ಚು ‘ಜೀರೋ ಬ್ಯಾಲೆನ್ಸ್’ ಜನಧನ್ ಖಾತೆಗಳನ್ನು ತೆರೆಯಲಾಗಿದೆ.

  • ವಿಶ್ವಗುರು ಸ್ಥಾನ: ಕೋವಿಡ್ ಮಹಾಮಾರಿಯ ಕಠಿಣ ಸಂದರ್ಭದಲ್ಲಿ ಭಾರತದಲ್ಲೇ ಸ್ವದೇಶಿ ಲಸಿಕೆ ಉತ್ಪಾದಿಸಿ, ಜಗತ್ತಿನ 100ಕ್ಕೂ ಹೆಚ್ಚು ದೇಶಗಳಿಗೆ ನೆರವು ನೀಡುವ ಮೂಲಕ ಭಾರತ ತನ್ನ ಜಾಗತಿಕ ನಾಯಕತ್ವವನ್ನು ಸಾಬೀತುಪಡಿಸಿದೆ.

  • ರೈತ ಕಲ್ಯಾಣ ಯೋಜನೆಗಳು: ಪಿಎಂ ಕಿಸಾನ್ ಯೋಜನೆಯಡಿ ದೇಶದ ಕೋಟ್ಯಂತರ ರೈತರ ಖಾತೆಗಳಿಗೆ 4 ಲಕ್ಷ ಕೋಟಿ ರೂ.ಗೂ ಅಧಿಕ ಹಣವನ್ನು ನೇರವಾಗಿ ಜಮಾ ಮಾಡಲಾಗಿದೆ. ಜಾಗತಿಕ ಮಾರುಕಟ್ಟೆಯಲ್ಲಿ 2,200 ರೂ. ಬೆಲೆ ಬಾಳುವ ಯೂರಿಯಾ ಗೊಬ್ಬರಕ್ಕೆ ಸಬ್ಸಿಡಿ ನೀಡಿ, ರೈತರಿಗೆ ಕೇವಲ 266 ರೂ.ಗೆ ತಲುಪಿಸಲಾಗುತ್ತಿದೆ. ಅಷ್ಟೇ ಅಲ್ಲದೆ, ಕಿಸಾನ್ ಕ್ರೆಡಿಟ್ ಕಾರ್ಡ್ ಮಿತಿಯನ್ನು 5 ಲಕ್ಷ ರೂ.ಗೆ ಏರಿಸಲಾಗಿದೆ.

ಅವಳಿ ಜಿಲ್ಲೆಗಳ ನೀರಿನ ಸಮಸ್ಯೆಗೆ ‘ಕೃಷ್ಣಾ ನದಿ’ ನೀರೇ ಶಾಶ್ವತ ಪರಿಹಾರ!

ಇದೇ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಬಿಜೆಪಿ ಜಿಲ್ಲಾಧ್ಯಕ್ಷ ಸೀಕಲ್ ರಾಮಚಂದ್ರಗೌಡ ಅವರು, ಚಿಕ್ಕಬಳ್ಳಾಪುರ ಹಾಗೂ ಕೋಲಾರ ಜಿಲ್ಲೆಗಳ ಜ್ವಲಂತ ನೀರಿನ ಸಮಸ್ಯೆಯ ಕುರಿತು ತೀವ್ರ ಕಳಕಳಿ ವ್ಯಕ್ತಪಡಿಸಿದರು.

