Hit and Run case:- ರಾಜಮಂಡ್ರಿ ಹಿಟ್ ಅಂಡ್ ರನ್: ಕುಡಕನ ಹುಚ್ಚಾಟಕ್ಕೆ ಬಲಿಯಾದ ವೈದ್ಯ ವಿದ್ಯಾರ್ಥಿನಿ ಡಾ. ಪ್ರಿಯಾಂಕಾ..!

ಆಂಧ್ರಪ್ರದೇಶದ (Andhra Pradesh) ರಾಜಮಂಡ್ರಿಯಲ್ಲಿ (Rajahmundry) ನಡೆದ ಅತ್ಯಂತ ದಾರುಣ ಹಾಗೂ ಮನ ಕಲಕುವ ಹಿಟ್ ಅಂಡ್ ರನ್ (Hit And Run) ಪ್ರಕರಣದಲ್ಲಿ, ಕಾರು ಡಿಕ್ಕಿ ಹೊಡೆದು ತೀವ್ರವಾಗಿ ಗಾಯಗೊಂಡಿದ್ದ ಪ್ರತಿಭಾವಂತ ವೈದ್ಯ ವಿದ್ಯಾರ್ಥಿನಿ ಚಿಕಿತ್ಸೆ ಫಲಕಾರಿಯಾಗದೆ ಹೈದರಾಬಾದ್‌ನಲ್ಲಿ ಸಾವನ್ನಪ್ಪಿದ್ದಾರೆ.

ಮೃತರನ್ನು ರಾಜಮಂಡ್ರಿಯ ಜಿಎಸ್‌ಎಲ್ ವೈದ್ಯಕೀಯ ಕಾಲೇಜಿನ ಚರ್ಮರೋಗ ವಿಭಾಗದ ಸ್ನಾತಕೋತ್ತರ (PG) ಪ್ರಥಮ ವರ್ಷದ ವಿದ್ಯಾರ್ಥಿನಿ ಡಾ. ಪ್ರಿಯಾಂಕಾ ಎಂದು ಗುರುತಿಸಲಾಗಿದೆ.

ಘಟನೆಯ ಹಿನ್ನೆಲೆ ಏನು?

ಆಗಸ್ಟ್ 3 ರಂದು ರಾತ್ರಿ ರಾಜಮಂಡ್ರಿಯ ಪ್ರಸಾಮಾದಿತ್ಯ ಮಾಲ್ ಬಳಿ ಡಾ. ಪ್ರಿಯಾಂಕಾ ತಮ್ಮ ಸ್ನೇಹಿತನೊಂದಿಗೆ ಸ್ಕೂಟರಿನಲ್ಲಿ ವಾಪಸ್ ತೆರಳುತ್ತಿದ್ದರು. ಅದೇ ಸಮಯದಲ್ಲಿ, ಗಂಟಲುವರೆಗೂ ಮದ್ಯ ಸೇವಿಸಿದ್ದ ದುಷ್ಯಂತ್ ಮತ್ತು ಆಂಡ್ರ್ಯೂ ಜೋಸೆಫ್ ಎಡ್ವರ್ಡ್ಸ್ ಎಂಬ ಇಬ್ಬರು ಯುವಕರು ಟಾಟಾ ನೆಕ್ಸಾನ್ ಕಾರಿನಲ್ಲಿ ಬಂದು ಇವರ ಸ್ಕೂಟರ್‌ಗೆ ಹಿಂದಿನಿಂದ ಮೂರು ಬಾರಿ ಡಿಕ್ಕಿ ಹೊಡೆದಿದ್ದಾರೆ.

ಅಪಘಾತಕ್ಕೂ ಮುಂಚೆ ಈ ಆರೋಪಿಗಳು ಮಾಲ್‌ನ ಭದ್ರತಾ ಸಿಬ್ಬಂದಿಯೊಂದಿಗೆ ಗಲಾಟೆ ಮಾಡಿಕೊಂಡಿದ್ದರು ಎಂಬುದು ತನಿಖೆಯಿಂದ ತಿಳಿದುಬಂದಿದೆ. ಕುಡಕರು ಕಾರನ್ನು ಅತಿವೇಗವಾಗಿ ಮತ್ತು ನಿರ್ಲಕ್ಷ್ಯದಿಂದ ಚಲಾಯಿಸಿ ಪ್ರಿಯಾಂಕಾ ಅವರ ಸ್ಕೂಟರ್‌ಗೆ ಗುದ್ದಿದ ಪರಿಣಾಮ, ಅವರು ಕೆಳಗೆ ಬಿದ್ದು ತಲೆಗೆ ಗಂಭೀರ ಪೆಟ್ಟಾಗಿತ್ತು.

