ಬೇಸಿಗೆಯ ಬಿಸಿಲಿನ ನಡುವೆಯೇ ಹಬ್ಬಗಳ ಕಳೆ ತರುವ ‘ಅಕ್ಷಯ ತೃತೀಯ’ (Akshaya Tritiya 2026) ಮತ್ತೆ ಬಂದಿದೆ. ಅಕ್ಷಯ ತೃತೀಯ ಎಂದ ಕೂಡಲೇ ಹೆಂಗಸರ ಮುಖದಲ್ಲಿ ಸಾವಿರ ವ್ಯಾಟ್ ಬಲ್ಬ್ ಹಚ್ಚಿದಂತಹ ನಗು ಮೂಡಿದರೆ, ಅತ್ತ ಗಂಡಸರ ಜೇಬಿಗೆ ಕತ್ತರಿ ಬೀಳುವ ಆತಂಕದಲ್ಲಿ ಸಣ್ಣದೊಂದು ನಿಟ್ಟುಸಿರು ಮೂಡುವುದು ಸಹಜ! ಇದು ಕೇವಲ ಒಂದು ದಿನವಲ್ಲ, ಭಾರತೀಯರ ಪಾಲಿಗೆ ಚಿನ್ನದ ಮೇಲಿನ ಪ್ರೀತಿ ಮತ್ತು ಧಾರ್ಮಿಕ ನಂಬಿಕೆಯ ಅಪರೂಪದ ಸಂಗಮ.
Akshaya Tritiya 2026 – ಏನಿದು ಅಕ್ಷಯ ತೃತೀಯದ ಮಹಿಮೆ?
‘ಅಕ್ಷಯ’ ಎಂದರೆ ಎಂದಿಗೂ ಕ್ಷಯಿಸದ ಅಥವಾ ನಾಶವಾಗದ ಎಂದರ್ಥ. ವೈಶಾಖ ಮಾಸದ ಶುಕ್ಲ ಪಕ್ಷದ ತೃತೀಯದಂದು ಬರುವ ಈ ದಿನದಂದು ಮಾಡಿದ ದಾನ, ಧರ್ಮ ಅಥವಾ ಖರೀದಿಗಳು ವೃದ್ಧಿಯಾಗುತ್ತಲೇ ಇರುತ್ತವೆ ಎಂಬುದು ಜನರ ಅಚಲ ನಂಬಿಕೆ.

ಒಮ್ಮೆ ಆದಿ ಶಂಕರಾಚಾರ್ಯರು ಭಿಕ್ಷೆಗಾಗಿ ಒಬ್ಬ ಬಡವರ ಮನೆಗೆ ಹೋದಾಗ, ಅಲ್ಲಿ ನೀಡಲು ಏನೂ ಇಲ್ಲದೆ ಆ ಮನೆಯವರು ಕೇವಲ ಒಂದು ಒಣಗಿದ ನಲ್ಲಿಕಾಯಿಯನ್ನು ನೀಡುತ್ತಾರೆ. ಅವರ ಭಕ್ತಿಗೆ ಮೆಚ್ಚಿ ಶಂಕರಾಚಾರ್ಯರು ‘ಕನಕಾಧಾರ ಸ್ತೋತ್ರ’ ಪಠಿಸಿದಾಗ ಆ ಮನೆಯಲ್ಲಿ ಬಂಗಾರದ ಮಳೆ ಸುರಿಯಿತಂತೆ! ಈ ವಿಶೇಷ ದಿನವೇ ಅಕ್ಷಯ ತೃತೀಯ ಎಂದು ನಂಬಲಾಗಿದೆ.
ಈ ದಿನಕ್ಕಿದೆ ಎಂಟು ವಿಶೇಷ ಮಹತ್ವಗಳು!