“ನಮ್ಮ ಭಾಗದಲ್ಲಿ ರೇಷ್ಮೆ, ಹಾಲು, ಹೂವು ಬೆಳೆಯುವ ಕಷ್ಟಜೀವಿ ರೈತರಿದ್ದಾರೆ. ಕೃಷಿಗೆ ಯೋಗ್ಯವಾದ ಭೂಮಿಯೂ ಇದೆ. ಆದರೆ ಸೂಕ್ತ ನೀರಾವರಿ ಸೌಲಭ್ಯವಿಲ್ಲದೆ ಇಂದಿನ ಯುವಕರು ಹಳ್ಳಿಗಳನ್ನು ಬಿಟ್ಟು ಪಟ್ಟಣ ಸೇರುವ ಪರಿಸ್ಥಿತಿ ನಿರ್ಮಾಣವಾಗಿದೆ. ಬೆಂಗಳೂರಿನ ಸಂಸ್ಕರಿಸದ ಕೆಮಿಕಲ್ ಮಿಶ್ರಿತ ನೀರನ್ನು ಇಲ್ಲಿಗೆ ತಂದು ನಮ್ಮ ಫಲವತ್ತಾದ ಭೂಮಿಯನ್ನು ವಿಷಕಾರಿ ಮಾಡಲಾಗುತ್ತಿದೆ” ಎಂದು ಸೀಕಲ್ ರಾಮಚಂದ್ರಗೌಡ ಆತಂಕ ಹೊರಹಾಕಿದರು.

ಎತ್ತಿನಹೊಳೆ ಯೋಜನೆ ಇನ್ನೂ ನನೆಗುದಿಗೆ ಬಿದ್ದಿರುವುದರಿಂದ ನಮ್ಮ ಜಿಲ್ಲೆಗಳಿಗೆ ಕೃಷ್ಣಾ ನದಿ ನೀರನ್ನು ತರುವುದೇ ಸೂಕ್ತ ಪರಿಹಾರ ಎಂದು ಅವರು ಪ್ರತಿಪಾದಿಸಿದರು. “ನಮ್ಮ ಗಡಿಯಲ್ಲೇ (ಆಂಧ್ರಪ್ರದೇಶ ಗಡಿ) ಹರಿಯುವ ಕೃಷ್ಣಾ ನದಿ ನೀರನ್ನು ಗೌರಿಬಿದನೂರು, ಬಾಗೇಪಲ್ಲಿ, ಚಿಂತಾಮಣಿ ಹಾಗೂ ಶಿಡ್ಲಘಟ್ಟ ಭಾಗಕ್ಕೆ ತರುವ ಅವಶ್ಯಕತೆಯಿದೆ. ಪ್ರಸ್ತುತ ಆಂಧ್ರಪ್ರದೇಶದಲ್ಲೂ ಎನ್‌ಡಿಎ ಮೈತ್ರಿ ಸರ್ಕಾರ ಅಧಿಕಾರದಲ್ಲಿದೆ. ಹೀಗಾಗಿ ನಮ್ಮ ಕೇಂದ್ರ ನಾಯಕರ ಮೂಲಕ ಅಲ್ಲಿನ ಮುಖ್ಯಮಂತ್ರಿ ಹಾಗೂ ಉಪಮುಖ್ಯಮಂತ್ರಿಗಳೊಂದಿಗೆ ಮಾತುಕತೆ ನಡೆಸಿ ಈ ಯೋಜನೆಯನ್ನು ಸಾಕಾರಗೊಳಿಸಲು ಪ್ರಯತ್ನಿಸಲಾಗುವುದು” ಎಂದರು.

