BJP: Press meet by Chickballapur MP Dr.K. Sudhakar.. ನಾರಿ ಶಕ್ತಿ ವಂದನಾ ಕಾಯ್ದೆ ಜಾರಿಗೆ ಕಾಂಗ್ರೆಸ್ ಅಡ್ಡಿ: ಸಂಸದ ಡಾ. ಕೆ. ಸುಧಾಕರ್ ಗಂಭೀರ ಆರೋಪ.

ಗೃಹಲಕ್ಷ್ಮಿ ಸರಿ, ರಾಜಲಕ್ಷ್ಮಿ ಯಾಕೆ ಬೇಡ?” – ಕಾಂಗ್ರೆಸ್‌ ವಿರುದ್ಧ ಸಂಸದ ಡಾ. ಕೆ. ಸುಧಾಕರ್ ಕಿಡಿ!

 

ಚಿಕ್ಕಬಳ್ಳಾಪುರ: “ಕಾಂಗ್ರೆಸ್ ಸರ್ಕಾರಕ್ಕೆ ಮಹಿಳೆಯರು ಕೇವಲ ವೋಟ್ ಬ್ಯಾಂಕ್ ಮಾತ್ರವೇ? ಅವರಿಗೆ ಉಚಿತ ಬಸ್ ಸೀಟು ನೀಡುವ ಸರ್ಕಾರ, ವಿಧಾನಸೌಧದಲ್ಲಿ ಸೀಟು ನೀಡಲು ಯಾಕೆ ಹಿಂದೇಟು ಹಾಕುತ್ತಿದೆ?” ಹೀಗಂತ ಪ್ರಶ್ನಿಸುವ ಮೂಲಕ ಸಂಸದ ಡಾ. ಕೆ. ಸುಧಾಕರ್ ಅವರು ರಾಜ್ಯ ಕಾಂಗ್ರೆಸ್ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ.

ಚಿಕ್ಕಬಳ್ಳಾಪುರದ ಜಿಲ್ಲಾ ಬಿಜೆಪಿ ಕಾರ್ಯಾಲಯದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಮಹಿಳಾ ಮೀಸಲಾತಿ ಮತ್ತು ‘ನಾರಿ ಶಕ್ತಿ ವಂದನಾ ಅಧಿನಿಯಮ’ದ ವಿಚಾರವಾಗಿ ಕಾಂಗ್ರೆಸ್‌ನ ಧೋರಣೆಯನ್ನು ಕಟುವಾಗಿ ಟೀಕಿಸಿದರು.

ವಿಧಾನಸೌಧದಲ್ಲಿ ಸೀಟು ಕೊಡದ ಕಾಂಗ್ರೆಸ್‌ಗೆ ಮಹಿಳೆಯರು ಬೇಕಾ?

ಸಂಸದ ಸುಧಾಕರ್ ಅವರ ಮಾತಿನ ಪ್ರಮುಖ ಅಂಶವೆಂದರೆ ಮಹಿಳೆಯರ ರಾಜಕೀಯ ಸಬಲೀಕರಣ. “ಕಾಂಗ್ರೆಸ್ ಪಕ್ಷಕ್ಕೆ ಮಹಿಳೆಯರು ಕೇವಲ ಮತ ಹಾಕಲು ಮಾತ್ರ ಬೇಕು. ಆದರೆ ಅವರಿಗೆ ಅಧಿಕಾರ ನೀಡುವ ವಿಚಾರ ಬಂದಾಗ ಕಾಂಗ್ರೆಸ್ ಮತ್ತು ಇಂಡಿ (I.N.D.I.A) ಒಕ್ಕೂಟದ ಮಿತ್ರ ಪಕ್ಷಗಳು ಅಡ್ಡಗಾಲು ಹಾಕುತ್ತವೆ. ಪ್ರಧಾನಿ ಮೋದಿ ಅವರು ಐತಿಹಾಸಿಕ ‘ನಾರಿ ಶಕ್ತಿ ವಂದನಾ ಕಾಯ್ದೆ’ ತಂದಾಗ ಅದನ್ನು ವಿರೋಧಿಸಿದ ಕಾಂಗ್ರೆಸ್ ಅನ್ನು ಈ ದೇಶದ ಮಹಿಳೆಯರು ಎಂದಿಗೂ ಕ್ಷಮಿಸುವುದಿಲ್ಲ,” ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.

