ಚಿಕ್ಕಬಳ್ಳಾಪುರ ಜಿಲ್ಲೆಯ ಸ್ಥಳೀಯ ಪ್ರತಿಭೆಗಳು ಸೇರಿ ಸಿನೆಮಾ ಬ್ಯಾಕ್ಗ್ರೌಂಡ್ ಇಲ್ಲದಿದ್ದರೂ ಚಿತ್ರರಂಗದಲ್ಲಿ ಅದ್ಭುತ ಸಾಧನೆ ಮಾಡಬಹುದು ಎಂಬುದನ್ನು ನಿರೂಪಿಸಲು ಹೊರಟಿದ್ದಾರೆ. ಗ್ರಾಮೀಣ ಸೊಗಡಿನ ಹಿನ್ನೆಲೆಯುಳ್ಳ ವಿಭಿನ್ನ ಪ್ರೇಮಕಥೆಯುಳ್ಳ ತೆಲುಗಿನ ‘ಕಾಗಿತಂ ಪಡವಲು’ (Kagitham Padavalu) ಚಿತ್ರದ ಹಾಡುಗಳು ಈಗ ಅಧಿಕೃತವಾಗಿ ಬಿಡುಗಡೆಯಾಗಿದ್ದು, ಶೀಘ್ರದಲ್ಲೇ ಈ ಸಿನಿಮಾ ಕನ್ನಡದಲ್ಲೂ ಡಬ್ ಆಗಿ ತೆರೆಗೆ ಬರಲು ಸಜ್ಜಾಗಿದೆ!
ಚಿಕ್ಕಬಳ್ಳಾಪುರ ನಗರದ ಪತ್ರಕರ್ತರ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಚಿತ್ರದ ಸಹಾಯಕ ನಿರ್ದೇಶಕರಾದ ಸದಾನಂದ ಹಾಗೂ ನಿರ್ಮಾಪಕರು ಚಿತ್ರದ ವಿಶೇಷತೆಗಳನ್ನು ಮಾಧ್ಯಮಗಳ ಮುಂದೆ ಹಂಚಿಕೊಂಡಿದ್ದಾರೆ.
ಹಳ್ಳಿ ಸೊಗಡಿನ ಪ್ರೇಮಕಥೆ: ಸವಾಲುಗಳ ಅನಾವರಣ
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಹಾಯಕ ನಿರ್ದೇಶಕ ಸದಾನಂದ ಅವರು, “ಯಾವುದೇ ಸಿನಿಮಾ ಹಿನ್ನೆಲೆ ಇಲ್ಲದ ಸಾಮಾನ್ಯ ಜನರೂ ಕೂಡ ಚಿತ್ರರಂಗದಲ್ಲಿ ಬೆಳೆಯಬಹುದು ಎಂಬುದಕ್ಕೆ ಈ ಚಿತ್ರವೇ ಸಾಕ್ಷಿ. ಇಂದಿನ ಪೀಳಿಗೆಯ ಪ್ರೇಮಿಗಳು ಎದುರಿಸುವ ಜಾತೀಯತೆ ಹಾಗೂ ಸವಾಲುಗಳನ್ನು ನಿರ್ದೇಶಕ ಎಂ.ಜಿ ತುಕಾರಾಂ ಅವರು ಈ ಸಿನಿಮಾದಲ್ಲಿ ಅದ್ಭುತವಾಗಿ ತೆರೆಮೇಲೆ ತಂದಿದ್ದಾರೆ,” ಎಂದರು.
ಸಂಪೂರ್ಣವಾಗಿ ಹಳ್ಳಿ ಭಾಷೆಯಲ್ಲಿ ಮೂಡಿಬಂದಿರುವ ಈ ಚಿತ್ರ ಪ್ರತಿಯೊಬ್ಬರಿಗೂ ಸುಲಭವಾಗಿ ಕನೆಕ್ಟ್ ಆಗಲಿದೆಯಂತೆ. ಈಗಾಗಲೇ ತೆಲುಗಿನಲ್ಲಿ ಸೆನ್ಸಾರ್ ಪ್ರಕ್ರಿಯೆ ಮುಗಿದಿದ್ದು, ಕನ್ನಡ ಪ್ರೇಕ್ಷಕರನ್ನೂ ರಂಜಿಸಲು ಶೀಘ್ರದಲ್ಲೇ ಕನ್ನಡ ಡಬ್ಬಿಂಗ್ ಆವೃತ್ತಿಯನ್ನು ಬಿಡುಗಡೆ ಮಾಡಲು ಚಿತ್ರತಂಡ ಚಿಂತನೆ ನಡೆಸಿದೆ.