ಪಕ್ಷಾತೀತ ಹೋರಾಟಕ್ಕೆ ಕರೆ

ಚಿಕ್ಕಬಳ್ಳಾಪುರ ಜಿಲ್ಲೆಗೆ ಪ್ರಧಾನಿ ಮೋದಿಯವರು ಭೇಟಿ ನೀಡಿದ ಸಮಯದಲ್ಲೇ ನೀರಿನ ಸಮಸ್ಯೆಯ ಧ್ವನಿ ಗಟ್ಟಿಯಾಗಿದೆ. ಈಗಾಗಲೇ ಬಿಜೆಪಿಯ ಪ್ರಶಿಕ್ಷಣ ಕಾರ್ಯಕ್ರಮದಲ್ಲಿ ವಿರೋಧ ಪಕ್ಷದ ನಾಯಕರಾದ ಆರ್. ಅಶೋಕ್ ಅವರ ಮುಂದೆಯೂ ಈ ವಿಷಯವನ್ನು ಪ್ರಸ್ತಾಪಿಸಲಾಗಿದೆ. ಮುಂಬರುವ ದಿನಗಳಲ್ಲಿ ಜಿಲ್ಲೆಯ ರೈತ ಸಂಘಟನೆಗಳು, ಯುವಕರು ಹಾಗೂ ಎಲ್ಲಾ ರಾಜಕೀಯ ಪಕ್ಷಗಳ ಪ್ರಮುಖರನ್ನು ಒಗ್ಗೂಡಿಸಿಕೊಂಡು ‘ಕೃಷ್ಣಾ ನದಿ ನೀರಿಗಾಗಿ ಪಕ್ಷಾತೀತ ಹೋರಾಟ’ವನ್ನು ಹಮ್ಮಿಕೊಳ್ಳಲಾಗುವುದು ಎಂದು ರಾಮಚಂದ್ರಗೌಡ ಇದೇ ವೇಳೆ ಪ್ರಕಟಿಸಿದರು.

ಈ ಪತ್ರಿಕಾಗೋಷ್ಠಿಯಲ್ಲಿ ಶಿಡ್ಲಘಟ್ಟದ ಮಾಜಿ ಶಾಸಕ ರಾಜಣ್ಣ, ಚಿಂತಾಮಣಿ ಮುಖಂಡ ವೇಣುಗೋಪಾಲ್, ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ಎಚ್.ಎಸ್. ಮುರಳಿಧರ್, ಕೆ.ಬಿ. ಮುರಳಿ, ಮಧು ಸೂರ್ಯನಾರಾಯಣ ರೆಡ್ಡಿ, ರಾಷ್ಟ್ರೀಯ ಪರಿಷತ್ ಸದಸ್ಯ ಲಕ್ಷ್ಮೀನಾರಾಯಣ ಗುಪ್ತ ಸೇರಿದಂತೆ ಜಿಲ್ಲೆಯ ಹಲವು ಪ್ರಮುಖ ಮುಖಂಡರು ಹಾಗೂ ಮಂಡಲ ಅಧ್ಯಕ್ಷರು ಉಪಸ್ಥಿತರಿದ್ದರು.

US military (US CENTCOM) admits hitting an Indian-crewed oil tanker with Hellfire missiles:- ಒಮಾನ್ ಕರಾವಳಿಯಲ್ಲಿ ಭಾರತೀಯ ನಾವಿಕರಿದ್ದ ಹಡಗಿನ ಮೇಲೆ ಅಮೆರಿಕ ಕ್ಷಿಪಣಿ ದಾಳಿ: CENTCOM ಒಪ್ಪಿಗೆ, ಭಾರತ ತೀವ್ರ ಆಕ್ರೋಶ