ಸನಾತನ ಧರ್ಮದಲ್ಲಿ ಅಕ್ಷಯ ತೃತೀಯ ಕೇವಲ ಚಿನ್ನ ಖರೀದಿಗೆ ಸೀಮಿತವಲ್ಲ, ಈ ದಿನದಂದು ನಡೆದ ಪೌರಾಣಿಕ ಘಟನೆಗಳು ಹೀಗಿವೆ:
-
ಯುಗಾದಿ ಆರಂಭ: ಸತ್ಯಯುಗ ಅಥವಾ ಕೃತಯುಗವು ಇದೇ ದಿನದಂದು ಪ್ರಾರಂಭವಾಯಿತು.
-
ಗಣೇಶ-ವೇದವ್ಯಾಸರ ಸಂಗಮ: ವೇದವ್ಯಾಸರು ಮಹಾಭಾರತ ರಚಿಸುವಾಗ ಗಣೇಶನು ಬರವಣಿಗೆ ಆರಂಭಿಸಿದ್ದು ಇದೇ ದಿನ.
-
ಗಂಗೆಯ ಅವತರಣ: ಭಗೀರಥನ ಪ್ರಯತ್ನದಿಂದ ಗಂಗೆಯು ಭೂಮಿಗೆ ಇಳಿದ ಪವಿತ್ರ ದಿನ.
-
ಪರಶುರಾಮ ಜಯಂತಿ: ದಶಾವತಾರಗಳಲ್ಲಿ ಒಂದಾದ ಪರಶುರಾಮ ಅವತಾರ ಪ್ರಾರಂಭವಾದ ದಿನ.
-
ಕುಬೇರನ ಸಂಪತ್ತು: ಯಕ್ಷರಾಜ ಕುಬೇರನಿಗೆ ದೈವಿಕ ನಿಧಿ ಲಭಿಸಿದ್ದು ಇದೇ ದಿನದಂದು.
-
ಕೃಷ್ಣ-ಕುಚೇಲನ ಸ್ನೇಹ: ಬಡ ಕುಚೇಲನಿಗೆ ಶ್ರೀಕೃಷ್ಣನಿಂದ ಸಕಲ ಐಶ್ವರ್ಯ ಪ್ರಾಪ್ತಿಯಾದ ದಿನ.
-
ಲಕ್ಷ್ಮಿಯ ಜನ್ಮ: ಸಮುದ್ರ ಮಂಥನದ ವೇಳೆ ಮಹಾಲಕ್ಷ್ಮಿಯು ಜನಿಸಿದ್ದು ಇದೇ ದಿನ.
-
ದ್ರೌಪದಿಯ ಮಾನ ರಕ್ಷಣೆ: ಕೌರವರ ಸಭೆಯಲ್ಲಿ ದ್ರೌಪದಿಗೆ ಕೃಷ್ಣನು ಅಕ್ಷಯ ವಸ್ತ್ರ ನೀಡಿ ಮಾನ ಕಾಪಾಡಿದ್ದು ಕೂಡ ಇದೇ ದಿನ.
ಶುಭ ಮುಹೂರ್ತದ ವಿಶೇಷತೆ
ಸಾಮಾನ್ಯವಾಗಿ ನಾವು ಯಾವುದಾದರೂ ಶುಭ ಕಾರ್ಯ ಮಾಡಲು ರಾಹುಕಾಲ, ಗುಳಿಕಕಾಲ ನೋಡುತ್ತೇವೆ. ಆದರೆ ಅಕ್ಷಯ ತೃತೀಯದ ವಿಶೇಷವೆಂದರೆ ಇಡೀ ದಿನವೇ ಶುಭ ಮುಹೂರ್ತ! ಅಕ್ಷರಾಭ್ಯಾಸ, ಮದುವೆ, ಗೃಹಪ್ರವೇಶ ಅಥವಾ ಹೊಸ ಉದ್ಯಮ ಆರಂಭಿಸಲು ಪಂಚಾಂಗ ನೋಡುವ ಅಗತ್ಯವಿಲ್ಲದ ಅತಿ ಪವಿತ್ರ ದಿನವಿದು.
