Bihar Crime news:- ಬಿಹಾರದಲ್ಲಿ ಮನುಷ್ಯಕುಲವೇ ತಲೆತಗ್ಗಿಸುವಂತಹ ಅತ್ಯಂತ ಕ್ರೂರ ಮತ್ತು ಅಮಾನವೀಯ ಘಟನೆಯೊಂದು ನಡೆದಿದೆ. ಮನೆಯೊಳಗೆ ನುಗ್ಗಿದ ಕಾಮುಕರ ಗುಂಪೊಂದು ಪತಿಯನ್ನು ಕೋಣೆಯಲ್ಲಿ ಕೂಡಿ ಹಾಕಿ, ವಿವಾಹಿತ ಮಹಿಳೆಯ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿದ್ದಾರೆ. ಅಷ್ಟೇ ಅಲ್ಲದೆ, ಆಕೆಯ ಗುಪ್ತಾಂಗಕ್ಕೆ ಗುಂಡು (ಲೈವ್ ಬುಲೆಟ್), ಕಲ್ಲು ಹಾಗೂ ಮರದ ತುಂಡನ್ನು ತುರುಕಿ ವಿಕೃತ ಕ್ರೌರ್ಯ ಮೆರೆದಿದ್ದಾರೆ.

ನಡುರಾತ್ರಿ ನಡೆದ ಘೋರ ಕೃತ್ಯ
ಈ ಬೆಚ್ಚಿಬೀಳಿಸುವ ಘಟನೆ ಜೂನ್ 11 ರಂದು ಬಿಹಾರದ ಬೇಗುಸರಾಯ್ನ ಚಾಕಿಯಾ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ನಡುರಾತ್ರಿ ಸುಮಾರು 11:30 ರ ಸುಮಾರಿಗೆ ಮಹಿಳೆ ಶೌಚಾಲಯಕ್ಕೆ ತೆರಳಿದ್ದಾಗ ಐದು ಜನ ದುಷ್ಕರ್ಮಿಗಳು ಏಕಾಏಕಿ ಮನೆಗೆ ನುಗ್ಗಿದ್ದಾರೆ. ಮೊದಲು ಮಹಿಳೆಯ ಪತಿಯನ್ನು ಕೋಣೆಯೊಂದರಲ್ಲಿ ಹಾಕಿ ಬೀಗ ಹಾಕಿದ್ದಾರೆ.
ಮಹಿಳೆ ಶೌಚಾಲಯದಿಂದ ಹೊರಬರುತ್ತಿದ್ದಂತೆ ಆಕೆಯ ಬಾಯಿಗೆ ಬಟ್ಟೆ ತುರುಕಿ, ಕಿರುಚದಂತೆ ತಡೆದಿದ್ದಾರೆ. ನಂತರ ಮನೆಯ ಹೊರಗಿನ ನಿರ್ಜನ ಪ್ರದೇಶಕ್ಕೆ ಎಳೆದೊಯ್ದು ಐವರೂ ಸೇರಿ ರಾಕ್ಷಸರಂತೆ ಅತ್ಯಾಚಾರ ಎಸಗಿದ್ದಾರೆ. ಮಹಿಳೆ ಪ್ರತಿರೋಧ ಒಡ್ಡಲು ಯತ್ನಿಸಿದಾಗ ಬ್ಲೇಡ್ನಿಂದ ಆಕೆಯ ಎದೆ ಮತ್ತು ತೊಡೆಯ ಭಾಗವನ್ನು ಕೊಯ್ದು ವಿಕೃತಿ ಮೆರೆದಿದ್ದಾರೆ.
ವೈದ್ಯಕೀಯ ತಪಾಸಣೆಯಲ್ಲಿ ಬಯಲಾದ ವಿಕೃತಿ
ದುಷ್ಕರ್ಮಿಗಳ ಮೃಗೀಯ ದಾಳಿಯಿಂದಾಗಿ ಮಹಿಳೆ ಪ್ರಜ್ಞೆ ಕಳೆದುಕೊಂಡಿದ್ದರು. ಆಕೆಯ ಅತ್ತಿಗೆ ಬಂದು ಕೋಣೆಯ ಬಾಗಿಲು ತೆರೆದು ಪತಿಯನ್ನು ರಕ್ಷಿಸಿದ ಬಳಿಕ ಪೊಲೀಸರಿಗೆ ಮಾಹಿತಿ ನೀಡಲಾಗಿದೆ. ತಕ್ಷಣವೇ ಸಂತ್ರಸ್ತೆಯನ್ನು ಬರೌನಿ ಆಸ್ಪತ್ರೆಗೆ, ಅಲ್ಲಿಂದ ಹೆಚ್ಚಿನ ಚಿಕಿತ್ಸೆಗಾಗಿ ಸದರ್ ಆಸ್ಪತ್ರೆಗೆ ದಾಖಲಿಸಲಾಯಿತು.
