ಚಿಕ್ಕಬಳ್ಳಾಪುರ: ನಗರದ ಪ್ರತಿಷ್ಠಿತ ಎಸ್ಜೆಸಿಐಟಿ (SJCIT) ತಾಂತ್ರಿಕ ಮಹಾವಿದ್ಯಾಲಯದಲ್ಲಿ ಈ ವರ್ಷದ ‘ಸಂಭ್ರಮ-2026’ ಸಾಂಸ್ಕೃತಿಕ ಹಬ್ಬ ಅತ್ಯಂತ ವೈಭವದಿಂದ ಜರುಗಿದೆ. ಬಿಜಿಎಸ್ ಆಯೋಜನೆಯಡಿ ನಡೆದ ಈ ಕಾಲೇಜು ಫೆಸ್ಟ್, ವಿದ್ಯಾರ್ಥಿಗಳ ಸಾಂಸ್ಕೃತಿಕ ಕಲೆಗಳ ಮೆರುಗಿನೊಂದಿಗೆ ಹೊಸ ಕಳೆ ಪಡೆದುಕೊಂಡಿತ್ತು.

ಕಾರ್ಯಕ್ರಮದ ಆರಂಭಕ್ಕೂ ಮುನ್ನ ಕಾಲೇಜು ಆವರಣದಲ್ಲಿ ಆಯೋಜಿಸಲಾಗಿದ್ದ ಭವ್ಯ ಮೆರವಣಿಗೆ ಎಲ್ಲರ ಗಮನ ಸೆಳೆಯಿತು. ವೀರಗಾಸೆ, ಡೊಳ್ಳು ಕುಣಿತದ ಅಬ್ಬರ, ವಿದ್ಯಾರ್ಥಿಗಳ ಸಮ್ಮೋಹಕ ನೃತ್ಯ ಹಾಗೂ ವೈವಿಧ್ಯಮಯ ವೇಷಭೂಷಣಗಳು ಮೆರವಣಿಗೆಗೆ ವಿಶೇಷ ಮೆರುಗು ನೀಡಿದವು. ಭರತನಾಟ್ಯ ಮತ್ತು ಜಾನಪದ ಕಲಾತಂಡಗಳ ಭರ್ಜರಿ ಪ್ರದರ್ಶನದೊಂದಿಗೆ ಗಣ್ಯರನ್ನು ವೇದಿಕೆಗೆ ಸ್ವಾಗತಿಸಲಾಯಿತು.
ಕನ್ನಡದ ಮಹತ್ವ ಸಾರಿದ ಹಿರಿಯ ನಟ ದೊಡ್ಡಣ್ಣ!
ಈ ಬಾರಿಯ ಸಂಭ್ರಮದ ಮುಖ್ಯ ಆಕರ್ಷಣೆಯಾಗಿದ್ದು ಸ್ಯಾಂಡಲ್ವುಡ್ನ ಹಿರಿಯ ಚಿತ್ರನಟ ಹಾಗೂ ಹಾಸ್ಯ ಕಲಾವಿದರಾದ ಶ್ರೀ ಎನ್. ದೊಡ್ಡಣ್ಣ ಅವರು. ಜ್ಞಾನದ ದೀಪ ಬೆಳಗುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಅವರು, ವೇದಿಕೆಯಲ್ಲಿ ವಿದ್ಯಾರ್ಥಿಗಳನ್ನುದ್ದೇಶಿಸಿ ಅತ್ಯಂತ ಮಾರ್ಮಿಕವಾಗಿ ಮಾತನಾಡಿದರು.