ಗೃಹಲಕ್ಷ್ಮಿ ಯೋಜನೆಗೆ ಸುಧಾಕರ್ ಲೇವಡಿ

ರಾಜ್ಯ ಸರ್ಕಾರದ ಪ್ರಮುಖ ಯೋಜನೆಯಾದ ‘ಗೃಹಲಕ್ಷ್ಮಿ’ಯನ್ನು ಉಲ್ಲೇಖಿಸಿದ ಸಂಸದರು, “ಮಹಿಳೆಯರಿಗೆ ತಿಂಗಳಿಗೆ 2,000 ರೂಪಾಯಿ ಕೊಟ್ಟರೆ ಸಾಕು, ಅವರು ರಾಜಕಾರಣಕ್ಕೆ ಬರುವುದು ಬೇಡ ಎಂಬುದು ಕಾಂಗ್ರೆಸ್‌ನ ಮನಸ್ಥಿತಿ. ಅಂದರೆ ಇವರಿಗೆ ‘ಗೃಹಲಕ್ಷ್ಮಿ’ ಸಾಕು, ಆದರೆ ಮಹಿಳೆಯರು ‘ರಾಜಲಕ್ಷ್ಮಿ’ಯರಾಗಿ ಆಡಳಿತ ನಡೆಸಬಾರದೇ?” ಎಂದು ವ್ಯಂಗ್ಯವಾಡಿದರು.

ಮೋದಿ ಸರ್ಕಾರದ ಮಹಿಳಾ ಪರ ಯೋಜನೆಗಳ ಪಟ್ಟಿ

ಕಳೆದ ಹತ್ತು ವರ್ಷಗಳಲ್ಲಿ ಕೇಂದ್ರ ಬಿಜೆಪಿ ಸರ್ಕಾರ ಮಹಿಳೆಯರಿಗಾಗಿ ತಂದಿರುವ ಯೋಜನೆಗಳನ್ನು ಸುಧಾಕರ್ ಅವರು ಪಟ್ಟಿ ಮಾಡಿದರು:

ಉಜ್ವಲ ಯೋಜನೆ: ಕೋಟ್ಯಂತರ ಮಹಿಳೆಯರಿಗೆ ಉಚಿತ ಗ್ಯಾಸ್ ಸಂಪರ್ಕ.

ಸ್ವಚ್ಛ ಭಾರತ: 10 ಕೋಟಿಗೂ ಹೆಚ್ಚು ಶೌಚಾಲಯಗಳ ನಿರ್ಮಾಣ.

ಪಿಎಂ ಆವಾಸ್ ಯೋಜನೆ: ಮಹಿಳೆಯರ ಹೆಸರಿನಲ್ಲೇ 4 ಕೋಟಿ ಮನೆಗಳ ನೋಂದಣಿ.

ಲಕ್‌ಪತಿ ದೀದಿ: ಮಹಿಳೆಯರ ಆರ್ಥಿಕ ಸ್ವಾವಲಂಬನೆಗೆ ಉತ್ತೇಜನ.

ಮರು ವಿಂಗಡಣೆಯಿಂದ ಕರ್ನಾಟಕಕ್ಕೆ ಲಾಭ

2029ರ ಚುನಾವಣೆ ವೇಳೆಗೆ ಮಹಿಳಾ ಮೀಸಲಾತಿ ಜಾರಿಗೆ ತರುವ ನಿಟ್ಟಿನಲ್ಲಿ ಜನಗಣತಿ ನಂತರ ಕ್ಷೇತ್ರಗಳ ಮರು ವಿಂಗಡಣೆ ನಡೆಯಲಿದೆ. ಇದರಿಂದ ಕರ್ನಾಟಕದ ಲೋಕಸಭಾ ಕ್ಷೇತ್ರಗಳ ಸಂಖ್ಯೆ 28 ರಿಂದ 42ಕ್ಕೆ ಏರಿಕೆಯಾಗುವ ಸಾಧ್ಯತೆಯಿದೆ. ಇದು ರಾಜ್ಯದ ರಾಜಕೀಯ ಪ್ರಾತಿನಿಧ್ಯವನ್ನು ಹೆಚ್ಚಿಸಲಿದೆ ಎಂದು ಅವರು ವಿವರಿಸಿದರು.