ಹೈದರಾಬಾದ್ ಆಸ್ಪತ್ರೆಯಲ್ಲಿ ಅಂತ್ಯ

ಘಟನೆಯ ಬಳಿಕ ತೀವ್ರ ರಕ್ತಸ್ರಾವವಾಗಿ ಪ್ರಜ್ಞಾಹೀನ ಸ್ಥಿತಿಯಲ್ಲಿದ್ದ ಪ್ರಿಯಾಂಕಾ ಅವರನ್ನು ಆರಂಭದಲ್ಲಿ ರಾಜಮಂಡ್ರಿಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ತಲೆಯ ಭಾಗಕ್ಕೆ ಬಲವಾದ ಪೆಟ್ಟು ಬಿದ್ದು ಸ್ಥಿತಿ ಗಂಭೀರವಾದ ಹಿನ್ನೆಲೆಯಲ್ಲಿ, ಹೆಚ್ಚಿನ ಚಿಕಿತ್ಸೆಗಾಗಿ ಅವರನ್ನು ಹೈದರಾಬಾದ್‌ನ ಕಿಮ್ಸ್ (KIMS) ಆಸ್ಪತ್ರೆಗೆ ಸ್ಥಳಾಂತರಿಸಲಾಯಿತು.

ಆದರೆ ಕಳೆದ ಕೆಲವು ದಿನಗಳಿಂದ ವೆಂಟಿಲೇಟರ್ ಬೆಂಬಲದೊಂದಿಗೆ ಜೀವನ್ಮರಣ ಹೋರಾಟ ನಡೆಸುತ್ತಿದ್ದ ಪ್ರಿಯಾಂಕಾ ಚಿಕಿತ್ಸೆ ಫಲಿಸದೆ ಭಾನುವಾರ ಮಧ್ಯಾಹ್ನ ಕೊನೆಯೆಳೆದುಕೊಂಡಿದ್ದಾರೆ. ವೈದ್ಯರು ಆಕೆಯ ಮೆದುಳು ನಿಷ್ಕ್ರಿಯಗೊಂಡಿದೆ (Brain Dead) ಎಂದು ಮೊದಲು ತಿಳಿಸಿದ್ದರು.

ಪೊಲೀಸರ ಕಠಿಣ ಕ್ರಮ

ಅಪಘಾತ ಎಸಗಿ ಪರಾರಿಯಾಗಿದ್ದ ಇಬ್ಬರೂ ಆರೋಪಿಗಳನ್ನು ರಾಜಮಂಡ್ರಿ ಪೊಲೀಸರು ಈಗಾಗಲೇ ಬಂಧಿಸಿದ್ದು, ನ್ಯಾಯಾಲಯಕ್ಕೆ ಹಾಜರುಪಡಿಸಿ 14 ದಿನಗಳ ರಿಮ್ಯಾಂಡ್ ವಿಧಿಸಲಾಗಿದೆ. ಆರಂಭದಲ್ಲಿ ಕೇವಲ ನಿರ್ಲಕ್ಷ್ಯದ ಚಾಲನೆ ಪ್ರಕರಣ ದಾಖಲಿಸಿದ್ದ ಪೊಲೀಸರು, ಘಟನೆಯ ಗಂಭೀರತೆಯನ್ನು ಪರಿಗಣಿಸಿ ಈಗ ಬಿಎನ್‌ಎಸ್ ಸೆಕ್ಷನ್ 308 (ಕೊಲೆಗೆ ಸಮಾನವಲ್ಲದ ಅಪರಾಧಿ ನರಹತ್ಯೆ ಪ್ರಯತ್ನ) ಅಡಿಯಲ್ಲಿ ಪ್ರಕರಣವನ್ನು ಗಂಭೀರಗೊಳಿಸಿದ್ದಾರೆ.

“ನಮ್ಮ ಕುಟುಂಬದಲ್ಲೇ ಮೊದಲ ವೈದ್ಯೆಯಾಗಬೇಕಿದ್ದ ಮಗಳನ್ನು ಕಳೆದುಕೊಂಡು ಕಣ್ಣೀರಿನಲ್ಲಿದ್ದೇವೆ. ಈ ದುಷ್ಟರಿಗೆ ಕಠಿಣ ಶಿಕ್ಷೆಯಾಗಬೇಕು” ಎಂದು ಮೃತಳ ತಂದೆ ಕಣ್ಣೀರಿಟ್ಟಿದ್ದಾರೆ. ಈ ಅಮಾನವೀಯ ಕೃತ್ಯದ ವಿರುದ್ಧ ವೈದ್ಯ ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರಿಂದ ತೀವ್ರ ಆಕ್ರೋಶ ವ್ಯಕ್ತವಾಗಿದ್ದು, ತಪ್ಪಿತಸ್ಥರಿಗೆ ಕಠಿಣ ಶಿಕ್ಷೆ ನೀಡುವಂತೆ ಆಗ್ರಹಿಸುತ್ತಿದ್ದಾರೆ.”

Related Articles

LEAVE A REPLY

Please enter your comment!
Please enter your name here

Stay Connected

0FansLike
0FollowersFollow
0SubscribersSubscribe
- Advertisement -spot_img

Latest Articles