ಟಿ-ಸೀರಿಸ್ ಪಾಲಾದ ಆಡಿಯೋ ಹಕ್ಕು: ಶರ್ವಾನಂದ್ ಬೆಂಬಲ
ಚಿತ್ರದ ಹಾಡುಗಳ ಗುಣಮಟ್ಟಕ್ಕೆ ಮನಸೋತ ಪ್ರಸಿದ್ಧ ಆಡಿಯೋ ಸಂಸ್ಥೆ ‘ಟಿ-ಸೀರಿಸ್’ (T-Series) ಇದರ ಆಡಿಯೋ ಹಕ್ಕನ್ನು ಖರೀದಿಸಿದೆ. ಪ್ರಸ್ತುತ ಚಿತ್ರದ ಹಾಡುಗಳು ಯೂಟ್ಯೂಬ್ನಲ್ಲಿ ಲಭ್ಯವಿದ್ದು, ಕೇಳುಗರಿಂದ ಉತ್ತಮ ಪ್ರತಿಕ್ರಿಯೆ ಪಡೆದುಕೊಳ್ಳುತ್ತಿವೆ. ಇನ್ನು ವಿಶೇಷವೆಂದರೆ, ತೆಲುಗಿನ ಖ್ಯಾತ ನಟ ಶರ್ವಾನಂದ್ ಅವರು ಈ ಚಿತ್ರದ ಟ್ರೈಲರ್ ಬಿಡುಗಡೆ ಮಾಡಿಕೊಟ್ಟು ಚಿತ್ರತಂಡಕ್ಕೆ ದೊಡ್ಡ ಮಟ್ಟದ ಬೆಂಬಲ ಸೂಚಿಸಿದ್ದಾರೆ.
4 ಕೋಟಿ ಬಜೆಟ್, ಸ್ಟಾರ್ ತಾರಾಗಣ!
ಕೊರೊನಾ ಸಮಯದ ಕಠಿಣ ಪರಿಸ್ಥಿತಿಯಲ್ಲಿ ಆರಂಭವಾದ ಈ ಸಿನಿಮಾ, ಸಾಕಷ್ಟು ಏರುಪೇರುಗಳ ನಡುವೆಯೂ ಸರಿಸುಮಾರು 4 ಕೋಟಿ ರೂ. ಬಜೆಟ್ನಲ್ಲಿ ಅತ್ಯಂತ ಗುಣಮಟ್ಟವಾಗಿ ಮೂಡಿಬಂದಿದೆ ಎಂದು ಚಿತ್ರದ ನಿರ್ಮಾಪಕರಾದ ಆಂಜನಪ್ಪ ಹಾಗೂ ಗಾಯತ್ರಿ ಅಂಜಿನಪ್ಪ ತಿಳಿಸಿದ್ದಾರೆ.

ಚಿತ್ರದ ಪ್ರಮುಖ ಆಕರ್ಷಣೆಗಳು:
-
ನಾಯಕ ನಟ: ಹರ್ಷವರ್ಧನ್ (ತೆಲುಗಿನ ಸೂಪರ್ ಹಿಟ್ ‘RX 100’ ಖ್ಯಾತಿಯ ಕಾರ್ತಿಕ್ ಅವರ ಸಹೋದರ)
-
ನಾಯಕಿ: ಕೇರಳ ಮೂಲದ ಕೃಷ್ಣಪ್ರಿಯಾ
-
ಪ್ರಮುಖ ಪಾತ್ರಗಳು: ಹಿರಿಯ ನಟ ಪ್ರೇಮ್ಸಾಗರ್ ಹಾಗೂ 300 ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿರುವ ದಿವಂಗತ ಶರತ್ ಬಾಬು ಅವರು ಚಿತ್ರದ ಪ್ರಮುಖ ಪಾತ್ರವೊಂದಕ್ಕೆ ಜೀವ ತುಂಬಿದ್ದಾರೆ.
-
ಸಂಗೀತ: ಗೋಕುಲ್ ರಾಜ್
“ಇದೊಂದು ಕೌಟುಂಬಿಕ ಹಾಗೂ ಪ್ರೇಮಕಥೆಯಾಗಿದ್ದು, ಇಡೀ ಕುಟುಂಬ ಒಟ್ಟಾಗಿ ಕುಳಿತು ನೋಡಬಹುದಾದ ಕ್ಲೀನ್ ಸಿನಿಮಾ,” ಎಂದು ಹೆಮ್ಮೆಯಿಂದ ಹೇಳಿಕೊಳ್ಳುತ್ತದೆ ಚಿತ್ರತಂಡ.
ಚಿಕ್ಕಬಳ್ಳಾಪುರ ಭಾಗದ ಸ್ಥಳೀಯ ಪ್ರತಿಭೆಗಳು ಮತ್ತು ತಂತ್ರಜ್ಞರು ಸೇರಿ ಮಾಡಿರುವ ಈ ಪ್ರಯತ್ನಕ್ಕೆ ಕನ್ನಡಿಗರು ಹಾಗೂ ಸಿನಿಮಾ ಪ್ರೇಕ್ಷಕರು ಪ್ರೋತ್ಸಾಹ ನೀಡಬೇಕೆಂದು ಮಾಧ್ಯಮಗಳ ಮುಖಾಂತರ ಚಿತ್ರತಂಡ ಮನವಿ ಮಾಡಿದೆ.