ಅಭಿವೃದ್ಧಿಗೆ ಕಾಂಗ್ರೆಸ್ ಅಡ್ಡಿ?

ಕೇವಲ ಮಹಿಳಾ ಮೀಸಲಾತಿ ಮಾತ್ರವಲ್ಲದೆ, ಸಿಎಎ (CAA), 370ನೇ ವಿಧಿ ರದ್ದು, ಜಿಎಸ್‌ಟಿ ಮತ್ತು ಹೊಸ ಶಿಕ್ಷಣ ನೀತಿಯಂತಹ ಪ್ರತಿಯೊಂದು ಪ್ರಗತಿಪರ ನಿರ್ಧಾರಗಳನ್ನು ಕಾಂಗ್ರೆಸ್ ವಿರೋಧಿಸುತ್ತಾ ಬಂದಿದೆ. ಇದು ದೇಶದ ಪ್ರಗತಿಗೆ ಕಂಟಕವಾಗಿದೆ ಎಂದು ಸುಧಾಕರ್ ಆರೋಪಿಸಿದರು.

ಹೋರಾಟದ ಎಚ್ಚರಿಕೆ:

ಇದೇ ಸಂದರ್ಭದಲ್ಲಿ ಮಾತನಾಡಿದ ರಾಜ್ಯ ಮಹಿಳಾ ಮೋರ್ಚಾ ಉಪಾಧ್ಯಕ್ಷೆ ವಿಜಯಲಕ್ಷ್ಮಿ ಆನಂದ್, “ನಾರಿ ಶಕ್ತಿ ವಂದನಾ ಯೋಜನೆಯನ್ನು ವಿರೋಧಿಸಿದ ಪಕ್ಷಗಳ ವಿರುದ್ಧ ಮುಂದಿನ ದಿನಗಳಲ್ಲಿ ಮಹಿಳಾ ಮೋರ್ಚಾ ವತಿಯಿಂದ ಉಗ್ರ ಹೋರಾಟ ಹಮ್ಮಿಕೊಳ್ಳಲಾಗುವುದು,” ಎಂದು ಎಚ್ಚರಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಜಿಲ್ಲಾ ಬಿಜೆಪಿ ಅಧ್ಯಕ್ಷ ಸೀಕಲ್ ರಾಮಚಂದ್ರೇ ಗೌಡ,ರಾಜ್ಯ ಮಹಿಳಾ ಮೋರ್ಚಾ ಕಾರ್ಯದರ್ಶಿಯಾದ ನಿರ್ಮಲಮ್ಮನವರು, ಜಿಲ್ಲಾ ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ನರ್ಮದಾ ರೆಡ್ಡಿರವರು, ನಗರಸಭೆ ಮಾಜಿ ಅಧ್ಯಕ್ಷರಾದ ನಿರ್ಮಲಾ ಪ್ರಭು ರವರು, ಉಪಾಧ್ಯಕ್ಷರಾದ ಸುಮಿತ್ರ, ಮಂಡಲದ, ನಂದಿ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷರಾದ ಮಾಲಿನಿ, ಜಿಲ್ಲಾ ಕಾರ್ಯದರ್ಶಿ ಆರ್ ಅಶೋಕ್, ಜಿಲ್ಲಾ ಮಾಧ್ಯಮ ಸಂಚಾಲಕರಾದ ವಿ.ಮಧುಚಂದ್ರ, ಬಿಜೆಪಿ ಮಹಿಳಾ ಮೋರ್ಚಾ ಮಂಡಲದ ಅಧ್ಯಕ್ಷರುಗಳಾದ ಭಾರತಿ ,ಮಲ್ಲಿಕಾ, ತ್ರಿವೇಣಿ ಚಾತುರ್ಯ, ಮಹಿಳಾ ಮುಖಂಡರಾದ ಶಾಂತಾ ಶಿವರಾಂ, ಭಾಗ್ಯಮ್ಮ, ಸೇರಿದಂತೆ  ಹಲವು ಪ್ರಮುಖ ಮುಖಂಡರು ಉಪಸ್ಥಿತರಿದ್ದರು.

Related Articles

LEAVE A REPLY

Please enter your comment!
Please enter your name here

Stay Connected

0FansLike
0FollowersFollow
0SubscribersSubscribe
- Advertisement -spot_img

Latest Articles