ವೈದ್ಯರ ಆಘಾತಕಾರಿ ಹೇಳಿಕೆ: ಚಿಕಿತ್ಸೆ ಮುಗಿದು ಮನೆಗೆ ಮರಳಿದ ಮೇಲೆಯೂ ಮಹಿಳೆಗೆ ಖಾಸಗಿ ಭಾಗಗಳಲ್ಲಿ ಅಸಹನೀಯ ನೋವು ಮುಂದುವರಿದಿತ್ತು. ಹೀಗಾಗಿ ಮತ್ತೆ ಆಸ್ಪತ್ರೆಗೆ ಕರೆತಂದು ತೀವ್ರ ವೈದ್ಯಕೀಯ ತಪಾಸಣೆಗೆ ಒಳಪಡಿಸಿದಾಗ ವೈದ್ಯರೇ ಕಂಗಾಲಾಗಿದ್ದಾರೆ. ಅತ್ಯಾಚಾರದ ವೇಳೆ ಪ್ರಜ್ಞೆ ತಪ್ಪಿದ್ದ ಮಹಿಳೆಯ ಗುಪ್ತಾಂಗದೊಳಗೆ ಕಾಮುಕರು ಒಂದು ಜೀವಂತ ಗುಂಡು (Live Bullet), ಕಲ್ಲು ಮತ್ತು ಮರದ ತುಂಡನ್ನು ತುರುಕಿದ್ದರು! ಶಸ್ತ್ರಚಿಕಿತ್ಸೆಯ ಮೂಲಕ ವೈದ್ಯರು ಇವುಗಳನ್ನು ಹೊರಗೆ ತೆಗೆದಿದ್ದಾರೆ.
ಪೊಲೀಸರ ನಿರ್ಲಕ್ಷ್ಯವೇ ಕಾರಣ?
ಸಂತ್ರಸ್ತೆ ನೀಡಿರುವ ಹೇಳಿಕೆ ಪೊಲೀಸ್ ವ್ಯವಸ್ಥೆಯ ಅಸಲಿ ಮುಖವನ್ನು ಬಯಲು ಮಾಡಿದೆ. ಮೂರು ತಿಂಗಳ ಹಿಂದೆಯೂ ಮೂವರು ದುಷ್ಕರ್ಮಿಗಳು ಇದೇ ಮಹಿಳೆಯ ಮನೆಗೆ ನುಗ್ಗಿ ಹಲ್ಲೆ ನಡೆಸಿ, ಹಣ-ಒಡವೆ ದೋಚಿದ್ದರು. ಆ ಸಂದರ್ಭದಲ್ಲೂ ಲೈಂಗಿಕ ದೌರ್ಜನ್ಯಕ್ಕೆ ಯತ್ನಿಸಲಾಗಿತ್ತು. ಈ ಬಗ್ಗೆ ಪೊಲೀಸರಿಗೆ ದೂರು ನೀಡಿದ್ದರೂ ಯಾವುದೇ ಸೂಕ್ತ ಕ್ರಮ ಕೈಗೊಂಡಿರಲಿಲ್ಲ. ಅಂದೇ ಪೊಲೀಸರು ಎಚ್ಚೆತ್ತುಕೊಂಡಿದ್ದರೆ ಇಂದು ಇಂತಹ ಘೋರ ದುರಂತ ನಡೆಯುತ್ತಿರಲಿಲ್ಲ ಎಂದು ಸಂತ್ರಸ್ತೆ ಅಳಲು ತೋಡಿಕೊಂಡಿದ್ದಾರೆ.
ತನಿಖೆಗೆ ಆದೇಶಿಸಿದ ಡಿಎಸ್ಪಿ
ಪ್ರಕರಣ ಇಡೀ ರಾಜ್ಯಾದ್ಯಂತ ತೀವ್ರ ಆಕ್ರೋಶಕ್ಕೆ ಕಾರಣವಾಗುತ್ತಿದ್ದಂತೆ ಎಚ್ಚೆತ್ತುಕೊಂಡಿರುವ ಡಿಎಸ್ಪಿ ಆನಂದ್ ಕುಮಾರ್ ಪಾಂಡೆ, ಘಟನೆಯ ತನಿಖೆಗೆ ಆದೇಶಿಸಿದ್ದಾರೆ. ತಲೆಮರೆಸಿಕೊಂಡಿರುವ ಐದೂ ಜನ ಆರೋಪಿಗಳ ಪತ್ತೆಗೆ ಜಾಲ ಬೀಸಲಾಗಿದ್ದು, ಶೀಘ್ರದಲ್ಲೇ ಬಂಧಿಸುವುದಾಗಿ ತಿಳಿಸಿದ್ದಾರೆ. ಜೊತೆಗೆ, ಈ ಹಿಂದೆ ದೂರು ನೀಡಿದ್ದಾಗ ನಿರ್ಲಕ್ಷ್ಯ ವಹಿಸಿದ ಪೊಲೀಸ್ ಅಧಿಕಾರಿಗಳ ಮೇಲೂ ಸೂಕ್ತ ಇಲಾಖಾ ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದ್ದಾರೆ.
ಇಂತಹ ಘಟನೆಗಳು ಸಮಾಜದಲ್ಲಿ ಮಹಿಳೆಯರ ಸುರಕ್ಷತೆಯನ್ನು ಮತ್ತೊಮ್ಮೆ ಪ್ರಶ್ನಿಸುವಂತೆ ಮಾಡಿದ್ದು, ಕಾಮುಕರಿಗೆ ಕಠಿಣಾತಿಕಠಿಣ ಶಿಕ್ಷೆಯಾಗಬೇಕು ಎಂಬ ಆಗ್ರಹ ಕೇಳಿಬರುತ್ತಿದೆ.