“ಪೂಜ್ಯ ಮಹಾಸ್ವಾಮೀಜಿಯವರ ತಪಸ್ಸು ಮತ್ತು ಸಂಕಲ್ಪದ ಫಲವಾಗಿ ಇಂದು ಇಂತಹ ಅದ್ಭುತ ತಾಂತ್ರಿಕ ವಾತಾವರಣ ನಿರ್ಮಾಣವಾಗಿದೆ. ಭಾಷೆಯ ವಿಷಯಕ್ಕೆ ಬಂದರೆ ಕನ್ನಡಕ್ಕೆ ತನ್ನದೇ ಆದ ವ್ಯಾಕರಣ ಮತ್ತು ಅಲ್ಪಪ್ರಾಣ-ಮಹಾಪ್ರಾಣಗಳ ಮಹತ್ವವಿದೆ. ನಾವು ಮೊದಲು ನಮ್ಮ ಪರಂಪರೆಯನ್ನು ಅರಿತುಕೊಳ್ಳಬೇಕು. ‘ಗುರುವಿಲ್ಲದವನಿಗೆ ಇತಿಹಾಸವಿಲ್ಲ’ ಎಂಬ ನಾಣ್ಣುಡಿಯಿದೆ, ನಮ್ಮ ಜೀವನದಲ್ಲಿ ತಾಯಿಯೇ ಮೊದಲ ಗುರು” ಎಂದು ದೊಡ್ಡಣ್ಣ ಕಿವಿಮಾತು ಹೇಳಿದರು.
ವಿದ್ಯಾರ್ಥಿಗಳಿಗೆ ‘ದೊಡ್ಡಣ್ಣ’ ಕೊಟ್ಟ ಸುವರ್ಣ ಸಲಹೆಗಳು:
ಇಂದಿನ ಡಿಜಿಟಲ್ ಯುಗದ ವಿದ್ಯಾರ್ಥಿಗಳಿಗೆ ಮಹತ್ವದ ಸಂದೇಶ ನೀಡಿದ ದೊಡ್ಡಣ್ಣ ಅವರು, ಜೀವನದಲ್ಲಿ ಕಷ್ಟಪಡದೆ ಯಾವುದೂ ಸಿಗುವುದಿಲ್ಲ ಎಂದರು.
-
ಮೊಬೈಲ್ ಬಳಕೆಗೆ ಬ್ರೇಕ್ ಹಾಕಿ: ಇತ್ತೀಚಿನ ದಿನಗಳಲ್ಲಿ ಯುವ ಪೀಳಿಗೆ ಮೊಬೈಲ್ನಲ್ಲೇ ಮುಳುಗಿರುತ್ತಿದೆ. ದಯವಿಟ್ಟು ಮೊಬೈಲ್ ಬಳಕೆಯನ್ನು ಮಿತಗೊಳಿಸಿ.
-
ಮಹಾಕಾವ್ಯಗಳನ್ನು ಓದಿ: ರಾಮಾಯಣ ಹಾಗೂ ಮಹಾಭಾರತದಂತಹ ಶ್ರೇಷ್ಠ ಕೃತಿಗಳನ್ನು ಓದುವ ಹವ್ಯಾಸ ಬೆಳೆಸಿಕೊಳ್ಳಿ. ಇದು ಜೀವನಕ್ಕೆ ದಾರಿದೀಪವಾಗುತ್ತದೆ.
ಇದೇ ಸಂದರ್ಭದಲ್ಲಿ ಕನ್ನಡದ ಹೆಮ್ಮೆಯ ನಟ ಡಾ. ರಾಜ್ಕುಮಾರ್ ಅವರ ಸರಳತೆಯನ್ನು ನೆನಪಿಸಿಕೊಂಡ ದೊಡ್ಡಣ್ಣ, ತಮ್ಮ ಸಿನಿಮಾಗಳ ಸೂಪರ್ ಹಿಟ್ ಹಾಸ್ಯ ಪ್ರಸಂಗಗಳನ್ನು ನೆನಪಿಸಿ ನೆರೆದಿದ್ದವರನ್ನು ಮನಸಾರೆ ನಗಿಸಿದರು.
ದೊಡ್ಡಣ್ಣ ಅವರ ಸಾಧನೆಗೆ ಪ್ರಾಂಶುಪಾಲರ ಗೌರವ
ಕಾಲೇಜಿನ ಪ್ರಾಂಶುಪಾಲರಾದ ಡಾ. ಜಿ.ಟಿ. ರಾಜು ಅವರು ಮಾತನಾಡಿ, “ಸುಮಾರು 1016ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿ ಕೋಟ್ಯಂತರ ಜನರನ್ನು ರಂಜಿಸಿರುವ ಹಿರಿಯ ನಟ ದೊಡ್ಡಣ್ಣನವರು ಇಂದು ನಮ್ಮ ಕಾಲೇಜು ಅಂಗಳಕ್ಕೆ ಆಗಮಿಸಿರುವುದು ನಮಗೆಲ್ಲರಿಗೂ ಹೆಮ್ಮೆಯ ವಿಷಯ” ಎಂದು ಸಂತಸ ಹಂಚಿಕೊಂಡರು.
ಕಾರ್ಯಕ್ರಮದಲ್ಲಿ ದಿವ್ಯ ಸನ್ನಿಧಾನ ವಹಿಸಿದ್ದ ಶ್ರೀ ಮಂಗಳನಾಥ ಸ್ವಾಮೀಜಿಯವರು ವಿದ್ಯಾರ್ಥಿಗಳಿಗೆ ಆಶೀರ್ವಚನ ನೀಡಿ, “ತಂದೆ-ತಾಯಿಯವರನ್ನು ಗೌರವಿಸಿ, ಸನ್ಮಾರ್ಗದಲ್ಲಿ ನಡೆದು ಜ್ಞಾನವಂತರಾಗಿ ಬಾಳಬೇಕು” ಎಂದು ಹರಸಿದರು.

ವಿಜೇತ ವಿದ್ಯಾರ್ಥಿಗಳಿಗೆ ಬಹುಮಾನ ವಿತರಣೆ
‘ಸಂಭ್ರಮ-2026’ರ ಅಂಗವಾಗಿ ಕಾಲೇಜಿನಲ್ಲಿ ಆಯೋಜಿಸಲಾಗಿದ್ದ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಗಣ್ಯರು ವೇದಿಕೆ ಮೇಲೆ ಬಹುಮಾನ ವಿತರಿಸಿ ಅಭಿನಂದಿಸಿದರು. ಈ ಅದ್ಧೂರಿ ಸಾಂಸ್ಕೃತಿಕ ಉತ್ಸವದಲ್ಲಿ ಡೀನ್ ಮಂಜುನಾಥ್ ಕುಮಾರ್ ಬಿ.ಎಚ್., ಡೀನ್ ಸ್ಟೂಡೆಂಟ್ ಅಕಾಡೆಮಿಕ್ ವೆಲ್ಫೇರ್ ಡಾ. ಜಿ. ನಾರಾಯಣ, ಆಡಳಿತಾಧಿಕಾರಿಗಳಾದ ಜಿ.ಆರ್. ರಂಗಸ್ವಾಮಿ ಸೇರಿದಂತೆ ಹಲವು ಪ್ರಮುಖರು ಹಾಗೂ ಅಪಾರ ಸಂಖ್ಯೆಯ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.