ಚಿನ್ನದ ಮಾರುಕಟ್ಟೆ ಮತ್ತು ವ್ಯಾಪಾರ ತಂತ್ರ
ಒಂದು ಕಾಲದಲ್ಲಿ ಅಕ್ಷಯ ತೃತೀಯ ಎಂದರೆ ಕೇವಲ ಧಾರ್ಮಿಕ ಆಚರಣೆಯಾಗಿತ್ತು. ಆದರೆ ಕಳೆದ 18-20 ವರ್ಷಗಳಿಂದ ಇದು ದೊಡ್ಡ ‘ಮಾರ್ಕೆಟಿಂಗ್ ಹಬ್’ ಆಗಿ ಬದಲಾಗಿದೆ. ಜ್ಯುವೆಲ್ಲರಿ ಶಾಪ್ಗಳು ಬೆಳಿಗ್ಗೆ 6 ಗಂಟೆಯಿಂದ ರಾತ್ರಿ 11 ಗಂಟೆಯವರೆಗೆ ತೆರೆದಿದ್ದು, ಜನರನ್ನು ಆಕರ್ಷಿಸಲು ಹರಸಾಹಸ ಪಡುತ್ತವೆ.
ಇಂದಿನ ದರ ವಿವರ (ಅಂದಾಜು):
-
24 ಕ್ಯಾರೆಟ್ ಚಿನ್ನ (ಪ್ರತಿ ಗ್ರಾಂ): ₹15,578/-
-
22 ಕ್ಯಾರೆಟ್ ಚಿನ್ನ (ಪ್ರತಿ ಗ್ರಾಂ): ₹14,280/-
-
ಬೆಳ್ಳಿ (ಪ್ರತಿ ಗ್ರಾಂ): ₹275/-
ಬೆಲೆ ಗಗನಕ್ಕೇರಿದ್ದರೂ ಜನರು ಮುಗಿಬಿದ್ದು ಖರೀದಿ ಮಾಡುತ್ತಿದ್ದಾರೆ. ಇನ್ನು ಕೆಲವರು ಮೊದಲೇ ಬುಕ್ ಮಾಡಿ ಈ ದಿನದಂದು ಡೆಲಿವರಿ ಪಡೆಯುತ್ತಾರೆ.
ಚಿನ್ನ ಇಲ್ಲದಿದ್ದರೆ ಚಿಂತಿಸಬೇಡಿ!

ಬಂಗಾರ ಕೊಳ್ಳಲು ಶಕ್ತಿ ಇಲ್ಲದವರು ನಿರಾಶರಾಗಬೇಕಿಲ್ಲ. ಶಾಸ್ತ್ರಗಳ ಪ್ರಕಾರ ಈ ದಿನ ಬಂಗಾರ ಮಾತ್ರವಲ್ಲದೆ ಅಕ್ಕಿ, ಉಪ್ಪು, ಸಕ್ಕರೆ ಅಥವಾ ಹಾಲನ್ನು ಖರೀದಿಸುವುದು ಕೂಡ ಅಕ್ಷಯ ಫಲ ನೀಡುತ್ತದೆ. ಮನೆಯಲ್ಲಿ ಧಾನ್ಯಗಳು ಮತ್ತು ಅಗತ್ಯ ವಸ್ತುಗಳು ಎಂದಿಗೂ ಖಾಲಿಯಾಗಬಾರದು ಎಂಬುದು ಇದರ ಹಿಂದಿನ ಆಶಯ.
ಕೊನೆಯ ಮಾತು: ಆಭರಣಗಳ ಖರೀದಿಯ ಜೊತೆಗೆ ಅಂದು ಬಡವರಿಗೆ ಅನ್ನದಾನ ಅಥವಾ ಸಹಾಯ ಮಾಡುವುದರಿಂದ ನಿಜವಾದ ‘ಅಕ್ಷಯ’ ಪುಣ್ಯ ಲಭಿಸುತ್ತದೆ. ನಿಮ್ಮ ಅಕ್ಷಯ ತೃತೀಯ ಸಮೃದ್ಧವಾಗಿರಲಿ!







Congratulations all the best 👏🎉👏👏🎉👏🎉
Thank you
All the best
Thanks bro
Congratulations all the best 💐
Thanks akka