ವಾಷಿಂಗ್ಟನ್/ನವದೆಹಲಿ: ಮಧ್ಯಪ್ರಾಚ್ಯದಲ್ಲಿ ಹೆಚ್ಚುತ್ತಿರುವ ಭೌಗೋಳಿಕ ರಾಜಕೀಯ ಉದ್ವಿಗ್ನತೆಯ ನಡುವೆ ಕಡಲ ವಲಯದಲ್ಲಿ ಆಘಾತಕಾರಿ ಬೆಳವಣಿಗೆಯೊಂದು ನಡೆದಿದೆ. ಒಮಾನ್ ಕರಾವಳಿಯ ಬಳಿ ಭಾರತೀಯ ಸಿಬ್ಬಂದಿಯನ್ನು ಹೊಂದಿದ್ದ ವಾಣಿಜ್ಯ ಹಡಗಿನ ಮೇಲೆ ತಾನೇ ‘ಹೆಲ್‌ಫೈರ್ ಕ್ಷಿಪಣಿ’ (Hellfire Missiles) ದಾಳಿ ನಡೆಸಿರುವುದಾಗಿ ಅಮೆರಿಕದ ಮಿಲಿಟರಿ ಕಮಾಂಡ್ (US CENTCOM) ಅಧಿಕೃತವಾಗಿ ಒಪ್ಪಿಕೊಂಡಿದೆ. ಗಲ್ಫ್ ಪ್ರದೇಶದಲ್ಲಿ ಭಾರತೀಯ ನಾವಿಕರಿದ್ದ ಹಡಗುಗಳ ಮೇಲೆ ಈ ವಾರ ನಡೆದ ಮೂರನೇ ದಾಳಿ ಇದಾಗಿದ್ದು, ಭಾರತ ಸರ್ಕಾರ ಈ ಬಗ್ಗೆ ತೀವ್ರ ಆತಂಕ ಹಾಗೂ ಆಕ್ರೋಶ ವ್ಯಕ್ತಪಡಿಸಿದೆ.

ಇಂಜಿನ್ ಕೋಣೆ ಗುರಿಯಾಗಿಸಿ ದಾಳಿ: CENTCOM ಸಮರ್ಥನೆ

ಅಮೆರಿಕದ ಸೆಂಟ್ರಲ್ ಕಮಾಂಡ್ (CENTCOM) ತನ್ನ ಸಾಮಾಜಿಕ ಮಾಧ್ಯಮ ಎಕ್ಸ್ (X) ಖಾತೆಯಲ್ಲಿ ಈ ದಾಳಿಯನ್ನು ಸಮರ್ಥಿಸಿಕೊಂಡು ಪೋಸ್ಟ್ ಮಾಡಿದೆ. ಗಿನಿ-ಬಿಸೌ ದೇಶದ ಧ್ವಜವನ್ನು ಹೊಂದಿದ್ದ ‘ಎಂ/ಟಿ ಜಲವೀರ್’ (M/T Jalveer) ಎಂಬ ತೈಲ ಟ್ಯಾಂಕರ್ ಹಡಗು ಒಮಾನ್ ಕೊಲ್ಲಿಯ ಮೂಲಕ ಇರಾನ್‌ನ ತೈಲವನ್ನು ಸಾಗಿಸಲು ಪ್ರಯತ್ನಿಸುತ್ತಿತ್ತು ಎಂದು ಅಮೆರಿಕ ಹೇಳಿದೆ.

ಇರಾನ್ ಮೇಲಿನ ಅಮೆರಿಕದ ದಿಗ್ಬಂಧನದ ನಿಯಮಗಳನ್ನು ಜಾರಿಗೊಳಿಸುವ ಭಾಗವಾಗಿ, ಅಮೆರಿಕ ಪಡೆಗಳು ಈ ಹಡಗಿಗೆ ಸರಣಿ ಸೂಚನೆಗಳನ್ನು ನೀಡಿದ್ದವು. ಆದರೆ ಹಡಗಿನ ಸಿಬ್ಬಂದಿ ಆ ಸೂಚನೆಗಳನ್ನು ಪಾಲಿಸಲು ವಿಫಲರಾದ ಹಿನ್ನೆಲೆಯಲ್ಲಿ, ಅಮೆರಿಕದ ಯುದ್ಧ ವಿಮಾನವು ಹಡಗಿನ ಇಂಜಿನ್ ಕೋಣೆಯನ್ನು (Engine Room) ಗುರಿಯಾಗಿಸಿಕೊಂಡು ಎರಡು ಹೆಲ್‌ಫೈರ್ ಕ್ಷಿಪಣಿಗಳನ್ನು ಉಡಾಯಿಸಿದೆ ಎಂದು CENTCOM ತಿಳಿಸಿದೆ. ಕ್ಷಿಪಣಿ ದಾಳಿಯ ಪರಿಣಾಮವಾಗಿ ಹಡಗಿನಲ್ಲಿ ಭಾರಿ ಬೆಂಕಿ ಕಾಣಿಸಿಕೊಂಡಿದೆ.

ಈ ವಾರದಲ್ಲೇ ಇದು 3ನೇ ದಾಳಿ!

ಗಲ್ಫ್ ವಲಯದಲ್ಲಿ ಭಾರತೀಯ ಸಿಬ್ಬಂದಿಯನ್ನು ಒಳಗೊಂಡ ವಾಣಿಜ್ಯ ನೌಕೆಗಳ ಮೇಲೆ ಅಮೆರಿಕ ಪಡೆಗಳು ನಡೆಸಿದ ಸರಣಿ ದಾಳಿಗಳಲ್ಲಿ ಇದು ಮೂರನೆಯದಾಗಿದೆ:

  • ಮೊದಲ ದಾಳಿ: ಸೋಮವಾರ ‘ಎಂ/ಟಿ ಮಾರಿವೆಕ್ಸ್’ (MT Marivex) ಹಡಗಿನ ಮೇಲೆ ದಾಳಿ ನಡೆದಿತ್ತು.

  • ಎರಡನೇ ದಾಳಿ: ಮಂಗಳವಾರ ‘ಎಂ/ಟಿ ಸೆಟ್ಟೆಬೆಲ್ಲೊ’ (MT Settebello) ಎಂಬ ಹಡಗಿನ ಇಂಜಿನ್ ಕೋಣೆಗೆ ಕ್ಷಿಪಣಿ ಅಪ್ಪಳಿಸಿ ಮೂವರು ಭಾರತೀಯ ನಾವಿಕರು ದುರಂತವಾಗಿ ಸಾವನ್ನಪ್ಪಿದ್ದರು.

  • ಮೂರನೇ ದಾಳಿ: ಇದೀಗ ಗುರುವಾರ 20 ಭಾರತೀಯ ಸಿಬ್ಬಂದಿ ಇದ್ದ ‘ಎಂ/ಟಿ ಜಲವೀರ್’ ಹಡಗಿನ ಮೇಲೆ ದಾಳಿ ನಡೆದಿದೆ. ಅದೃಷ್ಟವಶಾತ್ ಈ ದಾಳಿಯಲ್ಲಿ ಜಲವೀರ್ ಹಡಗಿನಲ್ಲಿದ್ದ ಎಲ್ಲಾ 20 ಭಾರತೀಯ ನಾವಿಕರು ಸುರಕ್ಷಿತವಾಗಿದ್ದು, ಅವರನ್ನು ಒಮಾನ್ ನೌಕಾಪಡೆಯ ನೆರವಿನೊಂದಿಗೆ ಸ್ಥಳಾಂತರಿಸಲಾಗುತ್ತಿದೆ ಎಂದು ತಿಳಿದುಬಂದಿದೆ.

ಭಾರತದ ತೀವ್ರ ಆಕ್ರೋಶ ಮತ್ತು ಎಚ್ಚರಿಕೆ

ತಮ್ಮದೇ ಮಿತ್ರರಾಷ್ಟ್ರವಾದ ಅಮೆರಿಕದಿಂದಲೇ ಭಾರತೀಯ ನಾವಿಕರಿದ್ದ ಹಡಗುಗಳ ಮೇಲೆ ಸರಣಿ ದಾಳಿಗಳು ನಡೆಯುತ್ತಿರುವುದಕ್ಕೆ ಭಾರತ ಸರ್ಕಾರ ತೀವ್ರ ಆಕ್ರೋಶ ವ್ಯಕ್ತಪಡಿಸಿದೆ. ನವದೆಹಲಿಯಲ್ಲಿರುವ ಅಮೆರಿಕದ ಉಪ ರಾಯಭಾರಿಯನ್ನು ಕರೆಸಿ ಭಾರತ ಈಗಾಗಲೇ ತನ್ನ ಕಠಿಣ ರಾಜತಾಂತ್ರಿಕ ಪ್ರತಿಭಟನೆಯನ್ನು ದಾಖಲಿಸಿದೆ.

ಭಾರತದ ವಿದೇಶಾಂಗ ವ್ಯವಹಾರಗಳ ಸಚಿವಾಲಯದ (MEA) ವಕ್ತಾರ ರಣಧೀರ್ ಜೈಸ್ವಾಲ್ ಈ ಕುರಿತು ಮಾತನಾಡಿ:

“ಕಳೆದ ಕೆಲವು ದಿನಗಳಲ್ಲಿ ಪಶ್ಚಿಮ ಏಷ್ಯಾದಲ್ಲಿ ಭಾರತೀಯ ನಾವಿಕರಿದ್ದ ಹಡಗುಗಳಿಗೆ ಸಂಬಂಧಿಸಿದಂತೆ ಹಲವಾರು ಘಟನೆಗಳು ನಡೆದಿವೆ. ಇಂತಹ ದಾಳಿಗಳು ಅತ್ಯಂತ ಆತಂಕಕಾರಿ ಮತ್ತು ಇವುಗಳನ್ನು ತಕ್ಷಣವೇ ನಿಲ್ಲಿಸಬೇಕು. ನಮ್ಮ ನಾವಿಕರ ಸಮುದಾಯದ ಕಲ್ಯಾಣ ಮತ್ತು ಸುರಕ್ಷತೆಗೆ ಭಾರತ ಸರ್ಕಾರ ಅತ್ಯುನ್ನತ ಪ್ರಾಮುಖ್ಯತೆಯನ್ನು ನೀಡುತ್ತದೆ. ಗಲ್ಫ್ ಪ್ರದೇಶದಲ್ಲಿ ಸಂಚರಿಸುವ ಕಡಲ ಸಾರಿಗೆ ಮತ್ತು ನಾಗರಿಕ ಸಿಬ್ಬಂದಿಯ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಲು ಎಲ್ಲಾ ಸಶಸ್ತ್ರ ಪಡೆಗಳು ಸಂಯಮವನ್ನು ಕಾಯ್ದುಕೊಳ್ಳಬೇಕು.”

ಉದ್ವಿಗ್ನತೆಯ ಹಿನ್ನೆಲೆ ಏನು?

ಅಮೆರಿಕ ಮತ್ತು ಇರಾನ್ ನಡುವಿನ ಯುದ್ಧದ ಪರಿಸ್ಥಿತಿ ಮತ್ತಷ್ಟು ಬಿಗಡಾಯಿಸಿದ್ದು, ಕದನ ವಿರಾಮ ಸಂಪೂರ್ಣವಾಗಿ ಹಳಿ ತಪ್ಪಿದೆ. ಇರಾನ್ ಪಡೆಗಳು ಇತ್ತೀಚೆಗೆ ಹಾರ್ಮುಜ್ ಜಲಸಂಧಿಯಲ್ಲಿ ಅಮೆರಿಕದ ಹೆಲಿಕಾಪ್ಟರ್ ಒಂದನ್ನು ಹೊಡೆದುರುಳಿಸಿದ ನಂತರ, ಅಮೆರಿಕವು ಇರಾನ್‌ನ ತೈಲ ಸಾರಿಗೆಯನ್ನು ಸಂಪೂರ್ಣವಾಗಿ ನಿರ್ಬಂಧಿಸಲು ಗಲ್ಫ್ ವಲಯದಲ್ಲಿ ತೀವ್ರ ಕಡಲ ದಿಗ್ಬಂಧನವನ್ನು ಹೇರಿದೆ. ಈ ಸಂಘರ್ಷದ ನಡುವೆ ಅಂತರರಾಷ್ಟ್ರೀಯ ವಾಣಿಜ್ಯ ಹಡಗುಗಳಲ್ಲಿ ಕೆಲಸ ಮಾಡುತ್ತಿರುವ ಭಾರತೀಯ ಜೀವಗಳು ಈಗ ಅಪಾಯಕ್ಕೆ ಸಿಲುಕುವಂತಾಗಿದೆ.

Stay connected

0FansLike
0FollowersFollow
0SubscribersSubscribe
- Advertisement -
Google search engine

Latest article

Ayodhya Ram Mandir:- ಅಯೋಧ್ಯೆ ರಾಮ ಮಂದಿರದಲ್ಲಿ ಕೋಟಿ ಕೋಟಿ ಲೂಟಿ: 500 ರೂಪಾಯಿಯಿಂದ ಶುರುವಾಗಿ 3 ಕೋಟಿಗೆ...

0
ದೇಶದ ಅತ್ಯಂತ ಭದ್ರತೆಯ ಧಾರ್ಮಿಕ ಕ್ಷೇತ್ರಗಳಲ್ಲಿ ಒಂದಾದ ಅಯೋಧ್ಯೆಯ ಶ್ರೀರಾಮ ಮಂದಿರದ ಹುಂಡಿ ಹಣ ಕಳ್ಳತನ (Ayodhya Ram Mandir Donation Theft Case) ಪ್ರಕರಣ ದಿನಕ್ಕೊಂದು ತಿರುವು ಪಡಿತಾ ಇದೆ. ಭಕ್ತರು...

Bengaluru Crime News: ಹೆತ್ತವರನ್ನೇ ಕೊಂದ ಕ್ರೂರಿಗಳು: ಸತ್ಯ ಬಾಯಿಬಿಡಿಸಲು ಖಾಕಿ ಪಡೆ ಪ್ಲಾನ್, ಹಂತಕರಿಗೆ ನಾರ್ಕೋ ಟೆಸ್ಟ್..!

0
Bengaluru: ಬೆಂಗಳೂರು: ಕೆ.ಆರ್. ಪುರಂನಲ್ಲಿ ನಡೆದ ಭೀಕರ ತ್ರಿವಳಿ ಹತ್ಯಾಕಾಂಡ ರಾಜ್ಯವನ್ನೇ ಬೆಚ್ಚಿಬೀಳಿಸಿದೆ. ಹತ್ತಿರದ ಸಂಬಂಧಿಗಳೇ, ಅದೂ ಸ್ವಂತ ತಂದೆ, ತಾಯಿ ಮತ್ತು ತಂಗಿಯನ್ನೇ ಹತ್ಯೆಗೈದ ಶ್ವೇತಾ ಮತ್ತು ಕೆನತ್ ಅವರ ಕೃತ್ಯಕ್ಕೆ...

Bangalore News:- ರಾಜ್ಯ ಸಚಿವ ಸಂಪುಟದ ಖಾತೆ ಹಂಚಿಕೆ ಅಂತಿಮವಾಗಿದೆ ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಸ್ಪಷ್ಟಪಡಿಸಿದ್ದಾರೆ..!

0
Bangalore:- ಬೆಂಗಳೂರು: ರಾಜ್ಯದ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ ನಂತರ ಮೊದಲ ಬಾರಿಗೆ ವಿಧಾನಸೌಧಕ್ಕೆ ಭೇಟಿ ನೀಡಿದ ಸಿಎಂ ಡಿ.ಕೆ. ಶಿವಕುಮಾರ್, ನಾಡಿನ ದಾರ್ಶನಿಕರು ಮತ್ತು ಹಿರಿಯ ರಾಜಕಾರಣಿಗಳ ಪ್ರತಿಮೆಗಳಿಗೆ ಪುಷ್ಪಾರ್ಚನೆ ಸಲ್ಲಿಸಿ ಗೌರವ...